‘ಶರಣ ಶ್ರೀ ಅಂಬಿಗರ ಚೌಡಯ್ಯ’ ನವರ ಸ್ಮರಣೋತ್ಸವ...

‘ಶರಣ ಶ್ರೀ ಅಂಬಿಗರ ಚೌಡಯ್ಯ’ ನವರ ಸ್ಮರಣೋತ್ಸವ...

'ನಿಜಶರಣ' ಎಂಬ ಬಿರುದನ್ನು ಇವರು ಪಡೆದಿದ್ದಾರೆ ಶ್ರೀ ಅಂಬಿಗರ ಚೌಡಯ್ಯ ಇವರು. ೧೨ನೇ ಶತಮಾನದಲ್ಲಿದ ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ, ನಿರ್ಭೀತ, ನಿಷ್ಠುರ, ನಿರ್ದಾಕ್ಷಿಣ್ಯ, ಕಟೂಕ್ತಿಯ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ.

ಅನ್ಯಾಯ, ಅಸಮಾನತೆ, ಅಧರ್ಮ, ಜಾತೀಯತೆ, ಕಂದಾಚಾರಗಳನ್ನು ಕಟುವಾಗಿ ಟೀಕಿಸಿರುವರು. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯಲ್ಲಿದ್ದವರು. ತಮ್ಮ 'ಕಾಯಕ' ಅಥವಾ 'ವ್ಯಕ್ತಿ' ನಾಮವಾದ 'ಅಂಬಿಗರ ಚೌಡಯ್ಯ' ಎಂಬುದೇ ಇವರ ವಚನಗಳ ಅಂಕಿತವಾಗಿದೆ.

ತಾನು ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲವುಳ್ಳವ ಎಂದು ಹೇಳಿಕೊಳ್ಳುವುದರಲ್ಲಿ ತಮ್ಮ ಅನುಭಾವ ದೃಷ್ಟಿಯನ್ನು ಪ್ರಕಟಿಸಿದ್ದಾರೆ. ಉಳಿದ ವಚನಕಾರರ ವಚನಗಳಲ್ಲಿರುವಂತೆ ಇವರಲ್ಲಿಯೂ ಶಿವಾನುಭವ ಪರವಾದ ವಚನಗಳಿದ್ದರೂ ಅವುಗಳಲ್ಲಿ ಕಂಡುಬರುವ ಸಮಕಾಲೀನ ಸಮಾಜ ವಿಡಂಬನೆಯ ವ್ಯಗ್ರದೃಷ್ಟಿ ಬೇರೆಯವರಲ್ಲಿ ವಿರಳವೆಂದೇ ಹೇಳಬಹುದು. ಅವರ ವಚನಗಳ ವಸ್ತು, ಭಾಷೆ, ಶೈಲಿ ಗಮನಿಸಿದರೆ ಅವರೊಬ್ಬ ಕೆಚ್ಚೆದೆಯ, ನಿಷ್ಠುರ ಪ್ರಕೃತಿಯ, ಗ್ರಾಮ್ಯ ಮನೋಧರ್ಮದ ವಚನಕಾರರು ಎಂಬುದು ಸ್ಪಷ್ಟವಾಗುತ್ತದೆ.

ಅವರು ನ್ಯಾಯನಿಷ್ಠುರಿ. ದಯೆ ದಾಕ್ಷಿಣ್ಯಪರನಲ್ಲ. ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಅವರು ಟೀಕಿಸದೆ ಬಿಡುವುದಿಲ್ಲ. ಹಳೆಯ ಮತ್ತು ಹೊಸ ನಂಬಿಕೆಗಳ ಅವಸ್ಥಾಂತರದ ಅವ್ಯವಸ್ಥೆಯಲ್ಲಿದ್ದ ಅಂದಿನ ಹೊಸತನದ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುವ ಅಂಬಿಗರ ಚೌಡಯ್ಯನವರ ವಚನಗಳು ಬಹುಶಃ ಇಂದಿಗೂ, ಎಂದಿಗೂ ಸಾಮಾಜಿಕ ಆವಶ್ಯಕತೆಯೆಂದು ನಾವು ಭಾವಿಸಬಹುದು. ಅಂಬಿಗರ ಚೌಡಯ್ಯನವರ ವಚನಗಳಿಂದ ನಮಗೆ ಕಂಡುಬರುವ ಸಮಾಜದ ಅವ್ಯವಸ್ಥೆಯ ಚಿತ್ರ, ಬೇರೆಯವರಲ್ಲಿ ನಮಗೆ ಇಷ್ಟರಮಟ್ಟಿಗೆ ಕಾಣದು. ಅವರ ವಚನಗಳಲ್ಲಿ ನಿಜಶರಣನ ಮೊರೆತದ ಜೊತೆಗೆ ಸುಧಾರಕನ ಕಟುಟೀಕೆಯೂ ಕೇಳಿ ಬರುತ್ತದೆ. ಅವನ ವಚನಗಳು ಅನರ್ಥ ಸಾಧಕವಾದ ಕೋಪದಿಂದ ಹೊಮ್ಮಿದುವಲ್ಲ; ಸದರ್ಥಸಾಧಕವಾದ ಸತ್ಕೋಪದಿಂದ ಹೊಮ್ಮಿರುವುವು.

ಕನ್ನಡ ಸಾಹಿತ್ಯದಲ್ಲಿ ಈ ಬಗೆಯ ದಿಟ್ಟತನ, ವ್ಯಗ್ರತೆ ಕಂಡುಬರುವುದು ಬಹುಶಃ ಇಬ್ಬರಲ್ಲೇ ಎಂದು ತೋರುತ್ತದೆ. ಒಬ್ಬ ಸಿಡಿಲು ನುಡಿಯ ‘ಸರ್ವಜ್ಞರು’, ಇನ್ನೊಬ್ಬ ಕೆಚ್ಚೆದೆಯ ವಚನಕಾರ, ನಿಜಶರಣ ಅಂಬಿಗರ ಚೌಡಯ್ಯನವರು.

ಇವರದೊಂದು ವಚನ:

*ಕಟ್ಟಿದ ಲಿಂಗವ ಕಿರಿದು ಮಾಡಿ, ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ.!*

*ಇಂತಪ್ಪ ಲೊಟ್ಟಿಮೂಳರ ಕಂಡರೆ, ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ..*

ಜಯಂತಿ: ಕಾರಾ ಹುಣ್ಣಿಮೆಯಂದು

ಸ್ಥಳ: ಚೌಡದಾನಪುರ (ಶಿವಪುರ), ರಾಣೆಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ.

ಕಾಯಕ: ದೋಣಿ ನಡೆಸುವುದು (ಅಂಬಿಗ)

ಲಭ್ಯ ವಚನಗಳ ಸಂಖ್ಯೆ: ೨೭೯

ಅಂಕಿತ: ಅಂಬಿಗರ ಚೌಡಯ್ಯ

-ಶಶಿಕುಮಾರ್ ಎಸ್.