‘ಸಂಪದ’ ನಗೆಬುಗ್ಗೆ - ಭಾಗ ೧೨೨

‘ಸಂಪದ’ ನಗೆಬುಗ್ಗೆ - ಭಾಗ ೧೨೨

ವ್ಯಾಪಾರಿ

ಖರ್ಜೂರ ಹೊತ್ತಿದ್ದ ಒಂದು ಹಡಗು ಕಡಲಿನ ಮಧ್ಯೆ ಇರುವಾಗ ದೊಡ್ಡ ಶಾರ್ಕ್ ಮೀನು ಹಡಗನ್ನು ಬೆಂಬತ್ತಿ ಬಂತು. ಅದರಿಂದ ಏಳುವ ತೆರೆಗಳಿಂದಾಗಿ ಹಡಗು ಅಲ್ಲೋಲ ಕಲ್ಲೋಲವಾಗಿ ಮುಳುಗುವ ಸ್ಥಿತಿ ಕಂಡ ಕಪ್ತಾನ. ಹಡಗಿನಲ್ಲಿ ವ್ಯಾಪಾರಿ ತಂದಿದ್ದ ಎರಡು ಮೂಟೆ ಖರ್ಜೂರ ಹಣ್ಣುಗಳನ್ನು ನೀರಿಗೆಸೆದ. ಇಡೀ ಮೂಟೆಗಳನ್ನು ನುಂಗಿ ಶಾರ್ಕ್ ಮುಂದೆ ಬಂದಾಗ ತೂಕ ಮಾಡುವ ತಕ್ಕಡಿ ಮತ್ತು ಕಲ್ಲುಗಳನ್ನು ಎಸೆದ. ಅದನ ನುಂಗಿದ ಶಾರ್ಕ್ ಮುಂದೆ ಬರುವುದು ಕಂಡು ವ್ಯಾಪಾರಿಯನ್ನೂ ಇಬ್ಬರು ಗುಲಾಮರನ್ನೂ ಅವರಲ್ಲಿದ್ದ ಹಣದ ಗಂಟಿನ ಸಹಿತ ಕಡಲಿಗೆ ಹಾಕಿದ. ಅವರನ್ನು ನುಂಗಿದರೂ ಶಾರ್ಕ್ ಸಮಾಧಾನಗೊಳ್ಳದೆ ಮುಂದೆ ಬರತೊಡಗಿತು ಆಗ ಕಫ್ತಾನ ಎಲ್ಲರ ಜೊತೆಗೆ ಹಗ್ಗ ಹಾಕಿ ಶಾರ್ಕನ್ನು ಹಿಡಿದು ಹಡಗಿನ ಮೇಲೆ ಎಳೆದುಕೊಂಡ. ಅದರ ಹೊಟ್ಟೆಯನ್ನು ಸೀಳಿದ. ಒಳಗೆ ವ್ಯಾಪಾರಿ ತಕಡಿ ಹಿಡಿದು-ಕುಳಿತುಕೊಂಡು ಖರ್ಜೂರ ಹಣ್ಣುಗಳನ್ನು ತೂಕ ಮಾಡಿ ಕಿಲೋಗೆ ಆರು ದಿನಾರದಂತೆ ಗುಲಾಮರಿಬ್ಬರಿಗೆ ಮಾರುತ್ತಿರುವ ದೃಶ್ಯ ಕಾಣಿಸಿತು.

***

ಇಸ್ರೇಲ್

ರಫೀಕ್ ಬಳಿಗೆ ಬಂದ ಶಿಕ್ಷಕಿ ನಕ್ಷೆಯನ್ನು ತೋರಿಸಿದಳು 'ಇದರಲ್ಲಿ ನಮ್ಮ ದೇಶ ಇಸ್ರೇಲ್ ಎಲ್ಲಿದೆಯೆಂದು ತೋರಿಸಿಕೊಡು' ಎಂದು ಕೇಳಿದಳು. ರಫೀಕ್‌ ಗೆ ಅದು ಗೊತ್ತಿರಲಿಲ್ಲ. ಆಗ ಪಕ್ಕದಲ್ಲಿ ಕುಳಿತಿದ್ದ ನಜೀಮ್ ನಕ್ಷೆಯ ಬೆರಳು ಮಾಡಿ, 'ಇಲ್ಲಿದೆ ಇಸ್ರೇಲ್' ಎಂದು ತೋರಿಸಿದ ಶಿಕ್ಷಕಿ ಕೇಳಿದಳು, ನಮ್ಮ ಈ ಪುಣ್ಯಭೂಮಿಯನ್ನು ಸೃಷ್ಟಿ ಮಾಡಿದವರು ಯಾರು?' ಎಂದು, ರಫೀಕ್ ದೇವರ ಹೆಸರನ್ನು ಹೇಳುತ್ತಾನೆಂದು ಭಾವಿಸಿ ಅವನ ಮುಖ ನೋಡಿದಳು. ರಫೀಕ್ ಸಲೀಸಾಗಿ ಹೇಳಿದ, 'ನನ್ನ ಜೀವದ ಗೆಳೆಯ ನಜೀಮ್'

***

ದುಶ್ಚಟವಿಲ್ಲ

ಯಾವುದೇ ದುಶ್ಚಟಗಳಿಲ್ಲದ ಮಕ್ಕಳಿಗೆ ನಗದು ಪ್ರಶಸ್ತಿ ಕೊಡಲು ಅರ್ಜಿಗಳನ್ನು ಆಹ್ವಾನಿಸಿದ್ದರು. ಇಬ್ರಾಹಿಮ್ ತನ್ನ ಮಗನಿಗೆ ಆ ಪ್ರಶಸ್ತಿಯನ್ನು ಕೇಳಿಕೊಂಡು ಹೋದ. ಅಲ್ಲಿರುವ ಪರೀಕ್ಷಕರು, 'ನಿಮ್ಮ ಮಗನಿಗೆ ಹೊಗೆಬತ್ತಿ ಸೇದುವ ಚಟ ಇದೆಯೇ?' ಕೇಳಿದರು.

ಇಬ್ರಾಹಿಮ್- 'ಖುದಾನ ಮೇಲಾಣೆ! ಖಂಡಿತ ಇಲ್ಲ ಹೊಗೆಬತ್ತಿ, ಮಾದಕ ದ್ರವ್ಯಗಳನ್ನು ತಲೆಯೆತ್ತಿಯೂ ನೋಡುವುದಿಲ್ಲ' ಎಂದ

ಪರೀಕ್ಷಕರು, 'ಇಸ್ಲಾಮಿನಲ್ಲಿ ಮದ್ಯಪಾನ ಮಹಾಪಾಪ. ನಿಮ್ಮ ಮಗ ಕದ್ದುಮುಚ್ಚಿ ಅದರತ್ತ ಆಕರ್ಷಿತನಾಗಿದ್ದಾನೆಯೆ?' ಕೇಳಿದರು. ಇಬ್ರಾಹಿಮ್, 'ಛೇ ಛೇ ಇಲ್ಲವೇ ಇಲ್ಲ. ಅವನು ಹಾಗೆಂದಿಗೂ ಮಾಡಿಲ್ಲ' ಎಂದು ನಿರಾಕರಿಸಿದ.

ಪರೀಕ್ಷಕರು, 'ಪರಸ್ತ್ರೀಯರನ್ನು ಕೆಟ್ಟ ದೃಷ್ಟಿಯಿಂದ ನೋಡುವುದುಂಟೆ? ಅವರ ಜೊತೆಗೆ ತಿರುಗಾಡುತ್ತಾನೆಯೆ?' ಪ್ರಶ್ನಿಸಿದರು. ಇಬ್ರಾಹಿಮ್, 'ಅದೂ ಇಲ್ಲ' ಸಮರ್ಥಿಸಿಕೊಂಡ.

ಪರೀಕ್ಷಕರು, 'ಹಾಗಿದ್ದರೆ ಎಲ್ಲ ದೃಷ್ಟಿಯಿಂದಲೂ ನಿಮ್ಮ ಮಗನೇ ಪ್ರಶಸ್ತಿಗೆ ಅರ್ಹ ಅನಿಸುತ್ತದೆ. ಅಂದ ಹಾಗೆ ಅವನ ವಯಸ್ಸು ಏನೆಂದಿರಿ?' ಪ್ರಶ್ನಿಸಿದರು.

ಇಬ್ರಾಹಿಮ್, 'ಮುಂದಿನ ಶುಕ್ರವಾರಕ್ಕೆ ಮೂರು ತಿಂಗಳು ತುಂಬಿ ನಾಲ್ಕನೆಯ ತಿಂಗಳಿಗೆ ಕಾಲಿಡುತ್ತಿದ್ದಾನೆ' ಹೇಳಿದ.

***

ಒಂಟೆಯ ಹಾಲು

'ಒಂಟೆಯ ಹಾಲು ಕುಡಿದ ಒಂದು ಮಗು ಒಂದೇ ವಾರದಲ್ಲಿ ಇಪ್ಪತ್ತು ಪೌಂಡ್ ತೂಗಿತು ಎಂದರೆ ನಂಬುತ್ತೀಯಾ? ಮೂರು ಅಡಿ ಎತ್ತರವೂ ಆಯಿತು' ಮರುಭೂಮಿಯಲ್ಲಿ ಸಾಗುತ್ತ ಇಸ್ರೇಲಿಯೊಬ್ಬ ಪ್ರವಾಸಿಗನನ್ನು ಕೇಳಿದ. ಪ್ರವಾಸಿಗೆ ಕೋಪ ಬಂತು. 'ಶುದ್ಧಸುಳ್ಳು! ಇದು ಎಲ್ಲಾದರೂ ಸಂಭವಿಸಲು ಸಾಧ್ಯವೆ?' ಕೇಳಿದ. 'ಯಾಕೆ ಸಾಧ್ಯವಿಲ್ಲ? ಇಸ್ರೇಲಿನಲ್ಲೇ ನಡೆದದ್ದು. ಆದರೆ ನಾನು ಮನುಷ್ಯರ ಮಗುವಿನ ವಿಚಾರ ಹೇಳಿದ್ದಲ್ಲ. ಅದು ಒಂಟೆಯದೇ ಮಗು' ಎಂದ ಇಸ್ರೇಲಿ.

***

ದ್ವಿತೀಯ ಭಾಷೆ

ಒಂಟೆ ತನ್ನ ಪರಿವಾರದೊಂದಿಗೆ ಬೀದಿಯಲ್ಲಿ ವಾಕಿಂಗ್ ಹೊರಟಿತ್ತು. ಆಗ ಎದುರಿನಿಂದ ಹೇಸರಗತ್ತೆಯ ಸವಾರಿ ಬರುತ್ತ ಇತ್ತು. ಕತ್ತೆ ದಿಟ್ಟವಾಗಿ ನಿಂತು, 'ಹೆಚ್ಚೇಹೇ' ಎಂದು ಕೂಗಿತು. ಅದನ್ನು ಕೇಳುತ್ತಲೇ ಒಂಟೆ ದಾರಿ ಬದಲಿಸಿ ಬೆದರಿ ಓಡಿಹೋಯಿತು.

ಜತೆಗಿದ್ದ ಮರಿ ಕತ್ತೆ ಕುತೂಹಲದಿಂದ, 'ಅಪ್ಪಾ ನೀನು ಒಂಟೆಗೆ ಏನು ಹೇಳಿದೆ? ಅದು ಹೆದರಿ ಓಡಿತಲ್ಲ 'ಯಾಕೆ?' ಕೇಳಿತು ಕತ್ತೆ, 'ಅದರ ಅರ್ಥ ನನಗೆ ಗೊತ್ತಿದ್ದರೆ ತಾನೆ? ಆದರೆ ಎದುರಾಳಿಗಳನ್ನು ಹೆದರಿಸಲಿಕ್ಕಾದರೂ ದ್ವಿತೀಯ ಭಾಷೆ ಗೊತ್ತಿರಬೇಕು ಅಂತ ಮೌಲ್ವಿಗಳು ಅನ್ನುವುದರಲ್ಲಿ ಅರ್ಥವಿದೆ ಎಂದು ನನಗೆ ಈಗ ಗೊತ್ತಾಯಿತು' ಎಂದಿತು.

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ