‘ಸಂಪದ’ ನಗೆಬುಗ್ಗೆ - ಭಾಗ ೧೨೬

‘ಸಂಪದ’ ನಗೆಬುಗ್ಗೆ - ಭಾಗ ೧೨೬

ಜೀವನದ ಉಳಿದ ಭಾಗ

ಮೊದಲ ಬಾರಿಗೆ ಡೈವಿಂಗ್‌ಗೆ ಆಗಮಿಸಿದವರು ಬಹಳ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವು ಸಲ ಇನ್‌ಸ್ಪೆಕ್ಟರ್‌ಗೆ ಉತ್ತರಿಸಲು ಸಹ ಆಗುವುದಿಲ್ಲ. ಇನ್ನು ಕೆಲವರು, ಕೇಳುವ ಎಲ್ಲ ಪ್ರಶ್ನೆಗಳನ್ನು ಕೇಳಿ, ಸಂದೇಹಗಳನ್ನು ಪರಿಹರಿಸಿಕೊಂಡು ನಂತರ ಡೈವ್ ಮಾಡದಿರಲು ನಿರ್ಧರಿಸುತ್ತಾರೆ. ಬಹುತೇಕ ಜನರ ಪ್ರಶ್ನೆ ಎಷ್ಟು ನಕಾರಾತ್ಮಕವಾಗಿರುತ್ತದೆಂದರೆ ಅವೆಲ್ಲವೂ ಸಾವಿನ ಕುರಿತಾಗಿ ರುತ್ತದೆ. "ಸ್ಕೈ ಡೈವಿಂಗ್ ಮಾಡುವಾಗ ಪ್ಯಾರಚೂಟ್ ಬಿಚ್ಚಿಕೊಳ್ಳದಿದ್ದರೆ ಏನಾಗುತ್ತದೆ?'' ಎಂಬುದು ಎಲ್ಲರೂ ಕೇಳುವ ಪ್ರಶ್ನೆ.

ಒಂದು ದಿನ ಕೆಲ ಯುವಕರು ಸ್ಕೈ ಡೈವಿಂಗ್‌ಗೆ ಬಂದರು. ಅವರಲ್ಲಿ ಒಬ್ಬ ಅದೇ ಪ್ರಶ್ನೆ ಕೇಳಿದ- ''ಮೇಲಿಂದ ಜಿಗಿದಾಗ ಪ್ಯಾರಚೂಟ್ ಬಿಚ್ಚಿಕೊಳ್ಳದಿದ್ದರೆ ಏನು ಕತೆ?''

ಅದಕ್ಕೆ ಇನ್‌ಸ್ಟ್ರಕ್ಟರ್ ಹೇಳಿದ- 'ಮತ್ತೊಂದು ಪ್ಯಾರಚೂಟ್ ಅನ್ನು ಬಳಸಿ''.

ಅದಕ್ಕೆ ಆ ಯುವಕ, "ಅದೂ ಓಪನ್ ಆಗದಿದ್ದರೆ ಏನು ಮಾಡುವುದು?'' ಎಂದ.

ಆಗ ಇನ್‌ಸ್ಪೆಕ್ಟರ್, ''ಆಗ ಏನೂ ಮಾಡಲು ಆಗೊಲ್ಲ. ಬೇರೆ ದಾರಿಯಿಲ್ಲ'' ಎಂದು ಹೇಳಿದ.

ಈ ಮಾತಿಗೆ ಮತ್ತಷ್ಟು ಉದ್ವಿಗ್ನನಾದ ಯುವಕ "ಪ್ಯಾರಚೂಟ್ ಓಪನ್ ಆಗದ ಸನ್ನಿವೇಶದಲ್ಲಿ ನಾವು ಭೂಮಿಗೆ ಬಂದು ಅಪ್ಪಳಿಸಲು ಎಷ್ಟು ಸಮಯ ಬೇಕಾಗುತ್ತದೆ?'' ಎಂದು ಕೇಳಿದ.

ಈ ಪ್ರಶ್ನೆಗೆ ಇನ್‌ಸ್ಟ್ರಕ್ಟ‌ರ್ ಸಮಾಧಾನದಿಂದ ಹೇಳಿದ ''ರೆಸ್ಟ್ ಆಫ್ ಯುವರ್ ಲೈಫ್”,

***

ಜೀವನದಲ್ಲಿ ಬದಲಾವಣೆ

ಒಮ್ಮೆ ವ್ಯಕ್ತಿಯೊಬ್ಬರು ತಮ್ಮ ಗೆಳೆಯನಿಗೆ ಫೋನ್ ಮಾಡಿದರಂತೆ. ಆಗ ಅವರಿಗೆ ಈ ರೆಕಾರ್ಡೆಡ್ ಮೆಸೇಜ್ ಕೇಳಿಸಿತಂತೆ- "ನಾನು ಈಗ ನಿಮ್ಮೊಂದಿಗೆ ಮಾತನಾಡಲು ಲಭ್ಯವಿಲ್ಲ. ನೀವು ನನಗೆ ಫೋನ್ ಮಾಡಿದ್ದಕ್ಕೆ ಧನ್ಯವಾದಗಳು. ನಾನು ನನ್ನ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿದ್ದೇನೆ. ಬೀಪ್ ಸೌಂಡ್ ಕೇಳಿಸಿದ ನಂತರ ನಿಮ್ಮ ಮೆಸೇಜ್ ಏನೆಂಬುದನ್ನು ಹೇಳಿ, ನಾನು ವಾಪಸ್ ಕರೆ ಮಾಡುತ್ತೇನೆ. ಒಂದು ವೇಳೆ ನಾನು ವಾಪಸ್ ಫೋನ್ ಮಾಡದಿದ್ದರೆ, ನಾನು ಜೀವನದಲ್ಲಿ ಮಾಡಿರುವ ಬದಲಾವಣೆಗಳಲ್ಲಿ ನೀವೂ ಒಬ್ಬರು ಎಂದು ಭಾವಿಸಿ''.

ಎರಡು-ಮೂರು ದಿನಗಳಾದರೂ ಅವರ ಗೆಳೆಯನ ಫೋನ್ ಕರೆ ಬರಲಿಲ್ಲ. ಆತ ಜೀವನದಲ್ಲಿ ಮಾಡಿಕೊಂಡ ಬದಲಾವಣೆ ಗಳಲ್ಲಿ ತಾನೂ ಸೇರಿದ್ದೇನೆಂಬುದು ಅವರಿಗೆ ಮನವರಿಕೆಯಾಯಿತು.

***

ಪತ್ನಿ ಮತ್ತು ಅವಳ ಪ್ರತಿಕ್ರಿಯೆ

ಖ್ಯಾತ ಉದ್ಯಮಿ ಹರ್ಷ್ ಗೋಯಂಕಾ ಕೆಲ ವರ್ಷಗಳ ಹಿಂದೆ ಮಾಡಿದ್ದ ಒಂದು ಟ್ವಿಟ್ ನೆನಪಾಗುತ್ತಿದೆ. ಅದರಲ್ಲಿ ಅವರು ಒಂದು ಹಾಸ್ಯ ಪ್ರಸಂಗವನ್ನು ಹಂಚಿಕೊಂಡಿದ್ದರು.

- You are negative. ಅಷ್ಟಕ್ಕೇ ಅವಳ ಕೋಪ ನೆತ್ತಿಗೇರಿಬಿಟ್ಟಿತು. ಎಲ್ಲಿತ್ತೋ ಕೋಪ... 'ನೀವೇನು ಬಹಳ ಪಾಸಿಟಿವ್‌ ವ್ಯಕ್ತಿಯಾ? ನೀವು ಪರಮ ಸ್ವಾರ್ಥಿ, ಮಹಾ ಕಂಜೂಸು, ಸಂವೇದನಾರಹಿತ ವ್ಯಕ್ತಿ, ಕಲ್ಲು ಹೃದಯಿ, ನಿಮ್ಮಂಥ ವ್ಯಕ್ತಿ ಜತೆ ನಾನು ಯಾಕೆ ಸಂಸಾರ ಮಾಡು ತ್ತಿದ್ದೆನೋ ಗೊತ್ತಿಲ್ಲ, ನಾನು ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು, ನಿಮ್ಮ ಜತೆ ಇರುವುದಕ್ಕಿಂತ ಹಾಳುಬಾವಿ ಹಾರಿ ಸಾಯೋದು ವಾಸಿ. ನಿಮ್ಮಂಥ ವ್ಯಕ್ತಿ ಜತೆ ಜೀವನ ಸಾಗಿಸುತ್ತಿದ್ದೇನಲ್ಲ.. ನಾನು ಹಿಂದಿನ ಜನ್ಮದಲ್ಲಿ ಅದ್ಯಾವ ಪಾಪ ಮಾಡಿದ್ದೆನೋ ಗೊತ್ತಿಲ್ಲ... * ನನ್ನ ಕರ್ಮ..ಕರ್ಮ' ಎಂದು ಏರಿದ ಧ್ವನಿಯಲ್ಲಿ ಕಿರುಚಿದಳು. ನನಗೆ ಮಧ್ಯೆ ಬಾಯಿ ಹಾಕಲು ಅವಕಾಶ ಕೊಡದೇ ಒಂದೇ ಸಮನೆ ಕೋಪ-ತಾಪ ಪ್ರದರ್ಶಿಸಿಬಿಟ್ಟಳು.

ಅಷ್ಟಕ್ಕೂ ನಾನು ಹೇಳಬೇಕೆಂದಿದ್ದುದು 'ನಿನ್ನ ಕೋವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್‌ ಬಂದಿದೆ ' ಅಂತ. ಅಷ್ಟರೊಳಗೆ ಇಷ್ಟೆಲ್ಲ ಭಾನಗಡಿ ಆಗಿ, ರಂಬಾರುಡಿ ಜರುಗಿಹೋಯಿತು.

***

ಜೀವನದಲ್ಲಿ ಮುಂದೆ ಬರಲು…

ಸ್ವಾಮೀಜಿ: ಇವತ್ತು ನಾನು ನಿಮಗೆ ಜೀವನದಲ್ಲಿ ಮುಂದೆ ಬರುವುದು ಹೇಗೆ ಅಂತ ಹೇಳಿಕೊಡ್ತೀನಿ.

ಸೂರಿ: ಹೇಳಿಕೊಡಿ ಗುರೂಜಿ. ಪುಣ್ಯ ಬರುತ್ತೆ.

ಸ್ವಾಮೀಜಿ: ಮೊದಲು ನಿಮ್ಮ ಬಲಗಾಲನ್ನು ಮುಂದೆ ಇಡಿ. ಆಮೇಲೆ ನಿಮ್ಮ ಎಡಗಾಲನ್ನು ಮುಂದೆ ಇಡಿ ಅಷ್ಟೇ. ಹಾಗೆ ಮುಂದೆ ನಡೆದುಕೊಂಡು ಹೋಗಿ, ಮುಂದೆ ಬರುತ್ತೀರಿ !

***

ಅಳುವಿಗೆ ಕಾರಣ

ಒಂದು ಬಾರಿ ಒಂದಷ್ಟು ಮಹಿಳೆಯರೇ ಸೇರಿ ಪ್ರಯಾಣ ಹೊರಟಿದ್ದರು. ಆದರೆ ಅವರು ಪ್ರಯಾಣಿಸುತಿದ್ದ ಬಸ್ ಅಪಘಾತವಾಗಿ, ಅದರಲ್ಲಿದ್ದ ಅಷ್ಟೂ ಮಹಿಳೆಯರು ಪ್ರಾಣ ಕಳೆದುಕೊಂಡರು. ಘಟನೆಯ ಸ್ಥಳಕ್ಕೆ ಬಂದ ಅವರ ಪತಿಯಂದಿರು ದುಃಖದಿಂದ ರೋದಿಸುತ್ತಿದ್ದರು. ಸ್ವಲ್ಪ ಸಮಯ ರೋದಿಸಿದ ನಂತರ ಅವರೆಲ್ಲ ಸಮಾಧಾನಗೊಂಡು ಮುಂದಿನ ಕಾರ್ಯಕ್ಕೆ ಅಣಿಯಾಗತೊಡಗಿದರು. ಆದರೆ ಅಲ್ಲಿ ಒಬ್ಬ ಮಾತ್ರ ಅಳು ನಿಲ್ಲಿಸದೆ ಹೊರಳಾಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಅದನ್ನು ಗಮನಿಸಿದ ಉಳಿದವರು, ‘ಯಾಕಪ್ಪ ನಿನ್ನ ಹೆಂಡತಿ ಕೂಡ ಇದೇ ಬಸ್ ಅಪಘಾತದಲ್ಲಿ ತೀರಿಕೊಂಡಳೇ’ ಎಂದು ಕೇಳಿದರು. ಅದಕ್ಕೆ ಅವನು ಇಲ್ಲ ಇಲ್ಲ ಅವಳು ಇದೇ ಬಸ್ ನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಬಸ್ ಮಿಸ್ ಮಾಡಿಕೊಂಡಳು ಎನ್ನುತ್ತಾ ಮತ್ತಷ್ಟು ಜೋರಾಗಿ ಅಳತೊಡಗಿದ.

***

ಕುಡಿತ

ಅಪ್ಪ: ಕುಡಿದು ಬೈಕ್ ಓಡಿಸಬೇಡ ಸೂರಿ, ಅಪಘಾತ ಆಗುತ್ತದೆ.

ಸೂರಿ: ಅಪ್ಪ, ನೀವು ಕುಡಿದು ನನಗೆ ಫೋನ್ ಮಾಡಬೇಡಿ ಅಂತ ಎಷ್ಟು ಬಾರಿ ಹೇಳಿದ್ದೇನೆ?

ಅಪ್ಪ: ನಾನು ಕುಡಿದಿದ್ದೇನೆ ಅಂತ ನಿನಗೆ ಹೇಗೆ ಗೊತ್ತಾಯ್ತು?

ಸೂರಿ: ಹೇಗೆಂದರೆ, ನನಗೆ ನೀವು ಇನ್ನೂ ಬೈಕ್ ಕೊಡಿಸಿಯೇ ಇಲ್ಲ.

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ