‘ಸಂಪದ’ ನಗೆಬುಗ್ಗೆ - ಭಾಗ ೧೩೦

ಕಾರಣ
ಗಂಡ ಹೆಂಡತಿಯ ನಡುವೆ.. ಮಾತಿಲ್ಲಾ ಕಥೆಯಿಲ್ಲ.. ಆದರೆ ಅಲ್ಲಿ ನಡೆದದ್ದೇ ಬೇರೆ. ರಾತ್ರಿ ಸಮಯ ೯ ಘಂಟೆ ಆಗಿ ಹೋಗಿತ್ತು.. ಗಂಡ ಇನ್ನೂ ಮನೆಗೆ ಬಂದಿಲ್ಲ.. ಕಾದು ಕಾದು ಸುಸ್ತಾದ ಶ್ರೀಮತಿ.. ಕಲರ್ಸ್ ಕನ್ನಡ ಚಾನಲ್ ನ ರಾಧ ರಮಣ ಸೀರಿಯಲ್ ನೋಡುತ್ತಾ ಕುಳಿತಿದ್ದಳು..
ಮನೆಯ ಕಾಲಿಂಗ್ ಬೆಲ್ ಶಬ್ದವಾಯಿತು.. ಎದ್ದು ಹೋಗಿ ಬಾಗಿಲು ತೆರೆದಳು.. ನೋಡಿದರೆ ಗಂಡ ಸೂರಿ ಬಹಳ ಸುಸ್ತಾಗಿ ಬಂದಿದ್ದ..
ಬಂದವನೇ ಸೀದಾ ರೂಮಿನಲ್ಲಿ ಹೋಗಿ ಮಲಗಿದ.. ಹೆಂಡತಿಯ ಕಡೆ ಮುಖವನ್ನು ಮಾಡಲಿಲ್ಲ..
ಹೆಂಡತಿಯ ಮನಸ್ಸಲ್ಲಿ ಆತಂಕ.. ರೀ ಊಟ ಮಾಡುವುದಿಲ್ಲವಾ ಎಂದಳು.. ಗಂಡನಿಗಾಗಿ ಕಾಯುತ್ತಾ ತಾನೂ ಕೂಡ ಊಟ ಮಾಡಿರಲಿಲ್ಲ..
ನನಗೆ ಹಸಿವಿಲ್ಲವೆಂದ ಸೂರಿ ಸುಮ್ಮನೆ ಅದೇನೋ ಯೋಚಿಸುತ್ತಾ ಮಲಗಿದ. ಶ್ರೀಮತಿ ತಾನೂ ಊಟ ಮಾಡದೇ ಬಂದು ಮಲಗಿದಳು.
ಶ್ರೀಮತಿಯ ಮನಸ್ಸಿನಲ್ಲಿ ನೂರಾರು ಪ್ರಶ್ನೆ ಒಮ್ಮೆಲೆ ಬಂದು ಹೋದವು. ಸೂರಿಯ ಬಳಿ ತಿರುಗಿ ನೋಡಿದಳು. ಸೂರಿ ತನ್ನ ಪಾಡಿಗೆ ತಾನು ತುಂಬಾ ಆಲೋಚನೆಯ ಜೊತೆ ಟೆಂಶನ್ ನಲ್ಲಿ ಇದ್ದ. ಶ್ರೀಮತಿಯು ತನ್ನ ಮನಸ್ಸಿನಲ್ಲಿ ಆಲೋಚಿಸಲು ಶುರು ಮಾಡಿದಳು. ನನ್ನ ಗಂಡ ಏನಾದರೂ ಪರಸ್ತ್ರೀ ಜೊತೆಗೆ ಪ್ರೀತಿಯಲ್ಲಿ ಬಿದ್ದಿರಬಹುದಾ? ಎಂದು. ನನಗೇನಾದರೂ ಡಿವೋರ್ಸ್ ಕೊಡಲು ಯೋಚಿಸುತ್ತಿರಬಹುದ ಎಂದು ದೀರ್ಘ ಆಲೋಚನೆಗಿಳಿದಳು.
ಮಲಗಿದ್ದ ಸೂರಿ ಮೆಲ್ಲನೆ ಎದ್ದು ಕುಳಿತ. ಎದ್ದು ಶ್ರೀಮತಿಯನ್ನು ಮೆಲು ಧ್ವನಿಯಲ್ಲಿ ಎಬ್ಬಿಸಿದ. ಅವಳ ಕೈ ಹಿಡಿದ. ಕೈ ಹಿಡಿದು, ನಿನ್ನ ಬಳಿ ಏನನ್ನೋ ಕೇಳಬೇಕೆಂದಿದ್ದೇನೆ ಎಂದ.
ಶ್ರೀಮತಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯ್ತು.. ಓ ನನ್ನ ಗಂಡ ನನ್ನ ಬಳಿ ಡಿವೋರ್ಸ್ ಕೇಳುವವನಿದ್ದಾನೆ ಎಂದುಕೊಂಡಳು. ಹಿಡಿದಿದ್ದ ಕೈಗಳನ್ನು ಇನ್ನೂ ಬಿಗಿ ಮಾಡಿದ. ಶ್ರೀಮತಿಯ ಬಳಿ ಕೇಳಿಯೇ ಬಿಟ್ಟ. “ಶ್ರೀಮತಿ ನಾನು ಬಹಳ ಟೆಂಶನ್ ನಲ್ಲಿ ಇದ್ದೇನೆ.. ದಯಮಾಡಿ ಹೇಳು.. ಈ ಬಾರಿ.. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಸರ್ಕಾರ ಬರಬಹುದು? ಎಂದ”
ಅಯ್ಯೋ ನಿನ್ನ ಬಾಯಿಗಿಟ್ಟಾಕ ಹೋಗಿ ಮಲ್ಕೊ ಎಂದವಳೇ.. ಎದ್ದು ಹೋಗಿ ಅಡುಗೆ ಮನೆಯಲ್ಲಿ ತಟ್ಟೆಗೆ ಊಟ ಬಡಿಸಿಕೊಂಡು ಬಂದು.. ಜೀ ಕನ್ನಡದ ನಿಗೂಢ ರಾತ್ರಿ ಧಾರವಾಹಿ ನೋಡುತ್ತಾ ಊಟ ಮಾಡಿ ಮಲಗಿದಳು!
***
ಕಿಟ್ಟಿ ಪಾರ್ಟಿ
ಒಂದು ಮನೆಯಲ್ಲಿ ಮಹಿಳೆಯರ ಕಿಟ್ಟಿ ಪಾರ್ಟಿ ನಡೀತಿತ್ತು. ಗಂಡಂದಿರಿಗೆ I LOVE YOU ಅಂತ ಹೇಳಿದರೆ ಎಷ್ಟು ಚೆಂದ ಅಲ್ವಾ? ಅಂತ ಮಾತು ಬಂದಿತು. ನೀವು ಆ ತರಹ ಹೇಳಿ ಎಷ್ಟು ದಿನ ಆಯ್ತು ಎಂದು ಒಬ್ಬರಿಗೊಬ್ಬರು ಕೇಳಿಕೊಂಡರು. ಒಬ್ಬೊಬ್ಬರದೂ ಒಂದೊಂದು ತರಹದ ಉತ್ತರ ಬಂತು. ಹಾಗಾದರೆ ಸರಿ ಈಗಲೇ ಎಲ್ಲರೂ ನಮ್ಮ ಗಂಡಂದಿರಿಗೆ ಮೆಸೇಜ್ ಕಳುಹಿಸೋಣ ಏನು ಪ್ರತಿಕ್ರಿಯೆ ಬರುತ್ತದೆ ನೋಡೋಣ.... ತುಂಬಾ ರೊಮಾಂಟಿಕ್ ಪ್ರತಿಕ್ರಿಯೆಗೆ ಬಹುಮಾನ ಅಂತ ತೀರ್ಮಾನಿಸಿದರು . ಪ್ರತಿಯೊಬ್ಬರು ತಂತಮ್ಮ ಗಂಡಂದಿರ ಮೊಬೈಲಿಗೆ I LOVE YOU ಮೆಸೇಜ್ ಕಳುಹಿಸಿದರು.
ಸ್ವಲ್ಪ ಸಮಯದ ನಂತರ ಆ ಗಂಡಂದಿರ ಕಡೆಯಿಂದ ಬಂದ ಪ್ರತಿಕ್ರಿಯೆಗಳಲ್ಲಿ ಕೆಲವನ್ನು ಕೊಟ್ಟಿದೆ.ಓದಿ…
ಗಂಡ ೧ : SWEETY... ತಲೆ ಕೆಟ್ಟುಗಿಟ್ಟು ಹೋಗಿಲ್ಲ ತಾನೇ ನಿನಗೆ ?
ಗಂಡ ೨ : ಸರಿ ಬಿಡು ಇವತ್ತೂ ಅಡುಗೆ ಮಾಡಿಲ್ವಾ?
ಗಂಡ ೩ : Darling, ಈ ತಿಂಗಳ ಮನೆ ಖರ್ಚಿನ ದುಡ್ಡು ಮುಗಿದೋಯ್ತಾ?
ಗಂಡ ೪ : ಏಕೆ ಏನಾಯ್ತು ? ಏನ್ ವಿಷಯ ?
ಗಂಡ ೫ : ಏನು ನೀನು ಕನಸು ಕಾಣ್ತಾ ಇದೀಯೋ,, ಅಥವಾ ನನಗೇ ಭ್ರಮೇನೋ?
ಗಂಡ ೬ : ಮುಂದಿನ ವಾರದ ನಿನ್ನ ತಂಗಿ ಮದುವೇಗೆ ಹೊಸಾ ಒಡವೆ ಸೆಟ್ ಬೇಕಾ ?.... ಅದಕ್ಕೇ ಈ ಮೆಸೆಜಾ?
ಗಂಡ ೭ : ಇಲ್ಲಿ ಆಫೀಸಲ್ಲಿ ನಂದೇ ನಂಗಾಗಿದೆ... ಟೆನ್ಷನ್ನಲ್ಲಿ ಸಾಯ್ತಿದೀನಿ.... ನಿಂದೊಂದು ಬೇರೆ ಗೋಳು ಏನೇ ಇದು ದರಿದ್ರದ ಮೆಸೇಜು
ಗಂಡ ೮ : ಲೇ ನಿನಗೆಷ್ಟು ಸರ್ತಿ ಬಡುಕೊಂಡ್ರೂ ಆ ಕಿತ್ತೋದ್ ಸೀರಿಯಲ್ಗಳ್ನ ನೋಡೋದು ಬಿಡಲ್ವಲ್ಲೆ .... ಆ ಕಚಡಾ ನೋಡಿ ಇಂಥಾ ಮೆಸೇಜ್ ಥೂ
ಗಂಡ ೯ : ಹೂಂ ,,,, ಯಾರಿಗೆ ಗುದ್ದಿದೆಯೆ ನನ್ನ ಕಾರು ,, ಏನು ಒಂದೈವತ್ತು ಸಾವಿರಕ್ಕೆ ತಂದಾ ತಲೆಗೆ,,, ನನ್ ಕಾರು ಮುಟ್ಟಬೇಡ ಅಂತ ಎಷ್ಟು ಸಲ ಹೇಳಿದೀನಿ.. ಹೂಂ ಎಲ್ಲಿದೀಯ ಬೊಗಳು.
ಗಂಡ ೧೦ : ಏನ್ ತಾಯೀ ಇದು ನಿನ್ನ ಗೋಳು? ಇವತ್ತೂ, ಹುಡುಗರನ್ನ ಸ್ಕೂಲಿಂದ ನಾನೇ ಕರಕೊಂಡ್ ಬರ್ಬೇಕು ತಾನೇ?
ಕೊನೆಯ ಹಾಗೂ ಅದ್ಭುತ ಪ್ರತಿಕ್ರಿಯೆ
ಗಂಡ ೧೧ : ಯಾರ್ರೀ ಇದು ? ನನ್ನ ಹೆಂಡತಿ ಫೋನಿಂದ ಮೆಸೇಜ್ ಕಳಿಸ್ತಿರೋದು?
***
ಮುಸ್ಲಿಂ ಗೆಳೆಯರು
ಸೂರಿ - 'ಮಹಾಭಾರತ'ದಲ್ಲೂ ಮುಸ್ಲಿಂ ಗೆಳೆಯರಿದ್ದರು.
ಪತ್ರಕರ್ತ - ಅದು ಹೇಗೆ ಸರ್?
ಸೂರಿ - ಭೀಷ್ಮ ಪಿತಾಮಹಾರು ಯಾವಾಗಲೂ 'ಆವೋ ಉಸ್ಮಾನ್ ಭಾಯೀ' ಎಂದು ತನ್ನ ಮುಸ್ಲಿಂ ಸ್ನೇಹಿತನನ್ನು ಕರೆಯುತ್ತಿದ್ದರು.
ಪತ್ರಕರ್ತ - ಅವರು 'ಆವೋ ಉಸ್ಮಾನ್ ಭಾಯ್' ಅಂತಲ್ಲ... 'ಆಯುಷ್ಮಾನ್ ಭವ !' ಎಂದು ಹೇಳುತಿದ್ದರು !
***
ಹೆಂಡ
ಶ್ರೀಮತಿ: ಇಲ್ನೋಡಿ, ನಾಯಿಯ ಈ ಬಟ್ಟಲಿನಲ್ಲಿ ಹೆಂಡ ಹಾಕಿದರೆ ವಾಸನೆ ನೋಡಿ ಕುಡಿಯದೆ ಹಾಗೇ ಬಿಟ್ಟಿತು. ನಂತರ ಅದನ್ನು ತೆಗೆದು ಅದೇ ಬಟ್ಟಲಿಗೆ ಹಾಲನ್ನು ಹಾಕಿದೆ. ಗಟಗಟ ಕುಡಿಯಿತು. ಈ ಪ್ರಯೋಗದಿಂದ ನಿಮಗೇನು ಅರ್ಥವಾಯಿತು ಹೇಳಿ?
ಸೂರಿ: ಅಂದರೆ ಹೆಂಡ ಕುಡಿಯದವರು ನಾಯಿ ಅಂತ ಅರ್ಥವಾಯ್ತು.
***
ಟಿಕೇಟ್
ಶಿಕ್ಷಕ: ಬಸ್ ಡ್ರೈವರ್ ಗೂ, ಕಂಡೆಕ್ಟರ್ ಗೂ ಏನು ವ್ಯತ್ಯಾಸ?
ಸೂರಿ: ಸರ್, ಕಂಡಕ್ಟರ್ ಮಲಗಿದರೆ ಯಾರೂ ಟಿಕೇಟ್ ತಗೋಳ್ಳಲ್ಲ. ಅದೇ ಡ್ರೈವರ್ ಮಲಗಿದರೆ ಎಲ್ಲರೂ ಟಿಕೇಟ್ ತಗೋತಾರೆ !
***
ಹುಡುಕಾಟ
ಸೇತುವೆ ಮೇಲಿನಿಂದ ಬಸ್ ಕೆಳಗೆ ಉರುಳಿತ್ತು. ಗಾಯಗೊಂಡವರೆಲ್ಲರೂ ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡುತ್ತಿದ್ದರು.
ಸೂರಿ: ಗಾಂಪ, ಏನು ಮಾಡ್ತಿದ್ದೀಯಾ ಅಲ್ಲಿ? ಬೇಗ ಓಡು.
ಗಾಂಪ: ನಾನು ಕಂಡಕ್ಟರ್ ನನ್ನು ಹುಡುಕ್ತಾ ಇದ್ದೀನಿ.
ಸೂರಿ: ಯಾಕೆ?
ಗಾಂಪ: ಟಿಕೆಟ್ ಹಿಂದೆ ಐದು ರೂಪಾಯಿ ಚಿಲ್ಲರೆ ಬರೆದಿದ್ದ. ಅದನ್ನು ತೆಗೆದುಕೊಳ್ಳುವುದಕ್ಕ್ರೆ.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ