‘ಸಂಪದ’ ನಗೆ ಬುಗ್ಗೆ - ಭಾಗ ೫

‘ಸಂಪದ’ ನಗೆ ಬುಗ್ಗೆ - ಭಾಗ ೫

ರೋಗ

ವೃದ್ಧ: ವೈದ್ಯರೇ, ನನ್ನನ್ನು ಅಪರೂಪಕ್ಕೆ ಕೆಟ್ಟ ರೋಗವೊಂದು ಬಾಧಿಸುತ್ತಿದೆ. ಏನಾದರೂ ಔಷಧಿ ಕೊಟ್ಟು ಗುಣಪಡಿಸಿರಿ.

ವೈದ್ಯ: ಏನ್ ರೋಗ, ಅದರಿಂದ ಏನಾಗುತ್ತಿದೆ?

ವೃದ್ಧ: ನನ್ನ ಹಣೆ ದಿನದಿನಕ್ಕೂ ಅಗಲವಾಗುತ್ತಿದೆ. ಹೋದ ವರ್ಷಕ್ಕಿಂತ ಈ ವರ್ಷ ವಿಪರೀತ ಅಗಲವಾಗಿಬಿಟ್ಟಿದೆ !

ವೈದ್ಯ: ಅಯ್ಯೋ ಮಾರಾಯ್ರೆ, ಹಣೆ ಅಗಲವಾಗುತ್ತಿಲ್ಲ. ಬದಲಾಗಿ ನಿಮ್ಮ ನೆತ್ತಿ ಮೇಲಿನ ಕೂದಲುಗಳು ಉದುರುತ್ತಿವೆ ಅಷ್ಟೇ. ಫೀಸ್ ಕೊಟ್ಟು ಆರಾಮವಾಗಿ ಮನೆಗ್ ಹೋಗಿ.

***

ಕಾಯಿನ್ ಬೂತ್

ತಾತ: ಮಗು ಇಲ್ಲೇ ಆಟವಾಡಿಕೊಂಡಿರು, ನಾನು ಬೂತಿಗೆ ಹೋಗಿ ಬರುತ್ತೇನೆ.

ಮೊಮ್ಮಗ: ತಾತಾ, ಭೂತ ಅಂತ ಅನ್ನುತ್ತಿದ್ದೀರಿ. ಭೂತ, ಪಿಶಾಚಿ, ದೆವ್ವ ಇವುಗಳೆಲ್ಲ ಅಪಾಯ ಅಂತ ನೀವೇ ಹೇಳಿದ್ದೀರಿ, ಭೂತದ ಸಹವಾಸ ಬೇಡ.

ತಾತ: ಆ ಭೂತ ಅಲ್ಲವೋ, ನಾನು ಕಾಯಿನ್ ಬೂತಿಗೆ ಹೋಗಿ ಫೋನ್ ಮಾಡಿ ಬರಬೇಕು . ಹೆದರಬೇಡ.

***

ನೆಗಡಿ ಬಂದರೆ…

ತೆನಾಲಿ ರಾಮನ ಎದುರು ಒಮ್ಮೆ ಕಾಳಿಕಾದೇವಿ ಪ್ರತ್ಯಕ್ಷಳಾದಳು. ಅವಳನ್ನು ಕಂಡ ತಕ್ಷಣವೇ ತೆನಾಲಿ ಪಕಪಕ ನಗಲು ಆರಂಭಿಸಿದ. ಯಾಕಪ್ಪ ನನ್ನನ್ನು ನೋಡಿ ಜೋರಾಗಿ ನಗುತ್ತಿದ್ದೀಯಾ ಎಂದಳು ಕಾಳಿಕಾದೇವಿ. ಅದಕ್ಕೆ ತೆನಾಲಿ ಅಲ್ಲಾ ಮಾನವರಿಗೆ ಒಂದು ತಲೆ ಒಂದು ಮೂಗು ಇದೆ. ನೆಗಡಿ ಬಂದರೆ ಒದ್ದಾಡುತ್ತೇವೆ. ಅಂತಹದ್ದರಲ್ಲಿ ನಿನಗೆ ಸಾವಿರ ತಲೆಗಳು ಹಾಗೂ ಎರಡು ಕೈಗಳು ಇವೆ. ನೆಗಡಿ ಬಂದರೆ ನಿನ್ನ ಗತಿ ಏನು ಅಂತ ಯೋಚಿಸಿದೆ. ನಗು ಬಂತಷ್ಟೇ!

***

ಸೀತೆ-ಗೀತೆ

ಒಮ್ಮೆ ಕೋರ್ಟಿನಲ್ಲಿ ನ್ಯಾಯಾಧೀಶರು ರಾವಣನನ್ನು ಸಾಕ್ಷಿ ಹೇಳಲು ಕರೆಸಿದರು. ಗೀತೆ (ಭಗವದ್ಗೀತೆ) ಮೇಲೆ ಕೈಯಿಟ್ಟು ಪ್ರಮಾಣ ಮಾಡು ಎಂದು ರಾವಣನಿಗೆ ನ್ಯಾಯಾಧೀಶರು ಹೇಳಿದರು. ಅದಕ್ಕೆ ರಾವಣ ಅದೊಂದು ಬಿಟ್ಟು ಬೇರೆ ಹೇಳಿ, ನಾನು ಈಗಾಗಲೇ ಸೀತೆಯ ಮೇಲೆ ಕೈ ಇಟ್ಟು ಸುಟ್ಟುಕೊಂಡಿದ್ದೇನೆ.

***

ಗಾಂಪನ ಪಂದ್ಯ

ಗಾಂಪನಿಗೆ ಪಂದ್ಯ (ಬೆಟ್) ಕಟ್ಟುವ ಹುಚ್ಚು ಬಹಳ. ‘ಗಾಂಪಾ, ಈ ಪಂದ್ಯ ಕಟ್ಟುವುದನ್ನು ಸಾಕು ಮಾಡು' ಎಂದರೆ ‘ಈ ಪಂದ್ಯದಲ್ಲಿ ನಾನೇ ಗೆಲ್ಲುವುದು, ಬೇಕಿದ್ದರೆ ಹತ್ತು ರೂಪಾಯಿ ಪಂದ್ಯ ಕಟ್ಟುತ್ತೀಯಾ?’ ಎನ್ನುತ್ತಿದ್ದ. ಒಂದು ದಿನ ಗಾಂಪ ಬಾರಿನಲ್ಲಿ ಕುಳಿತು ಗುಂಡು ಹಾಕುತ್ತಿದ್ದ. ಅವನಿಗೆ ಏನಾದರೂ ಪಂದ್ಯ ಹೂಡಬೇಕೆನಿಸಿತು. ಸೀದಾ ಬಾರ್ ನ ಮ್ಯಾನೇಜರ್ ಹತ್ತಿರ ಹೋದ. 

‘ನೋಡಿ ನನ್ನ ಹಲ್ಲಿನಿಂದ ನನ್ನ ಕಿವಿಯನ್ನು ಕಚ್ಚಿಕೊಳ್ಳುತ್ತೇನೆ' ಎಂದ. ಮ್ಯಾನೇಜರ್ ‘ಸಾಧ್ಯವೇ ಇಲ್ಲ' ಎಂದ. ಗಾಂಪ ನಾನು ಮಾಡಿ ತೋರಿಸುತ್ತೇನೆ. ಆದರೆ ಇಪ್ಪತ್ತೈದು ರೂ.ಪಂದ್ಯ' ಎಂದು ಹೇಳಿದ. ಮ್ಯಾನೇಜರ್ ಒಪ್ಪಿದ ಗಾಂಪ ಕೂಡಲೇ ತನ್ನ ಬಾಯಿಯಿಂದ ಹಲ್ಲಿನ ಸೆಟ್ ತೆಗೆದು ಕಿವಿಯ ಬಳಿ ಒಯ್ದು ಕಚಕ್ ಎಂದು ಕಚ್ಚಿ ತೋರಿಸಿದ. ಪಾಪ, ಮ್ಯಾನೇಜರ್ ಇಪ್ಪತ್ತೈದು ರೂ.ಕೊಟ್ಟ.

ಗಾಂಪ ಮತ್ತೆ ಸ್ವಲ್ಪ ಸಮಯದ ನಂತರ ಮ್ಯಾನೇಜರ್ ಬಳಿ ಹೋಗಿ “ಈಗ ಇನ್ನೊಂದು ಪಂದ್ಯ ಕಟ್ಟುವಿರಾ ನೋಡಿ, ಓ ಅಲ್ಲಿ, ಇಲ್ಲಿಂದ ಇಪ್ಪತ್ತು ಅಡಿ ದೂರದಲ್ಲಿ ಇಟ್ಟಿರುವ ಹೂದಾನಿಯೊಳಗೆ ನಾನು ಇಲ್ಲಿಂದ್ಲೇ ಮೂರು ಬಾರಿ ಸರಿಯಾಗಿ ಹೂದಾನಿಯೊಳಗೆ ಬೀಳುವಂತೆ ಉಗಿಯುತ್ತೇನೆ. ಈ ಪಂದ್ಯ ಸೋತರೆ ನಾನು ಇನ್ನೂರು ರೂಪಾಯಿ ಕೊಡುತ್ತೇನೆ" ಎಂದ.

ಮ್ಯಾನೇಜರ್ ಅದಕ್ಕೂ ಒಪ್ಪಿದ. ಗಾಂಪ ಮೊದಲನೆ ಸಲ ಉಗಿದಾಗ ಅದು ಐದು ಅಡಿ ದೂರ ಮಾತ್ರ ಹೋಗಿ ನೆಲದ ಮೇಲೆ ಹಾಸಿದ್ದ ಕಾರ್ಪೆಟ್ ಮೇಲೆ ಬಿತ್ತು. ಎರಡನೇ ಸಲ ಉಗಿದಾಗ ಅದು ಸ್ವಲ್ಪ ದೂರ ಹೋಯಿತು. ಮೂರನೆ ಸಲ ಉಗಿದಾಗಲೂ ಏಳೆಂಟು ಅಡಿ ಮಾತ್ರ ದೂರ ಹೋಗಿ ಕಾರ್ಪೆಟ್ ಮೇಲೆ ಬಿದ್ದಿತು. ಪ್ರತಿ ಸಲ ಗಾಂಪ ಉಗಿದು ಗುರಿ ತಪ್ಪಿದಾಗಲೂ ಮ್ಯಾನೇಜರ್ ಜೋರಾಗಿ ನಗುತ್ತಿದ್ದ. ಕೊನೆಗೂ ಗಾಂಪ ಪಂದ್ಯದಲ್ಲಿ ಸೋತಾಗ ಮ್ಯಾನೇಜರ್ ಗೆ ಖುಷಿ ಆಯ್ತು. ಹಲ್ಲು ಕಿರಿಯುತ್ತ ನಿಂತುಕೊಂಡ. ಗಾಂಪ ಮ್ಯಾನೇಜರ್ ಗೆ ಇನ್ನೂರು ರೂಪಾಯಿ ಕೊಟ್ಟ.

ಹಣ ಸಿಕ್ಕಬಳಿಕ ಮ್ಯಾನೆಜರ್ “ಅಂತೂ ಪಂದ್ಯದಲ್ಲಿ ಸೋತಿರಲ್ಲ" ಎಂದು ನಕ್ಕು ಬಿಟ್ಟ. ಆಗ ಗಾಂಪ “ಪಂದ್ಯದಲ್ಲಿ ನಾನು ಸೋತರೂ ಗೆಲವು ನನ್ನದೇ, ಏಕೆಂದರೆ ಓ ಆ ಮೂಲೆಯಲ್ಲಿ ಕುಳಿತಿದ್ದಾರಲ್ಲಾ, ಅವರ ಜೊತೆ ನಾನು ಪಂದ್ಯ ಹೂಡಿದ್ದೆ. ಅದರ ಪ್ರಕಾರ ನಾನು ನಿಮ್ಮ ಹೋಟೇಲಿನ ಸುಂದರವಾದ ಕಾರ್ಪೆಟ್ ಮೇಲೆ ಮೂರು ಬಾರಿ ಉಗಿಯುವೆ. ಆದರೂ ನೀವು ನನಗೆ ಬೈಯದೇ ನಗುತ್ತಾ ಇರುವಿರಿ ಎಂದು. ಆ ಪಂದ್ಯ ಗೆದ್ದುದರಿಂದ ನನಗೆ ಐದು ನೂರು ರೂಪಾಯಿ ಸಿಗಲಿದೆ. ಹಾಗಾಗಿ ಗೆಲವು ನನ್ನದೇ” ಎಂದು ಖುಷಿಯಿಂದ. ಮ್ಯಾನೇಜರ್ ಪಾಪ ಸುಸ್ತಾಗಿ ನಿಂತುಬಿಟ್ಟ.

***

ಕತೆ-ನಾಯಿ

ಗಾಂಪ ಒಮ್ಮೆ ಶಾಮನ ಬಳಿ ಹೇಳಿದ - “ಶಾಮ, ನನಗೆ ಕತೆ -ಕವನಗಳನ್ನು ಬರೆಯುವ ಹುಚ್ಚು. ಆದರೆ ನಾನು ಬರೆದದ್ದೆಲ್ಲಾ ಒಂದು ರೀತಿಯಲ್ಲಿ ಸಾಕು ನಾಯಿಯ ಹಾಗೆ..."

ಶಾಮ ಅಚ್ಚರಿಯಿಂದ ಹೇಳಿದ “ಯಾಗೆ ಗಾಂಪ?”

ಗಾಂಪ “ ನಾನು ನನ್ನ ಬರಹಗಳನ್ನು ಯಾವುದೇ ಪತ್ರಿಕೆಗಳಿಗೆ ಕಳಿಸಿದರೂ ಅವು ಕೂಡಲೇ ನನ್ನ ಹತ್ತಿರವೇ ಮರಳಿ ವಾಪಾಸ್ಸು ಬರುತ್ತದೆ. ಸಾಕು ನಾಯಿಯಂತೆ" ಎಂದ.

***

(ಸಂಗ್ರಹ) ‘ಸುಧಾ’ ವಾರ ಪತ್ರಿಕೆ ಹಾಗೂ ‘ಬಾಯಿ ತುಂಬಾ ನಕ್ಕು ಬಿಡಿ'

ಚಿತ್ರ : ಸುಧಾ ಕೃಪೆ