‘ಸುವರ್ಣ ಸಂಪುಟ' (ಭಾಗ ೩೬) - ದೇಸಾಯಿ ದತ್ತಮೂರ್ತಿ

ಕಳೆದ ವಾರ ‘ಸುವರ್ಣ ಸಂಪುಟ' ಕೃತಿಯಿಂದ ನಾವು ‘ಜಚನಿ’ ಎಂದೇ ಖ್ಯಾತರಾಗಿದ್ದ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ನಿಡುಮಾಮಿಡಿ ಸ್ವಾಮೀಜಿಯವರ ಕವನವನ್ನು ಸಂಗ್ರಹ ಮಾಡಿ ಪ್ರಕಟಿಸಿದ್ದೆವು. ಹಲವಾರು ಮಂದಿ ಓದುಗರು ಇವರ ಬಗ್ಗೆ ನಮಗೆ ತಿಳಿದೇ ಇರಲಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಈ ಕೃತಿಯಲ್ಲೂ ಅವರ ಒಂದೇ ಒಂದು ಕವನ ಪ್ರಕಟವಾಗಿದೆ. ಆದರೆ ಅವರ ಬಗ್ಗೆ ಅಧಿಕ ಮಾಹಿತಿಗಳು ಅಂತರ್ಜಾಲ ತಾಣಗಳಲ್ಲಿ ಲಭ್ಯವಿದೆ. ಆಸಕ್ತರು ಗಮನಿಸಬಹುದು.
ಈ ವಾರ ನಾವು ‘ದೇವದತ್ತ' ಎಂಬ ಕಾವ್ಯನಾಮದಿಂದಲೇ ಖ್ಯಾತರಾಗಿದ್ದ ಸಾಹಿತಿ ದತ್ತಮೂರ್ತಿ ದೇಸಾಯಿ ಇವರ ಕವನವನ್ನು ಸಂಗ್ರಹಿಸಿ ಪ್ರಕಟಿಸಲಿದ್ದೇವೆ. ಅದಕ್ಕೂ ಮೊದಲು ದೇಸಾಯಿಯವರ ಬಗ್ಗೆ ಒಂದಿಷ್ಟು…
ದತ್ತಮೂರ್ತಿ ದೇಸಾಯಿ: ಅಕ್ಟೋಬರ್ ೨, ೧೯೧೨ರಂದು ಧಾರವಾಡದಲ್ಲಿ ಜನಿಸಿದರು. ಇವರು ವರಕವಿ ಬೇಂದ್ರೆಯವರ ಸಮಕಾಲೀನರು. ಕನ್ನಡ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಇವರಿಗೆ ಪಾಂಡಿತ್ಯವಿತ್ತು. ಖ್ಯಾತ ಸಾಹಿತಿ ಖಲೀಲ್ ಗಿಬ್ರಾನ್ ಅವರ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅವುಗಳಲ್ಲಿ ‘ಮಾನವಪುತ್ರ ಜೀಸಸ್' ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಖಲೀಲ್ ಗಿಬ್ರಾನ್ ಅವರ ಉಕ್ತಿಗಳ ಸಂಗ್ರಹವನ್ನು ‘ಪ್ರವಾದಿಯ ತೋಟ' ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ‘ಹೂಬಳ್ಳಿ’ ಇವರ ಕವನ ಸಂಕಲನ. ಇದಲ್ಲದೇ ಇನ್ನೂ ಎರಡು ಕವನ ಸಂಕಲನಗಳನ್ನು ಪ್ರಕಟ ಮಾಡಿದ್ದಾರೆ. ಇವರು ಸೆಪ್ಟೆಂಬರ್ ೧, ೧೯೭೯ರಂದು ನಿಧನ ಹೊಂದಿದರು.
ದತ್ತ ಮೂರ್ತಿ ದೇಸಾಯಿಯವರ ಬಗ್ಗೆ ಲಭ್ಯ ಇರುವ ಮಾಹಿತಿ ಇಷ್ಟೇ. ಓದುಗರಿಗೆ ಇವರ ಬಗ್ಗೆ ಅಧಿಕ ಮಾಹಿತಿ ಇದ್ದಲ್ಲಿ ಖಂಡಿತಾ ಪ್ರತಿಕ್ರಿಯೆಯಲ್ಲಿ ತಿಳಿಸಿರಿ. ದೇಸಾಯಿಯವರ ಆಯ್ದ ಕವನ:
ಗಾಳಿಯ ಪ್ರೀತಿ
ಹೂವಿನೆಸಳ ಎಳೆದಂತೆ ಗಾಳಿ ಗಲ್ಲವನು ಸವರಿ ಸೋಂಕಿ
ಚಿಗುರ ಬೆರಳ ಸುಳಿಗಾರುಳ ಸುತ್ತಿ ಅಳಿಯಾಳಿಗಳನು ನೂಕಿ
ನಲುಮೆವಾಡನದು ಕಳ್ಳಗತ್ತಿನಲಿ, ಸಣ್ಣದನಿಯಲುಲಿದು
ಸುಸಿಲ ಸೂಚಿಸುವ ಇನಿಯನಂತೆಯದು ಸುಳಿದು ಬಹುದು ನಲಿದು.
ನೀಲಿ ರೇಸಿಮೆಯ ವಸನಕದೋ ಜರತಾರಿ ಚಿಕ್ಕಿ ಕೆಚ್ಚಿ
ಮುಸುಕ ಹಾಕಿದರು ಒಳಗೆ ಸುಳಿಯುತಿದೆ ತನಗೆ ತಾನೆ ಮೆಚ್ಚಿ
ಬೆಳ್ಳಿದೋಳ, ಅದೊ ಬೆರಳ ಚಿಗುರ ಕಣ್, ವೇಗವ ಮುಟ್ಟಿ ತಟ್ಟಿ,
ಅಲ್ಲಾಡಿಸುತ್ತ ಚೆಲ್ಲಾಟವಾಡುತಿದೆ, ಎಂಥದವ್ವ ಎಟ್ಟಿ !
ತಲೆವಾಗಿಲನ್ನು ತಟ್ಟಿತ್ತು ಅವರೆ ಬಂದರೋ ಎಂದು ಎದ್ದೆ
ಮೈಮುರಿದು ಆಲಸಿಕೆಯ ಕಳೆದು, ಕಾಡಿದರು ಸದ್ದು ಮೊದ್ದ ನಿದ್ದೆ
ಬಾಗಿಲವ ತೆರೆದೆ ಇದೆ ಏನು ಅಲ್ಲಿ ಎಲ್ಲವೂ ಬರಿಯ ಬಯಲೇ
ಈ ಕಳ್ಳ ಗಾಳಿಯಾಟವನು ಹುಚ್ಚಿನಾನೆಂತು ತಿಳಿಯಬಲ್ಲೆ.
ಇಕೊ ಸೆರಗ ಹಿಡಿದು ಬೆನ್ ಹಿಂದೆ ಸುಳಿಯುತಿದೆ ಹುಡುಗ ಹೆಜ್ಜೆಗೆಜ್ಜೆ
ಉಲಿವಂತೆ ಕುಣಿದು ಮೈ ಮೊಗವನಡರಿ ಅಕೊ ಗಲ್ಲಗಲ್ಲ ಉಜ್ಜಿ,
ತಡಿಲಾರೇನವ್ವ ಈ ತುಂಟತನವ ಏನಾರೆಮಾಡಲಿನ್ನು
ಈ ದೂರನವರ ಎದುರೆಂತು ಹೇಳಲೀ ಗಾಳಿ ನನ್ನ ಹೊನ್ನು.
ನನಗು ನನ್ನ ಆ ಪ್ರಾಣನಾಥನಿಗು ಪ್ರಾಣದುಸಿರು ನೀನು
ಅಡಿಗೆಯಲ್ಲಿ ಉಪ್ಪೆಂತೊ ಅಂತೆ ನೀ ಜೀವ ಜಗದ ಜೇನು
ಮಾತೆ ಮಮತೆ, ಆ ಪತಿಯ ಪ್ರೀತಿ, ಹಸುಗೂಸಿನಂಥ ಹೃದಯ
ಎರಕಗೊಂಡು ಏ ಗಾಳಿ, ನಿನ್ನ ನಾ ಕೇಳಿ, ಕಂಡೆ ಉದಯ !
(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)