‘ಸುವರ್ಣ ಸಂಪುಟ' (ಭಾಗ ೫೨) - ಕೋ.ಚನ್ನಬಸಪ್ಪ

‘ಸುವರ್ಣ ಸಂಪುಟ' (ಭಾಗ ೫೨) - ಕೋ.ಚನ್ನಬಸಪ್ಪ

‘ಸುವರ್ಣ ಸಂಪುಟ’ ಕೃತಿಯಿಂದ ಈ ವಾರ ನಾವು ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಇವರ ಕವನವನ್ನು ಆರಿಸಿಕೊಂಡಿದ್ದೇವೆ. 'ಕೋಚ' ಹಾಗೂ ‘ಪ್ರಕಾಶ' ಎಂಬ ಕಾವ್ಯನಾಮದಿಂದ ಖ್ಯಾತಿಯಾದ ಕೋಣನ ಚನ್ನಬಸಪ್ಪ ಹುಟ್ಟಿದ್ದು ಫೆಬ್ರವರಿ ೨೭, ೧೯೨೨ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾ ಮಡುಗು ಸಮೀಪದ ಆಲೂರು ಗ್ರಾಮದಲ್ಲಿ. ಇವರ ತಂದೆ ಕೋಣನ ವೀರಣ್ಣ ಹಾಗೂ ತಾಯಿ ಬಸಮ್ಮ. ಕಾನಮಡಗು ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಮಧ್ಯಮಿಕ ಶಿಕ್ಷಣವನ್ನು ಪೂರೈಸಿದ ಇವರು ತಮ್ಮ ಪ್ರೌಢ ಶಿಕ್ಷಣವನ್ನು ಬಳ್ಳಾರಿಯಲ್ಲಿ ಪೂರ್ಣಗೊಳಿಸಿದರು. ಕಾಲೇಜು ವಿದ್ಯಾಭ್ಯಾಸವನ್ನು ಅನಂತಪುರದಲ್ಲಿ ಮುಗಿಸಿದರು.

ಆ ಸಮಯದಲ್ಲಿ ಇಡೀ ದೇಶವು ಸ್ವಾತಂತ್ರ್ಯ ಸಂಗ್ರಾಮದ ಹುಮ್ಮಸ್ಸಿನಲ್ಲಿತ್ತು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಕಾರಣ ಚನ್ನಬಸಪ್ಪನವರನ್ನು ಬಂಧಿಸಿ ಸೆರೆಮನೆಗೆ ಹಾಕಿದ್ದರು. ಬಿಡುಗಡೆಯ ನಂತರ ಚನ್ನಬಸಪ್ಪನವರು ತಮ್ಮ ಬಿ ಎ ಪದವಿಯನ್ನು ಪೂರ್ಣಗೊಳಿಸಿದರು. ಬೆಳಗಾವಿಯ ಕಾಲೇಜಿನಿಂದ ವಕೀಲ ಪದವಿ ಹಾಗೂ  ರಾಜ್ಯಶಾಸ್ತ್ರದಲ್ಲಿ ಎಂ.ಎ.ಪದವಿಯನ್ನು ಪೂರೈಸಿದರು. ೧೯೪೬ರಲ್ಲಿ ಮುಂಬಯಿಯ ಹೈಕೋರ್ಟ್ ನಲ್ಲಿ ವಕೀಲರಾಗಿ ನೋಂದಣಿ ಮಾಡಿಕೊಂಡರು. ಬಳ್ಳಾರಿಯ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ ಇವರು ೧೯೬೫ರಲ್ಲಿ ಪದೋನ್ನತಿಯನ್ನು ಪಡೆದು ಜಿಲ್ಲಾ ಸೆಷನ್ ಜಡ್ಜ್ ಆಗಿ ನೇಮಕವಾದರು. ಚನ್ನಬಸಪ್ಪನವರು ಕರ್ನಾಟಕದ ಹೈಕೋರ್ಟಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು. ಆ ಸಮಯದಲ್ಲಿ ಹಲವಾರು ಕಾರ್ಮಿಕ ಸಂಘಗಳ, ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. 

ಚನ್ನಬಸಪ್ಪನವರು ಅರವಿಂದಾಶ್ರಮದ ಒಡನಾಟದಲ್ಲಿದ್ದರು. ಕರ್ನಾಟಕದಲ್ಲೂ ಅರವಿಂದಾಶ್ರಮದ ಶಾಖೆಯನ್ನು ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಹಿತ್ಯದ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ಇವರು ಕನ್ನಡ ಪ್ರಭ ಪತ್ರಿಕೆಯಲ್ಲಿ ‘ನ್ಯಾಯಾಧೀಶರ ನೆನಪುಗಳು’ ಮತ್ತು ಪ್ರಜಾಮತ ಪತ್ರಿಕೆಯಲ್ಲಿ ‘ನ್ಯಾಯಾಲಯದಲ್ಲಿ ಸತ್ಯ ಕಥೆಗಳು’ ಎಂಬ ಅಂಕಣವನ್ನು ಬರೆದರು. ಇವು ನಂತರದ ದಿನಗಳಲ್ಲಿ ಪುಸ್ತಕ ರೂಪದಲ್ಲೂ ಹೊರಬಂದಿವೆ. ಇವರು ಸುಮಾರು ೮೦ಕ್ಕೂ ಅಧಿಕ ಕೃತಿಗಳನ್ನು ರಚನೆ ಮಾಡಿದ್ದರು. 

ಇವರ ಪ್ರಮುಖ ಕೃತಿಗಳು: ಖಜಾನೆ, ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ಹಿಂದಿರುಗಿ ಬರಲಿಲ್ಲ, ನ್ಯಾಯಾಲಯದ ಸತ್ಯ ಕಥೆಗಳು, ಶ್ರೀ ಅರವಿಂದರು, ದಿವಾನ್ ಬಹಾದ್ದೂರ್, ಬೆಳಕಿನೆಡೆಗೆ, ನನ್ನ ಮನಸ್ಸು, ಶ್ರೀ ರಾಮಕೃಷ್ಣ ಲೀಲಾ ನಾಟಕ ಇತ್ಯಾದಿ. ಇವರ ಪ್ರಕಟಿತ ಕಥಾ ಸಂಕಲನಗಳು- ಗಡಿಪಾರು, ನಮ್ಮೂರ ದೀಪ ಹಾಗೂ ಈ ರಾಜ್ಯದೊಡೆಯ ರೈತ.  ಕವನ ಸಂಕಲನಗಳು- ಸ್ವಾತಂತ್ರ್ಯ ಮಹೋತ್ಸವ, ಪ್ರಾಣ ಪಕ್ಷಿ, ಜೀವ ತೀರ್ಥ.

ಚನ್ನಬಸಪ್ಪನವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಚಿಂತನಶ್ರೀ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಇವುಗಳು ಪ್ರಮುಖವಾದವುಗಳು. ಇವರು ಫೆಬ್ರವರಿ ೨೩, ೨೦೧೯ರಂದು ನಿಧನಹೊಂದಿದರು. 

ಸುವರ್ಣ ಸಂಪುಟ ಕೃತಿಯಲ್ಲಿ ಪ್ರಕಟವಾಗಿರುವ ಒಂದೇ ಒಂದು ಕವನ ಇಲ್ಲಿ ನೀಡಲಾಗಿದೆ. ಓದಿ

ಅಯನ್ಸ್ ಟನ್ ಆತ್ಮ

“ಶ್ರಾವಣ ಮಾಸದ ಬೆಳಗಿನ ಜಾವದಿ

ಮರವನು ಸುತ್ತವಳಾರೀ ನಾರಿ?

ಒಣಗುವ ಮರವನು ಬತ್ತುವ ಜಲವನು

ಸುತ್ತುವ ಮೌಢ್ಯವೇ ಈ ಯುಗದಿ ?”

ಎನ್ನುತ ಚೆನ್ನಿಗನೋರ್ವನು ನಡೆದನು

ಹೆಂಗಳೆಯ ಕಡು ಮೌಢ್ಯವ ಕಂಡು.

ಅಲ್ಲಿಯೇ ನಿಂತಿರ್ದೊಂದು,

ಇವನೀ ಗೊಣಗನು ಕೇಳಿದ, ಕತ್ತೆ

ತನ್ನೊಳೆ ಚಿಂತಿಸಿತಿಂತೆಂದು ;

“ಹೌದೇನ್?

ನಿಜವೇನ್?

ಮರ ಒಣಗುವುದೇನ್?

ನೀರ್ ಬತ್ತುವುದೇನ್?

ಯಾರಿಗು ತಿಳಿಯದ ಅಗಾಧ ಸತ್ಯವ

ಶೋಧಿಸಿ ತೆಗೆದೀ ಜಾಣನ ಜಾಣ್ಮೆಗೆ

ಎಣೆಯುಂಟೇ?

ಈತನೇ ನ್ಯೂಟನ್!

ಇವನೇ ಐನ್ ಸ್ಟನ್ !!

ಬುದ್ಧಿವಂತನಿಗೆ ಶಹಬಾಸ್ ! ಶಹಬಾಸ್ !!

ಆ ಜಾಣನ ನುಡಿಗೂ 

ಕತ್ತೆಯ ಶಂಕೆಗೂ

ಕಿವಿಮನ ಕೊಡದಾ ಸಾಧ್ವಿ

ಬನ್ನಿಯ ಮರವನು ಸುತ್ತೀ ಸುತ್ತೀ

ಕುಳಿತಳು ಮರದಡಿ ಮಂಡಿಯನೂರಿ

ಸ್ತುತಿಗಳ ನುಡಿದಳು ಕಣ್ಮುಚ್ಚಿ ;

“ರಕ್ಷಿಸಾ ಮಹಾಕಾಳಿ!

ಯಜ್ಞಗಳಿಗಾದಿಯಲಿ

ಅಗ್ನಿಯನು ನಿನ್ನಿಂದ

ಕಡೆದು ಪಡೆದರು ದೇವಿ ;

ನಿನ್ನ ಗರ್ಭದೊಳಿರ್ದ

ಅವ್ಯಕ್ತ ಚಿಚ್ಛಕ್ತಿ 

ಅಗ್ನಿರೂಪದೊಳಾಯ್ತು ವ್ಯಕ್ತ !

ಅವ್ಯಕ್ತ ಶಕ್ತಿಯನು

ಅಗ್ನಿ ರೂಪದಿ ವ್ಯಕ್ತ -

ಗೊಳಿಸಿದೀ ಮಹಾತಾಯೇ

ನಮೋ ನಿನಗೆ ಮಹಾ ಕಾಳೀ !

ನಿನ್ನ ಅಂಗಾಂಗದಲಿ

ಹರಿಯುತಿದೆ ಪರಶಕ್ತಿ

ನಿನ್ನೊಳಿದೆ ಆ ದೈವ ಮಲಗಿ !!

ನಮೋ ! ನಮೋ ! ನಮೋ !”

ಅಲ್ಲೆ ಎಲ್ಲಿಯೋ ಬನ್ನಿಮರದ ಕೊಂಬೆಗಳಲ್ಲಿ

ಸುತ್ತಿ ಸುಳಿಯುತಲಿದ್ದ ಐನ್ಸ್ ಟನ್ನಿನಾತ್ಮ

ಸಾಧ್ವಿಯಾಡಿದ ಸ್ತುತಿಯ ಸೂಕ್ಷ್ಮಕಿವಿ ಕೇಳಿ

ಬೆರಳ ಕಚ್ಚಿತು ಬೆಚ್ಚಿ ಅಚ್ಚರಿಯಪೊಂದಿ !

ನಾ ಬಾಳ್ದೆ ಎಂಬತ್ತು ವರುಷಗಳ- ದೀರ್ಘ ಕಾಲ

ಈ ಸತ್ಯ ಅರಿಯಲೆಂದು !

ಆದರೇನೊ ಅರಿಯದೀಬಾಲೆ ಕಂಡಿಹಳು

ಜಡದೊಳಡಗಿದೆ ಶಕ್ತಿ, ಚೈತನ್ಯಮೆಂದು !

***

(‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವನ)