‘ಸುವರ್ಣ ಸಂಪುಟ' (ಭಾಗ ೬೦) - ಎಸ್. ಅನಂತನಾರಾಯಣ

ಪ್ರೊ. ಎಸ್. ಅನಂತನಾರಾಯಣ ಇವರು ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರಾಗಿದ್ದರು. ಇವರು ನವೆಂಬರ್ ೩೦, ೧೯೨೫ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಆರ್. ಸದಾಶಿವಯ್ಯನವರು ಹಾಗೂ ತಾಯಿ ರಂಗಮ್ಮನವರು. ಅನಂತನಾರಾಯಣ ಇವರ ಶಿಕ್ಷಣವೆಲ್ಲಾ ಮೈಸೂರಿನಲ್ಲೇ ನೆರವೇರಿತು. ಇವರು ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ.(ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪ್ರಥಮ ಶ್ರೇಣಿಯಲ್ಲಿ ಪೂರೈಸಿದರು. ಈ ಸಾಧನೆಗಾಗಿ ಇವರಿಗೆ ಚಿನ್ನದ ಪದಕವೂ ಲಭಿಸಿತ್ತು.
ಶಿಕ್ಷಣದ ಬಳಿಕ ಮೈಸೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.
ನವೋದಯದ ಕಾಲದ ಹಲವಾರು ಬರಹಗಾರರು ಅಂದಿನ ಸಮಯ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಅನಂತನಾರಾಯಣ ಅವರೂ ಸಹ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಸೆರೆಮನೆ ವಾಸವನ್ನು ಅನುಭವಿಸಿದರು. ಆದರೆ ಅವರಿಗೆ ಸೆರೆಮನೆ ವಾಸ ಶಿಕ್ಷೆಯಾಗದೇ ವರವಾಯಿತು. ಇವರು ಸೆರೆಮನೆಯಲ್ಲಿ ತಮ್ಮ ಕವನಗಳ ರಚನಾ ಕಾರ್ಯವನ್ನು ಪ್ರಾರಂಭಿಸಿದರು. ೧೯೪೨ರಲ್ಲಿ ‘ಬಾಡದ ಹೂ’ ಎಂಬ ನೀಳ್ಗವಿತೆಯನ್ನು ಬರೆದು ಬಿಎಂಶ್ರೀ ಅವರಿಂದ ರಜತ ಮಹೋತ್ಸವ ಸುವರ್ಣ ಪದಕವನ್ನು ಪಡೆದುಕೊಂಡರು. ನಂತರದ ದಿನಗಳಲ್ಲಿ ಅನಂತನಾರಾಯಣರು ನಿರಂತರವಾಗಿ ಸಾಹಿತ್ಯ ಕೃಷಿಯನ್ನು ಮಾಡುತ್ತಾ ಸಾಗಿದರು. ಇವರು ಹಲವಾರು ಕಥೆ, ಕಾದಂಬರಿ, ಸಾಹಿತ್ಯ ವಿಮರ್ಶೆ, ಕವನ, ಜೀವನ ಚರಿತ್ರೆಗಳನ್ನು ಬರೆದಿದ್ದಾರೆ.
ಇವರು ‘ಅತ್ತಿಗೆ, ಆಲದ ಹೂ, ತೀರದ ಬಯಕೆ, ಪಯಣದ ಹಾದಿಯಲ್ಲಿ, ಮುರುಕು ಮಂಟಪ, ಸಪ್ತಸಮಾಲೋಕ ಎಂಬ ಕಾದಂಬರಿಗಳನ್ನೂ, ಚಿಂತನ ಬಿಂದು, ಮೆಲುಕು, ವಿಚಾರ ನಿಮಿಷ ಮೊದಲಾದ ಸಂಪಾದಿತ ಕೃತಿಗಳನ್ನೂ, ಅರಣ್ಯ ಪರ್ವ, ಹರಿಶ್ಚಂದ್ರ ಕಾವ್ಯ ಸಾಂಗತ್ಯ ಎಂಬ ಪ್ರಬಂಧಗಳನ್ನೂ ರಚಿಸಿದ್ದಾರೆ. ಪ್ರೇಮಬಲಿ, ಮಂಗಳಾರತಿ, ಸಪ್ನವಾಸವದತ್ತ, ಪ್ರತಿಜ್ಞಾ ಯೌಗಂಧರಾಯಣ, ಪೂರ್ಣಾಹುತಿ ಮೊದಲಾದ ನಾಟಕಗಳನ್ನೂ ಬರೆದಿದ್ದಾರೆ. ಬಾಡದ ಹೂ, ಉಷಾ ಸ್ವಪ್ನ, ಬಣ್ಣಗಳು ಆಡಿದುವು’ ಇವುಗಳು ಅನಂತನಾರಾಯಣರ ಕವನ ಸಂಕಲನಗಳು.
ಅನಂತನಾರಾಯಣ ಇವರು ಅಮೇರಿಕಾದ ಜನಪ್ರಿಯ ಲೇಖಕಿ ಲಾರ ಇಂಗಾಲ್ಸ್ ವೈಲ್ಡರ್ ಇವರ ಜೀವನಾನುಭವದ ಕೃತಿಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. (೯ ಕೃತಿಗಳ ಅನುವಾದ ಮಾಡಬೇಕಾಗಿತ್ತಾದರೂ ಅನಂತನಾರಾಯಣ ಅವರ ನಿಧನದಿಂದಾಗಿ ೮ ಕೃತಿಗಳ ಅನುವಾದ ಮಾತ್ರ ಸಾಧ್ಯವಾಗಿದೆ). ಆ ಎಂಟು ಕೃತಿಗಳೆಂದರೆ ‘ದೊಡ್ದ ಕಾಡಿನಲ್ಲಿ ಪುಟ್ಟ ಮನೆ, ಹುಲ್ಲುಗಾವಲಿನಲ್ಲಿ ಪುಟ್ಟ ಮನೆ, ರೈತರ ಹುಡುಗ, ಪ್ಲಮ್ ನದಿಯ ತೀರದಲ್ಲಿ, ಸಿಲ್ವರ್ ಲೇಕ್ ದಡದಲ್ಲಿ, ಚಳಿಯ ಸುಳಿಯಲ್ಲಿ, ಹುಲ್ಲುಗಾವಲಿನಲ್ಲಿ ಪುಟ್ಟ ಪಟ್ಟಣ, ಆ ಸೊಗಸಿನ ಬಂಗಾರದ ದಿನಗಳು.’ ಇದರ ಜೊತೆ ಇಟಲಿ - ಆಸ್ಟ್ರಿಯಾದ ಕತೆಗಳನ್ನು ‘ಡೇಗೆ ಹಕ್ಕಿ' ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ.
ಸಂಸ್ಕೃತ ಭಾಷೆಯಿಂದ ಕನ್ನಡಕ್ಕೆ ‘ಅಭಿಜ್ಞಾನ ಶಾಕುಂತಲ'ವನ್ನು ತಂದಿದ್ದಾರೆ. ಇದರ ಜೊತೆಗೆ ಹಲವಾರು ಸಾಹಿತ್ಯ ವಿಮರ್ಶೆಗಳನ್ನೂ ಬರೆದಿದ್ದಾರೆ. ಇವರಿಗೆ ‘ಪುರಂದರ ಕಂಡ ಶ್ರೀರಾಮ' ಸಂಗೀತ ರೂಪಕಕ್ಕೆ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಬಿಎಂಶ್ರೀ ರಜತ ಪದಕ ಇವರಿಗೆ ಲಭಿಸಿದೆ. ಇವರು ಆಗಸ್ಟ್ ೨೫, ೧೯೯೨ರಲ್ಲಿ ನಿಧನ ಹೊಂದಿದರು.
‘ಸುವರ್ಣ ಸಂಪುಟ' ಕೃತಿಯಲ್ಲಿ ಎಸ್ ಅನಂತನಾರಾಯಣ ಇವರ ಎರಡು ಕವನಗಳು ಪ್ರಕಟವಾಗಿವೆ. ನನ್ನ ನಿನ್ನ ಅಂತರ ಹಾಗೂ ಪಡುಗಡಲು. ಈ ಎರಡು ಕವನಗಳಿಂದ ಆಯ್ದ ಒಂದು ಕವನವನ್ನು ಇಲ್ಲಿ ಪ್ರಕಟಿಸಿದ್ದೇವೆ. ಓದುವ ಆನಂದ ನಿಮ್ಮದಾಗಲಿ…
ನನ್ನ ನಿನ್ನ ಅಂತರ
ನಿನ್ನದು ಆ ತೀರ- ನನ್ನದು ಈ ತೀರ
ನಟ್ಟನಡುವಿನಂತರ - ತೊರೆಯ ಅಭ್ಯಂತರ,
ಕಿರಿದಹುದು, ಕಿರಿದಲ್ಲ ; ಹಿರಿದಲ್ಲ, ಹಿರಿದಹುದು ;
ಕಿರು ತೊರೆಯ ಅಂತರ - ಕಡಲಿನಂತರ !
ಹರಿಯುವಲೆಗಳಂತೆನ್ನ ಮನಸಿನಾತುರ
ಹರಿಯುತಿದೆ, ಕೊರೆಯುತಿದೆ ಒಲವ ಕಾತರ.
ಮೌನದಲ್ಲೆ ಮರುಗಿಸಿದೆ ಹೃದಯದ ಭಾರ.
ಕಿರು ತೊರೆಯ ಅಂತರ -ಕಡಲಿನಂತರ !
ಮುಗಿಲಿನ ಮಡಲಿನಲ್ಲಿ ಮೋಡದ ಮರೆಗೆ
ಮಿಣುಕುತಿರುವ ತಾರೆಗಿಂತ ದೂರ ಆಚೆಗೆ
ಸಾಗುವಾಸೆ ಆಗಿಹೋಯ್ತು ಎದೆಯ ಸುಡುಹೊಗೆ,
ಕಿರು ತೊರೆಯ ಅಂತರ -ಕಡಲಿನಂತರ !
ಈ ತೀರ, ಆ ತೀರ, ಎಂದೆಂದು ಬಲು ದೂರ,
ಸಂಧಿಸಲು ಹವಣುಂಟು, ನಟ್ಟನಡುವಿನಂತರ
ಬಲು ಕಿರಿದು, ನಾಲ್ಕು ಗೇಣು ; ಹವಣೆಲ್ಲ ಹುಡಿದಾರ,
ಕಿರು ತೊರೆಯ ಅಂತರ -ಕಡಲಿನಂತರ !
(‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವನ)