‘ಸುವರ್ಣ ಸಂಪುಟ' (ಭಾಗ ೯೪) - ರಘುರಾಮ ರಾವ್ ಬೈಕಂಪಾಡಿ

‘ಸುವರ್ಣ ಸಂಪುಟ' (ಭಾಗ ೯೪) - ರಘುರಾಮ ರಾವ್ ಬೈಕಂಪಾಡಿ

‘ಸುವರ್ಣ ಸಂಪುಟ' ಕೃತಿಯಿಂದ ನಾವು ಈ ವಾರ ಆಯ್ದುಕೊಂಡ ಕವಿ ರಘುರಾಮ ರಾವ್ ಬೈಕಂಪಾಡಿ ಇವರು. ರಘುರಾಮ ರಾವ್ ಇವರು ‘ಸಂಪದ' ಓದುಗರಿಗೆ ಪರಿಚಿತರು. ಇವರ ಹಲವಾರು ಕವನಗಳು ಸಂಪದ ಜಾಲತಾಣದಲ್ಲಿ ಪ್ರಕಟವಾಗಿವೆ. 

ರಘುರಾಮ ರಾವ್ ಅವರು ಜನಿಸಿದ್ದು ೧೯೩೫ಲ್ಲಿ ಮಂಗಳೂರು ತಾಲೂಕಿನ ಬೈಕಂಪಾಡಿ ಗ್ರಾಮದಲ್ಲಿ. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಮತ್ತು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ವೃತ್ತಿ ಜೀವನ. ಇವರು ನವೋದಯ ಕಾವ್ಯ ಸಂಪ್ರದಾಯದ ಉತ್ತರಾರ್ಧದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿ ಗುರುತಿಸಲ್ಪಡುತ್ತಾರೆ.

ಇವರ ಕವಿತೆಗಳು ಕೊ.ಅ.ಉಡುಪರ ‘ಯುಗಪುರುಷ’, ಬೆಟಗೇರಿ ಕೃಷ್ಣಶರ್ಮರ ‘ಜಯಂತಿ’, ಗೋಪಾಲಕೃಷ್ಣ ಅಡಿಗರ ‘ಸಾಕ್ಷಿ’, ಧಾರವಾಡದ ‘ಸಂಕ್ರಮಣ’, ಮಣಿಪಾಲದ ‘ತುಷಾರ’ ಮೊದಲಾದ ಮಾಸಿಕಗಳಲ್ಲಿ ಹಾಗೂ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. 'ನನ್ನ ಪಯಣ' ಎಂಬ ಕವನ ಸಂಕಲನ ೧೯೭೨ರಲ್ಲಿ ಬೆಳಕು ಕಂಡು ಪ್ರಸಿದ್ಧಿ ಪಡೆದಿದೆ. ಈ ಸಂಕಲನಕ್ಕೆ ಶ್ರೀ ಸು.ರಂ.ಎಕ್ಕುಂಡಿಯವರು ಬರೆದ ಸುದೀರ್ಘ ಮುನ್ನುಡಿ ಮನೋಜ್ಞವಾದ ರಸ ವಿಮರ್ಶೆಯ ಒಂದು ಮಾದರಿಯಂತಿದೆ. ಇದರಲ್ಲಿ ನಿಯತಕಾಲದ ಛಂದೋ ಬದ್ಧ ಗೀತೆಗಳು ಮತ್ತು ಮುಕ್ತ ಛಂದಸ್ಸಿನ ಕವಿತೆಗಳಿವೆ. ಎಕ್ಕುಂಡಿಯವರು ಬರೆಯುತ್ತಾರೆ, " ಕಾವ್ಯ ವಸ್ತುವಿನ ಇಲ್ಲಿಯ ಮೂಲದ್ರವ್ಯದಲ್ಲಿ ಒಂದು ನಿಚ್ಚಳತೆ, ಒಂದು ಸ್ಪಷ್ಟತೆ ಇದೆ. ಅವರು ನುಡಿಸುತ್ತಿರುವುದು ಜೀವನದ ರಸೋಪಜ್ಞತೆಯ ತಂಬೂರಿಯನ್ನು, ಜಿಗುಪ್ಸೆಯ ಚೀರು ಹುಯ್ಲಿನ ಏಕತಾರಿಯನ್ನಲ್ಲ."

ಖ್ಯಾತ ಕವಿ ಚೆನ್ನವೀರ ಕಣವಿಯವರು ಇವರ ಕವಿತೆಗಳನ್ನು ತುಂಬ ಮೆಚ್ಚಿಕೊಂಡಿರುತ್ತಾರೆ: ಇಂಥ ಕವಿತೆಗಳು ಬದುಕಿನ ಜಿಜ್ಞಾಸೆಯಿಂದ ಅನುಭವವನ್ನು ಉಡಿಯಲ್ಲಿ ತುಂಬಿಕೊಂಡು, ಕಲಾವಂತಿಕೆಯಿಂದ, ತಕ್ಕ ನುಡಿಗಟ್ಟಿನ ಚೌಕಟ್ಟಿನಲ್ಲಿ ಪ್ರಕೃತಿಯ ಪರಮಾರ್ಥವನ್ನು ಜೀವನದ ಸಾರ್ಥಕತೆಯೊಂದಿಗೆ ಬಿಂಬಿಸುತ್ತವೆ.

ಇತ್ತೀಚೆಗೆ ಇವರ ಕವನಗಳು ‘ಬಾಳ ಬೆಳಕಿನ ಹಾಡು’ ಎಂಬ ವಿಶಿಷ್ಟ ನಾಮಧೇಯದಿಂದ ವಾಟ್ಸಪ್ ಕೂಟ, ಫೇಸ್ಬುಕ್ ವೇದಿಕೆಯಲ್ಲಿ ಪ್ರಕಟಗೊಳ್ಳುತ್ತಾ ಇರುತ್ತವೆ. ಇವು ಪುಸ್ತಕ ರೂಪದಲ್ಲಿ ಹೊಮ್ಮುವ ನಿರೀಕ್ಷೆಯಲ್ಲಿವೆ. ಶ್ರೀಯುತರು ಈಗ ಮಂಗಳೂರು ಸಮೀಪದ ಸುರತ್ಕಲ್ಲಿನಲ್ಲಿ ವಾಸವಾಗಿದ್ದು ತಮ್ಮ ನಿವೃತ್ತಿ ಜೀವನವನ್ನು ಕವನಗಳನ್ನು ರಚಿಸುವುದರ ಮೂಲಕ ಕಳೆಯುತ್ತಿದ್ದಾರೆ. 

ರಘುರಾಮ ರಾವ್ ಬೈಕಂಪಾಡಿ ಇವರ ಒಂದು ಕವನ ‘ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಆಯ್ದು ಪ್ರಕಟಿಸಲಾಗಿದೆ. ಓದುವ ಖುಷಿ ನಿಮ್ಮದಾಗಲಿ…

ಗರಬಡಿದ ಮೀನು

ಕೊಳದ ಕಣ್ಣಿನ ತುಂಬ ಹೊಸೆದ ಹಾವಸೆ ಹಾಸು

ಈಸಾಡುತಿದೆ ಒಳಗೆ

ಕೆಸರ ಬಸಿರಲಿ ಮೀನು

ಪಕ್ಕ ಮಸೆಮಸೆದು, ಸವಿದು ಜಳಕದ ಸೊಗಸು.

ಒಮ್ಮೊಮ್ಮೆ

ಸರಕ್ಕನೆ ಎರಗಿ ಸೆಳೆವುದುಂಟು

ಈ ದಟ್ಟ ಹಚ್ಚಡದ ಮುಸುಕನ್ನು

ಸುಂಟರ ಗಾಳಿಯ ಸೀಳು ಚಂಚು !

ಆಗ

ಕೆಳಗೆ

ನೀರ ಸುಳಿಯೊಳಗಲೆವ ಮೀನ ಕಣ್ಣೊಳು ಮಿಂಚು ! ಮಿನುಗು !

ಬಾನ ಕಣ್ಣಿನ ಥಳಕು ! ಅರೆಕ್ಷಣ

ತಾರೆ ನೀ ಹಾರಿಕೆಯಾಚೆ ಅಪರಂಪಾರ ಅಬ್ಧಿಗರ್ಭಕ್ಕಿಣುಕು !

ಮನದ ತುಂಬ

ನಭದ ನೀಲಿಮೆ ಹೀರಿ ಆ ಕಂಠ ಕುಡಿವ ಬಯಕೆಯ ತುಳುಕು,

 

ಒಂದೇ ನಿಮಿಷ

ಮರುಗಳಿಗೆ

ಎದ್ದ ಬುರುಗೊಳು

ತೆರೆದ ಬಾನಿನ ಬೆರಗೆಲ್ಲ ನುಚ್ಚುನೂರು.

ಮುಚ್ಚಿಕೊಳುವುದು

ನವುರಾಗಿ ಮತ್ತೆ

ಆ ಪಾಚಿ ಪದರು ;

ನುಸುಳುವುದು

ಯಥಾವತ್ತಾಗಿ ಕೆಸರೊಳಗೆ 

ಮೈಕೊಡಹಿ ಸಾವರಿಸಿಕೊಂಡ

ಗರಬಡಿದ ಮೀನು.

(‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವನ)