‘ಸುವರ್ಣ ಸಂಪುಟ' (ಭಾಗ ೯೮) - ಪಿ.ವಿ.ವಜ್ರಮಟ್ಟಿ

‘ಸುವರ್ಣ ಸಂಪುಟ' (ಭಾಗ ೯೮) - ಪಿ.ವಿ.ವಜ್ರಮಟ್ಟಿ

ಕಳೆದ ವಾರ ನಾವು ‘ನಿತ್ಯೋತ್ಸವ'ದ ಕವಿ ಕೆ ಎಸ್ ನಿಸಾರ್ ಅಹಮದ್ ಅವರ ಕವನವೊಂದನ್ನು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಪ್ರಕಟ ಮಾಡಿದ್ದೆವು. ಕೆಲವು ಓದುಗರು ಅವರ ‘ಕುರಿಗಳು ಸರ್ ಕುರಿಗಳು’ ಕವನವನ್ನು ಪ್ರಕಟಿಸಬೇಕಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಅದು ಅವರ ಖ್ಯಾತ ಕವನ, ಎಲ್ಲರಿಗೂ ತಿಳಿದಿರುವುದೇ ಆಗಿರುತ್ತದೆ ಎಂಬ ನಿಟ್ಟಿನಲ್ಲಿ ನಾವು ಆ ಕವನವನ್ನು ಬಿಟ್ಟು ಬೇರೆ ಕವನವನ್ನು ಪ್ರಕಟಿಸಿದ್ದೆವು. ‘ಸುವರ್ಣ ಸಂಪುಟ’ ದಲ್ಲಿರುವ ಆಯ್ದ ಕವನಗಳ ಮಾಲಿಕೆ ಮುಗಿದ ಬಳಿಕ ಆ ಪ್ರಕಟಿಸದೇ ಉಳಿದು ಹೋದ ಕವನಗಳನ್ನು ಪ್ರಕಟಿಸುವ ಯೋಜನೆ ಇದೆ. ಓದುಗರು ಸ್ವಲ್ಪ ತಾಳ್ಮೆ ವಹಿಸಬೇಕಾಗಿ ಕೋರಿಕೆ. 

ಈ ವಾರ ನಾವು ಆಯ್ದ ಕವಿ ಪಿ.ವಿ.ವಜ್ರಮಟ್ಟಿ. ಅವರ ಪೂರ್ತಿ ಹೆಸರು ಪಾಂಡಪ್ಪ ವೆಂಕಟಪ್ಪ ವಜ್ರಮಟ್ಟಿ. ಅವರು 'ಮೇಘಮಿತ್ರ' ಎಂಬ ಕಾವ್ಯನಾಮದಲ್ಲೂ ತಮ್ಮ ಬರಹಗಳನ್ನು ರಚಿಸುತ್ತಿದ್ದರು. ಇವರು ಮಾರ್ಚ್ ೧೧, ೧೯೩೬ರಲ್ಲಿ ಜನಿಸಿದರು. ಸಾಹಿತ್ಯ ರತ್ನ ಪದವೀಧರರಾಗಿದ್ದ ಅವರಿಗೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಪಾಂಡಿತ್ಯವಿತ್ತು. ಜಮಖಂಡಿಯ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ರೀಡರ್ ಆಗಿ ಕೆಲಸ ನಿರ್ವಹಸಿದ ಅವರಿಗೆ ಭಾಷಾ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ. ಅನುಭವ ಮಂಟಪ ಮತ್ತು ಸಹಕಾರ ಸಂಜೀವಿನಿ ಎಂಬ ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಅಗ್ನಿ ತುಷಾರ, ಮಣ್ಣು ಮಲ್ಲಿಗೆ, ಹಕ್ಕಿನೊಡೆಯರ ಹಾಡು ಮುಂತಾದವುಗಳು ಅವರ ಪ್ರಮುಖ ಕೃತಿಗಳು. 

ಪಿ.ವಿ. ವಜ್ರಮಟ್ಟಿಯವರ ಬಗ್ಗೆ ಅಧಿಕ ಮಾಹಿತಿಗಳು ಎಲ್ಲೂ ದೊರೆಯುತ್ತಿಲ್ಲ. ಅವರ ಒಂದು ಭಾವಚಿತ್ರವೂ ಸಿಗುತ್ತಿಲ್ಲ. ಓದುಗರಿಗೆ ಇವರ ಬಗ್ಗೆ ಮಾಹಿತಿ ಇದ್ದರೆ ದಯವಿಟ್ಟು ಪ್ರತಿಕ್ರಿಯೆಯಲ್ಲಿ ಬರೆಯಿರಿ. ಇವರು ಬರೆದ ‘ಬುದ್ಧನ ಶ್ರಾದ್ಧೋತ್ಸವ’ ಎಂಬ ಕವನವು ‘ಸುವರ್ಣ ಸಂಪುಟ’ದಲ್ಲಿ ಪ್ರಕಟವಾಗಿದ್ದು, ಅದನ್ನು ನಿಮ್ಮ ಓದಿಗಾಗಿ ನೀಡಲಾಗಿದೆ.

ಬುದ್ಧನ ಶ್ರಾದ್ಧೋತ್ಸವ

ಎರಡು ಸಾವಿರ ಐದುನೂರನೆಯ ಉತ್ಸವ!

ಬುದ್ಧನದು ಮೆರವಣಿಗೆ ನಡೆಯಿತಿಂದು !

ಮೇನು ರೋಡಿನಗುಂಟ ವೈಭವದ ಮೇಳ !

ಮಂತ್ರಿ ಹಿರಿತನದಲ್ಲಿ ಎಲ್ಲ ನೇತಾರುಗಳು

ಆಜಿಗಳು ಮಾಜಿಗಳು ಕಾಜಿ ಪೂಜಾರಿಗಳು!

 

ಬುದ್ಧಮೂರ್ತಿಗೆ ಶ್ರದ್ಧೆ ಅರ್ಪಿಸುತ್ತ

ಗಂಭೀರ ಭಕ್ತಿಯಲಿ ನಡೆದ ಸಂತೆ!

 

ಜಾತಿ ಇಲ್ಲದ ಒಂದು ಸರಕಾರದಾಜ್ಞೆ !

ಧರ್ಮ ಮತ ತತ್ವಗಳು ಬೇರೆಯೇ ಇರಲಿ!

ಎಲ್ಲ ಧರ್ಮಕು ಕೈಯ ಮುಗಿಯಬೇಕು!

ಎನುವ ಜಾತ್ಯಾತೀತ ಘಟನೆ ಪಾಲಿಸಲಿಕ್ಕೆ

ಎಲ್ಲ ಜಾತಿಗಳವರು ನಡೆದರುತ್ಸವದಲ್ಲಿ!

ಯಾರಿಗೂ ಬುದ್ಧನದು ಸಂಬಂಧ ಇರಬೇಕೆ?

ಅವನ ತತ್ವದ ಗೊಡವೆ ಇವರಿಗೂ ಬೇಕೆ?

ಆಜ್ಞೆಪಾಲಿಸಲಿಕ್ಕೆ ಆಟ ಮಾಡುವದಿತ್ತು

ಹೊರಟ ಮೆರವಣಿಗೆ ಇದು ಭವ್ಯವಿತ್ತು !

 

ಫುಟ್‌ಪಾಥ ಮೇಲೆಯೇ ಬಿದ್ದಿರುವ ಭಿಕ್ಷುಕರು

ದೂರ-ನೂಕಲು ಬಂತು ಲಾಠಿಗಳ ಚಾರ್ಜು

ಪಿಡುಗು ಇಲ್ಲದ ರಸ್ತೆಯಲ್ಲಿ ಸಾಗಿತು ದಂಡು

ಬಯಲು ಮೈದಾನದಲ್ಲಿ ಸಾಗಿರುವ ಕುರಿಹಿಂಡು

ಒಬ್ಬ ಮುಪ್ಪಿನ ಮುದುಕ ದೀನ ಭಿಕ್ಷುಕ ಕಂಡು

ಅಂದು ಬುದ್ಧ ನ ಕಣ್ಣು ನೀರು ಹರಿದವು ಕೋಡಿ

ಮನುಜಜಾತಿಯ ದುಃಖ ದೂರಗೊಳಿಸುವೆನೆಂದು

ರಾಜ್ಯ-ಸಿರಿ ಸಂಪತ್ತು ಸಿಂಗಾರಗಳ ತೊರೆದು;

ಬೋಧಿವೃಕ್ಷದ ಬುದ್ಧ ನಾಗಿ ಜಗದೋದ್ದಾರ-

ಗೈದ: ನಿರ್ವಾಣದಲಿ; ಇಂದಿಗೂ ಸಾಕಾರ!

 

ನೂರು ಸಾಸಿರ ಅಸ್ಥಿ ಪಂಜರಗಳುಸಿರಾಟ !

ಕಾಲ ಕೆಳಗೆಯೇ ಬಿದ್ದು ಗೋಳಾಡುವೀ ಆಟ

ಇವರ ಕಣ್ಣುಗಳೇನು ಕಾಜಿನವು ಗುಂಡುಗಳೆ?

ಎದೆಯ ಗೂಡುಗಳೇನು ಭೂತ ಬಂಗಲೆಗಳೆ?

 

ದಿನವು ನೈಟ್‌ ಕ್ಲಬ್ಬಿನಲಿ ರತಿಕ್ರೀಡೆಯಾಟ !

ಅಧಿಕಾರದಲಿ ತುಂಬ ಎಂಥ ರಕ್ಕಸನಾಟ !

ಇವರ ದುರ್ವಾಸಕ್ಕೆ ಸಾತಿಲ್ಲ ಕಾವಾಟ !

ಆದರೂ ಈ ಜನಕೆ ಯಾರದು ಕಾಡಾಟ !?

 

ಅಂತೆಯೇ ಬುದ್ಧನಿಗೆ ಉತ್ತರಧಿಕಾರಿಗಳು

ನಿತ್ಯವೂ ಧರ್ಮಗಳ ಮೆರವಣಿಗೆ ಮಾಡಿದರು !

ನೂರಾರು ಅಧಿಕಾರ ಕೈಯಲ್ಲಿ ಧರಿಸಿದರು

ಪಡೆದ ಭಸ್ಮಾಸುರನ ಹಾಗೆ ಕುಣಿದಾಡಿದರು!

 

ಬೆಳೆದ ಬುದ್ಧನ ಮಧ್ಯೆ ಅಳಿದ ಇವರದು ಶ್ರದ್ಧೆ!

ನಡೆವ ಹೆಣಗಳ ನಡುವೆ ಬುದ ಗಾಯಿತು ಶ್ರಾದ್ಧ

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)