‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೭) - ಡಿ. ಎಸ್. ಕರ್ಕಿ

ಡಾ. ದುಂಡಪ್ಪ ಶಿವಪ್ಪ ಕರ್ಕಿ ಇವರು ಎಂ ಎ, ಪಿ ಹೆಚ್ ಡಿ ಪದವೀಧರರು. ಇವರು ೧೯೩೫ರಿಂದಲೂ ಕವನಗಳನ್ನು ರಚಿಸುತ್ತಾ ಬಂದಿರುವ ಹೊಸಗನ್ನಡ ಕವಿಗಳು. ಹೊಸಗನ್ನಡ ಛಂದಸ್ಸಿನ ಕುರಿತು ‘ಛಂದೋ ವಿಕಾಸ' ಎಂಬ ದೀರ್ಘ ಪ್ರಬಂಧ ಬರೆದು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. “ನಕ್ಷತ್ರಗಾನ" ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಹುಬ್ಬಳ್ಳಿಯ ಕಾಡ ಸಿದ್ದೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ.
ಇವರು ಬರೆದ ಒಂದು ಕವನ ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದೆ. ಅದನ್ನು ಆರಿಸಿ ಪ್ರಕಟಿಸಲಾಗಿದೆ.
ಜಲಕನ್ನಿಕೆ
ಸೊಗಲ ಸೋಮೇಶ್ವರನ ಮನೆಯ ಅಂಗಣದಲ್ಲಿ
ಜಲಕನ್ನಿಕೆಯು ಅದೋ ಕುಣಿಯುತಿಹಳು
ಅವಳ ಹೆಜ್ಜೆಯು ತಾಳಲಯಕೆ ಜೀವನವಿಲ್ಲಿ
ಹೊಮ್ಮಿ ಹೊಗರೇರುತಿದೆ ಹಗಲು ಇರುಳು.
ಬಾಳೆ ಕೈಬೀಸುವುದು, ತೆಂಗು ತಲೆದೂಗುವುದು,
ನಗೆದೋರುವುದು, ಬಳ್ಳಿ ಬಳುಕಿ ಬಳುಕಿ,
ಜಲನರ್ತಕಿಯ ಗಾನ ಅಂಬರವ ತುಂಬಿ ಬರೆ
ರಾಗ ಸೂಸುವುದೆದೆಯು ತುಳುಕಿ ತುಳುಕಿ.
ಹಕ್ಕಿಗಳ ಹಾರಾಟ ಮಂಗಗಳ ಚೆಲ್ಲಾಟ
ಕಲ್ಲು ಕೊನರುತ ಚೆಲ್ಲುವರಿವ ನೋಟ,
ಎಲ್ಲಾ ಸಾಗುವುದಿಲ್ಲಿ ನರ್ತಕಿಯ ನಾಟ್ಯದಿಂ
ಅವಳ ಮಾಟದ ಮುಂದೆ ಇಹುದೆ ಮಾಟ?
ಜೋಕೆಯಿಂ ತೂಕದಿಂ ಚಲಿಸುವೀ ಜಲಗತಿಗೆ
ಮೈಯನೊಡ್ಡಿದರಹಹ ಸೌಖ್ಯಮೆನಿತು !
ಜಲಕನ್ನಿಕೆಯ ಸ್ಪರ್ಶ ಅನುಭವಕಮೃತವರ್ಷ
ಅನುಭವಿಸಿದಲ್ಲದೆಯೆ ತಿಳಿವುದೆಂತು?
ಸೋಮಶೇಖರನಿವನು ರಸಿಕವರನೆಂಬುದಕೆ
ಅವನರಸಿದೀ ರಮ್ಯಸ್ಥಳವೆ ಸಾಕ್ಷಿ
ದೇಗುಲದಿ ತಾನಡಗಿ ಮುಂದೆ ಹೊರವಲಯದಲಿ
ಜಲವ ಕುಣಿಸುವನು ನಲಿ ನಲಿವೊಲಕ್ಷಿ.
ಪುರುಷವ ಸ್ಥಿರ ಧೀರ ಗಂಭೀರನಾಗಿಹನು ;
ಪ್ರಕೃತಿ ಚಂಚಲೆ ಚೆಲುವೆ ಚಲಿಸುತಿಹಳು
ಸತ್ಯ ಸೌಂದರ್ಯಗಳು ಶಿವಸರ್ವಮಂಗಳೆಯ
ರಾಗಿ ನೆರೆ ಬೆರೆಯಲದೆ ಬಾಳತಿರುಳು
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)