’ಬೆಂಗಳೂರು ಕನ್ನಡ’ ಕಂಗ್ಲೀಷ್ ನತ್ತ ವಾಲುತ್ತಿರುವುದೇಕೆ?

’ಬೆಂಗಳೂರು ಕನ್ನಡ’ ಕಂಗ್ಲೀಷ್ ನತ್ತ ವಾಲುತ್ತಿರುವುದೇಕೆ?

ಬರಹ

ಫೇಸ್ ಬುಕ್ ಕನ್ನಡ ಅನುವಾದಕರ ಬಳಗದಲ್ಲಿ, ಈ ವಿಚಾರವಾಗಿ ಟಿಪ್ಪಣಿಯೊಂದನ್ನು ಹಾಕಿದ್ದೆ. ಗೆಳೆಯರೊಬ್ಬರ ಸಲಹೆಯಂತೆ, ಅದನ್ನು ಮಾರ್ಪಡಿಸಿ, ಸಂಪದಿಗರ ಮುಂದಿಡುತ್ತಿದ್ದೇನೆ. :)

’ಬೆಂಗಳೂರು ಕನ್ನಡ’ದಲ್ಲಿ, ಹಲವು ಇಂಗ್ಲೀಷ್ ಪದಗಳು ಸೇರಿ, ಅದು ’ಕಂಗ್ಲೀಶ್’ ಆಗುತ್ತಿರುವುದು ಏಕೆ ಎಂಬ ವಿಷ್ಲೇಷಣೆ ಇಲ್ಲಿದೆ. ಭಾಷೆ ಎನ್ನುವುದು, ಕೇವಲ ಮನುಷ್ಯರ ನಡುವಿನ ಸಂವಹನ ಸಾಧನವಾಗಿರದೇ, ವ್ಯಕ್ತಿಯೊಬ್ಬನ ವೈಯುಕ್ತಿಕ ವಿಷಯವಾದ ಬೌದ್ಧಿಕತೆಯನ್ನೂ ತಟ್ಟುತ್ತದೆ. ಬೌದ್ಧಿಕ ಬೆಳವಣಿಗೆಯನ್ನು ನಿರ್ಧರಿಸುವುದರಲ್ಲಿ, ಭಾಷೆಯ ಪಾತ್ರವೂ ಇದೆ. ಒಂದು ಭಾಷೆಯಲ್ಲಿ, ಇನ್ನೊಂದು ಭಾಷೆಯ ಎಲ್ಲಾ ಪದಗಳಿಗೂ ಸೂಕ್ತವಾದ ಅನುವಾದಗಳಷ್ಟೇ ಅಲ್ಲದೆ, ಇನ್ನಷ್ಟು ಹೆಚ್ಚುವರಿ ಪದಗಳಿದ್ದರೆ, ಅದನ್ನು ’ಹರಿತವಾದ’ ಭಾಷೆ ಎಂದು ಕರೆಯಬಹುದು. ಒಂದು ಭಾಷೆ ಇನ್ನೊಂದು ಭಾಷೆಗಿಂತಾ ಹರಿತವಾಗಿದೆ ಎಂದರೆ, ಅದರಲ್ಲಿ ಹೆಚ್ಚಿನ ಪದಗಳಿವೆ ಎಂದರ್ಥ.

ಭಾಷೆಗೂ ಬೌದ್ಧಿಕತೆಗೂ ಇಲ್ಲಿದೆ ನಂಟು!
"ಭಾಷೆ ’ಹರಿತ’ವಾದಷ್ಟೂ, ಆಲೋಚನಾ ಶಕ್ತಿ ಕೂಡಾ ಹರಿತವಾಗುತ್ತದೆ ಎಂದು ಸ್ಥಿರವಾಗಿ ಹೇಳಬಹುದು". ಈ ವಿಚಾರವನ್ನು, ನಾನು ಕಥೆಯೊಂದರ ಮೂಲಕ ನಿರೂಪಿಸುತ್ತೇನೆ:
ಕಿಟ್ಟು-ಪುಟ್ಟು, ಇಬ್ಬರು ಸಣ್ಣ ಹುಡುಗರು. ಕಿಟ್ಟುವಿನ ಮಾತೃಭಾಷೆ, ಪುಟ್ಟುವಿನ ಮಾತೃ ಭಾಷೆಗಿಂತಾ ಹರಿತವಾಗಿದೆ. ಈಗ, ಕಿಟ್ಟು ಮತ್ತು ಪುಟ್ಟುವಿಗೆ ಒಂದು ಕೆಲಸ ಕೊಡೋಣ. ಇಬ್ಬರಿಗೂ ಒಂದೊಂದು ಕ್ರಯಾನಿನ ಪೆಟ್ಟಿಗೆ ಕೊಟ್ಟು, ಅಲ್ಲಿರುವ ಬಣ್ಣದ ಕಡ್ಡಿಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿ, ಅವುಗಳ ಬಣ್ಣವನ್ನು ಹೆಸರಿಸಲು ಹೇಳೋಣ. ಈ ಕ್ರಯಾನಿನ ಪೆಟ್ಟಿಗೆಗಳು ದೊಡ್ಡವು- ಇವುಗಳಲ್ಲಿ, ೨೫ಕ್ಕೂ ಹೆಚ್ಚು ಕಡ್ಡಿಗಳಿವೆ. ಕಿಟ್ಟುವಿಗೆ, ತನ್ನ ಭಾಷೆಯಲ್ಲಿ, ಹಸಿರು, ಕೆಂಪು, ಕಪ್ಪು, ಬಿಳುಪು, ಹಳದಿ, ಇತ್ಯಾದಿ ಇತ್ಯಾದಿ ಬಣ್ಣಗಳ ಹೆಸರು ತಿಳಿದಿದೆ. ಅವನು, ಈ ಪ್ರಕಾರ ಕಡ್ಡಿಗಳನ್ನು ವಿಂಗಡಿಸಿದ. ಆದರೆ, ಪುಟ್ಟುವಿನ ಭಾಷೆ ಇನ್ನೂ ಹರಿತವಾಗಿದೆ. ಅದರಲ್ಲಿ, ಬೇರೆ ಬೇರೆ ಬಗೆಯೆ ಹಸಿರು ಬಣ್ಣಕ್ಕೆ, ಬೇರೆ ಬೇರೆ ಹೆಸರುಗಳಿವೆ. ಹಾಗಾಗಿ, ಅವನಿಗೆ, ಈ ಬಣ್ಣಗಳಲ್ಲದೇ, ಇನ್ನಷ್ಟು ಬಣ್ಣಗಳು ತಿಳಿದಿವೆ. ಉದಾಹರಣೆಗೆ, ಹಸಿರಿನಲ್ಲೇ, ಹಲವು ವಿಧಗಳು, ನೀಲಿಯಲ್ಲಿ ಮೂರ್ನಾಲ್ಕು ವಿಧಗಳು ತಿಳಿದಿವೆ. ಅವನು, ಪ್ರತಿಯೊಂದು ಕಡ್ಡಿಯನ್ನೂ ಬೇರೆ ಬೇರೆ ವಿಂಗಡಣೆಯಲ್ಲಿಟ್ಟು, ಅವುಗಳಿಗೆ ಬೇರೆ ಬೇರೆ ಹೆಸರುಗಳನ್ನು ಬರೆದಿದ್ದಾನೆ. ಆದರೆ, ಕಿಟ್ಟು, ಹಸಿರಿನ ಜಾತಿಗೆ ಸೇರಿದ ಎಲ್ಲ ಕಡ್ಡಿಗಳನ್ನೂ ಒಂದೇ ವಿಂಗಡಣೆಯಲ್ಲಿಟ್ಟು, ಅದನ್ನು ’ಹಸಿರು’ ಎಂದು ಹೆಸರಿಸಿದ್ದಾನೆ.  ಅವನಿಗೆ, ಹಸಿರಿನ ಗುಂಪಿಗೆ ಸೇರಿದ ಕಡ್ಡಿಗಳಲ್ಲಿ, ಸಣ್ಣ ಸಣ್ಣ ವ್ಯತ್ಯಾಸಗಳೇನೋ ಕಾಣುತ್ತಿವೆ. ಆದರೆ, ಅವನ ಭಾಷೆ, ಆ ವ್ಯತ್ಯಾಸಗಳನ್ನು ಗುರುತಿಸುವಷ್ಟು ಹರಿತವಿಲ್ಲ! ಪುಟ್ಟು, ಸೂಕ್ಷ್ಮ ವ್ಯತ್ಯಾಸವಿರುವ ’ಆರ್ಮಿ ಗ್ರೀನ್’ ಮತ್ತು ’ಫಾರೆಸ್ಟ್ ಗ್ರೀನ್’ ಬಣ್ಣಗಳನ್ನು, ಕಪ್ಪು- ಬಿಳಿ ಬಣ್ಣಗಳನ್ನು ವಿಂಗಡಿಸುವಷ್ಟು ಲೀಲಾಜಾಲವಾಗಿ ವಿಂಗಡಿಸಿಡುತ್ತಾನೆ. ವ್ಯತ್ಯಾಸ ಸೂಕ್ಷ್ಮವಾದರೂ, ಅವನ ಭಾಷೆ, ಅದನ್ನು ಗುರುತಿವಷ್ಟು ಹರಿತವಾಗಿದೆ.

ಈ ಕಥೆಯಿಂದ ತಿಳಿದುಬರುವ ವಿಚಾರವೇನೆಂದರೆ, ನಮ್ಮ ಭಾಷೆ ಹರಿತವಾದರೆ, ನಮ್ಮ ಬೌದ್ಧಿಕ ಶಕ್ತಿ ಕೂಡ ಹರಿತವಾಗುತ್ತದೆ. ಹರಿತ(sharp, fine), resolution, ಎಂಬ ಪದಗಳ ಪರಿಚಯ ಇಲ್ಲದಿದ್ದಲ್ಲಿ, ಭಾಷೆ ಮತ್ತು ಬೌದ್ಧಿಕತೆಯ ನಡುವೆ ಇರುವ ಈ ಸೂಕ್ಷ್ಮ ಸಂಬಂಧ ನನಗೆ ಹೊಳೆಯುತ್ತಲೇ ಇರಲಿಲ್ಲ!

ಕನ್ನಡಕ್ಕೆ ಬರುತ್ತಿವೆ ಇಂಗ್ಲೀಷಿನಿಂದ ’ಸಾಲ’ದ ಪದಗಳು!
ಎಲ್ಲರಿಗೂ ತಿಳಿದಿರುವಂತೆ, ಆಂಗ್ಲ ಬಾಷೆ, ಕನ್ನಡಕ್ಕಿಂತಲೂ ಹರಿತವಾಗಿದೆ. ಮೇಲಿನ ವಿಚಾರಗಳನ್ನು ಗಮನಿಸಿದಾಗ, ಗೋಚರಿಸುವ ವಿಷಯ: ’ಕನ್ನಡವನ್ನು ಇನ್ನಷ್ಟು ಹರಿತಗೊಳಿಸುವುದು ಅನಿವಾರ್ಯ’! ಅನುವಾದ, ಹರಿತಗೊಳಿಸಲು ಒಂದು ಅದ್ಭುತವಾದ ತಂತ್ರ. ಆಂಗ್ಲ ಬಾಷೆಯ ಮಿಂಬಲೆಯ ತಾಣಗಳನ್ನು ಕನ್ನಡಕ್ಕೆ ಅನುವಾದಿಸುವಾಗ, ಈಗ ಚಾಲ್ತಿಯಲ್ಲಿರುವ ಆಂಗ್ಲ ಭಾಷೆಯ ಕೆಲವು ಪದಗಳಿಗೆ ಕನ್ನಡದ ಪದಗಳು ಸಿಗದೇ ಹೋದಾಗ, ಹೊಸ ಪದಗಳು/ಪದಗುಚ್ಛಗಳು ತಾವಾಗೇ ಹುಟ್ಟಿಕೊಳ್ಳುತ್ತವೆ. ಮಿಂಬಲೆ ಬಂದಿದ್ದೇ ತಡ, ಆಂಗ್ಲ ಭಾಷೆಗೆ, ಹೊಸ ಶಬ್ದಗಳ ಸಾಗರವೇ ಸೇರ್ಪಡೆಯಾಗುತ್ತಿದೆ. ಈಗಾಗಲೇ ಇರುವ ಶಬ್ದಗಳಿಗೆ, ಹೊಸ ಹೊಸ ಅರ್ಥಗಳು ಹುಟ್ಟಿಕೊಳ್ಳುತ್ತಿವೆ. ಈ ಅದ್ಭುತವೆನಿಸುವ ಬದಲಾವಣೆಗಳು ಕನ್ನಡದಲ್ಲಿ ಆಗಬೇಕಾದರೆ, ಅನುವಾದ ಅನಿವಾರ್ಯ!. ಅನುವಾದದಲ್ಲಿ ಭಾಗಿಯಾಗಿರುವವರಿಗೆ ತಿಳಿದಿರುತ್ತದೆ- ಎಷ್ಟೋ ಬಾರಿ, ಆಂಗ್ಲ ಭಾಷೆಯ ಎರಡು ಬೇರೆ ಬೇರೆ ಪದಗಳಿಗೆ, ಕನ್ನಡದಲ್ಲಿ ಒಂದೇ ಅನುವಾದ ಲಭ್ಯವಿರುವುದು. ಕನ್ನಡವನ್ನು ಹರಿತಗೊಳಿಸುವ ಅವಶ್ಯಕತೆ ಬಲವಾಗಿದೆ; ಹಾಗಾಗಿ, ಹೊಸ ಹೊಸ ಶಬ್ದಗಳನ್ನು ರಚಿಸುವ ಅವಶ್ಯಕತೆಯೂ ಬಲವಾಗಿದೆ. ಈಗ, ನಮ್ಮ ಭಾಷೆಯಲ್ಲಿಲ್ಲದ ಎಷ್ಟೋ ಪದಗಳನ್ನು ಅನುವಾದಸದೇ, ನೇರವಾಗಿ, ಆಂಗ್ಲ ಬಾಷೆಯಿಂದ ಇಳಿಸಿಕೊಳ್ಳುತ್ತಿದ್ದೇವೆ. ಹೀಗಾಗಿಯೇ, ’ಬೆಂಗಳೂರು ಕನ್ನಡ’ ’ಕಂಗ್ಲೀಷ್’ ನತ್ತ ವಾಲುತ್ತಿರುವುದು.