11. ಸಹಾಯ ಬೇಕಿದ್ದರೆ ವಿನಂತಿ ಮಾಡಬೇಕು

11. ಸಹಾಯ ಬೇಕಿದ್ದರೆ ವಿನಂತಿ ಮಾಡಬೇಕು

ಅದೊಂದು ನವಿಲು. ಚಂದದ ನವಿಲು. ತನ್ನ ಚಂದದ ಬಗ್ಗೆ ಅದಕ್ಕೆ ಭಾರೀ ಜಂಬ. ಒಮ್ಮೆ ಮಳೆಗಾಲದ ಶುರುವಿನಲ್ಲಿ ಕುಣಿಯುತ್ತಿದ್ದಾಗ ಅದರ ಗರಿಯೊಂದರ “ಕಣ್ಣು" ಬಿದ್ದು ಹೋಯಿತು. ಇದನ್ನು ಗಮನಿಸಿದ ನವಿಲು, ಕಾಡಿನ ಅತ್ಯುತ್ತಮ ಪತ್ತೇದಾರರಾದ ನರಿ ಮತ್ತು ಮಂಗನನ್ನು ಕರೆಯಿತು. ತನ್ನ ಗರಿಯ ಕಣ್ಣನ್ನು ಹುಡುಕಿ ಕೊಡಬೇಕೆಂದಿತು.

ನರಿ ಮತ್ತು ಮಂಗ - ಇಬ್ಬರೂ ಬುದ್ಧಿವಂತರೇ. ಕಾಡಿನಲ್ಲಿ ನವಿಲಿನ ಕಣ್ಣನ್ನು ಹುಡುಕಲಿಕ್ಕಾಗಿ ನರಿ ಹಲವೆಡೆ ತಿರುಗಾಡಿತು.. ಆಗ ಅದು ಒಂದು ಹಾವನ್ನು ಕಂಡಿತು. ಆದರೆ ನವಿಲಿನ ಕಣ್ಣಿನ ಬಗ್ಗೆ ಹಾವನ್ನು ನರಿ ವಿಚಾರಿಸಲಿಲ್ಲ. ಯಾಕೆಂದರೆ ತಾನು ಹಾವಿಗಿಂತ ಬುದ್ಧಿವಂತ ಎಂಬುದು ನರಿಯ ಭಾವನೆ. ಕೊನೆಗೂ ನರಿಗೆ ನವಿಲಿನ ಬಿದ್ದುಹೋದ ಕಣ್ಣನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.

ಮಂಗ ನರಿಯ ಹಾಗಲ್ಲ; ಮಂಗನ ಮಾತು ಜಾಸ್ತಿ. ಅದೂ ಕಾಡಿನಲ್ಲಿ ಹಲವೆಡೆ ಸುತ್ತಾಡಿ ನವಿಲಿನ ಕಣ್ಣನ್ನು ಹುಡುಕಿತು. ಮಂಗನೂ ಅದೇ ಹಾವನ್ನು ನೋಡಿತು. ಅದು ಕೂಡಲೇ ಹಾವಿಗೆ ವಂದಿಸಿತು ಮತ್ತು ನವಿಲಿನ ಬಿದ್ದುಹೋದ ಕಣ್ಣಿನ ಬಗ್ಗೆ ವಿಚಾರಿಸಿತು. ನವಿಲು ಕುಣಿಯುತ್ತಿದ್ದಾಗ ಅದರ ಗರಿಯಿಂದ “ಕಣ್ಣು" ನೆಲಕ್ಕೆ ಬಿದ್ದದ್ದನ್ನು ಹಾವು ಕಂಡಿತ್ತು. ಆ ಜಾಗವನ್ನು ಮಂಗನಿಗೆ ಹಾವು ತೋರಿಸಿತು. ಅಲ್ಲಿ ಹುಡುಕಿದಾಗ ನವಿಲಿನ ಗರಿಯ ಕಣ್ಣು ಸಿಕ್ಕಿತು! ಅದನ್ನು ನವಿಲಿಗೆ ಮಂಗ ತಲಪಿಸಿತು. ಇದಕ್ಕಾಗಿ ಮಂಗನಿಗೆ ದೊಡ್ಡ ಬಹುಮಾನವನ್ನು ನವಿಲು ಕೊಟ್ಟಿತು. ಈಗ ನರಿಗೆ ಅರ್ಥವಾಯಿತು: ಬೇರೆಯವರ ಸಹಾಯ ಕೇಳುವುದರಿಂದ ತನ್ನ ಬುದ್ಧಿವಂತಿಕೆ ಕಡಿಮೆಯಾಗೋದಿಲ್ಲ ಎಂದು.