12th Fail ಹೊರತಂದ ನೆನಪುಗಳು

12th Fail ಹೊರತಂದ ನೆನಪುಗಳು

 

ಳ್ಳೆಯ ಸಿನಿಮಾ ನೋಡಲು ಸಿಗುವುದು ವಿರಳ. ಅದರಲ್ಲೂ ಹಿಂದೀ ಅಥವ ಪ್ರಾದೇಶಿಕ ಭಾಷೆಗಳಲ್ಲಿ ಸತ್ಯಕ್ಕೆ ಹತ್ತಿರವಾದಂತೆ ತೆಗೆದ ಸಿನಿಮಾ ನೋಡಲು ಸಿಗುವುದು ಅತಿ ವಿರಳ. ವಿಧು ವಿನೋದ್ ಚೋಪ್ರಾ ಇತ್ತೀಚೆಗೆ ಹೊರತಂದಿರುವ ‘12th Fail’ ಈ ರೀತಿಯ ಒಂದು ಅಪರೂಪದ ಚಲನಚಿತ್ರ.

ಹಾಟ್ ಸ್ಟಾರಿನಲ್ಲಿ ಮೊದಲು ಇದು ಕಾಣಿಸಿಕೊಂಡಾಗ, ಎಲ್ಲ ಸ್ಟ್ರೀಮಿಂಗ್ ಸರ್ವೀಸುಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಬರುತ್ತಿರುವ ಸಿನಿಮಾಗಳಂತೆಯೇ ಇದೂ ಕೂಡ ಎಂದುಕೊಂಡಿದ್ದೆ. ಇದರ ಬಗ್ಗೆ ಹಲವರು ಮಾತನಾಡಲು, ಟ್ವೀಟ್ ಮಾಡಲು ಪ್ರಾರಂಭಿಸಿದಾಗ ಒಮ್ಮೆ ಟ್ರೇಯ್ಲರ್ ನೋಡಿದೆ. ಇದರ ಟ್ರೇಯ್ಲರ್ ಕೂಡ ಈ ಚಿತ್ರವನ್ನು ನೋಡಲು ಹೆಚ್ಚೇನೂ ಒಲವು ಮೂಡಿಸಲಿಲ್ಲ. ಸಮಯದ ಅಭಾವ ಇದ್ದಾಗ ಸಿನಿಮಾ ನೋಡುವುದೆಂದರೆ ಅತಿ ಕ್ಲಿಷ್ಟಕರ ಸಂಗತಿ. ನೋಡಬೇಕಾದ ಸಿನಿಮಾವನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು. ಕಷ್ಟದಲ್ಲಿ ತಿಂಗಳಿಗೊಂದು ಸಿನಿಮಾ ನೋಡಲು ಸಿಗುವಂತಹ ಅವಸ್ಥೆ ನನ್ನದು - ಈ ಸಿನಿಮಾವನ್ನು ನಾನು ನೋಡಲೇ ಇಲ್ಲ. ಕೆಲವು ದಿನಗಳ ನಂತರ ಆನಂದ ಮಹೀಂದ್ರ ಈ ಸಿನಿಮಾ ಕುರಿತು ಟ್ವೀಟ್ ಮಾಡಿದಾಗ ‘ಅರೆ, ಏನೋ ವಿಶೇಷವಿರಬೇಕು. ಇವರೂ ಇದರ ಬಗ್ಗೆ ಬರೆದುಕೊಂಡಿದ್ದಾರಲ್ಲ’ ಎಂದುಕೊಂಡು ಆ ದಿನವೇ, ಕೆಲಸಗಳ ನಡುವೆಯೇ ಪ್ಲೇ ಮಾಡಿ ನೋಡಿದೆ.

ಸಿನಿಮಾ ನೋಡಿಸಿಕೊಂಡು ಹೋಯಿತು. ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಕೆಲವೊಂದು ದೃಶ್ಯಗಳನ್ನು ನೋಡುವಾಗ ಮನಸ್ಸಿನಲ್ಲಿ ಭಾವುಕತೆ ಉಕ್ಕಿ ಹರಿಯಿತು. ಚಿತ್ರಿಸಿರುವ ರೀತಿ ಎಷ್ಟು ಸತ್ಯಕ್ಕೆ ಹತ್ತಿರವಿರುವಂತೆ ಇದೆಯೆಂದರೆ ‘ನಾನು ನೋಡುತ್ತಿರುವುದು ಹಿಂದೀ ಸಿನಿಮಾ ತಾನೆ?’ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಂತಿತ್ತು.  ನಾನು ಬಿಟ್ಟ ಕೆಲಸ ಬಿಟ್ಟು ನೋಡಿದ ಕೆಲವೇ ಸಿನಿಮಾಗಳಲ್ಲಿ ಇದೂ ಒಂದು!

ಓದುವಾಗ ಈಗಿನ ಮಕ್ಕಳಿಗೆ ಲಭ್ಯವಿರುವುದಕ್ಕಿಂತ ನಮಗೆ ಲಭ್ಯವಿದ್ದ ಸಾಧನ, ಸವಲತ್ತು ಹಾಗು ಸಂಪನ್ಮೂಲಗಳು ತೀರ ಕಡಿಮೆ. ಇನ್ನು ನಮ್ಮ ತಂದೆ, ಅಜ್ಜನವರ ಕಾಲದಲ್ಲಿದ್ದ ಪರಿಸ್ಥಿತಿಯಂತೂ ಇನ್ನೂ ಕಷ್ಟದ್ದು ಎಂಬುದು ನಮಗೆಲ್ಲ ತಿಳಿದ ಸಂಗತಿ ಹೌದು. ಸಣ್ಣ ಊರೊಂದರಲ್ಲಿ ಅಥವ ಹಳ್ಳಿಯೊಂದರಲ್ಲಿ ಬೆಳೆದು ಬಂದವರಿಗೆ ಮನೆಯಲ್ಲಿ ಹೆಚ್ಚು ಓದಿದವರು ಯಾರಾದರೂ ಇರಬೇಕು. ಇಲ್ಲದಿದ್ದರೆ ತೀರ ಕಷ್ಟ.  ಈ ಸಿನಿಮಾ ನೋಡುವಾಗ ನನಗೆ ನಾನು ಪಟ್ಟ ಕಷ್ಟಗಳು ನೆನಪಾದವು. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೂ ಕೂಡ ನಮಗೆ ಎದುರಾದ ಪರಿಸ್ಥಿತಿ ಕೂಡ ಒಂದು ಮಟ್ಟಿಗೆ ಇಲ್ಲಿ ಚಿತ್ರಿತವಾದಂತೆಯೇ ಇತ್ತು.

ನಮ್ಮ ಅಪ್ಪನ ಓದು ಹತ್ತನೆಯ ಕ್ಲಾಸಿನವರೆಗೆ. ಕಾಲೇಜು ಮೆಟ್ಟಿಲು ಏರಿದವರು ಪಿ ಯು ಸಿ ಮುಗಿಸಿಕೊಂಡರೋ ಇಲ್ಲವೋ ಇವತ್ತಿಗೂ ನಮಗೆ ತಿಳಿದಿಲ್ಲ. ಅಮ್ಮನಿಗೆ ಓದಲು ಆಸಕ್ತಿಯಿದ್ದರೂ ಹತ್ತನೆಯ ಕ್ಲಾಸು ಮುಗಿಯುತ್ತಿದ್ದಂತೆಯೇ ಸರಿಯಾಗಿ, ಅವರ ಓದು ಮುಂದುವರೆಯುವುದಕ್ಕೆ ಮುಂಚೆ ಮದುವೆ ಮಾಡಿ ಕಳುಹಿಸಿಬಿಟ್ಟರಂತೆ. ಇನ್ನು ಅಕ್ಕ ಪಿ ಯು ಸಿ ಕಷ್ಟ ಪಟ್ಟು ಮಾಡಿಕೊಂಡಳು - ಅವಳಿಗೆ ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ. ಮೈಸೂರಿನ ಪ್ರತಿಷ್ಠಿತ ಕಾವಾ ಕಾಲೇಜಿನಲ್ಲಿ ಅವಳಿಗೆ ಸೀಟು ಸಿಕ್ಕಿತ್ತು. ಆದರೆ ಪದವಿ ಪೂರ್ವ ಓದುತ್ತಿರುವ ಸಮಯದಲ್ಲಿ  ಪ್ರೀತಿ-ಪ್ರೇಮ ಎಂದು ಕೆಲಕಾಲ ಕಳೆದುಹೋಗಿಬಿಟ್ಟವಳು ನನಗೆ ಅವಳು ಸಿಗುತ್ತಲೇ ಇರಲಿಲ್ಲ. ಅಣ್ಣನೋ, ಪಿ ಯು ಸಿ ಮೊದಲನೆಯ ವರ್ಷದಲ್ಲಿರುವಾಗ ಹಿರಿಯಕ್ಕನ ದಾರಿಯಲ್ಲಿಯೇ ಪ್ರೀತಿ ಪ್ರೇಮ ಎಂದು ಮನೆ ಬಿಟ್ಟು ಓಡಿಹೋಗಿದ್ದ. ಅವನು ಎಲ್ಲಿದ್ದಾನೆಂದು ನಮಗೆ ಹಲವು ವರ್ಷಗಳ ಕಾಲ ಗೊತ್ತೇ ಇರಲಿಲ್ಲ. ಇಷ್ಟರಲ್ಲಿ ನನ್ನ ಪಿ ಯು ಸಿ ಶುರುವಾಯಿತು.

ಶಾಲೆ ಮತ್ತು ಲೈಬ್ರರಿ ಬಿಟ್ಟರೆ ನನಗೆ ಹೆಚ್ಚು ಹೊರಗಿನವರೊಂದಿಗೆ ಒಡನಾಟ ಇರಲಿಲ್ಲ. ಮೊದಲನೆಯ ವರ್ಷ ಟ್ಯೂಷನ್ ಇರಲಿಲ್ಲ. ಕಾಲೇಜು ಬಿಟ್ಟರೆ ಮನೆ - ಶಿವಮೊಗ್ಗದ ಹೊರವಲಯದಲ್ಲಿ ಇದ್ದ ನಮ್ಮ ಮನೆಯ ಹತ್ತಿರ ಒಂದು ಪುಸ್ತಕದ ಅಂಗಡಿ ಕೂಡ ಇರಲಿಲ್ಲ! ಆಗೆಲ್ಲ ಗೂಗಲ್ ಕೂಡ ಇರಲಿಲ್ಲವಲ್ಲ. ಮೊದಲನೆಯ ಪಿ ಯು ಅರ್ಧ ವರ್ಷ ಮುಗಿದು ಹೋಗಿತ್ತು - ನನಗೆ ಯು ಪಿ ಎಸ್ ಸಿ, ಐ ಐ ಟಿ - ಜೆ ಇ ಇ ಮುಂತಾದವುಗಳ ಬಗ್ಗೆ ಗೊತ್ತೇ ಇರಲಿಲ್ಲ! ಒಂದು ದಿನ ಪ್ರಾಕ್ಟಿಕಲ್ ಕ್ಲಾಸು ಇಲ್ಲವೆಂದು ಎಲ್ಲರನ್ನು ಹೊರಗೆ ಕೂಡಿಸಿದ್ದರು. ಸಹವಿದ್ಯಾರ್ಥಿಗಳು ಕೆಲವರು ಯಾವುದೋ ಬಿಳಿಯ ಬೈಂಡಿಂಗ್ ಇದ್ದ ಪುಸ್ತಕವನ್ನು ಹಿಡಿದು ಯಾವುದೋ ‘ಪ್ರಾಬ್ಲಮ್ಮು’ಗಳನ್ನು ‘ಸಾಲ್ವ್’ ಮಾಡುತ್ತಿದ್ದರು. ಅದೇನೆಂದು ನಾನು ಕೇಳಿದಾಗ, “ಐ ಐ ಟಿ/ಜೆ ಇ ಈ - ಕಣೋ. ನಿನಗೆ ಗೊತ್ತಿಲ್ವಾ?” ಎಂದು ತಿರುಗಿ ಕೇಳಿದರು!

ಈ ಸಿನಿಮಾದಲ್ಲೂ ಆ ರೀತಿಯ ಚಿತ್ರಣವೊಂದಿದೆ. ಮನೋಜ್ ಶರ್ಮಾ ತನ್ನ ಊರು ಬಿಟ್ಟು ಗ್ವಾಲಿಯರ್ ನಗರಕ್ಕೆ ರಾಜ್ಯದ ಪೊಲೀಸ್ ನೇಮಕಾತಿ ಪರೀಕ್ಷೆಗೆ ಕೋಚಿಂಗ್ ತೆಗೆದುಕೊಳ್ಳಲೆಂದು ಬರುತ್ತಾನೆ. ರಾಜ್ಯ ಸರಕಾರ ನೇಮಕಾತಿಯನ್ನೇ ರದ್ದುಗೊಳಿಸಿದೆಯೆಂದು ಅವನಿಗೆ ತಿಳಿದುಬರುತ್ತದೆ. ಸಾಲದ್ದಕ್ಕೆ ಅವನ ಅಜ್ಜಿ ವರ್ಷಗಟ್ಟಲೆ ಕೂಡಿಟ್ಟು ಕೊಟ್ಟ ಹಣವನ್ನು ಅವನು ಸ್ವಲ್ಪ ಹೊತ್ತಿನ ಮುಂಚೆಯೇ ಕಳೆದುಕೊಂಡಿರುತ್ತಾನೆ. ಹಣ, ಬಟ್ಟೆ ಬರೆ ಎಲ್ಲವನ್ನು ಕಿಟ್ ಬ್ಯಾಗೊಂದರಲ್ಲಿ ಇಟ್ಟುಕೊಂಡು ಬಸ್ಸಿನಲ್ಲಿ ಬರುತ್ತಿದ್ದವ ನಿದ್ರೆಗೆ ಜಾರಿದ್ದೇ, ಯಾರೋ ಅದನ್ನು ಹಾರಿಸಿಕೊಂಡು ಹೋಗಿರುತ್ತಾರೆ. ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ ಆಗಿರುವ ಹೊತ್ತಿನಲ್ಲಿ ಅವನಿಗೆ ಹೊಟ್ಟೆಯ ಹಸಿವು ಕಂಗಾಲು ಮಾಡುತ್ತದೆ. ಕೊನೆಗೆ ತಡೆಯಲಾಗದೆ ಹೋಗಿ ಹೋಟೆಲೊಂದರ ಕ್ಯಾಶಿಯರಿಗೆ “ಅಯ್ಯಾ, ಒಂದು ಪ್ಲೇಟ್ ಊಟ ಕೊಡಿ. ನಿಮಗೆ ಯಾವುದಾದರೂ ಕೆಲಸ ಮಾಡಿಕೊಡುತ್ತೇನೆ” ಎಂದು ಕೇಳಿಕೊಳ್ಳುತ್ತಾನೆ!

ಕ್ಯಾಶಿಯರ್ ಕನಿಕರ ತೋರಿ ಒಂದು ಪ್ಲೇಟು ಊಟ ಬಡಿಸಲು ತನ್ನ ಕೆಲಸಗಾರರಿಗೆ ಹೇಳುತ್ತಾನೆ. ಹೊಟ್ಟೆ ತುಂಬ ಊಟ ಮಾಡಿದ ಮನೋಜ್ ಶರ್ಮಾ, "ಇದನ್ನು ತೀರಿಸಲು ನನಗೆ ಯಾವುದಾದರೂ ಕೆಲಸ ಕೊಡಿ" ಎಂದು ಅದೇ ಕ್ಯಾಶಿಯರಿನ ಬಳಿ ಬಂದು ಕೇಳುತ್ತಾನೆ. ಉಂಡ ಊಟಕ್ಕೆ ಕೆಲಸ ಮಾಡುತ್ತೇನೆ, ದಯದಿಂದ ಕೊಟ್ಟ ಊಟ ನನಗೆ ಬೇಡ ಎಂಬ ಧೋರಣೆಯಲ್ಲಿ ಅವನಿರುವಾಗ ಅವನಿಗೆ 'ಪಾಂಡೆ'ಯ ಪರಿಚಯವಾಗುತ್ತದೆ. ಮಾತಿನ ಮಲ್ಲನಾದ ಪಾಂಡೆ "ನಾನು ನಿನ್ನಂತೆಯೇ ಪೊಲೀಸ್ ನೇಮಕಾತಿಗೆ ಕಲಿಯಲು ಬಂದವ ಕಣಯ್ಯ" ಎಂದು ಪರಿಚಯಿಸಿಕೊಂಡವನು, "ನಾನು ಕೊಡುತ್ತೇನೆ ಬಿಡು, ನಿನ್ನ ಊಟದ ಹಣ" ಎನ್ನುತ್ತಾನೆ. "ಅರೆರೆ, ಇವರು ಕೂಡ ಕೋಚಿಂಗ್ ತೆಗೆದುಕೊಳ್ಳಲು ಬಂದವರು! ಇವರೇನು ಮಾಡುತ್ತಾರೆ ಈಗ?" ಎಂಬ ಕುತೂಹಲದಲ್ಲಿ ಪಾಂಡೆಯನ್ನು ಮನೋಜ್ ಶರ್ಮಾ ವಿಚಾರಿಸಲಾಗಿ "ಯು ಪಿ ಎಸ್ ಸಿ" ಎಂಬುದಾಗಿ ಒಂದು ಇದೆಯೆಂದೂ, ಅದು ಇಲ್ಲಿನ ಪೊಲೀಸ್ ನೇಮಕಾತಿ ಪರೀಕ್ಷೆಗಿಂತ ಮಿಗಿಲಾದದ್ದೆಂದೂ ಅವನಿಗೆ ತಿಳಿದುಬರುತ್ತದೆ! ಅಲ್ಲಿಯವರೆಗೂ ಯೂ ಪಿ ಎಸ್ ಸಿ ಎಂಬುದೊಂದು ಇದೆಯೆಂದೂ ಅವನಿಗೆ ತಿಳಿದಿರುವುದಿಲ್ಲ! ಹಳ್ಳಿಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ ಓದುವ ಮಕ್ಕಳಿಗೆ ಈ ರೀತಿಯ ಪರೀಕ್ಷೆಗಳು ಹಾಗೂ ಅವಕಾಶಗಳ ಬಗ್ಗೆ ಒತ್ತಿ ಹೇಳುವವರು ಇಲ್ಲದಿದ್ದಲ್ಲಿ ಅವುಗಳ ಬಗ್ಗೆ ಅವರಿಗೆ ತಿಳಿಯುವುದೇ ಇಲ್ಲ. ಹಲವರಿಗೆ ಕಾಲ ಮೀರಿದ ಮೇಲೆ ತಿಳಿದುಬರುವಂತಾಗುತ್ತದೆ!

ಸಹಪಾಠಿಗಳಂತೂ ಇವೆಲ್ಲವುಗಳ ಕುರಿತು ಅವರಿಗೆ ತಿಳಿದಿರುವ ವಿಷಯಗಳಲ್ಲಿ ಯಾವುದನ್ನೂ ಹಂಚಿಕೊಳ್ಳುವುದಿಲ್ಲ. ಯಾವುದನ್ನಾದರೂ ಹಂಚಿಕೊಂಡರೆ ಎಲ್ಲಿ ತಮಗೇ ಕಂಟಕರಾಗಿಬಿಡುತ್ತಾರೋ ಎಂಬ ಆಲೋಚನೆಯಲ್ಲಿರುವಂತೆ ಎಲ್ಲವನ್ನೂ ಗುಟ್ಟಾಗಿ ಇಟ್ಟುಕೊಂಡುಬಿಡುತ್ತಾರೆ. ಎಲ್ಲಿ ಈತ ನನ್ನನ್ನು ಮೀರಿಸಿ ತಾನು ಮೇಲೆಬಂದುಬಿಡುತ್ತಾನೋ ಎಂಬಂತೆ ಧೋರಣೆ ಇಟ್ಟುಕೊಂಡು ನಡೆಯುತ್ತಾರೆ.

ದೆಹಲಿಗೆ ಪಾಂಡೆ ಅದೇ ಯು ಪಿ ಎಸ್ ಸಿ ಪರೀಕ್ಷೆಯ ತಯಾರಿಗೆ ಹೊರಟಿದ್ದಾರೆಂದು ತಿಳಿದ ಕೂಡಲೇ, ಕ್ಷಣ ಮಾತ್ರವೂ ತಡ ಮಾಡದೆ, ಮನೋಜ್ ಶರ್ಮಾ - "ಸರ್, ನೀವು ನನ್ನನ್ನು ನಿಮ್ಮ ಜೊತೆ ಕರೆದುಕೊಂಡು ಹೋಗಿ. ಯಾವ ಕೆಲಸ ಕೊಟ್ಟರೂ ಮಾಡುವೆ. ನಿಮ್ಮ ಹಣ ನಿಮಗೆ ಹಿಂದಿರುಗಿಸುವೆ" ಎಂದು ಪಟ್ಟು ಹಿಡಿದು ಅವರ ಜೊತೆ ಗ್ವಾಲಿಯರಿನಿಂದ ದೆಹಲಿಗೆ ನೇರ ಹೊರಟುಬಿಡುತ್ತಾನೆ.

ದೆಹಲಿಗೆ ಬಂದ ಶರ್ಮಾ ಅಲ್ಲಿ ಮುಖರ್ಜಿ ನಗರದಲ್ಲಿ ನೆರೆದಿರುವ ವಿದ್ಯಾರ್ಥಿಗಳ ಮಹಾಪೂರವನ್ನು ನೋಡಿ ಧೃತಿಗೆಡುತ್ತಾನೆ. ಅವನಂತೆಯೇ ಹಿಂದಿ ಮಾಧ್ಯಮದಿಂದ ಬಂದು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಹಿರಿಯ ವಿದ್ಯಾರ್ಥಿಯೊಬ್ಬರ ಪರಿಚಯ ಸಮಯಕ್ಕೆ ಸರಿಯಾಗಿ ಅವನಿಗಾಗುತ್ತದೆ. ಹಾಗೆ ಪರಿಚಯವಾದ 'ಗೌರಿ ಭಯ್ಯಾ' ಇಷ್ಟೂ ವರ್ಷಗಳ ಕಾಲ ತನ್ನ ಓದಿನ ಜೊತೆಗೆ ಎಲ್ಲರಿಗೂ ಸಹಾಯ ಮಾಡುವುದಲ್ಲದೆ ಪರೀಕ್ಷಾರ್ಥಿಗಳಿಗೆ ಏನೂ ಶುಲ್ಕವಿಲ್ಲದೆ ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆಂದು ಅವನಿಗೆ ತಿಳಿದು ಬರುತ್ತದೆ. ತಾನು ಹಿಂದುಳಿದ ವರ್ಗಕ್ಕೆ ಸೇರಿದವನಾದ್ದರಿಂದ ತನಗೆ ಆರು ಪ್ರಯತ್ನಗಳು ಇವೆಯೆಂಬುದನ್ನು ತಿಳಿಸುತ್ತ, ಐದು ವರ್ಷಗಳ ಕಾಲ ಸತತ ಪ್ರಯತ್ನದಿಂದಾಗಿ ತಾನು ತಿಳಿದುಕೊಂಡ ವಿಷಯಗಳನ್ನು ‘ಗೌರಿ ಭಯ್ಯಾ’ ಹೊಸ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

ಪರಮ ಪದ, 'ಹಾವು - ಏಣಿ ಆಟದ ರೀತಿ, ಈ ಪರೀಕ್ಷೆ!' ಎಂದು ಗೌರಿ ಭಯ್ಯಾ ಹೇಳುವಾಗ ಪರೀಕ್ಷೆಯ ಎಡರು ತೊಡರುಗಳು, ಜೀವನದ ಎಡರು ತೊಡರುಗಳಂತೆ ಎಲ್ಲವೂ ತಾತ್ವಿಕವಾದ ಹೋಲಿಕೆ ತಳೆದು ಸಿನಿಮಾ ಮಾಡಿದವರ ಮೇಲೆ, ಈ ರೀತಿ ಆಲೋಚನೆ ಮಾಡಿ ಸ್ಕ್ರಿಪ್ಟು ಬರೆದವರ ಮೇಲೆ ಅತೀವ ಗೌರವವನ್ನು ಹೊರತರುತ್ತದೆ.

ಅಲ್ಲಿಂದ ಮುಂದೆ ಮನೋಜ ಶರ್ಮಾ ಲೈಬ್ರರಿಯೊಂದರಲ್ಲಿ ಕ್ಲೀನರ್ ಆಗಿ, ಹಿಟ್ಟಿನ ಗಿರಣಿಯಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತ, ದುಡಿದು ತನ್ನ ಕುಟುಂಬಕ್ಕೂ ಖರ್ಚಿಗೆ ದುಡ್ಡು ಕಳುಹಿಸುತ್ತ ಪರೀಕ್ಷೆಯ ತಯಾರಿ ನಡೆಸುತ್ತಾನೆ. ಏರಲು ಕಷ್ಟವಾಗುವ ಕಡಿದಾದ ಬೆಟ್ಟದಂತೆ ರೂಪ ತಾಳುತ್ತಿರುವ ಪರೀಕ್ಷೆಯೆಂಬ ಸವಾಲನ್ನು ಅವನು ಹೇಗೆ ಎದುರಿಸುತ್ತಾನೆ? ತನಗೆ ಆಕಸ್ಮಿಕವಾಗಿ ಪರಿಚಯವಾದ ಹುಡುಗಿ ಶ್ರದ್ಧಾ ಹೇಗೆ ಅವನ ಮನಸ್ಸಿಗೆ ಹತ್ತಿರುವಾಗುತ್ತಾಳೆ, ಹೇಗೆ ದಾರಿ ದೀಪವಾಗುತ್ತಾಳೆ - ಇದೆಲ್ಲದರ ಚಿತ್ರಣ ವೀಕ್ಷಕರ ಮನಸ್ಸಿನಲ್ಲಿ ಚಿರಕಾಲ ಉಳಿಯುವಂತೆ ಚಿತ್ರಿಸಿದ್ದಾರೆ. ಓದಿನ ಸಮಯದಲ್ಲಿ ಪ್ರೀತಿ-ಪ್ರೇಮ ಎಂದು ನಡೆದವರ ಜೀವನದ ದಿಕ್ಕುಗೆಡಿಸುವ ಕಥೆಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಈ ಕಥೆ ಅವುಗಳ ತದ್ವಿರುದ್ಧ.

ಪರೀಕ್ಷೆಯಲ್ಲಿ ಮುಗ್ಗರಿಸಿದ ಬೆನ್ನ ಹಿಂದೆಯೇ 'ನಾನು ನಿನ್ನನ್ನು ಪ್ರೀತಿಸುತ್ತಿರುವೆ' ಎಂದು ಹೇಳಲು ಸೀದಾ ಮಸ್ಸೂರಿಯಲ್ಲಿರುವ ಮನೆಗೇ ಮನೋಜ್ ಶರ್ಮಾ ಬರುತ್ತಾನೆ. ಅವನಿಗೆ ಶ್ರದ್ಧಾ "ನೀನು ಹೋಗಿ ಓದಿಕೋ. ಓದು ಮೊದಲು!" ಎಂದು ಹೇಳಿ ಕಳುಹಿಸುತ್ತಾಳೆ! ಮನೋಜನಿಗೆ ಇಂಗ್ಲೀಷಿನಲ್ಲಿ ಹಿಡಿತವಿಲ್ಲವೆಂಬುದನ್ನು ಅರಿತು ಅವನಿಗೆ ನೋಟ್ಸ್ ಮಾಡಿಕೊಡಲು ಶುರು ಮಾಡುತ್ತಾಳೆ. ತನ್ನ ಅಪ್ಪ ತಂದುಕೊಟ್ಟ ಸ್ಟಾಪ್ ವಾಚನ್ನು ತನ್ನ ಪರೀಕ್ಷೆ ಮುಗಿದ ನಂತರ ಅವಳು ಮನೋಜನಿಗೆ ತಂದುಕೊಡುತ್ತಾಳೆ. ಅವನ ಪರೀಕ್ಷೆಯ ತಯಾರಿಯ ಪ್ರತಿಯೊಂದು ಹಂತದಲ್ಲೂ ಅವನ ಜೊತೆಯಾಗಿ ಇದ್ದು ಅವನನ್ನು ಹುರಿದುಂಬಿಸುತ್ತಿರುತ್ತಾಳೆ. ತಾನು ಡಿಸ್ಟ್ರಿಕ್ಟ್ ಕಲೆಕ್ಟರ್ ಆದರೇನಂತೆ, 'ನೀನು ಹಿಟ್ಟಿನ ಗಿರಣಿ ನಡೆಸುವವನಾದರೂ ನಾನು ನಿನ್ನನ್ನು ಮದುವೆಯಾಗುತ್ತೇನೆ, ಆದರೆ ನಿನ್ನ ಪ್ರಾಮಾಣಿಕ ಪ್ರಯತ್ನ ಮಾಡು' ಎನ್ನುತ್ತಾ ನಡೆಯುವ ಅವಳ ಪ್ರೇಮದ ನಿದರ್ಶನ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುತ್ತದೆ.

ಚಿತ್ರದ ಕೊನೆಯ ಕೆಲವು ನಿಮಿಷಗಳು ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಮುಂದೆ ಎದುರಿಸುವ ಸಂದರ್ಶನ ಸಮಯದ ತಲ್ಲಣಗಳನ್ನು ಭರಪೂರ, ಕರಾರುವಕ್ಕಾಗಿ ಚಿತ್ರಿಸಿದ್ದಾರೆ. ಓಟದಲ್ಲಿ ಪಾಲ್ಗೊಂಡವನು ಕೊನೆಯ ಚರಣದವರೆಗೋ ತಾನು ಗೆಲ್ಲುವೆನೋ ಇಲ್ಲವೋ ಎನ್ನುವ ದುಗುಡದ ನಡುವೆ ಧೃತಿಗೆಡದೆ ತನ್ನ ಶಕ್ತ್ಯಾನುಸಾರ ಓಡುತ್ತಲೇ ಇರಬೇಕು. ಗೆಲುವು ಹತ್ತಿರವಿರುವಂತೆಯೇ ಸೋಲು ಕೂಡ ದೂರವಿಲ್ಲವೆನ್ನುವ ಅರಿವು ಆಗಲೂ ಅವನನ್ನು ಬೇರಿನಿಂದ ಕುಲುಕಿಬಿಡಬಹುದು. ಸೋಲು ಗೆಲುವುಗಳಿಗಿಂತ ಪ್ರಾಮಾಣಿಕತೆ ಹೆಚ್ಚಿನದು, ದುಗುಡಗೊಂಡ ಮನಸ್ಸಿಗೆ 'ತಲ್ಲಣಿಸದಿರು' ಎಂದು ಹೇಳುವ ಶಕ್ತಿ ಬೆಳೆಸಿಕೊಂಡವರು, ಬಿಡದೆ ಯತ್ನವ ಮಾಡುವವರು ಜೀವನದಲ್ಲಿ ನಿಜವಾಗಿಯೂ ಗೆಲ್ಲುವರು ಎಂಬುದನ್ನು ಮನದಟ್ಟಾಗುವಂತೆ ಹೇಳಿದೆ ಈ ಚಿತ್ರ.