2% ಕ್ರೀಡಾ ಮೀಸಲು ನಿರ್ಧಾರ : ಬಹಳ ದಿನದ ಬೇಡಿಕೆ ಈಡೇರಿಕೆ

ರಾಜ್ಯದ ಎಲ್ಲ ಇಲಾಖೆಗಳಲ್ಲೂ ಕ್ರೀಡಾಪಟುಗಳಿಗೆ ಶೇ. ೨ರಷ್ಟು ಉದ್ಯೋಗ ಮೀಸಲು ನೀಡುವ ಸಂಬಂಧ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಸರಕಾರ ಮುಂದಾಗಿರುವುದರಿಂದ ಕ್ರೀಡಾಕ್ಷೇತ್ರದ ಬಹಳ ದಿನಗಳ ಬೇಡಿಕೆಯೊಂದು ಈಡೇರುವ ದಿನ ಸಮೀಪಿಸಿದಂತಾಗಿದೆ. ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು - ೨೦೧೪ರ ಕರಡಿಗೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಬಗ್ಗೆ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿ, ಸಾರ್ವಜನಿಕ ಆಕ್ಷೇಪಣೆಗಾಗಿ ೧೫ ದಿನ ಕಾಯಲಾಗುತ್ತದೆ. ಯಾವುದೇ ಗುರುತರ ಆಕ್ಷೇಪಣೆ ಬಾರದಿದ್ದರೆ ನೇರವಾಗಿ ಮೀಸಲು ಜಾರಿಯಾಗಲಿದೆ. ಮತೊಮ್ಮೆ ಸಂಪುಟ ಸಭೆಯಲ್ಲಿ ಮಂಡಿಸಬೇಕಾದ ಉಮೇದು ಇರುವುದಿಲ್ಲ. ಸಂಪುಟ ಸಭೆಗೆ ಮಂಡನೆ ಮಾಡುವುದರಿಂದ ವಿನಾಯತಿ ಇರುವುದು ಕೂಡ ಮಹತ್ತರ ನಿರ್ಣಯ. ಗುರುತರ ಆಕ್ಷೇಪಣೆ ಬಾರದಿದ್ದರೂ ಮತ್ತೊಮ್ಮೆ ಸಂಪುಟದಲ್ಲಿ ಕಡತ ಮಂಡನೆಯಾಗಲು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇತ್ತು. ಸರ್ಕಾರ ಮುನ್ನೆಚ್ಚರಿಕೆಯಿಂದ ಸಂಭಾವ್ಯತೆಯನ್ನು ತಪ್ಪಿಸಿದೆ. ಇದರಿಂದಾಗಿ ಮುಂದಿನ ಒಂದು ತಿಂಗಳೊಳಗೆ ಕ್ರೀಡಾಪಟುಗಳಿಗೆ ಸರ್ಕಾರದ ಉದ್ಯೋಗದಲ್ಲಿ ಮೀಸಲಾತಿ ಸಾಕಾರವಾಗಲಿದೆ. ಸದ್ಯ ಪೋಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಮಾತ್ರ ಕ್ರೀಡಾಪಟುಗಳಿಗೆ ಶೇ. ೩ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ. ಅದನ್ನು ಎಲ್ಲ ಇಲಾಖೆಗೂ ವಿಸ್ತರಿಸಿದೆಯಾದರೂ ಶೇ.೨ ರಷ್ಟು ಮೀಸಲು ನೀಡಲು ಒಪ್ಪಿದೆ. ಇದನ್ನು ಕ್ರೀಡಾಕ್ಷೇತ್ರ ಒಪ್ಪಬೇಕು.
ಹಣಕಾಸು, ಪ್ರಾಯೋಜಕರು, ಸೌಲಭ್ಯದ ಕೊರತೆಯ ನಡುವೆಯೂ ಕ್ರೀಡಾಪಟುಗಳು ತಮ್ಮ ಬಹುಪಾಲು ಸಮಯವನ್ನು ಅಭ್ಯಾಸಗಳಿಗೆ ಮೀಸಲಿಡುತ್ತಾರೆ. ಬೇರೆ ಯಾವುದೇ ಕೆಲಸಕ್ಕೂ ಹೋಗದೇ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡುವ ಗುರಿ ಹೊಂದಿರುತ್ತಾರೆ. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಸ್ಪರ್ಧಿಸಿ, ಪದಕ ಗೆದ್ದ ತರುವಾಯ ನೆಮ್ಮದಿಯ ಜೀವನ ಕಂಡುಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಪದಕ ಗೆದ್ದಾಗ ಬಹುಮಾನ ನೀಡಿ ಸತ್ಕರಿಸುವ ಸರಕಾರಗಳು ಆಮೇಲೆ ಆ ಕ್ರೀಡಾಳುಗಳನ್ನು ಮರೆತುಬಿಡುತ್ತಾರೆ. ಇದೀಗ ಕ್ರೀಡಾ ಮೀಸಲಿನಿಂದಾಗಿ ಸಾಧನೆ ಮಾಡಿ, ಕ್ರೀಡೆಯಿಂದ ನಿವೃತ್ತರಾದ ಬಳಿಕ ಕ್ರೀಡಾಳುಗಳು ಕಾಯಂ ಉದ್ಯೋಗವನ್ನು ಪಡೆದುಕೊಳ್ಳುವ ಬಾಗಿಲು ತೆರೆದಂತಾಗುತ್ತದೆ. ಜನಪ್ರಿಯ ಕ್ರೀಡಾಪಟುಗಳಿಗೆ ಸಿಗುವ ಗೌರವಾನ್ವಿತ ಹುದ್ದೆಯಲ್ಲ ಇದು. ಸಾಮಾನ್ಯ ಸರ್ಕಾರಿ ಉದ್ಯೋಗವೇ ಕ್ರೀಡಾ ಸಾಧಕರಿಗೆ ಉದ್ಯೋಗ ಪಡೆಯಲು ಹಾದಿ ಸುಗಮಗೊಳಿಸುವುದರ ಜತೆಗೆ ಮತ್ತಷ್ಟು ಮಂದಿ ಕ್ರೀಡಾಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಲು ಸರ್ಕಾರದ ನಿರ್ಧಾರ ಉತ್ತೇಜನ ನೀಡುತ್ತದೆ. ಹೀಗಾಗಿ ಸರ್ಕಾರದ ತೀರ್ಮಾನ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೩-೦೨-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ