3. ಭರವಸೆ ಕಳೆದುಕೊಳ್ಳಬಾರದು

3. ಭರವಸೆ ಕಳೆದುಕೊಳ್ಳಬಾರದು

ಎರಡು ಕಪ್ಪೆಗಳು ಆಹಾರ ಹುಡುಕುತ್ತಾ ಗೋಪಾಲಕನ ಮನೆಗೆ ಹೋದವು. ಅಕಸ್ಮಾತಾಗಿ ಹಾಲಿನ ಪಾತ್ರೆಯೊಳಕ್ಕೆ ಜಿಗಿದವು. ಆ ಪಾತ್ರೆಯ ಬದಿಗಳು ಜಾರುತ್ತಿದ್ದ ಕಾರಣ ಕಪ್ಪೆಗಳಿಗೆ ಹೊರಕ್ಕೆ ಬರಲು ಸಾಧ್ಯವಾಗಲಿಲ್ಲ. ದೊಡ್ಡ ಕಪ್ಪೆ ಹೇಳಿತು, "ಗೆಳೆಯಾ, ಇದರೊಳಗೆ ಈಜುವುದರಿಂದ ಯಾವುದೇ ಪ್ರಯೋಜನವಿಲ್ಲ. ನಾವಿಬ್ಬರೂ ಹಾಲಿನಲ್ಲಿ ಮುಳುಗಿ ಹೋಗುತ್ತೇವೆ. ಹಾಗಾಗಿ ಈಜುವುದನ್ನು ನಿಲ್ಲಿಸೋಣ.” ಸಣ್ಣ ಕಪ್ಪೆ ಹೇಳಿತು, “ತಾಳ್ಮೆಯಿಂದಿರು ಗೆಳೆಯಾ! ಈಜುತ್ತಲೇ ಇರು. ಯಾರಾದರೂ ಬಂದು ನಮ್ಮನ್ನು ಪಾತ್ರೆಯಿಂದ ಹೊರಕ್ಕೆ ಹಾಕುತ್ತಾರೆ.”

ಸ್ವಲ್ಪ ಸಮಯದ ನಂತರ ದೊಡ್ಡ ಕಪ್ಪೆ ಹತಾಶೆಯಿಂದ ಹೇಳಿತು, "ನನ್ನಿಂದ ಈಜಲು ಸಾಧ್ಯವೇ ಇಲ್ಲ, ನಾನು ಸುಸ್ತಾಗಿದ್ದೇನೆ. ನಾನಂತೂ ಈಜೋದನ್ನು ನಿಲ್ಲಿಸುತ್ತೇನೆ.” ಸಣ್ಣ ಕಪ್ಪೆ ಹುರಿದುಂಬಿಸುವ ಮಾತನ್ನಾಡಿತು, “ಹತಾಶೆ ಬೇಡ. ಈಜುತ್ತಲೇ ಇರು.” ಎರಡು ಗಂಟೆಗಳು ಸರಿದವು. ದೊಡ್ಡ ಕಪ್ಪೆ ಹೇಳಿತು, "ನನಗೆ ಈಜಲು ಆಗುತ್ತಲೇ ಇಲ್ಲ. ನಾವಿಬ್ಬರೂ ಮುಳುಗಿ ಸಾಯುತ್ತೇವೆ.” ಅದು ಈಜೋದನ್ನು ನಿಲ್ಲಿಸಿತು ಮತ್ತು ಹಾಲಿನಲ್ಲಿ ಮುಳುಗಿ ಸತ್ತಿತು. ಸಣ್ಣ ಕಪ್ಪೆ ಹಠದಿಂದ ಈಜುತ್ತಲೇ ಇತ್ತು. ಸ್ವಲ್ಪ ಹೊತ್ತಿನ ನಂತರ, ಸಣ್ಣ ಕಪ್ಪೆಗೆ ತನ್ನ ಕಾಲುಗಳ ಕೆಳಗೆ ಏನೋ ತಗಲಿದಂತಾಯಿತು. ಗಂಟೆಗಟ್ಟಲೆ ಈಜಿದ ಕಾರಣ ಹಾಲಿನಲ್ಲಿ ಬೆಣ್ಣೆ ಮೂಡಿತ್ತು. ತಕ್ಷಣವೇ ಸಣ್ಣ ಕಪ್ಪೆ ಬೆಣ್ಣೆಗೆ ಹಿಂಗಾಲುಗಳನ್ನೂರಿ ಪಾತ್ರೆಯಿಂದ ಹೊರಕ್ಕೆ ಜಿಗಿದು ಜೀವ ಉಳಿಸಿಕೊಂಡಿತು.