58. ರಾಜನಿಗೆ ಪಾಠ ಕಲಿಸಿದ ಜಿಂಕೆ

58. ರಾಜನಿಗೆ ಪಾಠ ಕಲಿಸಿದ ಜಿಂಕೆ

ರಾಜನೊಬ್ಬ ಬೇಟೆಯಾಡಲು ಕಾಡಿಗೆ ಹೋದ. ಕಾಡಿನಲ್ಲಿ ಜಿಂಕೆಯೊಂದನ್ನು ಕಂಡು ಅದನ್ನು ಬೆನ್ನಟ್ಟಿದ. ಜಿಂಕೆ ವೇಗವಾಗಿ ಓಡುತ್ತಿತ್ತು. ಅದರ ಹಿಂದೆಯೇ ಸಾಗಿದ ರಾಜ. ಪ್ರಾಣಿಗಳನ್ನು ಹಿಡಿಯಲಿಕ್ಕಾಗಿ ಬೇಟೆಗಾರರು ಮಾಡಿದ್ದ ಬಲಿಹೊಂಡವನ್ನು ಅವನು ಗಮನಿಸಲೇ ಇಲ್ಲ. ಮರದ ಕೊಂಬೆಗಳು ಮತ್ತು ಹುಲ್ಲಿನಿಂದ ಮುಚ್ಚಿದ್ದ ಆಳವಾದ ಹೊಂಡದೊಳಗೆ ಬಿದ್ದ ರಾಜ.

ಬೆದರಿ ಕಂಗಾಲಾದ ರಾಜ ಬೊಬ್ಬೆ ಹೊಡೆಯತೊಡಗಿದ, “ಸಹಾಯ ಮಾಡಿ, ಯಾರಾದರೂ ಸಹಾಯ ಮಾಡಿ." ರಾಜನ ಬೊಬ್ಬೆ ಕೇಳಿ, ಇಪ್ಪತ್ತು ಅಡಿ ಮುಂದಕ್ಕಿದ್ದ ಜಿಂಕೆ ತನ್ನ ಓಟ ನಿಲ್ಲಿಸಿ, ಹಿಂತಿರುಗಿ ನೋಡಿತು. ಅದು ಆ ಹೊಂಡದ ಹತ್ತಿರ ಬಂದು, ಒಳಕ್ಕೆ ಇಣುಕಿ ನೋಡಿತು. ಅದಕ್ಕೆ ರಾಜನ ಬಗ್ಗೆ ಕರುಣೆ ಮೂಡಿತು. ಅದು ಒಂದು ಬಿರುಸಾದ ಬಳ್ಳಿಯನ್ನು ಕತ್ತರಿಸಿ ತಂದಿತು. ಅದರ ಒಂದು ತುದಿಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದು, ಇನ್ನೊಂದು ತುದಿಯನ್ನು ಹೊಂಡದೊಳಗೆ ತಳ್ಳಿತು. ಅದನ್ನು ಕಂಡ ರಾಜ, ಬಳ್ಳಿಯನ್ನು ಬಲವಾಗಿ ಹಿಡಿದು, ಹೊಂಡದಿಂದ ಮೇಲೇರತೊಡಗಿದ.

ಅಂತೂ ಬಹಳ ಹೆಣಗಾಡಿ ರಾಜ ಹೊಂಡದಿಂದ ಹೊರಕ್ಕೆ ಬಂದ. ತನ್ನ ಪ್ರಾಣ ಉಳಿಸಿದ ಜಿಂಕೆಯನ್ನು ಕಣ್ತುಂಬ ನೋಡಿದ. ತಾನು ಅದನ್ನು ಕೊಲ್ಲಲೇ ಬೇಕೆಂದು ಅದರ ಬೆನ್ನಟ್ಟಿದ್ದು ನೆನಪಾಗಿ ಅವನಿಗೆ ನಾಚಿಕೆಯಾಯಿತು. ಅನಂತರ ಅವನು ಯಾವತ್ತೂ ಬೇಟೆಯಾಡಲಿಲ್ಲ.