643. ದಕ್ಷ ಆಡಳಿತಗಾರನ ಲಕ್ಷಣ

643. ದಕ್ಷ ಆಡಳಿತಗಾರನ ಲಕ್ಷಣ

      ರಾಜಕೀಯ ಕಾರಣಕ್ಕೋ, ಯಾವುದೋ ಕ್ಷುಲ್ಲಕ ಕಾರಣಕ್ಕೋ ದಕ್ಷ ಅಧಿಕಾರಿಯೊಬ್ಬನ ಅಕಾಲಿಕ ವರ್ಗಾವಣೆಯಾದರೆ ಜನರು ಪ್ರತಿಭಟಿಸುವುದುಂಟು. ಇದು ಎರಡು ಸಂಗತಿಗಳನ್ನು ಸೂಚಿಸುತ್ತವೆ- ಒಂದು, ದಕ್ಷ ಮತ್ತು ಜನಪರ ಅಧಿಕಾರಿಗಳನ್ನು ಜನರು ಇಷ್ಟಪಡುತ್ತಾರೆ ಮತ್ತು ಇನ್ನೊಂದು, ದಕ್ಷತೆ ಸ್ವಾರ್ಥಪರ ಹಿತಾಸಕ್ತಿಗಳಿಗೆ ಕಂಟಕವಾಗಿರುತ್ತದೆ. ಕಾನೂನು, ಕಾಯದೆಗಳನ್ನು ಎಲ್ಲಾ ಸಮಯಕ್ಕೂ, ಎಲ್ಲಾ ಸಂದರ್ಭಗಳಿಗೂ ಒಂದೇ ರೀತಿಯಲ್ಲಿ ಅನ್ವಯಿಸಬಾರದು ಮತ್ತು ಇವುಗಳನ್ನು ಜನರ ಹಿತಕ್ಕೆ ಅನುಕೂಲವಾಗುವಂತೆ ಹೇಗೆ ಬಳಸಬಹುದು ಎಂದು ದಕ್ಷ ಆಡಳಿತಗಾರ ಅರಿತಿರುತ್ತಾನೆ. ಇದೇ ಅವನ ಯಶಸ್ಸಿನ ಮೂಲಮಂತ್ರ.  ಇಂದಿನ ವ್ಯವಸ್ಥೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದನ್ನೂ ಮೀರಿ ನಿಲ್ಲಬಲ್ಲ ಅಧಿಕಾರಿಯನ್ನು ಮಹಾನ್ ಎನ್ನಲೇಬೇಕಾಗುತ್ತದೆ. ಒಬ್ಬ ಅಧಿಕಾರಿ ದಕ್ಷ ಎನಿಸಿಕೊಳ್ಳಬೇಕಾದರೆ ಏನೆಲ್ಲಾ ಗುಣಗಳು ಇರಬೇಕು ಎಂಬ ಬಗ್ಗೆ ನೋಡೋಣ.

೧. ತಾಂತ್ರಿಕ ನೈಪುಣ್ಯ:

     ಇಂದಿನ ಕಂಪ್ಯೂಟರ್ ಜಗತ್ತಿನಲ್ಲಿ ಅತ್ಯಾಧುನಿಕ ಸಂಪರ್ಕ ಮತ್ತು ಸಂವಹನ ಸಾಧನಗಳಲ್ಲಿ ಅವನು ನೈಪುಣ್ಯತೆ ಹೊಂದಿರಬೇಕಾಗುತ್ತದೆ. ಅಧೀನ ಸಿಬ್ಬಂದಿಯ ಕಾರ್ಯಕ್ಷಮತೆ, ಚಲನವಲನಗಳ ಮೇಲೆ ಗಮನ, ಕಡತಗಳ ಶೀಘ್ರ ವಿಲೇವಾರಿ, ಚರ್ಚೆ ಹಾಗೂ ಅಗತ್ಯ ಸಲಹೆ, ಸೂಚನೆಗಳನ್ನು ನೀಡುವುದು, ಸಾರ್ವಜನಿಕರೊಡನೆ ಸಂಪರ್ಕ, ಇತ್ಯಾದಿಗಳ ವಿಚಾರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಸಮರ್ಥವಾಗಿ ಮಾಡಿಕೊಳ್ಳುವವನಾಗಿರಬೇಕು. ಮೇಲಾಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ, ವರದಿ ನೀಡಿಕೆ, ಇತ್ಯಾದಿಗಳ ಸಲುವಾಗಿ ಸಹ ಇದನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳಬೇಕು.

೨. ಸ್ಥಳೀಯ ಸಮಸ್ಯೆಗಳ ಅರಿವು:

     ಒಂದೊಂದು ಪ್ರದೇಶಕ್ಕೂ ತನ್ನದೇ ಆದ ಗುಣ-ಲಕ್ಷಣಗಳು, ರೀತಿ-ನೀತಿಗಳು, ಸಮಸ್ಯೆಗಳು ಇರುತ್ತವೆ. ಅವುಗಳ ಕುರಿತು ಅಧ್ಯಯನ ಮತ್ತು ಮಾಹಿತಿಗಳನ್ನು ಹೊಂದಿರಬೇಕು. ಸಮಸ್ಯೆಗಳ ಪರಿಹಾರಕ್ಕೆ ಏನು ಮಾಡಬಹುದೆಂಬ ಬಗ್ಗೆಯೂ ಚಿಂತಿಸಬೇಕು ಮತ್ತು ಪರಿಹಾರಕ್ಕೆ ತೊಡಗಬೇಕು.

೩. ಸಂಘಟನಾ ಚತುರತೆ:

     ಅಧೀನ ಅಧಿಕಾರಿಗಳು, ಸಿಬ್ಬಂದಿಗಳನ್ನು ಒಂದು ತಂಡದಂತೆ ಮುನ್ನಡೆಸಬಲ್ಲ ಚಾಕಚಕ್ಯತೆ ಹೊಂದಿರಬೇಕು. ಮುಂಚೂಣಿಯಲ್ಲಿ ತಾನೇ ಇದ್ದು ಅಗತ್ಯದ ನಿರ್ದೇಶನ ನೀಡುತ್ತಾ ಸಿಬ್ಬಂದಿಯಿಂದ ಕೆಲಸ ಮಾಡಿಸುವವನಾಗಿರಬೇಕು. ಯಾವುದೇ ಕೆಲಸ ಸಣ್ಣದಲ್ಲವೆಂಬ ಅರಿವಿರಬೇಕು. ಸಣ್ಣ ಸಂಗತಿಗಳಿಗೂ ಗಮನ ಕೊಡಬೇಕು. ಹುರಿದುಂಬಿಸುವ, ಸಂದರ್ಭಗಳಲ್ಲಿ ಶಿಕ್ಷಿಸುವ ಮನೋಭಾವವಿರಬೇಕು. ತಂಡದಲ್ಲಿ ಸಮನ್ವಯತೆ ಇರುವಂತೆ ನೋಡಿಕೊಂಡು ದುರ್ಬಲ ಕೊಂಡಿಗಳನ್ನು ಬಲಗೊಳಿಸಬಲ್ಲವನಾಗಿರಬೇಕು. ಎಲ್ಲರೊಡನೆ ಸ್ನೇಹಿತನಂತೆ ವರ್ತಿಸಬೇಕು.

೪. ಸಮಯಪಾಲನೆ:

     ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಮುಗಿಸುವಂತೆ ನೋಡಿಕೊಳ್ಳುವವನಾಗಿರಬೇಕು. ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವಂತೆ ಮತ್ತು ಕೆಲಸಗಳಲ್ಲಿ ತೊಡಗಿರುವಂತೆ ಸೂಕ್ತ ವ್ಯವಸ್ಥೆ ರೂಪಿಸಬೇಕು. ತಪ್ಪು ಮಾಡಿದರೆ ದಂಡ ತಪ್ಪಿದ್ದಲ್ಲ ಎಂದು ಸಿಬ್ಬಂದಿ ಅರಿಯುವಂತೆ ಮಾಡಬೇಕು.

೫. ದೂರದೃಷ್ಟಿ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಚಾಕಚಕ್ಯತೆ:

     ಮುಂದಿನ ಆಗು-ಹೋಗುಗಳನ್ನು ಗಮನಿಸುತ್ತಿದ್ದು ಸಂಭಾವ್ಯ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಯೋಜಿಸಿದ್ದರೆ ಸಮಸ್ಯೆಗಳ ಪರಿಹಾರ ಅರ್ಧಕ್ಕರ್ಧ ಆದಂತೆಯೇ ಸರಿ. ಕೆಲವೊಮ್ಮೆ ಅನಿರೀಕ್ಷಿತವಾಗಿ ಹಲವು ಸಮಸ್ಯೆಗಳು ಒಟ್ಟೊಟ್ಟಿಗೇ ಬಂದುಬಿಡಬಹುದು. ಆಗ ಸಮಚಿತ್ತದಿಂದ ಧೃಢತೆ ಕಾಯ್ದುಕೊಂಡು ವರ್ತಿಸಿದರೆ ಸಿಬ್ಬಂದಿ ಮತ್ತು ಜನರು ಸಹಾಯಕ್ಕೆ ನಿಲ್ಲುತ್ತಾರೆ. ಸಮಸ್ಯೆಗಳು ಎದುರಾದಾಗ ತಪ್ಪಿಸಿಕೊಂಡು ದೂರವಿರುವ ಪ್ರಯತ್ನ ಮಾಡದೆ ಸಮಸ್ಯೆಯ ಎದುರಿಗೇ ನಿಲ್ಲುವ ಮನೋಭಾವವಿರಬೇಕು. ದೂರ ಹೋದಷ್ಟೂ ಸಮಸ್ಯೆಗಳು ಭೂತಾಕಾರವಾಗಿ ಬೆಳೆದು ಬೆದರಿಸುತ್ತವೆ. ಹತ್ತಿರವಿದ್ದರೆ ಸಮಸ್ಯೆಗಳು ಸಣ್ಣದಾಗುತ್ತಾ ಹೋಗುತ್ತವೆ. ಸ್ವಂತದ ಅನುಭವವನ್ನು ಹಂಚಿಕೊಳ್ಳಬೇಕೆನಿಸುತ್ತಿದೆ. ಒಂದು ದಿನ ಒಬ್ಬ ರೌಡಿಯನ್ನು ಬೈಕಿನಲ್ಲಿ ಹೋಗುತ್ತಿದ್ದಾಗ ಅಡಗಟ್ಟಿ ಕೊಚ್ಚಿ ಕೊಲೆ ಮಾಡಿದ್ದರು. ಸರ್ಕಾರಿ ಭೂಮಿ ಒತ್ತುವರಿ ವಿಚಾರದಲ್ಲಿ ಎರಡು ಗುಂಪುಗಳ ನಡುವಣ ವೈಷಮ್ಯ ಕೊಲೆಗೆ ಕಾರಣವಾಗಿತ್ತು. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಇತ್ತು. ಶಂಕಿತ ಒಬ್ಬಿಬ್ಬರ ಬಂಧನವಾಗಿತ್ತು. ಪೋಲಿಸರು ಎರಡು ಗುಂಪುಗಳ ವಿರುದ್ಧ ಸೆ. ೧೦೭ರಂತೆ ಮೊಕದ್ದಮೆಯನ್ನು ನನ್ನ ನ್ಯಾಯಾಲಯದಲ್ಲಿ ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದರು. ಸ್ಥಳೀಯ ಗ್ರಾಮಲೆಕ್ಕಿಗರನ್ನು ಕರೆಸಿ ಮಾಹಿತಿ ಸಂಗ್ರಹಿಸಿದೆ. ಅಂದು ಸಂಜೆ ೬ ಗಂಟೆಯ ವೇಳೆಗೆ ರೆವಿನ್ಯೂ ಇನ್ಸ್‌ಪೆಕ್ಟರರನ್ನು ಕರೆದುಕೊಂಡು ಗ್ರಾಮಕ್ಕೆ ಹೊರಟೆ. ರೆವಿನ್ಯೂ ಇನ್ಸ್‌ಪೆಕ್ಟರ್, ಸಾಯಂಕಾಲದ ವೇಳೆಯಲ್ಲಿ ಹೆಚ್ಚಿನವರು ಕುಡಿದ ಮತ್ತಿನಲ್ಲಿದ್ದು ಸಾಮಾನ್ಯವಾಗಿ ಯಾವ ಅಧಿಕಾರಿಗಳೂ ಅಲ್ಲಿಗೆ ಆ ಸಮಯದಲ್ಲಿ ಹೋಗುವುದಿಲ್ಲ, ಹೋಗುವುದೇ ಆದರೆ ಪೋಲಿಸರನ್ನೂ ಕರೆದುಕೊಂಡು ಹೋಗೋಣ ಎಂದು ಅಳುಕುತ್ತಾ ಹೇಳಿದ್ದ. ನಾನು ಧೈರ್ಯ ಹೇಳಿ ಗ್ರಾಮಕ್ಕೆ ಹೊರಟೆ. ನನ್ನನ್ನು ಆ ಸಮಯದಲ್ಲಿ ನಿರೀಕ್ಷಿಸಿರದಿದ್ದ ಗ್ರಾಮಸ್ಥರು ಮನೆಯೊಳಗೆ ಸೇರಿಕೊಂಡರು. ಯಾರೂ ಹೊರಬರಲಿಲ್ಲ. ಅಲ್ಲಿನ ದೇವಸ್ಥಾನದ ಜಗಲಿಯ ಮೇಲೆ ಕುಳಿತು ಇದ್ದ ಒಬ್ಬಿಬ್ಬರ ಜೊತೆ ಕುಶಲೋಪರಿ ಮಾತನಾಡುತ್ತಿದ್ದೆ. ಇಣಿಕಿ ನೋಡುತ್ತಿದ್ದ ಜನರು ಕ್ರಮೇಣ ಒಬ್ಬೊಬ್ಬರಾಗಿ ಬರತೊಡಗಿದರು. ಹೆಚ್ಚಿನವರಿಗೆ ನಾನು ಏನು ಮಾಡುತ್ತೇನೆಂದು ತಿಳಿದುಕೊಳ್ಳುವ ಕುತೂಹಲವಿತ್ತು. ಅವರೊಡನೆ ಮಳೆ, ಬೆಳೆ ಇತ್ಯಾದಿಗಳ ಬಗ್ಗೆ ಮಾತನಾಡುತ್ತ ಸ್ವಲ್ಪ ಸಮಯ ಕಳೆಯಿತು. ಬಂದಿದ್ದವರಲ್ಲಿ ಎರಡು ಗುಂಪಿಗೂ ಸೇರಿದ ಕೆಲವರು ಇದ್ದುದು ಅವರುಗಳು ಪ್ರತ್ಯೇಕ ಗುಂಪುಗಳಲ್ಲಿ ಇದ್ದುದರಿಂದ ಗೊತ್ತಾಯಿತು. ಎಲ್ಲರನ್ನೂ ಕುಳಿತುಕೊಳ್ಳಲು ಹೇಳಿ ನೇರ ವಿಷಯಕ್ಕೆ ಬಂದೆ. ನನಗೆ ಎಲ್ಲಾ ಗೊತ್ತಾಗಿದೆ. ಅಪರಾಧ ನಡೆಯುವ ಮುನ್ನ ತಡೆಯುವ ಹೊಣೆಗಾರಿಕೆ ನನ್ನದಿದೆ. ಅಪರಾಧ ನಡೆದುಹೋದರೆ ಪೋಲಿಸು, ಕೋರ್ಟು ನೋಡಿಕೊಳ್ಳುತ್ತದೆ. ನಿಮ್ಮಲ್ಲಿ ಯಾರು ಯಾರು ಜಗಳಕ್ಕೆ ಕುಮ್ಮಕ್ಕು ಕೊಡುತ್ತಿದ್ದೀರಿ ನನಗೆ ಗೊತ್ತು. ನಿಮ್ಮಲ್ಲಿ ಎರಡು ಗುಂಪನ್ನೂ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಲು ನನ್ನ ಮುಂದೆ ಸೆ. ೧೦೭ ಕೇಸ್ ಬಂದಿದೆ. ಮುಚ್ಚಳಿಕೆ ಬರೆದುಕೊಡಬೇಕು, ಇಲ್ಲಾ ಜೈಲಿಗೆ ಹೋಗಬೇಕು.  ನೀವೇ ನಿರ್ಧರಿಸಿ ನಾಳೆ ತಿಳಿಸಿ. ಒಮ್ಮೆ ಪಟ್ಟಿಗೆ ಸೇರಿದರೆ ಮುಂದೆ ಯಾವ ಜಗಳ ಆದರೂ ನೀವು ಒಳಗೆ ಹೋಗಬೇಕಾಗುತ್ತದೆ. ನಾನು ಯಾರ ಮುಲಾಜೂ ಇಟ್ಟುಕೊಳ್ಳುವುದಿಲ್ಲ. ಸಂದರ್ಭ ಬಂದರೆ ನನ್ನಷ್ಟು ಕೆಟ್ಟವನು ಯಾರೂ ಇರುವುದಿಲ್ಲ ಎಂದು ಗಂಭೀರವಾಗಿ ಧೃಢವಾಗಿ ಹೇಳಿದಾಗ ಯಾರೂ ತುಟಿಪಿಟಕ್ಕೆಂದಿರಲಿಲ್ಲ. ನನಗೆ ಮೌನ ಸಮ್ಮತಿ ಸಿಕ್ಕಿತ್ತು. ನಾನು ಕೇಸ್ ಮುಂದುವರೆಸದೆ ಮುಕ್ತಾಯಗೊಳಿಸಿದೆ. ನಡೆಸಿದ್ದರೆ ಕಹಿ ವಾತಾವರಣ ಮುಂದುವರೆಯುತ್ತಿತ್ತು. ನಂತರದಲ್ಲಿ ನಿರೀಕ್ಷಿಸಿದ್ದಂತೆ ಸಂಘರ್ಷ ನಡೆಯಲಿಲ್ಲ. ಬಹುಷಃ ಮುನ್ನೆಚ್ಚರಿಕೆ ಕೊಡದೆ ಇದ್ದಿದ್ದರೆ ದೊಡ್ಡ ಹೊಡೆದಾಟವೇ ಆಗುತ್ತಿತ್ತು.

೬. ತುರ್ತು ಮಾಹಿತಿ ಪಡೆಯುವ ವ್ಯವಸ್ಥೆ:

     ಕಾರ್ಯವ್ಯಾಪ್ತಿಯಲ್ಲಿ ಏನೇ ವಿಶೇಷ ಜರುಗಿದರೂ, ಜರುಗುವ ಸಂಭವವಿದ್ದರೂ ಕೂಡಲೇ ಅಧೀನ ಸಿಬ್ಬಂದಿ ದೂರವಾಣಿ ಮೂಲಕ ಮಾಹಿತಿ ಕೊಡುವಂತೆ ನೆಟ್ ವರ್ಕ್ ಇಟ್ಟುಕೊಂಡರೆ ಅದನ್ನು ಆಧರಿಸಿ ಕ್ರಮ ಅನುಸರಿಸುವುದು ಸುಲಭವಾಗುತ್ತದೆ. ನನ್ನ ಅನುಭವದಲ್ಲಿ ಹೇಳಬೇಕೆಂದರೆ ಅಧೀನ ಸಿಬ್ಬಂದಿಯಲ್ಲದೆ ಗ್ರಾಮಗಳ ಕೆಲವು ಜನರಿಗೂ ಸಹ ಈ ಬಗ್ಗೆ ತಿಳುವಳಿಕೆ ನೀಡಿ ಮಾಹಿತಿ ಪಡೆಯುವ ವ್ಯವಸ್ಥೆ ಪರಿಣಾಮಕಾರಿಯಾಗಿರುತ್ತದೆ. ನಿವೃತ್ತನಾದ ನಂತರದಲ್ಲೂ ಎರಡು ವರ್ಷಗಳವರೆಗೂ ಕೆಲವರಿಂದ ನನಗೆ ದೂರವಾಣಿ ಕರೆಗಳು ಬರುತ್ತಿದ್ದವು. ಅವು ಹೀಗಿರುತ್ತಿದ್ದವು, ಸಾರ್, ಸಿಡಿಲು ಹೊಡೆದು ರಾಮಯ್ಯನ ಎಮ್ಮೆ ಸತ್ತು ಹೋಯಿತು, ನಾಳೆ ಗ್ರಾಮದೇವತೆ ಪೂಜೆ ಇದೆ. ಮೊದಲ ಪೂಜೆ ಮಾಡುವ ಬಗ್ಗೆ ಜಗಳ ಆಗ್ತಾ ಇದೆ. ಹೊಡೆದಾಟ ಆಗಬಹುದು ಸಾರ್. ನನಗೆ ಹೆಮ್ಮೆ ಅನಿಸುತ್ತಿತ್ತು. ಅವರುಗಳಿಗೆ ಧನ್ಯವಾದ ಹೇಳಿ ಹೊಸ ತಹಸೀಲ್ದಾರರಿಗೆ ಫೋನು ಮಾಡಲು ಹೇಳುತ್ತಿದ್ದೆ.

೭. ಉತ್ತಮ ಸಂಪರ್ಕ ಮತ್ತು ಸಮನ್ವಯ:

     ಮೇಲಾಧಿಕಾರಿಗಳು, ಅಧೀನ ಸಿಬ್ಬಂದಿ, ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು, ಇತರ ಇಲಾಖೆಗಳ ಅಧಿಕಾರಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರೊಡನೆ ಉತ್ತಮ ರೀತಿಯ ಸಂಬಂಧಗಳನ್ನು ಹೊಂದಿರುವವನು ಉತ್ತಮ ಆಡಳಿತಗಾರನೆನಿಸುತ್ತಾನೆ. ಪೂರ್ವ ತಯಾರಿ ಮತ್ತು ಅಭ್ಯಾಸಗಳಿದ್ದರೆ ಮಾತ್ರ ಈ ಗುಣ ಬೆಳೆಸಿಕೊಳ್ಳಲು ಸಾಧ್ಯ.

     ಸಾರರೂಪವಾಗಿ ಹೇಳಬೇಕೆಂದರೆ ಒಬ್ಬ ದಕ್ಷ ಅಧಿಕಾರಿಗೆ ಕಾರ್ಯಗಳ ಅರಿವಿರಬೇಕು, ಕಾನೂನು-ಕಟ್ಟಳೆಗಳು, ಸ್ಥಳೀಯ ಸಂಪ್ರದಾಯಗಳ ಬಗ್ಗೆ ತಿಳಿದಿರಬೇಕು, ಧೃಢತೆ ಇರಬೇಕು, ಸಾಧಿಸುವ ವಿಶ್ವಾಸ ಇರಬೇಕು, ಸಂಘಟನಾ ಚಾತುರ್ಯವಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕನಾಗಿ ಪಕ್ಷಾತೀತನಾಗಿರುವುದಲ್ಲದೆ ಜೊತೆಗೆ, ಯಾರ ಪಕ್ಷಪಾತಿಯೂ ಅಲ್ಲ ಎಂಬುದನ್ನು ತೋರಿಸಿಕೊಳ್ಳಬೇಕು. ಪರಸ್ಪರ ರಾಜಕೀಯ ವಿರೋಧಿಗಳನ್ನು ಹೊಂದಾಣಿಸಿಕೊಂಡು, ಸಂಭಾಳಿಸಿಕೊಂಡು ಹೋಗುವ ಎರಡು ಅಲಗಿನ ಕತ್ತಿಯ ಮೇಲಣ ಜಾಗೃತ ನಡಿಗೆ ಮಾಡುವುದನ್ನು ಕಲಿಯಲೇಬೇಕು. ಕಷ್ಟ, ಆದರೆ ಅಸಾಧ್ಯವೇನಲ್ಲ. ದೇವರು ಎಲ್ಲರಿಗೂ ಅಧಿಕಾರ ಕೊಡುವುದಿಲ್ಲ. ಸಿಕ್ಕ ಅಧಿಕಾರವನ್ನು ಜನಪರವಾಗಿ ಬಳಸುವ ಮನೋಭಾವ ಅಧಿಕಾರಿಗಳಿಗೆ ಬರಬೇಕು. ಜನಪರವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಗುರುತಿಸಿ ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸುವ ಕೆಲಸ ಆಗಬೇಕು. ಭ್ರಷ್ಠರನ್ನು ಸಲಹುವ ರಾಜಕೀಯ ನಾಯಕರುಗಳಿಗೆ ಪಾಠ ಕಲಿಸಿದರೆ ಬದಲಾವಣೆ ಆಗುತ್ತದೆ, ಆಗಬೇಕು!

--ಕ.ವೆಂ.ನಾಗರಾಜ್.