76. ಪರರ ಉಡುಪು ಒದ್ದೆಯಾದಾಗ ಸಹಾಯ ಮಾಡೋಣ

ಬಾಲಕಿ ಸುಮತಿ ಶಾಲೆಗೆ ಬರುತ್ತಿದ್ದಾಗ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಳು. ಅವಳ ಶಾಲಾ ಸಮವಸ್ತ್ರ ಒದ್ದೆಯಾಯಿತು. ಅವಳು ಓಡೋಡಿ ಶಾಲೆ ತಲಪಿದಳು. "ದೇವರೇ, ನನಗೆ ಸಹಾಯ ಮಾಡು" ಎಂದು ಪ್ರಾರ್ಥಿಸಿದಳು. ಶಾಲಾ ಟೀಚರ್ ತನ್ನತ್ತ ಬರೋದನ್ನು ನೋಡಿ ಅವಳಿಗೆ ಆತಂಕವಾಯಿತು.
ಆಗ ಅವಳ ಗೆಳತಿ ಸೌಗಂಧಿಕಾ ಅಲ್ಲಿಗೆ ಬಂದಳು. ಅವಳ ಕೈಯಲ್ಲಿದ್ದ ಗಾಜಿನ ಪಾತ್ರೆಯಲ್ಲಿ ಬಣ್ಣದ ಮೀನಿತ್ತು. ಸುಮತಿಯ ಪರಿಸ್ಥಿತಿ ನೋಡಿದ ಸೌಗಂಧಿಕಾ ಎಡವಿದಳು; ಆ ಗಾಜಿನ ಪಾತ್ರೆಯ ನೀರೆಲ್ಲ ಸುಮತಿಯ ಉಡುಪಿನ ಮೇಲೆ ಬಿತ್ತು. ಆಗ ಇವರ ಹತ್ತಿರ ಬಂದ ಶಾಲಾ ಟೀಚರ್ ಏನಾಯಿತೆಂದು ಕೇಳಿದರು. ಅನಂತರ, ಸುಮತಿಯನ್ನು ಕರೆದೊಯ್ದು ಅವಳಿಗೆ ಕವಾಯತಿನ ಸಮವಸ್ತ್ರ ಕೊಟ್ಟರು. ಅದನ್ನು ತೊಟ್ಟು, ಒದ್ದೆಯಾದ ಅವಳ ಶಾಲಾ ಸಮವಸ್ತ್ರವನ್ನು ಒಣಗಿಸಲು ಹೇಳಿದರು.
ಅವತ್ತು ಸಂಜೆ, ಮನೆಗೆ ಹಿಂತಿರುಗಲಿಕ್ಕಾಗಿ ಶಾಲಾ ಬಸ್ಸಿಗೆ ಕಾಯುತ್ತಿದ್ದಾಗ, ಸೌಗಂಧಿಕಾಳ ಬಳಿಗೆ ಸುಮತಿ ಬಂದಳು. “ನೀನು ನನ್ನ ಮೇಲೆ ಗಾಜಿನ ಪಾತ್ರೆಯ ನೀರನ್ನು ಬೇಕೆಂದೇ ಚೆಲ್ಲಿದೆ, ಅಲ್ಲವೇ?” ಎಂದು ಕೇಳಿದಳು. ಸೌಗಂಧಿಕಾ ಹೌದೆಂದಳು. ನಂತರ ಅವಳು ತನ್ನ ವರ್ತನೆಗೆ ಕಾರಣವೇನೆಂದು ವಿವರಿಸಿದಳು: "ನಾನು ನಿನ್ನ ಹಾಗೆ ಒಮ್ಮೆ ಶಾಲಾ ಸಮವಸ್ತ್ರ ಒದ್ದೆ ಮಾಡಿಕೊಂಡಿದ್ದೆ. ಆ ದಿನ ನನ್ನ ಅಮ್ಮ ನನಗೊಂದು ನೀತಿ ಹೇಳಿದರು. ನಮಗಾದ ತೊಂದರೆಯನ್ನು ನಾವು ನೆನಪಿಟ್ಟುಕೊಳ್ಳಬೇಕು. ಬೇರೆ ಯಾರಿಗಾದರೂ ಅಂತಹ ತೊಂದರೆ ಆದಾಗ ಅವರಿಗೆ ಗೇಲಿ ಮಾಡಬಾರದು. ಬದಲಾಗಿ ಅವರಿಗೆ ಸಹಾಯ ಮಾಡಬೇಕು.”