82. ಮುಂಗುಸಿಯನ್ನು ರಕ್ಷಿಸಿದ ಇಲಿಯ ಧೈರ್ಯ

82. ಮುಂಗುಸಿಯನ್ನು ರಕ್ಷಿಸಿದ ಇಲಿಯ ಧೈರ್ಯ

ಕಾಡಿನಲ್ಲಿ ನಾಲ್ಕು ಪ್ರಾಣಿಗಳು ಗೆಳೆಯರಾಗಿ ವಾಸ ಮಾಡುತ್ತಿದ್ದವು: ಒಂದು ಆಮೆ, ಒಂದು ಮೊಲ, ಒಂದು ಇಲಿ ಮತ್ತು ಒಂದು ಮುಂಗುಸಿ. ಇಲಿಯ ಹೊರತಾಗಿ ಉಳಿದ ಮೂರು ಪ್ರಾಣಿಗಳಿಗೆ ನೀರಿನಲ್ಲಿ ಈಜುವುದೆಂದರೆ ಪಂಚಪ್ರಾಣ. ಆ ಮೂರು ಪ್ರಾಣಿಗಳು “ಈಜಲಿಕ್ಕೆ ನೀನೂ ಬಾ" ಎಂದು ಇಲಿಯನ್ನು ಒತ್ತಾಯಿಸಿದಾಗ ಇಲಿ ಹೀಗೆನ್ನುತ್ತಿತ್ತು, “ನನಗೆ ಈಜಲು ಗೊತ್ತಿದೆ. ಆದರೆ ನೀರೆಂದರೆ ನನಗೆ ಭಯ."

ಅದೊಂದು ದಿನ ಇಲಿ ಮತ್ತು ಮುಂಗುಸಿ ಒಂದು ಕೆರೆಯ ಹತ್ತಿರ ಆಟವಾಡುತ್ತಿದ್ದವು. ಆಮೆ ಮತ್ತು ಮೊಲ ಆಹಾರ ಹುಡುಕಿಕೊಂಡು ಕಾಡಿನೊಳಕ್ಕೆ ಹೋಗಿದ್ದವು. ಆಗ ಅಚಾನಕ್ ಮುಂಗುಸಿ ನೀರಿಗೆ ಬಿತ್ತು. ಅದು ಈಜಿ ಸುಲಭವಾಗಿ ನೀರಿನಿಂದ ಹೊರ ಬರಬಹುದಿತ್ತು. ಆದರೆ ಅದರ ಕಾಲು ನೀರಿನೊಳಗೆ ಒಂದು ಬಳ್ಳಿಯಲ್ಲಿ ಸಿಕ್ಕಿಕೊಂಡಿತ್ತು. ಹಾಗಾಗಿ ಅದಕ್ಕೆ ಕಾಲುಗಳನ್ನು ಆಡಿಸಲು ಆಗಲೇ ಇಲ್ಲ.

“ಸಹಾಯ ಮಾಡು" ಎಂದು ಮುಂಗುಸಿ ಇಲಿಯನ್ನು ನೋಡುತ್ತಾ ಕಿರುಚಿತು. ಬಳ್ಳಿಯಲ್ಲಿ ಸಿಕ್ಕಿಬಿದ್ದ ಮುಂಗುಸಿ ನೀರಿನಲ್ಲಿ ಮುಳುಗುತ್ತಿತ್ತು. ಮುಂಗುಸಿಯ ಪ್ರಾಣಕ್ಕೆ ಅಪಾಯವಿದೆ ಎಂದು ತಿಳಿದುಕೊಂಡ ಇಲಿ, ತನ್ನ ಭಯ ಬಿಟ್ಟು, ನೀರಿಗೆ ಹಾರಿತು. ಇಲಿ ನೀರಿನೊಳಗೆ ಮುಳುಗಿ, ಮುಂಗುಸಿಯ ಕಾಲಿಗೆ ತೊಡರಿಕೊಂಡಿದ್ದ ಬಳ್ಳಿಯನ್ನು ಕತ್ತರಿಸಿತು. ತನ್ನ ಸಮಯಪ್ರಜ್ನೆಯಿಂದ ಮುಂಗುಸಿಯನ್ನು ಇಲಿ ರಕ್ಷಿಸಿತು. ಅನಂತರ ಇಲಿ ಮತ್ತು ಮುಂಗುಸಿ ಈಜಿಕೊಂಡು ಕೆರೆಯ ದಡ ಸೇರಿದವು.