86. ಒಂದೇ ಆದಾಯ ಮೂಲ ನಂಬಿ ಕೂರಬಾರದು

86. ಒಂದೇ ಆದಾಯ ಮೂಲ ನಂಬಿ ಕೂರಬಾರದು

ಒಂದು ಹಳ್ಳಿಯಲ್ಲಿ ಒಬ್ಬ ಸೋಮಾರಿ ಮನುಷ್ಯನಿದ್ದ. ಅವನ ಮನೆಯ ಹಿಂಬದಿಯಲ್ಲಿದ್ದ ಮಾವಿನ ಮರವೇ ಅವನ ಏಕೈಕ ಆದಾಯ ಮೂಲ. ಅದರ ಕಾಯಿಗಳನ್ನೂ ಹಣ್ಣುಗಳನ್ನು ಮಾರಾಟ ಮಾಡಿ, ಬಂದ ಆದಾಯದಿಂದಲೇ ಅವನು ಬದುಕುತ್ತಿದ್ದ. ಅವನ ಮನೆಗೆ ಬರುವ ಅತಿಥಿಗಳಿಗಂತೂ ಸಾಕೋ ಸಾಕಾಗುತ್ತಿತ್ತು. ಯಾಕೆಂದರೆ ಅವರಿಗೆ ದಿನದ ಮೂರು ಹೊತ್ತೂ ಅವನಿಂದ ಮಾವಿನ ಹಣ್ಣಿನ ಉಪಚಾರ!

ಹಾಗೆ ಬಂದಿದ್ದ ಅವನ ಬಂಧುವೊಬ್ಬ ಆ ಸೋಮಾರಿಯನ್ನು ಎಚ್ಚರಿಸಿದ, “ನೋಡು, ನಿನ್ನ ಮಾವಿನ ಮರ ಒಳ್ಳೆಯ ಫಸಲು ಕೊಡುತ್ತಿದೆ ಎಂಬುದೇನೋ ನಿಜ. ಆದರೆ ಇದೊಂದೇ ಆದಾಯ ಮೂಲವನ್ನು ನೀನು ನಂಬಿ ಕೂತರೆ ಅಪಾಯ ಖಂಡಿತ. ನಿನ್ನ ಮೇಲಿನ ಹೊಟ್ಟೆಕಿಚ್ಚಿನಿಂದ ಅಥವಾ ನಿನಗೆ ತೊಂದರೆ ಮಾಡಲಿಕ್ಕಾಗಿ ಯಾರಾದರೂ ಆ ಮಾವಿನ ಮರವನ್ನು ಕಡಿದರೆ, ಜೀವನಕ್ಕಾಗಿ ನೀನೇನು ಮಾಡುತ್ತಿ? ನೀನು ಈಗಿನಿಂದಲೇ ಬೇರೆ ಆದಾಯ ಮೂಲಗಳನ್ನೂ ಮಾಡಿಕೊಳ್ಳುವುದು ಒಳ್ಳೆಯದು.”

ಆ ಬಂಧು ಹೊರಟು ಹೋದ ಬಳಿಕ ಸೋಮಾರಿ ಮನುಷ್ಯ ಅವನ ಮಾತುಗಳ ಬಗ್ಗೆ ಗಂಭೀರವಾಗಿ ಯೋಚಿಸಿದ. ಆತನು ಹೇಳಿದ್ದು ಸರಿಯೆಂದು ಸೋಮಾರಿಗೆ ಅರ್ಥವಾಯಿತು. ಅನಂತರ ಅವನು ಇತರ ಕೆಲಸಗಳನ್ನು ಮಾಡತೊಡಗಿದ. ಇದರಿಂದಾಗಿ ಹೆಚ್ಚಿನ ಆದಾಯ ಗಳಿಸಲು ಅವನಿಗೆ ಸಾಧ್ಯವಾಯಿತು. ಕೆಲವು ವರುಷಗಳ ನಂತರ ಆ ಬಂಧು ಪುನಃ ಸೋಮಾರಿಯ ಮನೆಗೆ ಭೇಟಿಯಿತ್ತ. ತನಗಿತ್ತ ಸಲಹೆಗಾಗಿ ಆ ಬಂಧುವಿಗೆ ಸೋಮಾರಿ ಕೃತಜ್ನತೆ ಸಲ್ಲಿಸಿದ.