ಅಗಲಿಕೆ
ತೊಟ್ಟ ಬಳೆಗಳು
ಕೈಯ ತೊರೆದವು
ನಿಲ್ಲದೇ ಸುರಿದವು
ಕಣ್ಣ ಹನಿಗಳು
ಒಂದು ಚಣದಲ್ಲೇ
ದೂರವಾಯ್ತು ಧೈರ್ಯ
ಮನಸೆಲ್ಲೆಲ್ಲೋ ಓಡಿತು
ಬಿಟ್ಟು ನನ್ನನೊಂಟಿ ;
ಕಲ್ಲುಮನಸಿನ ನಲ್ಲ
ನನ್ನ ತೊರೆದಿರಲು
ಜೊತೆಯಲೇ ಇವರೆಲ್ಲ
ಹೊರಟರಲ್ಲ!
ಹೇ ಜೀವ!
ಹೋಗುವುದಾದರೆ
ನೀನೂ ಹೋಗು!
ನೀನೇಕುಳಿದೆ
ಗೆಳೆಯರ ಗುಂಪನು
ಸೇರದೇನೇ?
ಸಂಸ್ಕೃತ ಮೂಲ: ಅಮರುಕನ ಅಮರು ಶತಕದಿಂದ (ಪದ್ಯ 31/35) :
ಪ್ರಸ್ಥಾನಂ ವಲಯೈಃ ಕೃತಂ ಪ್ರಿಯಸಖೈರಸ್ರೈರಜಸ್ರಂ ಗತಂ
ಧೃತ್ಯಾ ನ ಕ್ಷಣಮಾಸಿತಂ ವ್ಯವಸಿತಂ ಚಿತ್ತೇನ ಗಂತುಂ ಪುರಃ
ಗಂತುಂ ನಿಶ್ಚಿತಚೇತಸಿ ಪ್ರಿಯತಮೇ ಸರ್ವೇ ಸಮಂ ಪ್ರಸ್ಥಿತಾ
ಗಂತವ್ಯೇ ಸತಿ ಜೀವಿತಪ್ರಿಯ ಸುಹೃತ್ಸಾರ್ಥಃ ಕಿಮುತ್ಯಜ್ಯತೇ ॥
प्रस्थानं वलयैः कृतं प्रियसखैरस्रैरजस्रं गतं
धृत्या न क्षणमासितं व्यवसितं चित्तेन गन्तुं पुरः ।
गन्तुं निश्चितचेतसि प्रियतमे सर्वे समं प्रस्थिता
गन्तव्ये सति जीवितप्रियसुहृत्सार्थः किमु त्यज्यते ॥३१॥ (३५)
-ಹಂಸಾನಂದಿ
ಚಿತ್ರಕೃಪೆ: ವಿಕಿಪೀಡಿಯಾ. ರಾಜಾ ರವಿವರ್ಮನ "ವನವಾಸದಲ್ಲಿ ದಮಯಂತಿ" ಅನ್ನುವ ಓಲಿಯೋಗ್ರಾಫ್
ಕೊ: ಈ ಚಿತ್ರದಲ್ಲಿ "ತೊಟ್ಟ ಬಳೆಗಳು" ಕೈಯನ್ನು ತೊರೆದಿಲ್ಲದಿದ್ದರೂ, ಇದ್ದಿದ್ದರಲ್ಲಿ ಪದ್ಯದ ಭಾವಕ್ಕೆ ಹೊಂದುತ್ತೆಂದು ಹಾಕಿದೆ :)
ಕೊ.ಕೊ: ತಲೆಬರಹವನ್ನು ಕೊಟ್ಟ ಮಿತ್ರ ಶ್ರೀಕಾಂತ ಮಿಶ್ರಿಕೋಟಿಯವರಿಗೆ ನಾನು ಆಭಾರಿ