ಅದ್ಭುತ ಅನುಭವ

ಅದ್ಭುತ ಅನುಭವ

  ಅನುಭವವೇ ಜೀವನವೋ ಅಥವಾ ಜೀವನವೇ  ಅನುಭವವೋ!!  ಇತ್ತೀಚೆಗೆ ನಾನಂತೂ ಜೀವನದ ಪ್ರತಿ ಹೆಜ್ಜೆಯಲ್ಲಿ ಒಂದೊಂದು ಸುಂದರ ಅನುಭವವನ್ನು ಪಡೆಯುತ್ತಿದ್ದೇನೆ. ಏಕೆಂದರೆ ಪ್ರಥಮವಾಗಿ ಏನೇ ಮಾಡಿದರು ಅದೊಂದು ಹೊಸ  ಅನುಭವ ಆಗುತ್ತದೆ. ಅನುಭವವನ್ನು ಎಲ್ಲರೊಂದಿಗೆ ಸಾಮಾನ್ಯವಾಗಿ ಒಂದು ಸಂದೇಶ ಅಥವಾ ಒಂದು ಕರೆಯ ಮೂಲಕ ಹಂಚಿಕೊಳ್ಳುತ್ತೇನೆ. ಆದರೆ ಈ ವಿಶೇಷವಾದ ಅದ್ಭುತ ಅನುಭವವನ್ನು ಬರವಣಿಗೆಯ ಮೂಲಕ ಹಂಚಿಕೊಳ್ಳಬೇಕೆಂದು ಅನಿಸುತ್ತಿದೆ, ಏಕೆಂದರೆ ಇದೊಂದು ಅಸಾಮಾನ್ಯವಾದದು. ಯಾವುದಾದರೂ ನಾಟಕವೊಂದನ್ನು ನೋಡಬೇಕೆಂದು ಇತ್ತೀಚಿನ ದಿನಗಳಲ್ಲಿ ನಾನು ಆಶಿಸುತ್ತಿದ್ದೆ. ಬಿಡುವಿನ ಸಮಯದಲ್ಲಿ  ರಂಗಶಂಕರ  ಕಾರ್ಯಕ್ರಮದ ಪಟ್ಟಿಯನ್ನು ವೀಕ್ಷಿಸುತ್ತಿದ್ದೆ, ಜೊತೆಗೆ ಯಾರನ್ನಾದರು ಕರೆದರೆ, ಅದು ಯಾಕೋ ಹೊಂದುತ್ತಿರಲಿಲ್ಲ. ಬಹುಶ: ಏಕೆಂದರೆ ಅದು ವಾರಾಂತ್ಯವಾಗುತ್ತಿರಲಿಲ್ಲ ಹಾಗೂ ಈ ಐ ಟಿ ಜಗತ್ತಿನಲ್ಲಿ ಬಿಡುವು ಸ್ವಲ್ಪ ಕಡಿಮೆ. ಹೀಗೆ ನಾಟಕ ನೋಡಬೇಕೆಂಬ ನನ್ನ ಕಿರು ಆಸೆ ಹೆಬ್ಬಯಕೆ ಆಗತೊಡಗಿತು. ಅದು ಯಾವುದೊ  ಒಂದು  ನಾಟಕ ನೋಡಬೇಕೆಂದೂ ಅನಿಸುತ್ತಿರಲಿಲ್ಲ ,ಹಾಗಾಗಿ  ಸ್ವಲ್ಪ ಹೆಚ್ಚು ನಿಯಮಗಳನ್ನು ಹಾಕ ತೊಡಗಿದೆ, ಜೀವನದ ಮೊದಲ ನಾಟಕ ರಂಗಶಂಕರದಲ್ಲಿ ಅದುವೇ ನನ್ನ ಅಚ್ಚು  ಮೆಚ್ಚಿನ ಮೈಸೂರು ಮಲ್ಲಿಗೆಯನ್ನೇ ನೋಡಬೇಕೆಂದು  ಅಂದುಕೊಂಡಿದ್ದೆ.

   ಹೀಗಿರುವಾಗ ಏಪ್ರಿಲ್ 16 ಶುಕ್ರವಾರದಂದು ನನ್ನ ಸಹೋದ್ಯೋಗಿ ಒಬ್ಬರು ಮೈಸೂರಿನ ರಂಗಾಯಣದಲ್ಲಿ ಮಲೆಗಳಲ್ಲಿ ಮದುಮಗಳು ನಾಟಕಕ್ಕೆ  ಟಿಕೆಟ್ ಖರೀದಿಸಲಾಗುತ್ತದೆಯೇ ಎಂದು ವಿಚಾರಿಸಿದರು.

ನಾನು ಕುತೂಹಲದಿಂದ  ಅದರ ಮಾಹಿತಿ ಪಡೆದೆ . ಆಮೇಲೆ ಆ ರಂಗಾಪ್ರದರ್ಶನದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಗೂಗಲ್ ನಲ್ಲಿ  ಹುಡುಕಾಡಿದೆ. ಸರಿ, ಮಲೆಗಳಲ್ಲಿ ಮದುಮಗಳು ರಂಪ್ರದರ್ಶನ ಏಕೆ ನನ್ನ ಮೊದಲ ನಾಟಕ ವೀಕ್ಷಣೆ  ಆಗಬಾರದೆಂದು ಯೋಚಿಸಿ ಅದರ  ಬಗ್ಗೆ ದೊರೆತ ಮಾಹಿತಿಯನ್ನು ನನ್ನ ಸ್ನೇಹ ಬಳಗಕ್ಕೆ ಅಂದೇ ಇ-ಮೇಲ್  ಮಾಡಿದೆ. ಅದು ಶುಕ್ರವಾರ ವಾರಾಂತ್ಯದ ಸಮೀಪದ ಕಾರಣ ಕೆಲವು ಸ್ನೇಹಿತರು ಪ್ರತಿಕ್ರಿಯಸಲಿಲ್ಲ . ನನ್ನ ಆಪ್ತರಿಗೆ ಕರೆ ಮಾಡಿ ಅವರ ಅನಿಸಿಕೆ ಪಡೆಯವುಷ್ಟರಲ್ಲಿ 3 ದಿನ ಕಳೆದುಹೊಗಿತ್ತು. ಹೇಗೋ ಏನೋ 4-5 ಜನ ಆಸಕ್ತಿ ತೋರಿಸಿದರು, ಸರಿ ಟಿಕೆಟ್ಟನ್ನು ಮುಂಗಡವಾಗಿ ಕಾದಿರಿಸುವ ಎಂದು ಮೈಸೂರಿನ ರಂಗಾಯಣಕ್ಕೆ ಕರೆ ಮಾಡಿದರೆ ನಮಗೆ ಕಹಿ ಸುದ್ದಿ ಕಾದಿತ್ತು. ಏಪ್ರಿಲ್ 23 ರಿಂದ ಮೇ 11ರ ವರಾಗೇ ದಿನ ಬಿಟ್ಟು ದಿನ ನಡೆಯುವ 9 ಘಂಟೆಗಳ ಕಾಲ (ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ) ಎಲ್ಲ ಪ್ರದರ್ಶನದ ಟಿಕೆಟ್ಗಳು ಮಾರಾಟವಾಗಿದ್ದವು.ಇದರಿಂದ ನನಗೆ ಆದ ನಿರಾಶೆ ಅಷ್ಟಿಷ್ಟಲ್ಲ.

 

  ಆದರೆ ನನಗೆ ಮಾಹಿತಿ ಕೊಟ್ಟ ಸಹೋದ್ಯೋಗಿ ಮೊದಲ ದಿನವೇ ಮೇ 1 ನೇ ತಾರೀಖಿಗಾಗಿ ಮುಂಗಡವಾಗಿ ಕಾದಿರಿಸಿದ್ದರು . ಮೇ 2ನೇ ಮುಂಜಾನೆ ಸುಮಾರು 615ರ ಸಮಯ ನನಗೆ ಒಂದು ಸಂದೇಶ ಬಂತು ಅದು ನನ್ನ ಸಹೋದ್ಯೋಗಿ ಪ್ರದರ್ಶನದ ಅನುಭವವನ್ನು ಹಂಚಿಕೊಂಡಿದ್ದರು, ಜೊತೆಗೆ ಮುಕ್ತಾಯಗೊಳ್ಳಬೇಕಾದ ಪ್ರದರ್ಶನ ವೀಕ್ಷಕರ  ಒತ್ತಾಯದ ಮೇರೆಗೆ 3 ಪ್ರದರ್ಶನವನ್ನು ಅಂದರೆ ಮೇ 15ರವರೆಗೂ ವಿಸ್ತರಿಸಿದರು, ಹಾ!! ಮುಂಜಾನೆ ಬಂದ ಆ ಸಿಹಿ ಸುದ್ದಿಗೆ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮೇ 15 ಶನಿವಾರ ವಾರಾಂತ್ಯ ಸ್ನೇಹಿತರಿಗೆಲ್ಲರಿಗೂ ಸೂಕ್ತವಾಗುತ್ತದೆ ಎಂದು ದಿನಾಂಕವನ್ನು ನಿಗದಿಪಡಿಸಿದೆ .ಸರಿ ಈ ಬಾರಿ ತಡ ಮಾಡದೇ ಟಿಕೆಟ್ಟನ್ನು  ಮುಂಗಡವಾಗಿ ಕಾದಿರಿಸೋಣವೆಂದು ರಂಗಾಯಣಕ್ಕೆ  ಅದೇ ಮೇ 2 ಭಾನುವಾರ ಹೋಗಿ ವಿಚಾರಿಸಿದೆ. ಆದರೆ ವಿಸ್ತಾರಗೊಂಡಿರುವ ಈ 2 ಪ್ರದರ್ಶನಕ್ಕೆ ಯಾವುದೇ ಮುಂಗಡವಾಗಿ ಟಿಕೆಟ್ ಕಾದಿರಿಸುವ ಪದ್ದತಿಯನ್ನು ನಿಲ್ಲಿಸಿ, ಆ ದಿನದ ಪ್ರದರ್ಶನವನ್ನು ಅಂದೇ ಮಧ್ಯಾಹ್ನ 3 ಘಂಟೆಗೆ ಬಂದು  ಖರೀದಿಸಬೇಕೆಂದು ಜೊತೆಗೆ ಒಬ್ಬರಿಗೆ 2 ಟಿಕೆಟ್ ಕೊಡಲಾಗುವುದೆಂದು ಹೊಸ ನಿಯಮವನ್ನು ಹಾಕಿದ್ದರು.

 

  ಸರಿ ಮೇ 15ರಂದೇ ಟಿಕೆಟ್ ಖರೀದಿಸೋಣ ಎಂದು ನಿಶ್ಚಯಿಸಿ ಆ ಸುದಿನಕ್ಕಾಗಿ ಕಾಯತೊಡಗಿದೆ. ಅಂತೂ ಇಂತು ಬಂತು ಮೇ 15, ಮಧ್ಯಾಹ್ನ ಉರಿ ಬಿಸಿಲಿನಲ್ಲಿ ರಂಗಾಯಣಕ್ಕೆ  ದೌಡಾಯಿಸಿ ಟಿಕೆಟ್ ಪಡೆದಾಗ ಆದ ಖುಷಿ ಅಪಾರ :). ರಾತ್ರಿಯೆಲ್ಲಾ ನಡೆವ ಈ ಪ್ರದರ್ಶನಕ್ಕೆ ನಾನು ದಿನವೆಲ್ಲ್ಲ ಸಮಯ ಸಿಕ್ಕಾಗೆಲ್ಲ ನಿದ್ದೆ ಮಾಡುತ್ತಿದ್ದೆ. ಸರಿ ಸಮಯ ಹತ್ತಿರವಾಗುತ್ತಿದ್ದಂತೆ 7:30ಕ್ಕೆ ರಾತ್ರಿ ಊಟ ಮುಗಿಸಿ ಹೋರಡೊನವೆಂದರೆ ಮಳೆ ಬರುವ ಸೂಚನೆ ಕೊಡುತ್ತಿತ್ತು . ರಂಗಾಯಣದ ಬಯಲಲ್ಲಿ ನಡೆವ ಈ ಪ್ರದರ್ಶನ ಮಳೆ  ಬಂದರೆ  ಬಾರಿ ಅಪಾಯ. ಹೇಗೋ ದೇವರ ಮೇಲೆ ಭಾರ ಹಾಕಿ ಹೊರಟೆವು. ತಂಗಾಳಿಯ ಆ ವಾತಾವರಣ ಮನಸ್ಸಿಗೆ ಮುದ ನೀಡುತ್ತಿತ್ತು . ಸಾಲಲ್ಲಿ ಪ್ರವೇಶ ಮಾಡಿ ಸೂಕ್ತ ಪ್ರವೇಶ ಸ್ಥಳದಲ್ಲಿ  ಕೂತೆವು  ಸುತ್ತ ಮುತ್ತ ನೋಡುತ್ತಿದ್ದರೆ ಯಾವುದೋ ಹೊಸ ಲೋಕಕ್ಕೆ ಬಂದಂತೆ ಭಾಸವಾಗುತಿತ್ತು.ಒಬ್ಬೊಬ್ಬರಾಗಿ ಜನ ಬರುತಿದ್ದರು ಈ ಹೊಸ ಅನುಭವ ಹೇಗಿರುತ್ತದೆ ಎಂದು ನಾ ಮನಸ್ಸಲ್ಲಿ ಲೆಕ್ಕ ಹಾಕಿಕೊಳುತ್ತಿದ್ದೆ . ಸಮಯ ಒಂಬತ್ತು ಆಗುತಿದ್ದಂತೆ ಮೈಮನ ರೋಮಾಂಚನಗೊಳ್ಳಲು  ಆರಂಭವಾಯಿತು.

 

   ನಿರೂಪಕಿ ಒಬ್ಬಳು ವೇದಿಕೆಗೆ ಬಂದು ಸ್ವಚ್ಛ ಕನ್ನಡದಲ್ಲಿ ಮಾತನಾಡುವಾಗ ಇನ್ನೇನು ಪ್ರಾರಂಭ ಹೊಸ ಲೋಕ ಹೊಸ ಅನುಭವ ಎಂದು ಸ್ಪಷ್ಟವಾಯಿತು. ಜೋಗಯ್ಯ ಗುಂಪೊಂದು ಬಂದು ಕಥೆಯ ನಿರೂಪಣೆ ಮಾಡ ತೊಡಗಿದರು,ಹಂಸಲೇಖರವರ ಸಾಹಿತ್ಯ ಸಂಗೀತ ಹೆಚ್ಚು ಸ್ವಾದವನ್ನು ಸೇರಿಸುತ್ತಿತ್ತು.ಮೊದಲನೆ ವೇದಿಕೆಯಲ್ಲಿ 2:30 ಘಂಟೆಯಷ್ಟು ಪ್ರದರ್ಶನದಲ್ಲಿ ಎಲ್ಲರ ಕಿರುಪರಿಚಯವಾಗ ತೊಡಗಿತು. ಸರಿ ಮುಂದೇನಾಗುತ್ತದೆ ಅನ್ನುವಷ್ಟರಲ್ಲಿ ವೇದಿಕೆ ಬದಲಾವಣೆ ಮತ್ತು 10 ನಿಮಿಷಗಳ ವಿರಾಮ. ಈ 2 ನೇ ವೇದಿಕೆಯಲ್ಲಿ ಮುಖ್ಯ ಕಥೆಯೂ ಪ್ರಾರಂಭವಾಯಿತು.ವಿವೇಕಾನಂದರ ಭಾಷಣ ನಿರೂಪಣೆ ಒಂಥರ ನಮ್ಮನ್ನೆಲ್ಲಾ  ಆಕರ್ಷಿಸಿತು. 4-5 ಊರಿನ ಹತ್ತಾರು ಜನರ ಕಥೆಯ ಸ್ಪಷ್ಟ ಪರಿಚಯವಾಗುತ್ತಿದ್ದಂತೆ , ಮುಂದೇನಾಗಬಹುದು ಎಂದು ಯೋಚಿಸುತ್ತಿದ್ದಂತೆ ಮತ್ತೊಂದು ವಿರಾಮ ವೇದಿಕೆ ಬದಲಾವಣೆ.ಸರಿ 3ನೇ ವೇದಿಕೆ ಕಥೆಯ ತಿರುವು ಬೆಳಿಗ್ಗೆ 3 ಘಂಟೆಯ ಸಮಯ, ಉಳಿದಿರುವ 3 ಘಂಟೆಯ ಸಮಯದಲ್ಲಿ ಕಥೆಯ ಕೊನೆ ಏನಾಗುತ್ತದೆ ಎಂದು ತಲೆಹೊಳಗೆ   ಹುಳ  ಬಿಡಿಸಿ ಕೊಂಡು, ಬಂದ ಹತ್ತಾರು ಜನರ ಕಥೆಯನ್ನು ಮೇಲಕು ಹಾಕುತ್ತಿದ್ದಂತೆ  ಒಂದೊಂದು ಕಥೆಯ ಮುಕ್ತಾಯ ಪ್ರಾರಂಭವಾಯಿತು.ಮುಖ್ಯ ಪಾತ್ರಗಳ ಕಥೆ ಹೇಗೆ ಕೊನೆಗೊಳ್ಳುತ್ತದೆ  ಎಂದು  ಯೋಚಿಸುತ್ತಿದ್ದಂತೆ  ಕೊನೆಯ ವಿರಾಮ ಕೊನೆಯ ವೇದಿಕೆಗೆ ಪಯಣ.ಪ್ರದರ್ಶನ ಕೊನೆಗೊಳ್ಳುತ್ತಿದ್ದಂತೆ  ಹೀಗೆ ಬೆಳಿಗ್ಗೆ  ಸೂರ್ಯೋದಯ ನಮಗೆ ರಂಗ ಲೋಕದ ಪಯಣ ಮುಗಿಯಿತು ಎಂದು ಸಾರುತ್ತಿತ್ತು . ಹೀಗೆ ರಾತ್ರಿಯೆಲ್ಲಾ  ರಂಗಾಯಣದಲ್ಲಿ ರಾಷ್ಟ್ರ ಕವಿ ಕುವೆಂಪುರವರ ಮಲೆಗಳಲ್ಲಿ ಮದುಮಗಳಿನ  ಕಾದಂಬರಿ ರಂಗಾಪ್ರದರ್ಶನ ಮಲೆನಾಡಿನ ಲೋಕದಲ್ಲಿ ಸಂಚಾರ ಮಾಡುವ ಒಂದು ಸುವರ್ಣ ಅವಕಾಶವನ್ನು ದೊರಕಿಸಿ ಕೊಡುತ್ತದೆ.

 

"ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ! ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ ಯಾವುದಕ್ಕೂ ಮೊದಲಿಲ್ಲ;ಯಾವುದಕ್ಕೂ ತುದಿಯಿಲ್ಲ;ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ; ಕೊನೆಮುಟ್ಟುವುದೂ ಇಲ್ಲ!

ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ ಎಲ್ಲಕ್ಕೂ ಇದೆ ಅರ್ಥ;ಯಾವುದೂ ಅಲ್ಲ ವ್ಯರ್ಥ;ನೀರೆಲ್ಲ ತೀರ್ಥ!"

 

ಮಲೆಗಳಲ್ಲಿ ಮದುಮಗಳಿನ  ಈ ಸಾಲುಗಳು ಕೇವಲ ಈ ಕೃತಿಗೆ ಹಾಗೂ ಕರ್ತೃವಿನ ಮನೋಧರ್ಮವನ್ನು ಪ್ರಕಟಿಸುವುದಕ್ಕೆ ಮಾತ್ರ ಸೀಮಿತವಾಗದೆ ಇಡೀ ಮಾನವ ಬದುಕಿನ ಸತ್ಯವನ್ನು ಪ್ರತಿಬಿಂಬಿಸುತ್ತವೆ ಹಾಗೂ ದಾರ್ಶನಿಕ ಕುವೆಂಪುರವರ ದರ್ಶನವನ್ನು ವ್ಯಕ್ತಗೊಳಿಸುತ್ತದೆ.

 

ಮಲೆಗಳಲ್ಲಿ ಮದುಮಗಳು  ಕಾದಂಬರಿಯಲ್ಲಿ ಪ್ರಧಾನವಾಗಿ ಮೂರು ಅಂಶಗಳನ್ನು ಕಾಣುತ್ತೇವೆ:

 

  1. ಕಾಲದ ಜನಜೀವನ ಹಾಗೂ ಸಾಮಾಜಿಕ ಚಿತ್ರಣ
  2. ಎರಡನೆಯ ಅಂಶವೆಂದರೆ ಮತಾಂತರದ ಅವಾಂತರ
  3. ಪ್ರಮುಖ ಅಂಶವೆಂದರೆ ಪ್ರಾಕೃತಿಕ ವರ್ಣನೆ.

ಈ ಮೂರೂ ಅಂಶಗಳನ್ನೂ ಮೀರಿದ, ಕಾದಂಬರಿಯ ಜೀವನಾಡಿಯಾಗಿ, ಜೀವನದಿಯಾಗಿ ಕಥೆಯುದ್ದಕ್ಕೂ ಹರಿಯುವುದು ಸ್ತ್ರೀ ಮನೋಧರ್ಮ . 

 

Rating
No votes yet

Comments