ಅಪ್ಪಿಯೂ ಕೆರೆ ಕುಂಟೆಯೂ
ನಾವೂ ಸಣ್ಣಕ್ಕಿದ್ದಾಗ ನೀರಿನಲ್ಲಿ ಆಟವಾಡಿದ್ದುಂಟು. ತೋಟದ ಮೈನ್ ಕಾದಿಗೆಯ ಹೆಗ್ಗಟ್ಟಿನಲ್ಲಿ ನಮ್ಮದು ಹಾರಾಟಾ ನೀರಾಟ ಎಲ್ಲ. ಹೆಚ್ಚೆಂದರೆ ನಾಲ್ಕು ಅಡಿ ಆಳದ ನೀರಿರುವ ಹೆಗ್ಗಟ್ಟು ಅಂದು ನಮಗೆ ದೊಡ್ಡ ಸಮುದ್ರವಿದ್ದಂತೆ. ದಡಾಲ್ ಎಂದು ಧುಮುಕಿದ ಮರುಕ್ಷಣ ಕೆಂಪುಬಣ್ಣಕ್ಕೆ ತಿರುಗುವ ನಾಲ್ಕಡಿ ನೀರಿನಲ್ಲಿ ಪಚ ಪಚ ಅಂತ ಕೈಕಾಲು ಬಡಿದು ಮನೆ ಸೇರಿದರೆ ಅಂದೆಲ್ಲಾ ಮೈ ತುರಿಕೆ. ಆನಂತರ ಸ್ವಲ್ಪ ಪ್ರಮೋಷನ್. ಬಾಳೆ ದಿಂಡನ್ನು ಕಡಿದು ಅದಕೆ ಹಗರು ಹೊಡೆದು ಅದನ್ನು ಹಿಡಿದುಕೊಂಡು ಹತ್ತಡಿ ಆಳದ ಯಕ್ಷಮ್ಮನ ಕೆರೆ ನಮ್ಮ ಸ್ವಿಮಿಂಗ್ ಪೂಲ್. ಅಲ್ಲಿ ನೀರು ಸ್ವಚ್ಛ. ಹೀಗೆಲ್ಲಾ ಮಾಡಿ ಈಜು ಕಲಿತಿದ್ದಾಗಿದೆ.
ಈಗ ಮಗ ಈಸಬೇಕು ಅಂದಾಗ ಅಪ್ಪಯ್ಯನೆಂಬ ಅಪ್ಪಯ್ಯನಾದ ನಾನು ಸಕಲ ವ್ಯವಸ್ಥೆ ಮಾಡಿಕೊಡಬೇಕು. ಜಾಕೆಟ್ ಸ್ವಚ್ಛನೀರಿನ ಕೆರೆ ಆನಂತರ ಅಪ್ಪಿಯ ಅಮ್ಮನ ಅಣತಿಯಂತೆ ಅಪ್ಪಿ ಅತ್ತಿತ್ತ ಆಗದಂತೆ ಅಪ್ಪಿಯ ಅಪ್ಪನಾದ ನನ್ನಿಂದ ಸರ್ಪಗಾವಲು( ಅದು ಕೆರೆಯಾದ್ದರಿಂದ ನೀರುಳ್ಳೆ(ಇದೊಂದು ನೀರಲ್ಲಿರುವ ಹಾವು)ಗಾವಲು ಅಂತ ಬದಲಾಯಿಸಿಕೊಳ್ಳಿ)
ಇರಲಿ ಕಾಲಕ್ಕೆ ತಕ್ಕಂತೆ ಅವೆಲ್ಲಾ . ವಿಷಯ ಅದೆಲ್ಲ ಈ ನೀರಿನಲ್ಲಿ ಈಜು ಇದೆಯಲ್ಲಾ ಪ್ರಕೃತಿ ಸಕಲ ಪ್ರಾಣಿಗಳಿಗೆ ಸಹಜವಾಗಿಟ್ಟಿದೆ. ಹುಟ್ಟಾ ಸಣ್ಣ ನೀರನ್ನೇ ನೋಡಿರದ ನಾಯಿಯನ್ನು ನೀರಿಗೆಸೆದರೆ ಪಟಪಟ ಈಸುತ್ತಾ ಕ್ಷಣಮಾತ್ರದಲ್ಲಿ ದಡ ಸೇರಿಬಿಡುತ್ತದೆ. ದನ ಎಮ್ಮೆ ಕುದುರೆ ಯಾವುದೇ ಇರಲಿ ಅದು ಹೀಗೆಯೇ. ಆದರೆ ಅದೇ ವರ್ಗಕ್ಕೆ ಸೇರಿದ ಪ್ರಾಣಿಯಾದ ಮನುಷ್ಯನಾದ ನಮಗೆ ಮಾತ್ರಾ ಹಾಗಲ್ಲ. ಅದೊಂದು ವಿದ್ಯೆ. ಅದನ್ನು ಕಲಿಯಬೇಕು ಅಂಬ ಭಯ ಬಿತ್ತಲಾಗಿದೆ ಬಿಂಬಿಸಲಾಗಿದೆ.
ವಾಸ್ತವ ಹಾಗಲ್ಲ. ನೀರೆಂಬ ನೀರಿನಲ್ಲಿ ನಮ್ಮ ಭಯ ನಮ್ಮನ್ನು ಮುಳುಗಿಸುತ್ತದೆ ಧೈರ್ಯ ನಮ್ಮನ್ನು ತೇಲಿಸುತ್ತದೆ. ಧೈರ್ಯ ಎಂಬುದು ಮಟಾಮಾಯವಾದ್ದರಿಂದ ಈಸನ್ನು ನಾವು ಕಲಿಯಬೇಕಿದೆ. ಕಲಿತು ತೇಲಬೇಕಿದೆ. ತೇಲಿ ಸ್ವರ್ಗ ಸುಖವನ್ನು ಅನುಭವಿಸಬೇಕಿದೆ.
ತಲೆತಲಾಂತರದಿಂದ ಭಯದ ಬೀಜ ಮನುಷ್ಯನ ಜೀನ್ ಗಳಲ್ಲಿ ಹೊಕ್ಕು ಪ್ರಕೃತಿ ಪುಕ್ಕಟ್ಟೆ ನೀಡಿದ್ದ ಶಕ್ತಿಯನ್ನು ನಾವು ಹುಲುಮಾನವರಿಗೆ ಹಣ ಕೊಟ್ಟು ಕಲಿಯಬೇಕಾದ ಪರಿಸ್ಥಿತಿ ಬಂದಿದೆ. ಹಾಗಂತ ಇದನ್ನು ಓದಿದ ನೀವು " ನನಗೆ ನೀರೆಂದರೆ ಭಯ ಇಲ್ಲಪ್ಪ" ಎಂದು ದುಡುಂ ಎಂದು ನೀರಿನಲ್ಲಿ ಹಾರಿಬಿಟ್ಟೀರಿ. ಹಾರಿದಮೇಲೆ ಅವರು ಇವರು ಹೇಳಿದ ಕತೆ ನೇನಪಾಗಿ ಗಟಗಟ ನೀರು ಕುಡಿದು ಹೊಗೆಹಾಕಿಸಿಕೊಳ್ಳಬೇಕಾಗುತ್ತದೆ. ಹೀಗೆ ನಾವು ನೀವು ಮತ್ತು ನಮ್ಮ ಮರಿ ಮಕ್ಕಳವರೆಗೂ ನೀರೆಂದರೆ ಭಯ ಅಲ್ಲ ಸಹಜ ಎಂದು ಹೇಳುತ್ತಾ ಸಾಗಿದರೆ ಮುಂದೆ ಯಾವುದೋ ಪೀಳಿಗೆಯಲ್ಲಿ ಧೈರ್ಯ ಬರಬಹುದು. ಅಲ್ಲಿಯವರೆಗೆ ಕಾಯುವುದು ನಮ್ಮ ನಿಮ್ಮ ಕೈಯಲಿ ಆಗದ ಕೆಲಸ. ಹಾಗಾಗಿ ಈಗ ಕಲಿಯುವುದೇ ಲೇಸು. ಕಲಿತು ಮಜ ಅನುಭವಿಸುವುದೇ ಮಜ. ಆಗ ಧೈರ್ಯ ಹುಟ್ಟುತ್ತದೆ ಮನಸ್ಸಿನಾಳದಲ್ಲಿ. ಅದು ಮೆದುಳಮೂಲಕ ರಕ್ತಕ್ಕೆ ಇಳಿದು ನಿಮ್ಮ ಪೀಳಿಗೆಯಲ್ಲಿ ಮುಂದುವರೆದರೆ ಆಗ " ನೀರೆಂದರೆ ಖುಷಿಯೇನೆ ತಕದಿಮಿ ತಕದಿಮಿ ಮಜವೇನೆ..." ಅಂತ ಹಾಡಬಹುದು.
Rating