ಅಮ್ಮಾ.. ನಿನ್ನ ಎದೆಯಾಳದಲ್ಲಿ!

ಅಮ್ಮಾ.. ನಿನ್ನ ಎದೆಯಾಳದಲ್ಲಿ!

ನೂರ್ ಇನ್ನೂ ಮಲಗಿದ್ದಳು. ಸಮಯ ಎಂಟು ಆಗಿದ್ದರೂ ಯಾವತ್ತೂ ಬೇಗ ಏಳುವ ಅವಳ ದಿನಚರಿ ಇಂದು ಯಾಕೋ ಹಾಳಾಗಿತ್ತು. ಈಗೀಗ ಹೆಚ್ಚೇ ಹಟಮಾರಿಯಾಗಿದ್ದಾಳೆ ಎಂದು ಫಾತಿಮಾಳಿಗೆ ಅನಿಸತೊಡಗಿತು. ಅದರಲ್ಲೂ ನಿನ್ನೆ ’ನನ್ನನ್ನು ಕಳಿಸಿಕೊಡು, ನಾನು ಒಬ್ಬಳೇ ಮನೆಗೆ ಹೋಗ್ತೀನಿ. ಮನೆಯಲ್ಲಿದ್ದರೆ ಸರಿಯಾಗ್ತೀನಿ’ ಎಂದು ಬಡಬಡಿಸಿದ ಕ್ಷಣ ತನ್ನ ಎದೆಯೊಳಗೆ ಉಂಟಾದ ನೋವು ಅವಳಿಗೆ ಅರ್ಥವಾದೀತೇ? ’ಇನ್ನೂ ಮಗುವಲ್ಲವೇ’ ಎಂದು ಮುಮ್ತಾಜ಼್ ಸಮಾಧಾನ ಮಾಡಿದ್ದರೂ ಯಾಕೋ ರಾತ್ರಿಯಿಡೀ ಆ ಮಾತುಗಳು ಕಾಡಿದ್ದವು. ಅವಳಿಗೆ ಎಲ್ಲವೂ ಅರ್ಥವಾಗುತ್ತದೆ ಎಂದೆನಿಸಿತ್ತು. ಅತ್ತು ಅತ್ತು ನಿದ್ದೆ ಕೂಡ ಬಂದಿರಲಿಲ್ಲ. 

ಅವಳ ಹೊದಿಕೆ ಸರಿಮಾಡಿ ಎದ್ದು ಹೊರಗೆ ಬಂದಾಗ ರಶೀದ್ ಕಂಡ. ಬೆಳಗ್ಗೆ ಬೆಳಗ್ಗೆನೇ ಅವನ ಮುಖ ಕಂಡು ಸೈತಾನನ ಮುಖ ನೋಡಿದಂತೆ ಆಯಿತು. ಹುಳುಕು ಹಲ್ಲುಗಳನ್ನು ತೋರಿಸುತ್ತಾ ಪರಿಚಯದ ನಗೆಯನ್ನು ಬೀರಿದ. ’ಸುವ್ವರ್’ ಎಂದು ಮನದಲ್ಲೇ ಬೈದಳು. ಅವನಿಂದಲೇ ಎಲ್ಲಾ ಆಗಿದ್ದು ಎಂದುಕೊಂಡು ನೂರ್ ಮತ್ತು ತನ್ನ ಬಟ್ಟೆಗಳನ್ನು ಒಗೆಯಲು ಬಂದಳು. ಇದೇ ಐದು ವರ್ಷಗಳ ಹಿಂದೆ ಮುಜಫ಼ರ್ ನಗರಕ್ಕೆ ಹೋಗುತ್ತಿದ್ದ ಪ್ರಯಾಣ ಅವಳ ಮನಃಪಟಲದಲ್ಲಿ ಮೂಡಿತು. ಮುಜಫ಼ರ್ ನಗರದಲ್ಲಿದ್ದ ಚಿಕ್ಕಪ್ಪನ ಮನೆಗೆ ಮೊದಲ ಬಾರಿಗೆ ಹೋಗುತ್ತಿದ್ದ ಸಮಯ. ಟಿವಿಯಲ್ಲಿ ಮತ್ತು ಅವರಿವರ ಬಾಯಿಯಲ್ಲಿ ಕೇಳಿ ಅರಿತಿದ್ದ ಭಾರತಕ್ಕೆ ಸಮ್‍ಝೌತಾ ಎಕ್ಸ್‍ಪ್ರೆಸ್ ಟ್ರೈನಿನಲ್ಲಿ ಹೋಗುತ್ತಿದ್ದಾಗ ಯಾಕೋ ಉತ್ಕಟ ಭಾವನೆಗಳು ಮನಸ್ಸಿನಲ್ಲಿ ಹರಿದಾಡುತ್ತಿದ್ದವು. ಮೊದಲ ಬಾರಿಗೆ ಅಷ್ಟು ದೂರದ ಪ್ರಯಾಣವನ್ನು ಕೈಗೊಂಡಿದ್ದಳವಳು. ಅವಳೊಂದಿಗೆ ಅಮ್ಮ ರಶೀದನ್ ಬೀಬಿ ಮತ್ತು ತಂಗಿ ಮುಮ್ತಾಜ಼್ ಕೂಡ ಬಂದಿದ್ದರು. ಸ್ಲೀಪರಿನ ಆ ಕಂಪಾರ್ಟ್‍ಮೆಂಟಿನಲ್ಲಿ ಅವರು ಮೂವರಲ್ಲದೇ ಮತ್ತೊಬ್ಬನೂ ಇದ್ದ, ಅವನೇ ರಶೀದ್. ಅವನಷ್ಟಕ್ಕೆ ಇದ್ದನಾದ್ದರಿಂದ ಇವರು ಯಾರೂ ಅವನ ಬಗ್ಗೆ ಗಮನ ಹರಿಸಿರಲಿಲ್ಲ. ಅಟ್ಟಾರಿ ಬಾರ್ಡರಿನಲ್ಲಿ ಇದ್ದಕ್ಕಿದ್ದಂತೆ ಜವಾನರು ಬಂದು ಚೆಕ್ಕಿಂಗ್ ಪ್ರಾರಂಭಿಸಿದಾಗ ಒಮ್ಮೆ ಭಯವಾದರೂ ಏನೂ ತಪ್ಪು ಮಾಡದಿರುವಾಗ ಏಕೆ ಭಯ ಪಡಬೇಕು ಎಂದು ಅಮ್ಮ ಹೇಳುತ್ತಿದ್ದ ಮಾತು ನೆನಪಾಗಿ ಅಮ್ಮನ ಮುಖ ನೋಡಿದಳು. ರಶೀದನ್ ಇದರ ಬಗ್ಗೆ ತಲೆ ಕೆಡಿಸಿಕೊಂಡ ಹಾಗಿರಲಿಲ್ಲ. ಆದರೆ ಜವಾನರು ಬಂದು ’ಎದ್ದೇಳಿ’ ಎಂದಾಗಲೇ ಏನೋ ಸರಿಯಿಲ್ಲವೆಂದು ಅರಿವಾದದ್ದು. ರಶೀದ್ ಕಾಣುತ್ತಿರಲಿಲ್ಲ. ಶೌಚಾಲಯದಲ್ಲಿ ಅಡಗಿ ಕೂತಿದ್ದ ಅವನನ್ನು ಮತ್ತೆ ಹಿಡಿದರಂತೆ. ಸುಮಾರು ೪೦೦ಗ್ರಾಂ ಮರಿಜುವಾನಾ ಎಲೆಗಳನ್ನು ತೆಗೆದುಕೊಂಡು ಹೋಗುತ್ತಿದ್ದನಂತೆ. ಎಲ್ಲರನ್ನು ಹಿಡಿದು ಕೋರ್ಟಿಗೆ ಹಾಜರು ಪಡಿಸಿದರು. ನಾವೆಲ್ಲಾ ಅವನ್ಯಾರು ಎಂದು ಗೊತ್ತಿಲ್ಲ ಎಂದರೂ ಯಾರೂ ಕೇಳಲಿಲ್ಲ. ರಶೀದನೂ ತನಗೂ ಅವರಿಗೂ ಸಂಬಂಧವೇ ಇಲ್ಲ ಎಂದರೂ ಒಪ್ಪದ ಪಂಜಾಬಿನ ಹೈಕೋರ್ಟು ಹತ್ತು ವರ್ಷ ಸಜೆ ಕೊಟ್ಟಿತು. ’ಬೇರೆ ದೇಶಕ್ಕೆ ಹೋಗುವ ಮೂಲ ಸಮಸ್ಯೆ ಇಷ್ಟೇನೇ, ಅದರಲ್ಲೂ ನಾರ್ಕೋಟಿಕ್ಸ್.. ಅಂದ್ರೆ ಮಾದಕ ವಸ್ತುಗಳ ವಿಷಯದಲ್ಲಿ ಏನಾದರೂ ಸಿಕ್ಕಿಬಿದ್ದರೆ ಯಾರೂ ಏನೂ ಮಾಡಲಾಗುವುದಿಲ್ಲ’ ಎಂದು ಜೈಲಿನ ಹಿರಿಯರಾದ ಈಶ್ವರ್ ಗುರ್ನಾನಿ ಸಮಾಧಾನ ಹೇಳಿದ್ದರು. ಅಷ್ಟು ಹಿರಿಯರೂ ಓದಿದವರೂ ಆದ ಅವರೇಕೆ ಇಲ್ಲಿದ್ದಾರೆ ಎಂದು ಕೇಳಬೇಕೆಂದು ಎಷ್ಟೋ ಸಲ ಅವಳಿಗೆ ಅನಿಸಿದ್ದರೂ ಕೇಳುವ ಧೈರ್ಯ ಬಂದಿರಲಿಲ್ಲ.

’ಅಮ್ಮೀ..’ ಎಂದು ನೂರ್ ಬಂದು ಹಿಂದಿನಿಂದ ಅಪ್ಪಿಕೊಂಡಳು. ’ಈಗ ಬೆಳಗಾಯ್ತಾ ನಿಂಗೆ?’ ನೀರನ್ನು ಅವಳ ಮುಖಕ್ಕೆ ಚಿಮ್ಮಿಸುತ್ತಾ ಅಂದಳು ಫಾತಿಮಾ ಛೇಡಿಸುವ ಧ್ವನಿಯಲ್ಲಿ. ’ಹ್ಮ್ಮ್..’ ಆಕಳಿಸುತ್ತಾ ನೂರ್ ಮತ್ತೂ ಜೋರಾಗಿ ಅಪ್ಪಿಕೊಂಡಳು ಅವಳನ್ನು. ’ಬಾ ಹಲ್ಲು ತೊಳೆದು ತಿಂಡಿ ತಿನ್ನು’ ಎಂದು ಹಲ್ಲುಜ್ಜಲು ಅವಳನ್ನು ಕರೆದುಕೊಂಡು ಹೋದಳು. ಹಾಲು ಮತ್ತು ಪರಾಟ ತಿನ್ನಿಸುತ್ತಿರುವಾಗ ಮುಮ್ತಾಜ಼್ ಬಂದು ನಿಂತಳು, ಅವಳ ಕಣ್ಣುಗಳಲ್ಲಿ ಗಾಬರಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಏನೋ ಆಗಿದೆ ಎಂದು ಫಾತಿಮಾಳಿಗೆ ಅನಿಸಿತು. ಏನಾಯಿತು ಎಂದು ಕೇಳಿದಳು. ಮುಮ್ತಾಜ಼್ ನೂರ್ ಮುಖವನ್ನು ನೋಡಿ ಮತ್ತೆ ಹೇಳುತ್ತೇನೆ ಎಂದು ಕಣ್ ಸನ್ನೆ ಮಾಡಿದಳು. ನೂರ್‍ ಕೆನ್ನೆ ಹಿಂಡುತ್ತಾ, ’ಕೊಡು ನಾನು ತಿನ್ನಿಸುತ್ತೇನೆ ಇವಳಿಗೆ. ನೀನು ಬಟ್ಟೆ ಒಗಿ’ ಎಂದು ತಟ್ಟೆ ತೆಗೆದುಕೊಂಡಳು. ನೂರ್ ಕೆನ್ನೆಗೆ ಮುತ್ತನ್ನಿಟ್ಟು ಅಲ್ಲಿಂದ ಹೋದಳು.

ಮುಮ್ತಾಜ಼್ ಗಾಬರಿಯಾಗುವಂತಹ ಸಂಗತಿ ಏನು ನಡೆದಿರಬಹುದು ಎಂದು ಊಹಿಸತೊಡಗಿದವಳಿಗೆ ಊಹಿಸದ ರೀತಿ ನಡೆಯುತ್ತಿರುವ ತನ್ನ ಬದುಕಿನಲ್ಲಿ ಯಾವುದನ್ನಾದರೂ ಯೋಚಿಸಿ ಏನು ಪ್ರಯೋಜನ ಎಂದುಕೊಳ್ಳುವಾಗ ಅಮ್ಮನ ನೆನಪಾಯಿತು. ಸಜೆಯಾದ ವಿಷಯವನ್ನು ಅವಳಿಗೆ ಅರಗಿಸಿಕೊಳ್ಳಲು ಆಗಲೇ ಇಲ್ಲ. ಜೈಲಿನ ಊಟವೂ ಆಗಲಿಲ್ಲ. ಒಂದು ವರ್ಷದಲ್ಲೇ ಹಾಸಿಗೆ ಹಿಡಿದ ಅವಳು ಬದುಕಿದ್ದರೆ ಧೈರ್ಯ ಹೇಳಲು ಯಾರಾದರೂ ಇದ್ದ ಹಾಗೆ ಆಗುತ್ತಿತ್ತು. ಆದರೆ ಈಗ ತಾನು ಏಕಾಂಗಿ ಎಂಬ ಭಾವ ಅವಳನ್ನು ಅದರ ನಂತರ ತುಂಬಾ ಕಾಡತೊಡಗಿದೆ. ಈ ಐದು ವರ್ಷಗಳಲ್ಲಿ ಗಂಡನೊಂದಿಗೆ ಒಮ್ಮೆ ಮಾತ್ರ ಮಾತು ನಡೆದಿದೆ. ಅವನು ಇನ್ನೊಂದು ಮದುವೆ ಆಗಿದ್ದರೂ ಆಗಿರಬಹುದು ಎಂದೆನಿಸಿತು. ಉಳಿದ ನಾಲ್ಕು ಮಕ್ಕಳನ್ನು ಒಬ್ಬನೇ ನೊಡಿಕೊಳ್ಳುವುದೂ ಕಷ್ಟವೇ. ಆದ್ದರಿಂದ ಅವನು ಮದುವೆಯಾಗಿದ್ದರೂ ಅವಳಿಗೆ ಅದರಲ್ಲಿ ತಪ್ಪೇನೂ ಕಾಣುತ್ತಿಲ್ಲ. ಪುನಃ ತಿರುಗಿ ನೋಡಿದಳು ನೂರ್ ಹಾಲು ಕುಡಿಯುತ್ತಿದ್ದಳು. ಇಡೀ ದಿನ ಅಲ್ಲಿ ಇಲ್ಲಿ ಓಡಾಡಿಕೊಂಡಿರುತ್ತಾಳೆ. ಕೇವಲ ಅವಳಲ್ಲದೇ ಇನ್ನೂ ಹದಿನೈದು ಇಪ್ಪತ್ತು ಮಕ್ಕಳಿದ್ದಾವೆ ಇಲ್ಲಿ. ಎಲ್ಲಾ ಹತ್ತು ಹದಿನೈದು ವರ್ಷಕ್ಕಿಂತ ಕೆಳಗಿನವರು. ಇವಳ ವಯಸ್ಸಿನ ಮೂರು ಮಕ್ಕಳಿದ್ದಾರೆ. ಇಡೀ ದಿನ ಅವರೊಡನೆ ನಲಿಯುತ್ತಾ ಇರುತ್ತಾಳೆ. ಅವಳಿಗೆ ನಿಜವಾಗಿಯೂ ಅರಿವಿದೆಯೇ ಇದೆಲ್ಲಾ ಏನು ಎಂದು, ಇನ್ನೂ ಮಗು ಎಂದೆನಿಸಿದರೂ ಅವಳಿಗೆ ಎಲ್ಲವೂ ಅರ್ಥವಾಗುತ್ತದೆ ಎಂದು ಪುನಃ ಮನಸ್ಸು ಹೇಳಿತು.

’ದೀದಿ’ ಎಂದು ಕರೆಯುತ್ತಾ ಮುಮ್ತಾಜ಼್ ಫಾತಿಮಾಳ ಬಳಿ ಬಂದಳು. ಫಾತಿಮಾಳ ಉತ್ತರಕ್ಕೂ ಕಾಯದೆ ’ಕೋರ್ಟಿಗೆ ಯಾರೋ ಫ಼ೈಲ್ ಮಾಡಿದ್ದಾರಂತೆ’ ಅರೆ ಕ್ಷಣ ತಡೆದು, ’ನೂರ್ ಬಗ್ಗೆ’ ಎಂದಳು. ಫಾತಿಮಾಳಿಗೆ ಏನೂ ಅರ್ಥವಾಗಲಿಲ್ಲ. ಹಿಂಜರಿಯುತ್ತಾ ಮುಮ್ತಾಜ಼್ ಹೇಳತೊಡಗಿದಳು,’ನೂರ್ ಜೈಲಿನಲ್ಲಿ ಇರೋದು ಸರಿಯಲ್ಲವಂತೆ. ತಪ್ಪು ಮಾಡದ ಮಕ್ಕಳು ಜೈಲಿನಲ್ಲಿ ಇರಬಾರದಂತೆ. ಅದಕ್ಕೆ ಕೋರ್ಟು ನೂರ್ ನ ಮಕ್ಕಳ ಅದೇನೋ ವೆಲ್‍ಫೇರ್ ಆಯೋಗಕ್ಕೆ ಶಿಫಾರಸ್ಸು ಮಾಡ್ತದಂತೆ’ ಫಾತಿಮಾಳಿಗೆ ಒಮ್ಮೆಯೇ ಸಿಟ್ಟು ಬಂತು. ’ನಿನಗೆ ಯಾರು ಹೇಳಿದ್ದು?’ ಎಂದು ಕೇಳಿದಳು. ’ಯಾರೋ ಮಾತಾಡಿಕೊಳ್ತಿದ್ದರು’ ಎಂದು ಮುಮ್ತಾಜ಼್ ಹೇಳಿ ಅವಳ ಬಳಿ ಬಂದು ಕೂತಳು. ’ತಪ್ಪು ಮಾಡದ ನಾವೇ ಒಳಗಿದ್ದೇವೆ, ಅವಳಿದ್ದರೇನು?’ ಎಂದು ಸಿಟ್ಟಿನಿಂದ ಅಂದರೂ ಅವಳ ಕಣ್ಣುಗಳು ಹನಿಗೂಡಿದ್ದವು. ಅವಳ ಕೈ ಅದುಮುತ್ತಾ ಮುಮ್ತಾಜ಼್, ’ಅವಳಿಗೆ ಒಳ್ಳೆಯದೇ! ಅವಳನ್ನು ಪಾಕಿಸ್ತಾನಕ್ಕೆ ಕಳುಹಿಸಲು ಏರ್ಪಾಡು ಮಾಡೋಣ, ಅವಳ ಅಪ್ಪನ ಜೊತೆಗಿರಲಿ. ಈ ಜೈಲಿನ ವಾತಾವರಣದಲ್ಲಿ ಇದ್ದು ಹಾಳಾಗುವುದಕ್ಕಿಂತ ಮನೆಯಲ್ಲಿ ಇದ್ದರೇ ಚೆನ್ನ ಅಲ್ವಾ?’  ಎಂದಳು. ಫಾತಿಮಾ ಏನೂ ಉತ್ತರ ಕೊಡದೆ ಸುಮ್ಮನಾದಳು.

ಜೈಲಿಗೆ ಬಂದಾಗ ಅವಳು ನಾಲ್ಕು ತಿಂಗಳ ಗರ್ಭಿಣಿ. ಜೈಲಿನ ಆಸ್ಪತ್ರೆಯಲ್ಲೇ ಹುಟ್ಟಿದ ಹುಡುಗಿ ನೂರ್. ಈಗ ಐದು ವರ್ಷ. ಅಪ್ಪನ ಅಣ್ಣ ಅಕ್ಕಂದಿರ ಮುಖವನ್ನೂ ನೋಡದ ಈ ಮಗುವನ್ನು ಎಲ್ಲೂ ಕಳುಹಿಸಲು ಫಾತಿಮಾಳಿಗೆ ಮನಸ್ಸು ಬರುತ್ತಿಲ್ಲ. ಆದರೂ ಅವಳ ಭವಿಷ್ಯ, ಸ್ಕೂಲು ಅದರ ಮೇಲೆ ಮುಮ್ತಾಜ಼್ ಆಡಿದ ಮಾತುಗಳು ಯಾಕೋ ಸತ್ಯವೆನಿಸತೊಡಗಿದ್ದನ್ನು ಕಂಡು ಅವಳಿಗೆ ತನ್ನ ಬಗ್ಗೆಯೇ ಖೇದವೆನಿಸತೊಡಗಿತು. ಇನ್ನು ಐದು ವರ್ಷವಲ್ಲವೇ ಮತ್ತೆ ನಾನೂ ಹೋಗುತ್ತೇನಲ್ಲವೇ ಎಂದು ಒಂದು ಕ್ಷಣ ಅನಿಸಿದರೂ ಮರುಕ್ಷಣ ಅವಳ ಬದುಕನ್ನು ನಾನೇ ಹಾಳು ಮಾಡುತ್ತಿದ್ದೇನೆ ಎಂದು ಅನಿಸತೊಡಗಿತು. ಮಿಶ್ರ ಭಾವನೆಗಳಿಗೆ ಒಳಗಾಗಿ ಫಾತಿಮಾ ತೊಳಲಾಡತೊಡಗಿದಳು. ಮಧ್ಯಾಹ್ನ ಊಟಕ್ಕೆ ನೂರ್ ಬಂದವಳು ತಟ್ಟೆಯ ಅದೇ ಪ್ರತಿದಿನದ ರೋಟಿ ಮತ್ತು ದಾಲ್‍ನ್ನು ನೋಡಿ ಮುಖ ಸಿಂಡರಿಸಿಕೊಂಡಳು. ಇದನ್ನು ನೋಡಿ ಫಾತಿಮಾ ಮತ್ತು ಮುಮ್ತಾಜ಼ಳಿಗೂ ನಗು ಬಂತು. ಆದರೆ ಅವರ ನಗುವಿಗೆ ಕತ್ತರಿ ಹಾಕುವಂತೆ ನೂರ್ ಇದ್ದಕ್ಕಿದ್ದಂತೆ, ’ಹೊರಗೆ ಹೋದ ಮೇಲೆ ನನಗೆ ಒಳ್ಳೆಯ ಊಟ ಸಿಗತ್ತೆ. ಈ ಒಣಗಿದ ಸಪ್ಪೆ ರೋಟಿ ತಿನ್ನಬೇಕಾಗಿಲ್ಲ’ ಎಂದಳು. ಮುಮ್ತಾಜ಼್ ಗಂಭೀರಳಾದರೂ ಸುಮ್ಮನಿದ್ದಳು. ಫಾತಿಮಾಳಿಗೆ ಅವಳನ್ನು ಚಚ್ಚುವಷ್ಟು ಸಿಟ್ಟು ಬಂದರೂ ತಡೆದುಕೊಂಡು ಹೊರಗೆ ಹೋಗಿ ಅಳತೊಡಗಿದಳು. ಅವಳಿಗೆ ಇಲ್ಲಿ ಇರಲು ಒಂಚೂರೂ ಇಷ್ಟವಿಲ್ಲ ಎಂದು ಮನಸ್ಸನ್ನು ಎಷ್ಟು ಒಪ್ಪಿಸಲು ಯತ್ನಿಸಿದರೂ ಅವಳ ಮನಸ್ಸು ಒಪ್ಪುತ್ತಲೇ ಇಲ್ಲ. ಆದರೂ ಅವಳು ಹೊರಗೆ ಇನ್ನೂ ಚೆನ್ನಾಗಿರಬಹುದು ಎಂದುಕೊಂಡಳು. ಅವಳಿಗೆ ಒಳ್ಳೆಯದಾಗುತ್ತದೆ ಎಂದು ಮನಸ್ಸನ್ನು ಸಮಾಧಾನಿಸಿಕೊಂಡಳು.        

ಚಂದಾನಿ ಮಕ್ಕಳಿಗೆಂದು ನಾಲ್ಕು ಗಂಟೆಯ ಸುಮಾರಿಗೆ ಅಮರ ಚಿತ್ರ ಕಥೆಗಳನ್ನು ಹೇಳುತ್ತಿದ್ದರು. ಇವಳೂ ಅವರ ಬಳಿ ಹೋಗುತ್ತಿದ್ದಳು ಮತ್ತೆ ಆಟ ಅದೂ ಇದೂ ಅಂತ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಎಲ್ಲಾ ಮುಗಿಸಿ ನೂರ್ ಮರಳಿ ಬರುವಾಗ ಆರು ಗಂಟೆಯ ಮೇಲಾಗಿರುತ್ತಿತ್ತು. ನಲಿಯುತ್ತಾ ಬರುತ್ತಿದ್ದ ಹುಡುಗಿ ಸಾಯಂಕಾಲ ಬಂದವಳು ಸಪ್ಪಗಿದ್ದಳು. ಫಾತಿಮಾ ಬಳಿ ಬಂದು ನಿಂತವಳೇ ’ನಿನಗೆ ನಾನು ಬೇಡವಾ?’ ಎಂದು ಕೇಳಿದಳು. ಫಾತಿಮಾಳಿಗೆ ಇದು ಹೊಸದೇನಲ್ಲ. ಪ್ರತಿ ಸಾರಿ ಇದೇ ರಾಗ  ’ಏನಾಯ್ತು ಈಗ?’ ಎಂದದ್ದಕ್ಕೆ ’ನನ್ನ ದೂರ ಕಳಿಸ್ತಿಯಂತೆ?’ ಎಂದಳು.
ಫಾತಿಮಾ ಏನೂ ಹೇಳಲಿಲ್ಲ. ನೂರ್ ಅಳತೊಡಗಿದಳು ’ಅಮ್ಮೀ.. ನನ್ನ ದೂರ ಕಳಿಸ್ಬೇಡ. ನಿನ್ನ ಬಿಟ್ಟು ನಾನಿರಲ್ಲ’ ಎಂದು ತಬ್ಬಿಕೊಂಡಳು. ಕ್ಷಣ ಮಾತ್ರದಲ್ಲಿ ತನ್ನ ಮನಸ್ಸಿನಲ್ಲಿ ಅದುಮಿಟ್ಟ ಭಾವನೆಗಳು ಒತ್ತರಿಸಿ ಹೊರ ಬಂದಂತೆ ಕಣ್ಣೀರು ಕಟ್ಟೆಯೊಡೆಯಿತು. ’ನೀನಿಲ್ಲದೇ ನಾನು ಸತ್ತೇ ಹೋಗ್ತೀನಿ. ನನ್ನಿಂದ ದೂರ ಮಾಡಲ್ಲ ಚಿನ್ನಾ’ ಎಂದು ತಬ್ಬಿಕೊಂಡಳು.
’ಅಮ್ಮೀ.. ಎಲ್ಲಾ ಹೇಳ್ತಾರೆ ನನ್ನ ನಿನ್ನಿಂದ ದೂರ ಮಾಡ್ತಾರಂತೆ’
’ಯಾರು ದೂರ ಮಾಡ್ತಾರೆ ಎಂದು ನಾನೂ ನೋಡ್ತೀನಿ’ ಸಿಟ್ಟು, ಅಳು ಎಲ್ಲಾ ತುಂಬಿತ್ತು ಅವಳ ಧ್ವನಿಯಲ್ಲಿ.
’ನೀನು ನನ್ನ ಜೊತೆ ಇರ್ಬೇಕು ಅಮ್ಮಿ.. ನನ್ನ ಎಲ್ಲಿಗೂ ಕಳಿಸ್ಬೇಡ ಅಮ್ಮಿ..’ ಎಂದು ಬಿಕ್ಕಳಿಸತೊಡಗಿದಳು. ಫಾತಿಮಾ ಅವಳನ್ನು ತಬ್ಬಿಕೊಂಡೇ ಚಂದಾನಿಯವರಲ್ಲಿ ಇವಳ ಸ್ಕೂಲಿಗೆ ಏರ್ಪಾಡು ಮಾಡಲು ಸಾಧ್ಯ ಉಂಟೇ ಎಂದು ಕೇಳಬೇಕು ಎಂದುಕೊಂಡಳು.
’ನೋಡು. ಯಾರು ಏನೇ ಮಾಡಲಿ, ನಾನು ನಿನ್ನ ದೂರ ಮಾಡಲ್ಲ, ಅಳ್ಬಾರ್ದು ಚಿನ್ನ, ನನ್ನ ಮುದ್ದು ಮಗು ಅಲ್ಲವಾ ನೀನು’ ಎಂದು ಕೆನ್ನೆಗೆ ಮುತ್ತನ್ನಿಟ್ಟಳು. ಇದನ್ನು ನೋಡುತ್ತಾ ಮುಮ್ತಾಜ಼ಳ ಕಣ್ಣುಗಳು ತುಂಬಿ ಬಂದವು.

[ಸತ್ಯ ಘಟನೆಯಿಂದ ಪ್ರೇರಿತ]

Rating
No votes yet