ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?

ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?

ಈ ಸುದ್ದಿ ಓದಿದಾಗಿನಿಂದ ಏನೊಂದನ್ನು ಮಾಡಲೂ ಮನಸ್ಸಾಗುತ್ತಿಲ್ಲ. ಮೊನ್ನೆ ಬೆಂಗಳೂರಿನ ಬಿಇಎಂಎಲ್ ಲೇಔಟಿನಲ್ಲಿ ನಾಲ್ಕೈದು ವರ್ಷದ ಪುಟ್ಟ ಬಾಲಕನನ್ನು ಸುಮಾರು ಹದಿನೈದು ಬೀದಿ ನಾಯಿಗಳು ಕಚ್ಚಿ ಕಚ್ಚಿ ಕೊಂದಿವೆಯಂತೆ! ದಟ್ಸ್ ಕನ್ನಡದಲ್ಲಿ ಈಗ ತಾನೇ ಓದಿದೆ. ನಾವು ಯಾವ ಕಾಲದಲ್ಲಿದ್ದೀವಿ ಎನಿಸುತ್ತಿದೆ. ಇನ್ನೂ ಕೇವಲ ಒಂದೂವರೆ ತಿಂಗಳ ಹಿಂದೆ ಚಂದ್ರಾ ಲೇಔಟಿನಲ್ಲಿ ಪುಟ್ಟ ಬಾಲಕಿಯೊಬ್ಬಳನ್ನು ಇದೇ ರೀತಿ, ಬೀದಿ ನಾಯಿಗಳು ಕಚ್ಚಿ ಸಾಯಿಸಿದ ಘಟನೆ ವರದಿಯಾಗಿತ್ತು. ನಮ್ಮ ಆಳರಸರನ್ನು ನಿದ್ದೆಯಿಂದ ಎಬ್ಬಿಸಲು ವಿಶ್ವೇಶ್ವರ ಭಟ್ ಅವರು ಬಹಳ ಒಳ್ಳೆಯ ಸಂಪಾದಕೀಯ ಸಹಾ ಬರೆದಿದ್ದರು.

ನಾವು ನಾಗರೀಕರು, ಏನೇ ಆದರೂ ಪ್ರತಿಭಟಿಸಬಹುದು, ಕೂಗಾಡಬಹುದು, ಈ ಬಗ್ಗೆ ಬರೆದು ಜಾಗೃತಿ ಮೂಡಿಸಬಹುದು. ಆದರೆ ಕೊನೆಗೆ ಕೆಲವೊಂದು ಕ್ರಮಗಳನ್ನು ಆಚರಣೆಗೆ ತರುವುದು ಆಳುವವರ ಕೆಲಸ ತಾನೇ? ಅದಕ್ಕಾಗಿ ತಾನೇ ಅವರು ಅಧಿಕಾರದಲ್ಲಿ ಕುಳಿತಿರುವುದು? ನಾವು ಸಲಹೆ, ಸೂಚನೆ ಕೊಡಬಹುದು. ಆದರೆ ಏನೇ ಸಲಹೆ ಕೊಟ್ಟರೂ ಆಚರಣೆಗೆ ತಾರದೇ ನಮ್ಮ ನಾಯಕರು ಕುಂಭಕರ್ಣರಂತೆ ಮಲಗಿದ್ದರೆ ಏನು ಮಾಡಬೇಕು? ಇನ್ನೆಷ್ಟು ಮಕ್ಕಳು ಬಲಿಯಾದ ಮೇಲೆ ಇವರು ತಮ್ಮ ಸೋ ಕಾಲ್ಡ್ "ಕ್ರಮ" ತೆಗೆದುಕೊಳ್ಳುತ್ತಾರೆ? ಇದಕ್ಕೆ ಯಾರು ಉತ್ತರ ಕೊಡುತ್ತಾರೆ?

ನಮ್ಮಂಥವರ ಕೂಗನ್ನೇನೋ ಯಾರೂ ಕೇಳದಿರಬಹುದು. ಆದರೆ ನಮ್ಮ ಬುದ್ಧಿಜೀವಿಗಳಿಗೆ ಮತ್ತು ಚಿಂತಕರಿಗೆ ಇವೆಲ್ಲ "ಜ್ವಲಂತ ಮತ್ತು ಪ್ರಸ್ತುತ" ಸಮಸ್ಯೆಗಳು ಎಂದು ಅನ್ನಿಸುವುದಿಲ್ಲವೇ? ಅವರಾದರೂ ಈ ರೀತಿಯ ಸಾಮಾಜಿಕ ಸಮಸ್ಯೆಗಳ ವಿಚಾರದಲ್ಲಿ ಒಂದಾಗಿ, ಒಗ್ಗಟ್ಟಿನಿಂದ ಏಕೆ ಒಂದು ಆಂದೋಳನವನ್ನು ಆರಂಭ ಮಾಡಬಾರದು? ಅವರ ವಿಚಾರಗಳು ಸಹಜವಾಗಿಯೇ ದೊಡ್ಡ ಓದುಗ ಬಳಗವನ್ನೂ ಹೊಂದಿರುತ್ತವೆ ಮತ್ತು ಎಲ್ಲರ ಗಮನವನ್ನೂ ಬಲು ಬೇಗನೆ ಸೆಳೆಯುತ್ತವೆ. ಇದರಿಂದ ಸಾಮಾಜಿಕ ನ್ಯಾಯವೂ ದೊರಕಿದಂತಾಗುತ್ತದೆ ಅಲ್ಲವೇ?

ಪ್ರಾಯಶಃ ನಮ್ಮನ್ನಾಳುವವರ ವಿರುದ್ಧವೇ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗುವ ಕಾಲ ದೂರವಿಲ್ಲವೇನೋ ಎನಿಸುತ್ತಿದೆ.

- ಶ್ಯಾಮ್ ಕಿಶೋರ್ 

Rating
No votes yet

Comments