ಅರಣ್ಯ ನಾಶ ಮಾಡಿದ ಮಗು ಮೇಲೆ ಕೇಸು

ಅರಣ್ಯ ನಾಶ ಮಾಡಿದ ಮಗು ಮೇಲೆ ಕೇಸು

ಬೊಗಳೂರು, ಡಿ.21- ಯಾರಾದರೂ "ಹೋದ ಜನ್ಮದ ಪಾಪದ ಫಲ" ಇದು ಅಂತೆಲ್ಲಾ ಬೊಗಳೆ ಬಿಡುವುದರ ಹಿಂದಿನ ಕಳಕಳಿಗೆ ಪುಷ್ಟಿ ದೊರೆತಿದ್ದು, ಆದರೆ ಇಷ್ಟು ಬೇಗನೆ ಶಿಕ್ಷೆಯಾಗುತ್ತದೆ ಎಂಬುದು ಯೋಚನೆಗೆ ನಿಲುಕದ ಸಂಗತಿಯಾಗಿತ್ತು. (bogaleragale.blogspot.com)

ನೂರಾರು ವರ್ಷಗಳ ಹಿಂದೆ ಅರಣ್ಯ ನಾಶಪಡಿಸಿದ ಪ್ರಕರಣದ ಕುರಿತು ಅಂದೇ ತನಿಖೆ ಆರಂಭಿಸಿದ ಪೊಲೀಸರು ಶತಮಾನಗಳ ಶೋಧನೆಯ ಬಳಿಕ ಕೇಸು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮಗು ಆಟವಾಡಲು ಕೋರ್ಟಿಗೆ ಬರಬೇಕಾಯಿತು.

ಅವರು ಕೊನೆಗೂ ಡಿಎನ್ಎ ಪರೀಕ್ಷೆ ಎಲ್ಲವನ್ನೂ ಕೈಗೊಂಡು ಒಂದು ಮಗುವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಖವುಳಿಸಿಕೊಳ್ಳುವ ನಿಟ್ಟಿನಲ್ಲಿ, ಈ ಹುಡುಗ 14 ತಿಂಗಳಿನವನಾಗಿದ್ದಾಗ ಅರಣ್ಯ ನಾಶ ಮಾಡಿದ್ದಾನೆ ಎಂದು ಎಫ್ಐಆರ್‌ನಲ್ಲಿ ಹೇಳುತ್ತಿದ್ದಾರೆ.

ಆದರೆ ನಿಜಕ್ಕೂ ಅವರಿಗೆ ಪುರಾತನ ಕೇಸೊಂದನ್ನು ಭೇದಿಸಿ ಕೈತೊಳೆದುಕೊಳ್ಳಬೇಕಾಗಿತ್ತು ಎಂಬುದನ್ನು ಬೊಗಳೆ ಬ್ಯುರೋ ಪತ್ತೆ ಹಚ್ಚಿದೆ.

541 ಸಸ್ಯರಾಶಿಯನ್ನು ಈ ಪುಟ್ಟಹುಡುಗ ನಾಶಪಡಿಸಿದ್ದಾನೆ ಎಂಬುದು ಪೊಲೀಸರ ಆರೋಪ. ಅರಣ್ಯ ರಕ್ಷಕರ ಕೈಗೂ ಸಿಗದಷ್ಟು ವೇಗವಾಗಿ ಈ ಮಗು ಓಡಿತ್ತು ಎಂದು ಪೊಲೀಸರು ಎಫ್ಐಆರ್‌ನಲ್ಲಿ ಹೇಳಿದ್ದರೂ, ನಿಜಕ್ಕೂ ಪೊಲೀಸರು ಅರಣ್ಯದಲ್ಲಿದ್ದ ಚಳ್ಳೆ ಹಣ್ಣನ್ನು ತಿಂದಿದ್ದರು ಎಂಬುದು ದೃಢಪಟ್ಟಿದೆ.

ಈ ಕಳೆದ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈ ಜನ್ಮದಲ್ಲಿ ಬಲು ಬೇಗನೆ ಶಿಕ್ಷೆ ದೊರಕಿಸುವ ನಿಟ್ಟಿನಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದರೂ, ಮನಸು ಕದ್ದ ಹಸುಳೆ ಮೇಲೂ ಅವರು ಕೇಸು ದಾಖಲಿಸಿದ್ದನ್ನು ಈ ಹಿಂದೆ ಬೊಗಳೆ ಬಿಡಲಾಗಿತ್ತು ಎಂಬುದನ್ನಿಲ್ಲಿ ಸಂಸ್ಮರಣೆ ಮಾಡಿಕೊಳ್ಳಬಹುದಾಗಿದೆ.

ಈ ಬಗ್ಗೆ ಪುಟ್ಟ ಮಗುವನ್ನು ಮಾತನಾಡಿಸಿದಾಗ, ನಾನೀಗಾಗಲಷ್ಟೇ ಕಳೆದ ಜನ್ಮದ ಪೊರೆ ಕಳಚಿಕೊಂಡು ಭೂಮಿಗೆ ಬಂದಿದ್ದೇನಷ್ಟೇ. ನನಗೇನೂ ಗೊತ್ತಿಲ್ಲ ಎನ್ನುತ್ತಾ ಚೆಂಡೆತ್ತಿಕೊಂಡು ಆಟವಾಡಲು ಹೊರಟಿತು.

Rating
No votes yet