ಅರ್ಧನಾರೀಶ್ವರ
ಕಂಗೊಳಿಸುತಿಹನಾತ ಪ್ರೇಮಿಗಳ ನಡುವೆ ತ-
ನ್ನಂಗದರ್ಧದಲ್ಲಿನಿಯೆಯನ್ನಿಟ್ಟು
ಅಂಗನೆಯ ಸಂಗವನು ಬಿಟ್ಟ ಬೈರಾಗಿಗಳ
ಶೃಂಗದಲ್ಲಿಯೆ ನೆಲೆವಡೆದಿರಲು ಶಿವನು
ಅಂಗಜನ ಹಾವುನಂಜುರಿಯುಳ್ಳ ಬಾಣಗಳ
ಚುಂಗು ಚುಚ್ಚಿಸಿಕೊಂಡ ಸಾಮಾನ್ಯರು
ಭಂಗಗೊಳುವರು ನರಳಿ ಬಯಕೆ ಕೋಟಲೆಯಲ್ಲಿ
ಹಂಗು ಬಿಡಲಾರದೇ ಸುಖ ಹೊಂದದೇ!
ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ - ೯೭):
ಏಕೋ ರಾಗಿಷು ರಾಜತೇ ಪ್ರಿಯತಮಾದೇಹಾರ್ಧಧಾರೀ ಹರೋ
ನೀರಾಗಿಷ್ವಾಪಿ ಯೋ ವಿಮುಕ್ತ ಲಲನಾಸಂಗೋ ನ ಯಸ್ಮಾತ್ಪರಃ
ದುರ್ವಾರ ಸ್ಮರಬಾಣಪನ್ನಗವಿಷಜ್ವಾಲಾವಲೀಢೋ ಜನಃ ***
ಶೇಷಃ ಕಾಮವಿಡಂಬಿತೋ ಹಿ ವಿಷಯಾನ್ ಭೋಕ್ತುಂ ನ ಮೋಕ್ತುಂ ಸಮಃ
-ಹಂಸಾನಂದಿ
ಕೊ: ಈ ಸಾಲಿಗೆ "ದುರ್ವಾರ ಸ್ಮರಬಾಣ ಪನ್ನಗವಿಷವ್ಯಾಬಿದ್ಧ ಮುಗ್ಧೋ ಜನೌ" ಅನ್ನುವ ಪಾಠಾಂತರವೂ ಇದ್ದಂತೆ ತೋರುತ್ತದೆ.
ಕೊ.ಕೊ: ಇದರ ಬಗ್ಗೆ ಇನ್ನೊಂದಷ್ಟು ವಿವರಣೆ ಗದ್ಯದಲ್ಲಿ, ಈ ಮೊದಲು ಬರೆದಿದ್ದ ಕಾಮನ ಹಬ್ಬ ಎನ್ನುವ ಬರಹದಲ್ಲಿ ಮಾಡಿದ್ದೆ.
ಕೊ.ಕೊ.ಕೊ: ಮೂಲದಲ್ಲಿ ಬರುವ ಪನ್ನಗ, ವಿಷ, ಜ್ವಾಲೆ ಮೊದಲಾದ ಪದಗಳು ಶಿವನ ಕೊರಳ ಸುತ್ತಿನ ಹಾರವಾದ ಸರ್ಪ, ಕಂಠದಲ್ಲಿ ಅವನು ಧರಿಸಿದ ವಿಷ, ಹಣೆಗಣ್ಣಿನಲ್ಲಿ ಕಾಣುವ ಉರಿ ಮೊದಲಾದುವುಗಳನ್ನು ಸುಂದರವಾಗಿ ಶ್ಲೇಷೆಯಲ್ಲಿ ತೋರಿಸುತ್ತದೆ. ಅಂತಹ ಒಳ್ಳೆಯ ಶ್ಲೇಷೆಯನ್ನು ಕನ್ನಡದಲ್ಲಿ ತರಲು ಸೋತಿರುವುದು ನಿಜವಾದರೂ, ಇದನ್ನು ಅನುವಾದ ಮಾಡುವುದು ಬಹಳ ಆನಂದ ತಂದಿತೆಂಬುದೂ ಅಷ್ಟೇ ನಿಜ.
ಚಿತ್ರಕೃಪೆ: ವಿಕಿಪೀಡಿಯ
Comments
ಅರ್ಧನಾರೀಶ್ವರ
ಹಂಸಾನಂದಿಯವರೆ , ಕನ್ನಡಕ್ಕೆ ತಂದ ಪದ್ಯ ಚೆನ್ನಾಗಿಯೆ ಮೂಡಿದೆ. ಆದರೆ ವರ್ಣಚಿತ್ರದಲ್ಲಿ ನನ್ನ ಅಸಮದಾನ, ಶಿವನ ಬಾಗದಲ್ಲಿ ಅವನ ಎಲ್ಲ ಅಲಂಕಾರಗಳನ್ನು ಸೇರಿಸಿಯು ಶಿವ ಭಾಗದ ಭಾವ ಮೂಡುವದಿಲ್ಲ, ಶಿವನ ಮುಖದಲ್ಲಿ ಲಾಲಿತ್ಯ, ಶೃಂಗಾರ , ಮುಂತಾದ ಹೆಣ್ಣು ಭಾವವೆ ಎದ್ದು ಕಾಣುತ್ತಿದೆ. ಗಂಡಿನ ಮುಖದಲ್ಲಿರಬೇಕಾದ ಭಾವವಿಲ್ಲ.