ಆತ್ಮ, ಪಾಪಿ ನೆಲದ ಕೇಂದ್ರ

ಆತ್ಮ, ಪಾಪಿ ನೆಲದ ಕೇಂದ್ರ

ಆತ್ಮ, ಪಾಪಿ ನೆಲದ ಕೇಂದ್ರ
          ****

ಪಾಪ, ಆತ್ಮ, ನನ್ನ ಈ ಪಾಪಿ ನೆಲದ ಕೇಂದ್ರವೆ
ಯಾಕೆ ಹೂತಿರುವೆ ಈ ಬಂಡುಕೋರರ ನಡುವಲ್ಲಿ 
ಯಾಕೆ ಒಳಗೊಳಗೇ ಸೊರಗುವೆ, ಕೊರಗ ಸಹಿಸುವೆ
ಹೊರಗೋಡೆಗಳನು ಸಿಂಗರಿಸಿ ಅದ್ದೂರಿ ಬಣ್ಣದಲಿ?  
ಯಾಕಿಷ್ಟು ಧಾರಾಳ ಕಾಸು ಇಷ್ಟು ತುಸುಗಾಲಕ್ಕೆ
ಪಡೆದ ಈ ಮಂಕು ಮಹಲಿಗಾಗಿ ಹೀಗೆ ವ್ಯಯಿಸುವುದು?
ಹುಳುಗಳೇ ನಾಳೆ ವಾರಸುದಾರರು ನಿನ್ನೀ ವೈಭವಕ್ಕೆ
ತಿನ್ನವೇನು ಅದನು? ಹೀಗೇ ತಾನೆ ದೇಹ ಕೊನೆಯಗುವುದು?
ಕಾರಣ ಆತ್ಮವೇ, ಬಾಳು, ಹೇರಿ ಎಲ್ಲ ನಷ್ಟ ಆಳಿನ ಮೇಲೆ
ಸವೆಯುತ್ತ ಆತ ನಿನ್ನ ಗೋದಾಮನ್ನು ಕೊಬ್ಬಿಸುವ
ಕೊಳ್ಳು ದೈವಿಕ ಮುದ್ದತು, ಮಾರಿ ಗಂಟೆಗಟ್ಟಳೆ ಕೊಳೆ
ಪೋಷಿಸು ಅಂತರಂಗವ, ಇನ್ನಿರದಂತೆ ಹೊರ ವೈಭವ;
ಮಾನವರ ಸೇವಿಸುವ ಆ ಸಾವನ್ನೇ ಸೇವಿಸುವಂತೆ
ಸಾವು ಬಂದರೆ ಒಮ್ಮೆ ಮತ್ತೆ ಸಾವೆಂದೂ ಬರದಂತೆ

****

 

ಶೇಕ್ಸಪಿಯರನ ೧೪೬ನೇ ಸುನೀತ ದೇಹ ಹಾಗೂ ಆತ್ಮದ ಕುರಿತಿದ್ದು, ಭೌತಿಕವನ್ನು ತಿರಸ್ಕರಿಸಿ ಆಧ್ಯಾತ್ಮಿಕವನ್ನು ಅಪ್ಪುಕೊಳ್ಳುವ ತರ್ಕವನ್ನು ಆತ್ಮಕ್ಕೆ ಸಂಭೋಧಿಸಿ ಪ್ರಸ್ತುತಪಡಿಸುತ್ತದೆ. ಇಲ್ಲಿ ಬರುವ ವಿಷಯ ಕಾವ್ಯ ವಸ್ತುವಾಗಿ ಹೊಸದಲ್ಲ (ಹಾಗೆ ನೋಡಿದರೆ ಶೇಕ್ಸಪಿಯರ ಹೊಸವಸ್ತುವಿನ ಹುಡುಕಾಟ ಮಾಡುವಾತನೇ ಅಲ್ಲ). ಇದೊಂದು ಚರ್ವಿತ ಚರ್ವಣ ವಸ್ತು ಹಾಗೂ ವಾದ. ದೇಹ ಕ್ಷಣಿಕ, ಆತ್ಮ ಸಾರ್ವಕಾಲಿಕ ಎಂಬುದೇ ಇಲ್ಲಿಯ ತಥ್ಯ. ಎಂದಿನಂತೇ ಇಲ್ಲಿ ತಥ್ಯದ ಸ್ತರದಲ್ಲಿ ಕಾಣದ ಜಾಣ್ಮೆ ಕಾವ್ಯಬಂಧದಲ್ಲಿ ಕಾಣುತ್ತದೆ. ಇಲ್ಲಿನ ರೂಪಕಗಳು ಮುಖ್ಯವಾಗಿ ವಾಣಿಜ್ಯ ವಲಯದಿಂದ ಬಂದಿದೆ ಎನ್ನುವುದು ಗಮನಾರ್ಹ. ಅಂದರೆ, ಭೌತಿಕ ಜೀವನ ಕ್ಷುಲ್ಲಕ ವೆನ್ನುವ ಮಾತೆಲ್ಲವೂ ಅಲಂಕೃತವಾಗಿವೆ, ಅದೂ ಕೂಡ ಕೊಡುಕೊಳ್ಳುವಿಕೆಯ ರೂಪಕಗಳಲ್ಲಿ. ಹಾಗಾಗಿ ಈ ಸುನೀತದಲ್ಲಿ ಬರುವ ರೂಪಕಗಳ ನುಗ್ಗಾಟವಿರುವುದು ಹಣಕ್ಕೆ ಸಂಬಂಧಿಸಿದ ಅಂದರೆ ಭೌತಿಕ ಜೀವನದ ಅಗತ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ. ಹೇಳುತ್ತಿರುವ ಮಾತು ಅದರ ತದ್ವಿರುದ್ಧ ದಿಕ್ಕಿನಲ್ಲಿ. ಹೀಗೆ ಪರಸ್ಪರ ವಿರೋಧಿ ವಸ್ತುವನ್ನು ಆಯ್ದುಕೊಂಡು ಕವಿ ದ್ವಂದ್ವ ತುಳುಕುವ ಶೈಲಿಯಲ್ಲಿ ತನ್ನ ಕವನವನ್ನು ಹೆಣೆದಾಗ ಕಾಣಬರುವ ಸೊಬಗೆಂದರೆ ಭಾಷೆಯ ಸ್ತರದಲ್ಲಿಯೇ ಇಂಥಹ ವೈರುಧ್ಯಗಳನ್ನು ಲೇವಡಿ ಮಾಡಿಬಿಡುವ ತುಂಟತನ. ಅದೆಷ್ಟೋ ವರ್ಷಗಳಿಂದ ಓದುಗರು ಈ ಸುನೀತವನ್ನು ಆತ್ಮದ ಹೆಚ್ಚುಗಾರಿಕೆಯ ಕುರಿತಾದ್ದು ಎಂದು ಪರಿಗಣಿಸಿ ಓದುತ್ತಿದ್ದಾರೆ. ಆದರೆ, ಆ ತುಂಟ ಕವಿ ನಗುತ್ತಾನೆ: ದೇಹ ಹೆಚ್ಚೋ, ಆತ್ಮ ಹೆಚ್ಚೋ ಎನ್ನುವ ನುಗ್ಗಾಟ ನಡೆಸಿ ನೀವು; ನಾನು ಮಾತ್ರ ಇಂಥಹ ದ್ವಂದ್ವಗಳ ಕಿರುಕುಳ ಬಗ್ಗೆ ಉಪಹಾಸ ಮಾಡಿಬಿಡುವೆ! 

Rating
No votes yet