"ಆ ದಿನಗಳು"
ನಮಸ್ಕಾರ ,
ಇಂದು ಬೆಳಗ್ಗೆ ಗೆಳೆಯನ ಸಂದೇಶವನ್ನು ಓದುತ್ತಿದ್ದಂತೆ, ಹಳೆಯ ದಿನಗಳ ನೆನಪಿನ ಬುತ್ತಿ ಬಿಚಿಕೊಂಡಿತು. ಇಂದು ನಾವು ನಮ್ಮ ಬೀಳ್ಕೊಡುಗೆ ಸಮಾರಂಭದ ೫ನೇ ವರ್ಷಕ್ಕೆ ಕಾಲಿರಿಸಿದ್ದೇವೆ. ಆ ಹಳೆಯ ದಿನಗಳು, ನಿಜಕ್ಕೂ ಇಂದಿಗೂ ಬಹಳ ರೋಮಾಂಚಕಾರಿ, ಅಂದು ಕಾಲೇಜಿನಲ್ಲಿ, ಪ್ರತಿ ಬಾರಿಯಂತೆ, ಸಮಾರಂಭ ಸಂಪ್ರದಾಯದಂತೆ ನಡೆಸುವ ಬದಲು ಸ್ವಲ್ಪ ವಿಭಿನ್ನವಾಗಿ ರೂಪಿಸಬೇಕೆಂಬುದು ನಮ್ಮ ತರಗತಿಯ ಎಲ್ಲರ ಅಭಿಪ್ರಾಯವಾಗಿತ್ತು. ಅದಕ್ಕೆಂದೇ ನಾನು ಹಾಗು ನನ್ನ ಸ್ನೇಹಿತನಾದ ನವೀನ ಇಬ್ಬರೂ ಸೇರಿ ಒಂದು ವಿಭಿನ್ನ ತೆರನಾದ ನಿರೂಪಣೆ ಮಾಡಿದೆವು. ಅದು ಎಲ್ರಿಗೂ ಎಷ್ಟು ಇಷ್ಟವಾಯ್ತಂದ್ರೆ, ಇಂದಿಗೂ ಯಾರೂ ಆ ದಿನವನ್ನು ಮರೆತಿಲ್ಲ.
ಅಂದ ಹಾಗೆ, ನಮ್ಮ ತರಗತಿಯ ಶಿಕ್ಷಕರಾದ ಶ್ರೀಯುತ ಶ್ರೀನಿವಾಸನ್ ಅವರು ಸಮಾರಂಭದ ಉಸ್ತುವಾರಿ ವಹಿಸಿದ್ದರು , ನಮ್ಮ ಪ್ರಾಂಶುಪಾಲರಾದ, ಶ್ರೀಮತಿ ಶಕುಂತಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಆ ಸಮಾರಂಭ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ನಾನು ಹಾಗೂ ನವೀನ ಇಬ್ಬರೂ ಅಂದು ಪಂಚೆ ತೊಟ್ಟಿದ್ದೆವು. ಉತ್ತರ ಕರ್ನಾಟಕದ ಭಾಷೆಯ ಸೊಗಡಿನಲ್ಲಿ ಮೂಡಿಬಂದ ಆ ನಿರೂಪಣೆ ನಿಜಕ್ಕೂ ಒಂದು ಒಳ್ಳೆಯ ಪ್ರಯೋಗ ಎಂದು ಅನ್ನಿಸಿತು. ಇಂದಿಗೂ ಆ ದಿನಗಳನ್ನು ನೆನೆದಾಗಲೆಲ್ಲ ನಮ್ಮ ಆ ಕಾಲೇಜಿನ ಆ ಚಿತ್ರ ಹಸಿರಾಗಿ ನಿಲ್ಲುತ್ತದೆ.ನಿಜಕ್ಕೂ, ನಾನು ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಿಕೊಳ್ಳುವುದರಲ್ಲಿ ಬಹಳವಾಗಿ ಹೆಮ್ಮೆ ಎನಿಸುತ್ತದೆ. ನ್ಯಾಷನಲ್ ಕಾಲೇಜು ಬರಿಯ ಪಾಠವನ್ನಷ್ಟೇ ಅಲ್ಲದೇ, ಒಳ್ಳೆಯ ನಾಗರೀಕರಾಗುವಲ್ಲಿ ಒಳ್ಳೆಯ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು. ನಮ್ಮಗಳ ಜೀವನದಲ್ಲಿ ನ್ಯಾಷನಲ್ ಕಾಲೇಜಿನ ಪಾತ್ರ ಬಹಳ ಹಿರಿದು. ಹಾಗೆಯೇ ನ್ಯಾಷನಲ್ ಕಾಲೇಜಿನ ಬಗೆಗೆ ಹೇಳುವ ವಿಷಯ ಬೆಟ್ಟದಷ್ಟಿದೆ. ಒಂದೊಂದಾಗೆಯೇ ಆ ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.