ಆ ಪೋರ
“ನನಗೆ ಹತ್ತು ವರ್ಷ ವಯಸ್ಸು,ತುಮಕೂರಿಗೆ ಅರ್ಧ ಟಿಕೆಟ್ ಕೊಡಿ”-ಬೆಂಗಳೂರು ಬಸ್ ನಿಲ್ದಾಣದಲ್ಲಿ ತುಮಕೂರು ಬಸ್ ಹತ್ತಿದ ಆ ಪೋರ ಕಂಡಕ್ಟರನ್ನು ಕೇಳಿದ. - ಯಾವ ಕ್ಲಾಸ್ ನಲ್ಲಿ ಓದುತ್ತೀಯ? –ಕಂಡಕ್ಟರ್ ಕೇಳಿದ - ನಾನು ಸ್ಕೂಲಿಗೆ ಹೋಗುವುದಿಲ್ಲ. - ನಿನಗೆ ಹತ್ತು ವರ್ಷ ಆಗಿದೆ,ಇನ್ನೂ ಯಾಕೆ ಸ್ಕೂಲಿಗೆ ಸೇರಿಲ್ಲ. - ನನಗೆ ಸ್ಕೂಲ್ ಬೇಕಾಗಿಲ್ಲ - ನಿಮ್ಮಪ್ಪ ಅಮ್ಮನಿಗೆ ಏನಾದರೂ ಬುದ್ಧಿ ಇದೆಯಾ? ನಿನ್ನನ್ನು ಸ್ಕೂಲಿಗೆ ಸೇರಿಸದೆ ಪೋಲಿ ಅಲೆಯಲು ಬಿಟ್ಟಿದ್ದಾರಲ್ಲಾ! - ನಾನು ಮನೆಯಲ್ಲೇ ಓದುತ್ತೇನೆ.ನನಗೆ ಕನ್ನಡ, ಇಂಗ್ಲೀಶ್,ಹಿಂದಿ, ಸಂಸ್ಕೃತ ಎಲ್ಲಾ ಬರುತ್ತೆ. - ಯಾರು ಹೇಳಿಕೊಡ್ತಾರೆ? - ಸ್ಕೂಲಲ್ಲಾದರೆ ಒಬ್ಬರು ಮೇಸ್ಟ್ರು ಹೇಳಿಕೊಡಬೇಕು,ನನಗೆ ನಮ್ಮಪ್ಪ, ನಮ್ಮಮ್ಮ,ನಮ್ಮಕ್ಕ ಎಲ್ಲರೂ ಹೇಳಿಕೊಡ್ತಾರೆ. ಅಷ್ಟೇ ಅಲ್ಲ ಗಿಡ,ಮರ, ಬಳ್ಳಿ, ಆಕಾಶ, ಸೂರ್ಯ, ಚಂದ್ರ, ಮಣ್ಣು, ಕಲ್ಲು,ಕಾಗೆ, ಕೋಳಿ,ಹಸು, ಹಾವು…..ಎಲ್ಲವೂ ನನ್ನ ಗುರುಗಳೇ - ಅದು ಹ್ಯಾಗಪ್ಪಾ? ಅವೆಲ್ಲಾ ಗುರುಗಳಾಗ್ತಾವೆ? - ನೋಡ್ರೀ, ಒಂದು ಮರ ನೋಡಿದ್ರೆ,ಅದು ಕೊಡುವ ನೆರಳು, ಅದರ ಹಣ್ಣು, ಎಲೆಗಳ ಹಸಿರು ಬಣ್ಣ, ಎಲ್ಲದರಿಂದ ಪಾಠ ಕಲೀತೀನಿ…………. - ಅಯ್ಯಾ ಗುರು,ನೀನು ನನಗೊಬ್ಬನಿಗೆ ಪಾಠ ಮಾಡಬ್ಯಾಡ, ಅಲ್ನೋಡು ಡ್ರೈವರ್ ಹಿಂದೆ ಈ ಪೆಟ್ಟಿಗೆ ಇಟ್ಟಿದ್ದಾರಲ್ಲಾ ಅದರ ಮೆಲೆ ನಿಂತುಕೋ, ಈಗ ಮಾಡು ಭಾಷಣ……. - “ ಬಸ್ ನಲ್ಲಿರೋ ಎಲ್ಲಾ ಸಜ್ಜನ ಬಂಧುಗಳೇ, ಈ ಕಂಡಕ್ಟರ್ ನನಗೆ ಭಾಷಣ ಮಾಡಲು ಹೇಳ್ತಾ ಇದಾರೆ, ನೀವು ಒಪ್ಪಿದರೆ ಭಾಷಣ ಮಾಡ್ತೀನಿ. - ಮಾಡು ಮರೀ, ನಾವೆಲ್ಲಾ ಕೇಳ್ತೀವಿ….ಬಸ್ ನಲ್ಲಿದ್ದ ಎಲ್ಲರೂ ಒಂದೇ ಧ್ವನಿಯಲ್ಲಿ ಕೂಗಿದರು ಆ ಪೋರ ಭಾಷಣ ಶುರುಮಾಡಿದ. “ ಶಿಕ್ಷಣ ಎಂದರೆ ಏನು? ಈಗ ಶಾಲೆಗಳಲ್ಲಿ ಸಿಗುತ್ತಿರುವ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ,ವಿವೇಕ,ಧೈರ್ಯ,ಸಾಹಸ ಪ್ರವೃತ್ತಿ, ಕರುಣೆ, ಪ್ರೀತಿ, ವಾತ್ಸಲ್ಯ, ಮಮಕಾರ..ಇತ್ಯಾದಿ ಗುಣಗಳನ್ನು ಕಲಿಯಲು ಸಾಧ್ಯವೇ? ಶಾಲೆಗಳಲ್ಲಿ ನಡೆಯುವ ಪರೀಕ್ಷೆಯಲ್ಲಿ ಕಾಪಿ ಯಾಕೆ ಹೊಡೆಯುತ್ತಾರೆ? ಇನ್ವಿಜಿಲೇಟರ್ಸ್ ಇಲ್ಲದೆ ಯಾವುದಾದರೂ ಪರೀಕ್ಷೆ ನಡೆಯಲು ಸಾಧ್ಯವೇ? ಹಾಗಾದರೆ ವಿದ್ಯಾರ್ಥಿಗಳಲ್ಲಿ ಸತ್ಯ,ಧರ್ಮ,ನಿಷ್ಠೆ ಈ ಗುಣಗಳನ್ನು ಕಲಿಸಿಲ್ಲಾ ಎಂದಾಯ್ತಲ್ಲವೇ?................. ಆ ಪೋರ ಮಾತನಾಡುತ್ತಿದ್ದರೆ ಎಲ್ಲರೂ ಕಿವಿ ನೇರ ಮಾಡಿಕೊಂಡು ಕೇಳುತ್ತಿದ್ದರು. ಬಸ್ ತುಮಕೂರು ತಲುಪಿದಾಗ ಭಾಷಣ ನಿಲ್ಲಿಸಿದ ಆಪೋರ ಬಸ್ ನಿಂದ ಇಳಿದರೆ ಬಸ್ ಪ್ರಯಾಣಿಕರೆಲ್ಲಾ ಕೆಳಗಿಳಿದು ಆ ಪೋರನಿಗೆ ಹರಸಿ ಕಳಿಸುವಾಗ ಎಲ್ಲರ ಕಣ್ಣಾಲಿ ತುಂಬಿದ್ದವು. ಆ ಪೋರ ಬೇರೆ ಯಾರೂ ಅಲ್ಲ, ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಮಗ “ಭೃಗು”. ಈ ಘಟನೆ ನಡೆದು ಎರಡು ಮೂರು ವರ್ಷಗಳಾಗಿರಬಹುದು.ಮೊನ್ನೆ ಬೆಂಗಳೂರಿನಲ್ಲಿ ನಡೆದ ವೇದ ಸಮ್ಮೇಳನದಲ್ಲಿ ಅಪ್ಪ -ಮಗ ಸೇರಿ "ವೇದ ಮತ್ತು ಕಗ್ಗ" ಕಾರ್ಯಕ್ರಮ ನಡೆಸಿಕೊಟ್ಟರೆಂದು ನನ್ನ ಮಿತ್ರ ವಿಶ್ವನಾಥಶರ್ಮ ಹೇಳಿದರು.