ಉಪವಾಸ

ಉಪವಾಸ

ದೇವರ ಧ್ಯಾನದಲ್ಲೇ ಮುಳುಗಿದವನಿಗೆ ಹಸಿವಿನ ಯೋಚನೆಯೇ ಇರುವುದಿಲ್ಲ. ಈ ಉಪವಾಸ ನನ್ನಿಂದ ಸಾಧ್ಯವೇ ಇಲ್ಲ.

ಯಾವಾಗಲೂ "ಅಮ್ಮಾ..ಅಮ್ಮಾ..." ಎಂದು ರಚ್ಚೆ ಮಾಡುವ ಮಕ್ಕಳಿಗೆ ಅಮ್ಮ ಎರಡೇಟು ಕೊಟ್ಟು ದಬ್ಬುವಂತೆ,ದೇವರೂ ದೂರ ಮಾಡಿಯಾರು. ಅದಕ್ಕೆ ಟೈಮ್ ಸಿಕ್ಕಾಗ ದೇವರ ಮುಂದೆ ಮಿನಿಮಮ್ ಬೇಡಿಕೆಗಳ ಪಟ್ಟಿ ಇಟ್ಟು, ಕಾಲಕಾಲಕ್ಕೆ ರಿನೀವಲ್ ಮಾಡುತ್ತಿರುವೆನು.

ಇನ್ನೊಂದು ಉಪವಾಸ- ಊಟ ಇತ್ಯಾದಿ ತಿನ್ನದೇ ಹೊಟ್ಟೆ ಖಾಲಿ ಇಡುವುದು. "ಎಲ್ಲಾರೂ ಮಾಡುವುದು ಹೊಟ್ಟೆಗಾಗಿ"ದಾಸರು ಹೇಳಿಲ್ವೇ?

ನಾನಂತೂ ಹೊಟ್ಟೆ ಪಕ್ಷದವ-

ಬೆಳಗ್ಗೆ "ಟೀ" ವಾಸನೆ ಬಂದಾಗಲೇ ನನಗೆ ಎಚ್ಚರವಾಗುವುದು. ನೆಕ್ಸ್ಟ್ "ನಾಸ್ಟಾ"..

ಆಫೀಸಿಗೆ ಹೋದ ಮೇಲೆ (ಟೀ) ಟೈಮ್‌ಗೆ ಬಹಳ ಮಹತ್ವ ಕೊಡುವವರ ಪೈಕಿ ನಾನೂ ಒಬ್ಬ..

ಹಾಗೂ ಹೀಗೂ ಒಂದೆರಡು ಫೈಲ್ ಆಚೀಚೆ ಎತ್‌ಹಾಕಿ .."ಊಟ".

ನಂತರ ಆಫೀಸ್ ಕೆಲಸಕ್ಕೆ ಟಾಟಾ ಹೇಳುವವರೆಗೆ ಟೀ.ಟೀ..

ಕಿಸೆಯಲ್ಲಿ ಕಾಸಿದ್ದರೆ ಬರುವಾಗ ಹೋಟೆಲಲ್ಲಿ ಕಟ್ಲೆಟ್. ಲೇಟಾದರೆ ನೇರ ಮನೆಗೆ-ತಟ್ಟೆಯೆದುರೇ ಸ್ಟಾಪ್. ಹೊಟ್ಟೆ ತುಂಬಾ ಉಂಡರೂ, ನಡುರಾತ್ರಿ ಹೊಟ್ಟೆ ಖಾಲಿ ಬೀಳಬಾರದೆಂದು ಫ್ರುಟ್ಸ್,ಸ್ವೀಟ್ಸ್ ಎಕ್ಸ್ಟ್ರಾ ತುಂಬಿಸಿಕೊಳ್ಳುವೆನು.

ಹೊಟ್ಟೆ ಖಾಲಿ ಬಿಡುವುದು ಮಾತ್ರ ನನ್ನಿಂದಾಗದು.

ಇನ್ಯಾವ ಉಪವಾಸ!?

ಹೊಟ್ಟೆಯ ಮೇಲೊಂದು ಇದೆಯಲ್ಲ..ತಲೆ. ಅದನ್ನು ಕೆಲದಿನ ಉಪವಾಸ ಕೆಡವಿದ್ದೆ!! ಅದರ ಬಗ್ಗೇ ಈಗ ಹೇಳುತ್ತಿರುವುದು:

ಮೊದಲು ಬಹಳ ಬಹಳ ಪುಸ್ತಕ ಓದುತ್ತಿದ್ದೆ. ವಾಗ್ಷೇರ್*ನಿಂದ ಹಿಡಿದು ಬಾನ್ಟ್ವೈನ್* ರ ಎಲ್ಲಾ ಪುಸ್ತಕಗಳನ್ನು ೨-೨ ಬಾರಿ ಓದಿ ಮುಗಿಸಿದ್ದೇನೆ. ಈಗ ಓದಲು ಸಮಯವೇ ಸಿಗುತ್ತಿಲ್ಲ. (ಆಫೀಸ್ ಹಾಗೂ ಮನೆಯಲ್ಲಿ ಎಷ್ಟು ಬ್ಯುಸಿ ಎಂದು ಮೊದಲೇ ಹೇಳಿದ್ದೇನೆ)

ಈಗ ನನ್ನ ಬ್ರೈನ್‌ಗೆ ಪೇಪರ್,ಟಿ.ವಿ., ಕಂಪ್ಯೂಟರ್‌ನಿಂದ ವಿಷಯ ಫೀಡ್ ಮಾಡುವುದೇ ಜಾಸ್ತಿ. ಈ ಫೀಡೆಗಳಿಂದ ಕೆಲದಿನ ದೂರವಿರುವುದು ಎಂದು ತೀರ್ಮಾನಿಸಿ ಮನೆಯಲ್ಲಿ ಹೇಳಿದೆ. ಎಲ್ಲರಿಂದ ತುಂಬು ಹೃದಯದ ಸ್ವಾಗತ ಸಿಕ್ಕಿತು. ರಿಮೋಟ್ ಹಕ್ಕಿಗಾಗಿ ಕದನನೂ...ಆ ವಿಷಯ ಬೇಡ.. ಬಿಡಿ.

ಉಪವಾಸ ಮಾಡಿದ್ದರಿಂದಾಗಿ ಹೊಟ್ಟೆ ಹಗುರಾಯಿತು, ಆರೋಗ್ಯ ಹೆಚ್ಚಾಯಿತು, ಮನಸ್ಸು ಚುರುಕಾಯಿತು ಇತ್ಯಾದಿ ಇತ್ಯಾದಿ..ಉಪವಾಸ ಮಾಡುವವರು ಹೇಳುವಂತೆ ನಾನು ರೈಲು ಬಿಡುವುದಿಲ್ಲ.

ನಿಜ ಹೇಳ್ತೀನಿ..

ಬಹುಜನ( ನನ್ನ ತಂದೆಯ ಬಹು) ಒತ್ತಾಯದ ಮೇರೆಗೆ (ಒತ್ತಾಯ ಮಾಡಲು ನಾ ಬೇಡಿಲ್ಲ..ನಿಜಕ್ಕೂ..) ೩ನೇ ದಿನಕ್ಕೇ ಉಪವಾಸವನ್ನು ಸರ್ಬತ್ ಕುಡಿಯುವ ಅಲ್ಲಲ್ಲಾ ಸಂಪದ ಓದುವ ಮೂಲಕ ನಿಲ್ಲಿಸಿದೆ.

ಈಗ ನನ್ನ ಅವಸ್ಥೆ ನೋಡಿ-

ಈ ದಿನದ ಪೇಪರ್‌ಗಳ ಜತೆಗೆ ೩ ದಿನದ ಪೇಪರ್‌‍ಗಳ ರಾಶಿ ಓದಲು ಬಾಕಿ ಇದೆ.

ಅಕ್ಕ ಪಕ್ಕದ ಮನೆಯವರು ತರಿಸುವ TOI, DH..ಪತ್ರಿಕೆಗಳನ್ನೆಲ್ಲಾ ಅವರು ಏಳುವುದಕ್ಕೆ ಮೊದಲೇ ತಂದು ಓದುತ್ತಿದ್ದೆ. ಈಗ ಅವರ ಬಳಿ ಹೋಗಿ ಹಳೆ ಪೇಪರ್ ಕೇಳಕ್ಕಾಗುತ್ತಾ? ಮೊದಲಾದರೆ ನಮ್ಮ ಸಂಪದಿಗರಾದ ಅಶೋಕ್‌ರವರ "ಕೇಳಿದ್ದು ಹೇಳಿದ್ದು ನೋಡಿದ್ದು"ರಲ್ಲಿ ಮುಖ್ಯ ವಿಷಯಗಳನ್ನಾದರೂ ಓದಬಹುದಿತ್ತು. ಈಗೇನು ಮಾಡಲಿ?

ಸೌತ್ ಆಫ್ರಿಕಾ ಇಂಡಿಯಾವನ್ನು ಸೋಲಿಸಿದ ಮೊದಲ ಮ್ಯಾಚ್ ಒಂದೂ ಬಾಲ್ ಮಿಸ್ ಮಾಡದೇ ನೋಡಿದವ, ಇಂಡಿಯಾ ಗೆದ್ದ ಎರಡನೇ ಮ್ಯಾಚ್ ನೋಡಲಿಲ್ಲ.. :(

ಕಣ್ಣೀರ ಕೋಡಿ ಹರಿಸುತ್ತಿದ್ದ"ಬಿದಾಯಿ" ಇತ್ಯಾದಿ ಸೀರಿಯಲ್‌ಗಳ ಕತೆ ಯಾರಲ್ಲಿ ಕೇಳಲಿ..

ರಾಶಿ ಬಿದ್ದಿರುವ ಈಮೈಲ್‌ಗಳನ್ನುಓದುವುದು ಯಾವಾಗ?

ಎಲ್ಲಕ್ಕಿಂತ ಮುಖ್ಯ-ನನ್ನನ್ನು ಬಿಟ್ಟು ಮೈಲುಗಟ್ಟಲೆ ಮುಂದೆ ಹೋಗಿರುವ ಸಂಪದಿಗರನ್ನು ಹೇಗೆ ಕ್ಯಾಚ್ ಮಾಡಲಿ..?

                                      *ಆ ಹೆಸರಿನವರು ಯಾರೂ ಇಲ್ಲ ಅಂದುಕೊಂಡಿದ್ದೇನೆ :)

-ಗಣೇಶ(ಸೀನಿಯರ್).

 

 

 

 

 

Rating
No votes yet

Comments