ಎಡಚರ ಅವಾಂತರ

ಎಡಚರ ಅವಾಂತರ

ಎಡಚರ ಅವಾಂತರಗಳು
‘ಜಾತಿ ಬಿಡಿ ಮತ ಬಿಡಿ’, ‘ಮನುಜಕುಲ ತಾನೊಂದೆವಲಂ’ ಈ ಅರ್ಥದ ಮಾತುಗಳನ್ನು ಕೇಳಿ ಕೇಳಿ ತಲೆ ಚಿಟ್ಟು ಹಿಡಿದಿರಬಹುದು, ಆದರೆ ಇದನ್ನು ಗಳಹುವವರಿಗೇನೂ ಬೇಸರವಾದಂತಿಲ್ಲ. ಅಜ್ಞಾನದಲ್ಲಿರುವ ಪ್ರಜಾಕೋಟಿಯ ಕಣ್ಣು ತೆರೆಸಲು ಪಣ ತೊಟ್ಟಿರುವ ಜಾಣ ಜಾಣೆಯರು ಇವರು. ಸರಿಸುಮಾರು ಇದೇ ಶೃತಿಯಲ್ಲಿ ಮೊರೆಯುತಿರುವ ಮತ್ತೊಂದು ಘೋಷಣೆ, ಶೋಷಣೆ ಹಾಗೂ ಅದರ ವಿರುದ್ಧ ಹೋರಾಟದ ಆಟಾಟೋಪ. ಈ ಎಲ್ಲಾ ಸಮಸ್ಯೆಗಳ ಮೂಲವನ್ನು ಸ್ವಯಂ ಘೋಷಿತ ಬುದ್ಧಿ ಜೀವಿಗಳು, ಯಾವ ಯಾವುದೋ ಪರದೇಶೀ ‘ಇಸಂ’ ಗಳಿಗೆ ತಮ್ಮ ತನು-ಮನಗಳನ್ನು ಮಾರಿಕೊಂಡಿರುವ ವಿಚಾರವಾದಿಗಳು, ಜನಪರ ಓರಾಟಗಾರರು, ಪ್ರಗತಿಪರರು, ಯಾವ ಯಾವುದೋ ವೇದಿಕೆಗಳವರು ಹಿಂದೂ ಧರ್ಮ, ದೇವರು ಆಚರಣೆಗಳು, ಸಂಪ್ರದಾಯಗಳು, ನಂಬಿಕೆಗಳು, ಶಾಸ್ತ್ರಗ್ರಂಥಗಳೊಂದಿಗೆ ಮಾತ್ರಾ ಗುರುತಿಸಿ ಸನಾತನ ಧರ್ಮದ ವಿರುದ್ಧ ಅಪಪ್ರಚಾರದ ಬೃಹತ್ ದಾಳಿಯನ್ನೇ ಆರಂಭಿಸಿದ್ದಾರೆ, ಮೋಸ ಹೋಗುವವರು ಮೊದಲು ಹುಟ್ಟಿದರು ನಂತರ ಮೋಸಗಾರರು ಹುಟ್ಟಿಕೊಂಡರು ಎಂಬ ಸರಳ ಸತ್ಯ ಈ ಬುದ್ಧಿಮಂಕರಿಗೆ ತಿಳಿದಂತಿಲ್ಲ.

ಎಲ್ಲಾ ಜಾತಿ, ಜನಾಂಗ, ದೇಶ, ಭಾಷೆ, ಪ್ರದೇಶಗಳಲ್ಲೂ ಶೊಷಿತರಿದ್ದಾರೆ, ಅದಕ್ಕೆ ಕಾರಣ ಅವರವರ ಅಜ್ಞಾನ, ಒಬ್ಬಾನೊಬ್ಬ ವಿದ್ಯಾವಂತಕೂಡ ತನಗೆ ತಿಳಿಯದಿರುವ ಒಂದು ವಿಷಯದಲ್ಲಿ ಮತ್ತೊಬ್ಬನಿಂದ ಮೋಸಹೋಗಬಹುದು, ಶೋಷಿಸಲ್ಪಡಬಹುದು ಇದಕ್ಕೆ ಪರಿಹಾರ ಸ್ವತ: ತಾವೇ ಜ್ಞಾನಸಂಪನ್ನರಾಗುವುದು, ಜೀವನಾವಶ್ಯಕವಾದ ಎಲ್ಲಾವಿದ್ಯೆಗಳಲ್ಲೂ, ವಿಶಯಗಳಲ್ಲೂ ಎಲ್ಲರೂ ಪರಿಶ್ರಮಹೊಂದುವುದು ಸಾಧ್ಯವಿಲ್ಲದಮಾತು, ಪರಸ್ಪರ ಅವಲಂಬನೆ ಅನಿವಾರ್ಯ, ಇಂಥಲ್ಲಿ ಮುಖ್ಯವಾಗಿ ವೈದ್ಯನವಾಧಿಗೆ ಮದ್ದು ಹುಡುಕಬೇಕು ಆದರೆ ಇದು ಸುಲಭಸಾಧ್ಯವಲ್ಲ.

ಇನ್ನು ಧಾರ್ಮಿಕ ನಂಬುಗೆಗಳು, ಆಚಾರಗಳು ಇವುಗಳ ಕುರಿತಾಗಿ ಸಮ್ಯಕ್ಜ್ಞಾನ ಹೊಂದುವುದೂ ಸಾಮಾನ್ಯರಿಗೆ ಸಾಧ್ಯವಿಲ್ಲ, ಇಲ್ಲಿರುವ ಅಸಂಖ್ಯಾತ, ವೈವಿಧ್ಯಮಯ ಆಚರಣೆಗಳು ಮೋಸಹೋಗಲು-ಮೋಸಮಾಡಲು ಸಂಮೃಧ್ಧ ಅವಕಾಶ ಕಲ್ಪಿಸಿಕೋಡುತ್ತದೆ ಅಲ್ಲದೆ ನಾಸ್ತಿಕರ, ಮೂರ್ತಿಭಂಜಕರ ವಿದ್ಧ್ವಂಸಕ ಕೃತ್ಯಗಳಿಗೆ ವಿಪುಲ ಅವಕಾಶವೂ ಇಲ್ಲಿದೆ, ಆಧುನಿಕ ವಿಜ್ಞಾನ ತಂತ್ರಜ್ಞಾನಗಳೂ ದುರುಪಯೋಗಗೊಳ್ಳುತ್ತಿರುವ ಈ ದುಷ್ಟಕಾಲದಲ್ಲಿ ಯಾವ ಬುದ್ಧಿವಂತನೂ ವಿಜ್ಞಾನದ ವಿರುದ್ಧ ದನಿಎತ್ತಲಾರ ಆದರೆ ದೇವರು ಧರ್ಮ ಮುಂತಾದ ವಿಶಯಗಳಲ್ಲಿ ಮೂಗುತೂರಿಸುವುದರಲ್ಲಿ ಎಲ್ಲಿಲ್ಲದ ಆಸಕ್ತಿ, ಹಿಂದೂ ಧಾರ್ಮಿಕ ಆಚರಣೆಗಳನ್ನು ಗೇಲೀ ಮಾಡುವುದರಲ್ಲಿ ಅತ್ಯುತ್ಸಾಹ, ಹಿಂದೂ ಶಾಸ್ತ್ರಗ್ರಂಥಗಳನ್ನು ಅಧ್ಯಯನ ಮಾಡುವ ಗೋಜಿಗೇ ಹೋಗದೆ ಅವುಗಳನ್ನು ಹಿಗ್ಗಾಮುಗ್ಗಾ ಹಳಿಯುವುದರಲ್ಲಿ ಪೈಪೋಟಿ, ಸಂಸ್ಕೃತದ ಗಂಧ ಗಾಳಿ ಇಲ್ಲದ ಒಬ್ಬಾನೊಬ್ಬ ಇಂಗ್ಲಿಷ್ ಅಧ್ಯಾಪಕ ವಾಲ್ಮೀಕಿ ರಾಮಾಯಣದ ಟೀಕೆ ಮಾಡಿ ರಾಮ-ಸೀತೆಯರ ಬಗ್ಗೆ ಅಸಭ್ಯ ಮಾತುಗಳನ್ನು ಬರೆಯಬಲ್ಲ, ಹಾಗೆ ಬರೆದು ಬದುಕಬಲ್ಲ, ಅಯೋಧ್ಯೆಯ ರಾಮ ಮಂದಿರದ ಬಗ್ಗೆ ಮಾತನಾಡುತ್ತಾ ಜ್ಞಾನ ಪೀಠಿಯೊಬ್ಬ ವೇದಗಳ ಕಾಲದಲ್ಲಿ ದೇವ ಮಂದಿರಗಳೇ ಇರಲಿಲ್ಲ ಎನ್ನುತ್ತಾ ಜನರನ್ನು ಎಚ್ಚರಿಸುವ ಕಾಯಕದಲ್ಲಿ ತೊಡಗಿದ್ದಾನೆ, ಯಾಕೆ ಅದಕ್ಕೂ ಹಿಂದೆ ಜನಗಳ ಮೈಮೇಲೆ ಬಟ್ಟೆಗಳೇ ಇರಲಿಲ್ಲ ಎನ್ನುವ ಸತ್ಯವನ್ನ್ನೂ ಈ ಜ್ಞಾನಪೀಠಿಗೆ ತುರ್ತಾಗಿ ಮನವರಿಕೆ ಮಾಡಿಕೊಡಬೇಕಾಗಿದೆ.

ಸ್ವತ: ತಾವು ಯಾವ ಸಾಧನೆಯಲ್ಲೂ ತೊಡಗದೆ, ಆಧ್ಯಾತ್ಮಿಕ ಕ್ಷೇತ್ರದಲ್ಲಿರುವ ಎಲ್ಲಾ ವಿಚಾರಗಳನ್ನೂ ಡೋಂಗಿ ಎಂದು ಜರಿಯುವ ಈ ಸರ್ವಜ್ಞರು ಮಹಾ ಅಪ್ರಾಮಾಣಿಕರೂ ವಂಚಕರೂ ಆಗಿದ್ದಾರೆ. ದೇವರಿಲ್ಲ ಎಂದು ‘ಕಂಡು ಹಿಡಿದಿರುವ’ ಈ ಬೃಹಸ್ಪತಿಗಳು ಹಿಂದೂ ಧರ್ಮ ಗ್ರಂಥಗಳಲ್ಲಿ ಬರುವ ದೇವರ ಕುರಿತಾದ ಅನೇಕ ಘಟನೆಗಳನ್ನು ಅಪಹಾಸ್ಯ ಮಾಡಲು ಟೀಕೆ ಮಾಡಲು ಮಾತ್ರಾ ಧಾರಾಳವಾಗಿ ಬಳಸುತ್ತಾರೆ , ದೇವರೇ ಇಲ್ಲ ಎಂದಾದಮೇಲೆ ಹಾಗೊಂದು ಘಟನೆಯೂ ಇರಲಾರದಲ್ಲವೇ ಎಂಬ ಕನಿಷ್ಠ ಸೌಜನ್ಯವನ್ನೂ ನಾವು ಇವರಿಂದ ನಿರೀಕ್ಷಿಸುವಂತಿಲ್ಲ, ಇಲ್ಲದ ದೇವರು ಮಾಡಿದ ತಪ್ಪುಗಳು ಇಲ್ಲದ ದೇವರ ಅಸಾಮರ್ಥ್ಯ ಎಲ್ಲವೂ ಇವರ ಕಮ್ಮಟದಲ್ಲಿ ಶೋಧಿಸಲ್ಪಡುತ್ತದೆ . ತಾವು ಕಾಣಲಾಗದಿರುವ, ತಮ್ಮ ಅನುಭವಕ್ಕೆ ಬಾರದಿರುವ ಯಾವುದೂ ಸತ್ಯವಲ್ಲ ಎಂದೇ ‘ನಂಬಿರುವ’ ಈ ಆಧುನಿಕ ಸರ್ವಜ್ಞರಿಗೆ ಎಲ್ಲಾ ಪ್ರಾಣಿಗಳಿಗೂ ಸಮಾನವಾಗಿರುವ ಆಹಾರ-ನಿದ್ರಾ-ಮೈಥುನಗಳು ಮಾತ್ರಾ ಜೀವನದ ಪರಮಸತ್ಯ ಅದರಾಚೆಗೆ ಎನೂ ಇಲ್ಲಾ ಏನೇನೂ ಇಲ್ಲ ಹೀಗಾಗಿ ಇವರುಗಳ ಕಥೆ, ಕಾವ್ಯ, ನಾಟಕಗಳಲ್ಲಿ ತೃತೀಯ ಪುರುಷಾರ್ಥವೇ ವಿಜೃಂಭಿಸುತ್ತಿರುತ್ತದೆ. ಹಿಂದೂ ಕಾವ್ಯಗ್ರಂಥಗಳಲ್ಲಿರುವ ಎಲ್ಲಾ ಖಳರ ಬಗ್ಗೆ ಅಭಿಮಾನ ದುರ್ಯೋಧನ, ಕೀಚಕ, ರಾವಣಾದಿಗಳ ಬಗ್ಗೆ ತುಂಬು ಆಭಿಮಾನ ‘ಶ್ರೀ ರಾಮ’ ಶ್ರೀ ಕೃಷ್ಣಾದಿಗಳಲ್ಲಿ ರಂಧ್ರಾನ್ವೇಷಣೆ.

ಪ್ರತಿಯೊಂದು ಜೀವಿಯೂ ತನ್ನ ಜೀವನ ನಿರ್ವಹಣೆಗೆ, ರಕ್ಷಣೆಗೆ, ಸಂತಾನೋತ್ಪತ್ತಿಗೆ ವಿವಿಧ ಉಪಾಯಗಳನ್ನೂ, ಹಲವು ಹುನ್ನಾರಗಳನ್ನೂ ಹೂಡುತ್ತದೆ, ಇದು ಪ್ರಕೃತಿಸಹಜವಾಗಿ ಬಂದಿರಲು ಇವುಗಳ ಪ್ರಯತ್ನದಲ್ಲಷ್ಟೇ ತೊಡಗಿದರೆ ಮನುಷ್ಯನು ಇತರ ಪ್ರಾಣಿಗಳಿಗಿಂತ ಹೇಗೆ ಭಿನ್ನ. ಆಧ್ಯಾತ್ಮಿಕತೆಯೇ ಮನುಷ್ಯನ ಹೆಗ್ಗಳಿಕೆಗೆ ಕಾರಣ, ಲೌಕಿಕ ಸುಖ ಭೋಗಗಳಲ್ಲೇ ನಿಲ್ಲದೆ ಮುಂದುವರೆದು ಅಲೌಕಿಕ ಆನಂದವನ್ನನುಭವಿಸುವುದೇ ಆಧ್ಯಾತ್ಮಿಕತೆ ಇದೇ ನಮ್ಮ ಬುಧ್ಧಿಜೀವಿಗಳಿಗೆ ಅಪಥ್ಯ. ಆಧ್ಯಾತ್ಮಿಕ ಸಾಧನೆಗಳ ಪ್ರಥಮ ಸೋಪಾನ ಪೂಜಾದಿ ಕರ್ಮಗಳು ತತ್ಸಂಬಂಧವಾದ ವಿಧಿ ನಿಷೇಧಗಳು. ಈ ಆಚರಣೆಗಳು ದೀರ್ಘಕಾಲ ನಡೆದು ಸಂಪ್ರದಾಯವೆನಿಸಿಕೋಳ್ಳುತ್ತದೆ, ಮತಾಚಾರ, ಚಿನ್ಹೆಗಳು, ವೇಷ ಭೂಷಣ, ಇವು ಆಯಾ ದೇಶ- ಕಾಲ- ನಂಬಿಕೆಗಳೊಂದಿಗೆ ಹೊಸೆದುಕೊಂಡಿವೆ. ಸತತವಾಗಿ ಕಾಡುವ ಆಸೆ ಆಮಿಷಗಳಿಂದ ಮನಸ್ಸನ್ನು ಹದ್ದು ಬಸ್ತಿನಲ್ಲಿರಿಸಿ ತನ್ಮೂಲಕ ಸಮಾಜದ ಸ್ವಾಸ್ಥ್ಯದ ರಕ್ಷಣೆಗಾಗಿ ಮಾಡಿದ ನಿಯಮಗಳು ಕಟ್ಟುಪಾಡುಗಳನ್ನು ವಿಧಿ ನಿಷೇಧಗಳನ್ನು ಸ್ತ್ರೀ ಪುರುಷ ಸಮಾನತೆಯ ಹೆಸರಿನಲ್ಲೋ, ಶೋಷಣೆಯ ನಿವಾರಣೆಯ ಹೆಸರಿನಲ್ಲೋ ಹಳಿಯುತ್ತಾ ಸ್ವೈರಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದಾರೆ. ಶೀತದ ಬಾಧೆಗೆ ಮೂಗನ್ನೇ ಕೊಯ್ಯುವ ಜಾಣತನವಿದು. ಅಮಿತವಾದ ವೈಯಕ್ತಿಕ ಸ್ವಾತಂತ್ರವನ್ನು ಪ್ರೋತ್ಸಾಹಿಸುತ್ತಾ ಮನೆ ಮುರಿಯುವವರಿಗೆ ಈಗ ಪ್ರಬಲವಾದ ಬೇಜವಾಬ್ದಾರೀ ಮಾಧ್ಯಮಗಳ ಸಹಾಯವೂ ದೊರೆತಿದೆ.

ವಿಜ್ಞಾನಕ್ಕೆ ಮಿತಿ ಇಲ್ಲ ಆದರೆ ಅದಕ್ಕೆ ಮತಿಯೂ ಇಲ್ಲದಿರುವುದು ದುರದೃಷ್ಟಕರ. ಮಾನವಕುಲಕ್ಕೆ ಮಹೋಪಕಾರಿ ಎಂಬ ಗದ್ದಲದೋಡನೆ ಹೊರಬಂದ ಅನೇಕ ವೈಜ್ಞಾನಿಕ ಅವಿಷ್ಕಾರಗಳು ಇಂದು ಮಹಾ ಮಾರಿಯಾಗಿ ದುರುಗುಟ್ಟಿನಿಂತಿವೆ. ಅತಿ ವೈದ್ಯದಿಂ ಹೊಸ ರುಜಿನಕೆಡೆಯಾದೀತು ಎಂಬ ಡಿ.ವಿ.ಜಿ.ಯವರ ಎಚ್ಚರಿಕೆಯಮಾತು ಸಾಕ್ಷಾತ್ಕಾರವಾಗಿದೆ. ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸುತ್ತಿಲ್ಲ, ಅರ್ಥ ಕಾಮಗಳೇ ಅಂತಿಮ ಗುರಿಯಾಗಿದೆ, ಶಿಸ್ತು ಸಂಯಮಗಳನ್ನು ರೂಢಿಯಲ್ಲಿಡಬಲ್ಲ ಧಾರ್ಮಿಕ ಆಚರಣೆಗಳು ಕಂದಾಚಾರಗಳೆಂದು ಜರಿಯಲ್ಪಡುತ್ತಿವೆ. ಹಳೆಯದೆಂಬಕಾರಣಕ್ಕೇ ಒಂದಾನೊಂದು ಪುರಸ್ಕಾರಯೋಗ್ಯವಲ್ಲ ಎಂಬ ಎಚ್ಚರಿಕೆಯ ಮಾತು ಕೂಡ ಹಿಂದೂ ಶಾಸ್ತ್ರಗಳ ಅವಿಭಾಜ್ಯ ಅಂಗವಾಗಿದೆ. ವೈಯಕ್ತಿಕ ಸಾಮರ್ಥ್ಯ, ಅಭಿರುಚಿಗಳಿಗನುಗುಣವಾಗಿ ಹಿಂದೂ ಸಂಪ್ರದಾಯಗಳು ರೂಪುಗೊಂಡಿವೆ, ಬದಲಾವಣೆಗೆ ತೆರೆದುಕೊಂಡೇ ಇರುವ ನಮ್ಮ ಧರ್ಮ ಚಲನಶೀಲವಾಗಿದ್ದು ಮೂಢ ಹಿಂಬಾಲಕರಿಗಿಂತ, ಶ್ರದ್ಧಾವಂತ ಶಿಷ್ಯರನ್ನದು ಬಯಸುತ್ತದೆ.

ಈ ‘ಧೀಮಂಕರ’ ಜಾತಿ-ಮತ ತೊರೆಯುವ ಕರೆಗೆ ಓ ಗೊಟ್ಟಲ್ಲಿ ನಮ್ಮ ದೇಶದ ಹೆಗ್ಗಳಿಕೆಯಾದ ವೈವಿಧ್ಯತೆ ನಾಶವಾಗುವುದರಲ್ಲಿ ಸಂದೇಹವಿಲ್ಲ. ಜಾತಿ ಮತಗಳ ನಡುವೆ ಸಾಮರಸ್ಯ, ಸೌಹಾರ್ದ ಮೂಡಿಸುವ ಪ್ರಯತ್ನ ಇಂದಿನ ತುರ್ತು ಅಗತ್ಯ. ಜಾತಿಪದ್ಧತಿಯನ್ನು ಹೋಗಲಾಡಿಸಲು ಪ್ರಯತ್ನಿಸಿದ ಮಹಾನುಭಾವರನೇಕರು ಹೊಸ ಹೊಸ ಜಾತಿಗಳನ್ನು ಸೃಸ್ಟಿಸಸಲು ಕಾರಣರಾಗಿದ್ದಾರೆ. ವಿಭಿನ್ನ ಜಾತಿಗಳವರ ನಡುವಿನ ಸೌಹಾರ್ದಯುತ ಸಹಬಾಳ್ವೆ, ಒಂದೇ ಜಾತಿಗೆ ಸೇರಿದವರೊಳಗಿನ ಕಲಹಗಳು ನಮ್ಮ ಕಣ್ಣಮುಂದಿರುವಾಗ ಜಾತಿಪದ್ಧತಿಯನ್ನು ಅನಿಷ್ಠ ಎನ್ನುವವರು ಮತಿವಿಕಲರೆನ್ನದೆ ವಿಧಿಇಲ್ಲ. ಮುಸಲ್ಮಾನರ ದುರಾಕ್ರಮಣದಿಂದ ಈ ದೇಶ ಪೂರ್ತೀ ಇಸ್ಲಾಮೀಕರಣಗೊಳ್ಳದೆ ಉಳಿದದ್ದು ಇಲ್ಲಿನ ಜಾತಿಪದ್ಧತಿಯಿಂದಾಗಿಯೇ ಎಂದೂ ಗುರುತಿಸಲಾಗಿದೆ. ನಾಯಿಗೊಂದು ಕೆಟ್ಟಹೆಸರು ಕೊಟ್ಟು ನಂತರ ಅದನ್ನು ಕೊಲ್ಲಿ ಎಂಬ ಆಂಗ್ಲ ನುಡಿಗನುಸಾರವಾಗಿ ಎಲ್ಲಕ್ಕೂ ಹಿಂದೂಧರ್ಮ, ಶಾಸ್ತ್ರಗ್ರಂಥಗಳು, ಇಲ್ಲಿನ ಪದ್ಧತಿಗಳ ಅವಮಾನಿಸುವುದೇ ಇವರಿಗೆ ಪ್ರಿಯ ಹವ್ಯಾಸವಾಗಿದೆ. ಆದರೆ ಸಮಾಧಾನದ ಸಂಗತಿಎಂದರೆ ಈ ಗಾವಿಲರ ಗಳಹನ್ನು ಕೇಳಿಸಿಕೊಳ್ಳುವವರ ಸಂಖ್ಯೆ ನಿಯಂತ್ರಿಸಬಹುದಾದ ಮಿತಿಯಲ್ಲಿದೆ. ಇನ್ನು ಉದಾರೀಕರಣ ಹಾಗೂ ಜಾಗತೀಕರಣಗಳ ಸುನಾಮಿಯಿಂದ ಬದುಕುಳಿಯಬೇಕಾದರೆ ತಮ್ಮ ತಮ್ಮ ಜಾತಿಗೇ, ಆಯಾ ಆಚಾರ ವಿಚಾರಗಳಿಗೇ ಅಂಟಿಕೊಳ್ಳುವುದು ತನ್ಮೂಲಕ ತಮ್ಮತನವನ್ನು ವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದರಿಂದ ಸಾಧ್ಯ.

ಆಸ್ಪೃಶ್ಯತೆ ಸಾಮಾಜಿಕ ಕಳಂಕವೆನ್ನುವುದರಲ್ಲಿ ಸಂದೇಹವಿಲ್ಲ, ಆದರೆ ಒಬ್ಬ ಶ್ವಪಚ ಪಕ್ಕದಲ್ಲಿ ಬಂದು ಕುಳಿತರೆ ನಿರ್ವಿಕಾರವಾಗಿರುವುದು ಕೇವಲ ಬ್ರಹ್ಮಜ್ಞಾನಿಗೋ, ಅವಧೂತನಿಗೋ ಮಾತ್ರ ಸಾಧ್ಯ, ಅಸ್ಪೃಶ್ಯತೆಯ ವಿರುದ್ಧ ಹೋರಾಡುವುದೆಂದರೆ ಯಾವುದೋ ಜಾತಿ, ಜನಾಂಗದವರನ್ನು ದೇವಾಲಯಗಳೊಳಗೆ ಬಲವಂತವಾಗಿ ನುಗ್ಗಿಸುವುದಲ್ಲ, ಅವರಿಗೆ ವಿದ್ಯಾಭ್ಯಾಸದ ಮೂಲಕ ಅವರ ಬದುಕಿನ ಮಟ್ಟ ಸುಧಾರಿಸುವಂತೆ ಮಾಡಿ ಸಾಂಸ್ಕೃತಿವಾಗಿ ಅವರು ಬೆಳೆಯುವಂತೆ ನೋಡಿಕೊಂಡರೆ ಅಸ್ಪೃಶ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ. ಪೇಜಾವರ ಶ್ರೀಗಳ ಹರಿಜನ ಕಾಲೋನಿ ಭೇಟಿಯನ್ನು ‘ಲಂಪಟ’ ಪತ್ರಿಕೆಯೊಂದು ಅಪಹಾಸ್ಯ ಮಾಡಿ ಬರೆದದ್ದನ್ನು ನೋಡಿದರೆ ಹಿಂದೂ ಸಮಾಜವನ್ನು ಒಡೆಯಲು ಇವರು ನಡೆಸುತ್ತಿರುವ ಮಸಲತ್ತು ಸ್ಪಷ್ಟವಾಗಿ ಗೋಚರಿಸುತ್ತದೆ.

ಪರಮ ನಾಸ್ತಿಕ ಹಾಗೂ ಸಂಶಯಾಸ್ಪದ ಚಾರಿತ್ರ್ಯವುಳ್ಳ ವ್ಯಕ್ತಿಯ ನಾಯಕತ್ವದಲ್ಲಿ ಹಿಂದೂಗಳ ಮೇಲೆ ಅನಗತ್ಯವಾಗಿ ಹೇರಲ್ಪಟ್ಟಿರುವ ಸೆಕ್ಯುಲರ್ ವಾದ ಹಿಂದೂಗಳನ್ನು ನಾಶಗೋಳಿಸಲೆಂದೇ ಹೂಡಿರುವ ಕುತಂತ್ರ ಎಂಬುದೀಗ ನಿಚ್ಚಳವಾಗುತ್ತಿದೆ. ಭಾರತದ ಸಂವಿಧಾನ ರಚನೆಯಾಗುವುದಕ್ಕಿಂತ ಎಷ್ಟೋಮೊದಲಿನಿಂದಲೇ ಈ ದೇಶ ಅಂದರೆ ಹಿಂದೂ ಸಂಸ್ಕೃತಿ ಇತರ ಅನೇಕ ಮತಗಳಿಗೆ ಆಶ್ರಯವನ್ನೂ ಗೌರವವನ್ನೂ ನೀಡುತ್ತಲೇ ಬಂದಿದೆ. ನೂರಾರು ವರ್ಷಗಳಕಾಲ ಪರಕೀಯರಿಂದ ಆಳಿಸಿಕೊಂಡೂ ನಾಶವಾಗದೆ ಜೀವಂತವಾಗಿ ಉಳಿದಿರುವ ಈ ಸನಾತನ ಧರ್ಮಕ್ಕೀಗ ಕೊಡಲಿಕಾವುಗಳಾಗುತ್ತಿದ್ದಾರೆ ವಿಚಾರವಾದಿಗಳು. ಹಿಂದೂ ಎಂದು ಹೇಳಿಕೊಳ್ಳುವುದೇ ಕೆಲವರಿಗೆ ಅವಮಾನಕರವಂತೆ ಮತ್ತೊಬ್ಬ ನಾಯಕರಿಗೆ ಬೇರಾವುದೋಮತದಲ್ಲಿ ಹುಟ್ಟುವ ಬಯಕೆಯಂತೆ.

ಅನೇಕ ದೇಶಗಳಲ್ಲಿ ಅಸಮಾನತೆ, ಶೋಷಣೆ, ಬಡತನ, ಅನಕ್ಷರತೆ, ಅನಾರೋಗ್ಯಗಳು ತಾಂಡವವಾಡುತ್ತಿವೆ ಆದರೆ ಆ ದೇಶಗಳಲ್ಲಿ ಆಯಾ ಧರ್ಮವೇ ಇದಕ್ಕೆಲ್ಲಾ ಕಾರಣ ಎಂದು ಹಳಿಯಲು ಅಲ್ಲಿ ಬುದ್ಧಿಜೀವಿಗಳಿಲ್ಲ. ನಮ್ಮ ದೇಶದಲ್ಲಿ ಮಾತ್ರಾ ಹಿಂದುತ್ವವನ್ನು ತೆಗಳಲು ವಿಚಾರವಾದಿಗಳ ಪಡೆ ಸಜ್ಜಾಗಿ ನಿಂತಿದೆ ಅದಕ್ಕೆ ಪೂರಕವಾದ ಸ್ವಾರ್ಥಸಾಧಕ ರಾಜಕೀಯ ಮಹತ್ವಾಕಾಂಕ್ಷೆಗಳು ಹರಳುಗಟ್ಟುತ್ತಿವೆ. ಹತಾಶರಾದ ಕೆಲ ಹಿಂದೂಗಳು ಹಿಂಸಾಚಾರಕ್ಕೂ ಇಳಿಯುತ್ತಿದ್ದಾರೆ, ನಮ್ಮ ಮತೀಯ ಅಲ್ಪ ಸಂಖ್ಯಾತರು ಜಗತ್ತಿನಾದ್ಯಂತ ನಡೆಸುತ್ತಿರುವ ದಾಂಧಲೆಯನ್ನು ಖಂಡಿಸಲು ಇವರ ನಾಲಿಗೆ ಏಳಲಾರದು. ನಮ್ಮ ದೇಶದಲ್ಲೇ ನಮ್ಮ ಊರುಗಳಲ್ಲೇ ನಡೆಯುತ್ತಿರುವ ಇವರ ದುಂಡಾವರ್ತಿತನವನ್ನು ತಡೆಯುವಲ್ಲಿ, ಶಿಕ್ಷಿಸುವವಲ್ಲಿ ರಾಜಕೀಯ ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಿದ್ದರೆ ವಿಚಾರವಾದಿಗಳದ್ದು ಜಾಣಕುರುಡು-ಕಿವುಡು. ಮತೀಯ ಅಲ್ಪ ಸಂಖ್ಯಾತರ ಭಾವನೆಗಳನ್ನು ಎಚ್ಚರವಾಗಿ ಕಾಯುವವರಿಗೆ ಹಿಂದೂಗಳ ಭಾವನೆಗಳಬಗ್ಗೆ ಕುಚೋದ್ಯ ದೃಷ್ಟಿ, ಸನಾತನ ವೃಕ್ಷಕ್ಕೆ ಕಿಡಿಗೇಡಿಗಳ ಕೀಟ ಬಾಧೆ.

ಜಾಗತಿಕ ಮಟ್ಟದಲ್ಲಿ ಎಡಪಂಥೀಯ ವಿಚಾರಗಳು ಸೋತು ತಿರಸ್ಕರಿಸಲ್ಪಟ್ಟಿರುವಾಗ, ಭಾರತದಲ್ಲಿ ಈ ಸಂಘಟನೆಗಳು ಹಿಂಸಾಚಾರವನ್ನು ಪ್ರೋತ್ಸಾಹಿಸುತ್ತಿವೆ. ಇಲ್ಲಿರುವ ನಿರುದ್ಯೋಗ, ಬಡತನಗಳನ್ನು ದುರುಪಯೋಗಪಡಿಸಿಕೊಂಡು ಭಾರತ-ವಿರೋಧಿ ಶಕ್ತಿಗಳ ಸಹಯೋಗದೊಡನೆ ವ್ಯವಸ್ಥೆಯನ್ನು ಹಾಳುಗೆಡವಲು ಪ್ರಯತ್ನಿಸುತ್ತಿವೆ. ಗತಿಗೆಟ್ಟ ಕೆಲವು ರಾಜಕೀಯಪಕ್ಷಗಳು ಇವರೊಂದಿಗೆ ‘ಕೂಡಿಕೆ’ ಮಾಡಿಕೊಂಡಿರುವುದು ಈ ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ಅಪಾಯತರುತ್ತಿದೆ. ಈ ಮನೆಹಾಳುತನಕ್ಕೆ ವಿಚಾರವಾದಿಗಳ ಸೈದ್ಧಾಂತಿಕ ಬೆಂಬಲ ಹಾಗೂ ಕುಮ್ಮಕ್ಕುಗಳಿವೆ. ಸಮಾಜದಲ್ಲಿ ಎಷ್ಟೋ ಓರೆ ಕೋರೆಗಳಿವೆ ಎಲ್ಲಕ್ಕೂ ಸಂಘರ್ಷದ ಹಾದಿಯನ್ನು ಹಿಡಿದರೆ ಬಹುನಾಯಕತ್ವ ಹಾಗೂ,ಅಥವಾ ಅನಾಯಕತ್ವದಡಿ ಸಿಲುಕಿ ದೇಶ ನಾಶವಾಗುತ್ತದೆ. ಅವಿದ್ಯಾವಂತರನ್ನು, ಹಿಂದುಳಿದಿರುವವರನ್ನು ರೊಚ್ಚಿಗೆಬ್ಬಿಸಿವುದು ಸಲ್ಲ, ಸಾಮಾಜಿಕನ್ಯಾಯದ ಹೆಸರಿನಲ್ಲಿ ಹೋರಾಟಕ್ಕೆ ಹೊರಟ ಅವಿದ್ಯಾವಂತರ, ಅರೆ ವಿದ್ಯಾವಂತರ ಪಡೆಯನ್ನು ಯಾರು, ಎಲ್ಲಿ, ಹೇಗೆ, ಯಾವುದಕ್ಕೆ ದುರುಪಯೋಗ ಪಡಿಸಿಕೊಳ್ಳುತ್ತಾರೋ ಅಂದಾಜು ಮಾಡಲಾಗದು. ಮಹಾತ್ಮಾ ಗಾಂಧೀಜಿಯವರು ಹುಟ್ಟು ಹಾಕಿದ ಚಳುವಳಿಗಳೇ ಹಾದಿ ತಪ್ಪಿ ಅನಾಹುತಗಳಾಗಿವೆ, ‘ಎಡವಟ್ಟು’ ಜನರಿಂದ ಅಪಾಯವಿದೆ. ಅಧಿಕಾರದಾಸೆಗೆ ಎಡಪಕ್ಷಗಳಿಗೆ ಮಣಿದಿರುವ ರಾಜಕೀಯ ಪಕ್ಷಗಳಿಗೆ ತಾವು ಈ ರಾಷ್ಟ್ರದ ಸಂಸ್ಕೃತಿಗೆ ಎಸಗುತ್ತಿರುವ ದ್ರೋಹದ ಅರಿವು ಇದ್ದಂತಿಲ್ಲ. ಅಸಹಿಷ್ಣುಗಳಾದ ಮುಸಲ್ಮಾನರ ಹಾಗೂ ಕ್ರೈಸ್ತರಿಗಿರುವ ಜನ ಬಲ ಹಾಗೂ ಹಣ ಬಲಗಳ ವಿರುದ್ಧ ಹೋರಾಡುತ್ತಾ ಬದುಕಿರುವ ಸನಾತನ ಧರ್ಮ ಉಳಿಯಬೇಕು ಬೆಳೆಯಬೇಕು ಜಗತ್ತಿಗೆ ಸಹನೆ ಸಹಬಾಳ್ವೆಯ ಆದರ್ಶವಾಗಿ.

Rating
No votes yet

Comments