ಎಲ್ಲವೂ ಬಿಜೆಪಿಮಯ, ಅಭಿವೃದ್ಧಿ ಅಯೋಮಯ

ಎಲ್ಲವೂ ಬಿಜೆಪಿಮಯ, ಅಭಿವೃದ್ಧಿ ಅಯೋಮಯ

ಬೆಂಗಳೂರಿನಲ್ಲಿ ಕರ್ನಾಟಕ ಸರಕಾರದ ಚುಕ್ಕಾಣಿಯನ್ನು ಬಿಜೆಪಿಯು ಹಿಡಿದ ಸಮಯದಲ್ಲೇ, ಅದೇ ಪಕ್ಷ ಹುಬ್ಬಳ್ಳಿ-ಧಾರವಾಡದ ಮಹಾನಗರ ಪಾಲಿಕೆಯ ಚುಕ್ಕಾಣಿಯನ್ನು ಹಿಡಿಯಿತು. ಮಹಾನಗರದ ವ್ಯಾಪ್ತಿಯ ಎಲ್ಲಾ ಶಾಸಕರೂ ಬಿಜೆಪಿಯವರೇ, ಧಾರವಾಡ ಜಿಲ್ಲೆಯ ೭ಶಾಸಕರಲ್ಲಿ ಆರು ಜನರು ಬಿಜೆಪಿಯವರು. ಒಬ್ಬರಿಗೂ ಮಂತ್ರಿ ಸ್ಥಾನ ಸಿಗದಿರುವದು ಬೇರೆ ಸಂಗತಿ. ಎಲ್ಲವೂ ಬಿಜೆಪಿಮಯವಾಗಿರುವಾಗ ಸಹಜವಾಗಿ ಅವಳಿ ನಗರದ ಜನತೆ ಅಭಿವೃದ್ಧಿಯ ಕನಸು ಕಾಣತೊಡಗಿದರು.

ಮಣಿವಣ್ಣನ್ ಆಯುಕ್ತರಾಗಿದ್ದಾಗ ಅನೇಕ ರಸ್ತೆಗಳು ಅಭಿವೃದ್ಧಿಗೊಂಡವು, ಹೊಸ ಯೋಜನೆಗಳು ಪ್ರಾರಂಭವಾದವು. ಕೆಲವು ಸ್ಥಳಗಳಲ್ಲಿ ಹೊಸ ಉದ್ಯಾನಗಳು ನಿರ್ಮಾಣವಾದವು. ಇವೆಲ್ಲಾ ಅವಳೀ ನಗರದ ಜನರಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿತ್ತು. ಅವರ ನಿರ್ಗಮನದ ನಂತರ ಹೊಸ ಆಯುಕ್ತರು ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಂತೆ ಕಾಣುತ್ತಿಲ್ಲ.

ಇತ್ತೀಚಿನ ಭಾರಿ ಮಳೆಯ ನಂತರ ತುಂಬಿ ಹರಿದ ಉಣಕಲ್ ಕೆರೆಯ ನೀರಿನಿಂದ ಅನೇಕ ಕಡೆ ರಸ್ತೆಗಳು ಕೊಚ್ಚಿಹೋಗಿವೆ, ಆದರೂ ಯಾವ ನಗರಸಭಾ ಸದಸ್ಯರು, ಮಹಾಪೌರರು ಬಂದು ನೋಡುವ ಔದಾರ್ಯವನ್ನು ಕೂಡಾ ತೋರಿಸಿಲ್ಲ. ಉಣಕಲ್ ಕೆರೆಯ ನೀರನ್ನು ಉಪಯೋಗಕ್ಕೆ ನಿಲ್ಲಿಸಿದ ನಂತರ ನೀರಿನ ಮಟ್ಟ ಕಡಿಮೆಯಾಗದ ಕಾರಣ ಕಳೆದ ೪ ವರ್ಷಗಳಲ್ಲಿ ಉಣಕಲ್ ಕೆರೆ ತುಂಬಿ ಕೋಡಿ ಬೀಳುವದು, ರಸ್ತೆಗಳು ಕೊಚ್ಚಿಹೋಗುವದು ಸಾಮಾನ್ಯವಾಗಿದೆ. ಈ ಸಮಸ್ಯೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ದೂರದೃಷ್ಟಿಯುಳ್ಳ ಯೋಜನೆಯು ಬೇಕಿದೆ. ಕೋಡಿಯಗುಂಟ ಇರುವ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಅತ್ಯಾವಶ್ಯಕೆವಾಗಿದೆ.

ಹುಬ್ಬಳ್ಳಿ-ಧಾರವಾಡ ನಡುವಿರುವ ರಾಷ್ಟ್ರೀಯ ಹೆದ್ದಾರಿ-೪ರ ರಸ್ತೆಯು ೧೫ ವರ್ಶಗಳ ಹಿಂದೆ ಡಾಂಬರೀಕರಣಗೊಂಡಿತ್ತು, ಈಗ ಅನೇಕ ಕಡೆಗಳಲ್ಲಿ ರಸ್ತೆಯು ಕಿತ್ತುಹೋಗಿದ್ದು ಹೊಸ ಡಾಂಬರೀಕರಣ ಅತ್ಯಾವಶ್ಯಕವಾಗಿದೆ. ಆದರೆ ಈ ರಸ್ತೆಯ ಮಾಲೀಕತ್ವದ ಪ್ರಶ್ನೆ ಇನ್ನೂ ಸ್ಪಷ್ಟಗೊಲ್ಲದ ಕಾರಣ ಕಿತ್ತುಹೋದ ರಸ್ತೆಯಲ್ಲಿಯೇ ಓಡಾಡುವಂತಾಗಿದೆ. ಮಹಾನಗರಪಾಲಿಕೆ ಈ ಅಸ್ತೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿಗೊಳಿಸಬೇಕು. ಅಷ್ಟೇ ಅಲ್ಲದೇ ನಗರದ ಎಲ್ಲ ಭಾಗಗಳಲ್ಲಿ ಹೊಸ ರಸ್ತೆ ನಿರ್ಮಾಣದ ಅವಶ್ಯಕತೆ ಕಂಡುಬರುತ್ತಿದೆ.

ಅನೇಕ ಬಾರಿ ಹು-ಧಾ ಅವಳಿ ನಗರದಲ್ಲಿ ಐಟಿ ಉದ್ಯಮ ಸ್ಥಾಪಿಸಲು ಎಲ್ಲ ಅತ್ಯಾವಶ್ಯಕ ಸೌಲಭ್ಯಗಳನ್ನು ಕೊಡುವದಾಗಿ ಹೇಳುವ ಸರಕಾರ ಯಾವುದೇ ಕಂಪನಿಗೆ ಇವತ್ತಿನವರೆಗೂ ಒಂದಿಂಚು ಸ್ಥಳವನ್ನು ಕೊಟ್ಟಿಲ್ಲ. ಬರೀ ಹೇಳಿಕೆಗಳಿಂದ ಮಾತ್ರ ಕಂಪನಿಗಳು ಬರಲು ಸಾಧ್ಯವಿಲ್ಲ. ಧಾರವಾಡದ ಹತ್ತಿರ ಟಾಟಾ ಮೋಟರ್ಸ್ ಸಂಸ್ಥೆಗೆ ೮೦೦ ಎಕರೆಗೂ ಹೆಚ್ಚು ಸ್ಥಳ ನೀಡಲಾಗಿದ್ದು ಅಲ್ಲಿಯೇ 'ನ್ಯಾನೋ' ಉತ್ಪಾದನಾ ಘಟಕ ಸ್ಥಾಪಿಸುವಂತೆ ಕೈಗಾರಿಕಾ ಮಂತ್ರಿಗಳಿ ಕೇಳಿಕೊಂಡಿಲ್ಲ. ಇಲ್ಲಿ ನ್ಯಾನೊ ಉತ್ಪಾದನಾ ಘಟಕ ಸ್ಥಾಪಿತವಾದ್ರೆ ಸಾಕಷ್ಟು ಜನರಿಗೆ ಉದ್ಯೋಗ ದೊರೆಯುದಲ್ಲದೇ ಕೈಗಾರಿಕೆ ಬೆಳವಣಿಗೆಯು ಚುರುಕುಗೊಳ್ಳುವದು. ಐಟಿ ಉದ್ಯಮ ಅವಳಿ ನಗರದಲ್ಲಿ ಪ್ರಾರಂಭವಾದರೆ ಬೆಂಗಳೂರಿಗೆ ಗೂಳೆ ಹೋಗಿರುವ ಉತ್ತರಕರ್ನಾಟಕದ ಜನತೆ ಇತ್ತ ಕಡೆಗೆ ಚಿತ್ತೈಸಿ ಬೆಂಗಳೂ ನಗರದ ಜನದಟ್ಟಣೆಯನ್ನು ಕೂಡಾ ಕಡಿಮೆ ಮಾಡುವರು.

ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೇ ವಲಯದ ಕೇಂದ್ರ ಕಚೇರಿಯಿದೆ. ಈ ವಲಯದಲ್ಲಿ ಅತೀ ಕಡಿಮೆ ಜೋಡಿ ಮಾರ್ಗವಿದೆ. ಹುಬ್ಬಳ್ಳಿ-ಬೆಂಗಳೂರಿನ ಮಾರ್ಗ ಜೋಡಿ ಮಾರ್ಗವಾಗಿ ಪರಿವರ್ತನೆಗೊಳುವದು ಅತ್ಯಾವಶ್ಯಕವಾಗಿದೆ. ಇದರಿಂದ ಪ್ರಯಾಣದ ಸಮಯ ಕಡಿಮೆಯಾಗುವದಲ್ಲದೇ, ಹೊಸ ಟ್ರೇನುಗಳನ್ನು ಸಹ ಓಡಿಸಬಹುದು. ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲೂ ಕೂಡ ಹೊಸತನದ ಜರೂರಿಯಿದೆ. ಬೆಂಗಳೂರಿನಲ್ಲಿ ಉಪಯೋಗಿಸಿದ ಹಳೆಯ ಬಸ್ಸುಗಳನ್ನು ಇಲ್ಲಿ ಹಾಕುವದರ ಬದಲು ಒಳ್ಳೆಯ ಬಸ್ಸುಗಳನ್ನು ಇಲ್ಲಿ ಓಡಿಸಬೇಕು. ವೋಲ್ವೊ ಬಸ್ಸುಗಳಲ್ಲಿ ಸಂಚರಿಸುವ ಸಾರಿಗೆ ಮಂತಿಗಳು ಒಮ್ಮೆ ಹುಬ್ಬಳ್ಳಿಯ ಬಸ್ಸುಗಳಲ್ಲಿ ಅಡ್ಡಾಡಿ ನೋಡಬೇಕು.

ಹಿಂದಿನ ೬ ತಿಂಗಳಲ್ಲಿ ಹುಬ್ಬಳ್ಳಿ ಅನೇಕ ಭಯೋತ್ಪಾದಕರನ್ನು ಸೆರೆ ಹಿಡಿಯಲಾಗಿದೆ, ನ್ಯಾಯಾಲಯದ ಆವರಣದಲ್ಲೇ ಬಾಂಬ್ ಸ್ಫೋಟ್ ಕೂಡ ಸಂಭವಿಸಿದೆ. ಇಷ್ಟಾದರೂ ಸರಕಾರ ಒಬ್ಬ ದಕ್ಷ, ನಿಷ್ಟಾವಂತ ಅಧಿಕಾರಿಯನ್ನು ಪೋಲೀಸ್ ಆಯುಕ್ತರನ್ನಾಗಿ ನೇಮಿಸುವ ಗೋಜಿಗೆ ಹೋಗಿಲ್ಲ.

ಇವುಗಳನ್ನೆಲ್ಲಾ ನೋಡಿದಾಗ ಸರಕಾರಕ್ಕೆ ಅವಳೀ ನಗರಗಳ ಅಭಿವೃದ್ಧಿಯಲ್ಲಿ ಯಾವುದೇ ಶ್ರದ್ಧೆಯಿಲ್ಲ ಎನಿಸುವದಿಲ್ಲವೇ?
ಕರ್ನಾಟಕದ ಬೇರೆ ನಗರಗಳ ಸ್ಥಿತಿಯೂ ಹೀಗೇಯೇ ಇರಬಹುದಲ್ಲವೇ?

Rating
No votes yet

Comments