ಏನ್ರಿ ಸ್ವಾಮಿ ಬೆಂಗ್ಳೂರ್ ಸರ್ಯಾಗ್ ನೋಡಿದಿರೇನ್ರಿ ?!
ಮೊನ್ನೆ ಅಂದ್ರೆ ಸುಮಾರು ಒಂದ್ ತಿಂಗಳ ಹಿಂದೆ ನಾನು ಬೆಂಗಳೂರಿಗೆ ಹೋಗಿದ್ದು. ಈ ಸಲ ಬ್ಯಾಟರಾಯಪುರದಿಂದ ಮೆಜೆಸ್ಟಿಕ್ ಕಡೆ ಬಸ್ ನಲ್ಲಿ ಬರ್ತಿದ್ದೆ. ಆಗ ಆದ ಅನುಭವಿದು.
ಬೆಂಗ್ಳೂರ್ ಗೊತ್ತೇನ್ರಿ ಅಂದ ಮಹಾನುಭಾವ ಎಷ್ಟು ಅರ್ಥಗರ್ಭಿತವಾಗಿ ಹೇಳ್ದ ಅನ್ನೊದು ಈಗ್ ತಿಳೀತ್ ನೋಡ್ರಿ ! ಖಂಡಿತ ನಮ್ ಬೆಂಗ್ಳೂರೆ ಬೇರೆ ಈಗಿರೋ ಬ್ಯಾಂಗ್ಳೂರೆ ಬೇರೆ.
ಅಯ್ಯೋ ರೈಲ್ವೆ ಸ್ಟೇಷನ್ ಮುಂದೆ ಹೋಗಲ್ವಾ ಅಂತ ಪ್ರಶಾರ್ಥಕವಾಗಿ ಕಂಡಕ್ಟರ್ನ ನೋಡೊ ಹೊತ್ತಿಗಾಗಲೇ ಬಸ್ ಮೇನ್ ಬಸ್ ಸ್ಟಾಂಡ್ ನೊಳ್ಗೆ ನುಗ್ಗಿ ತಿರುಗಿಕೊಂಡು ನಿಂತಿತು. ನಮ್ಮ ಬಸ್ಸು ಈಗಿನ ಬಸ್ ಸ್ಟಾಂಡ್ ನ ಹತ್ತಿರ ಬಂದು ಚಿಕ್ಕ ತಿರುವಿನಿಂದ ಒಳಗಡೆ ೨೩ ನೇ ನಂಬರ್ ಪ್ಲಾಟ್ ಫಾರಂ ನಲ್ಲಿ ನಿಂತಿತು. ಅಲ್ಲಿಂದ ರೈಲ್ವೆ ಸ್ಟೇಷನ್ ಹತ್ತಿರ ಕಾಣ್ಸತ್ತೆ. ಆದ್ರೆ ಸಾಮಾನಿದ್ರೆ ಭಾಳಾ ಫಜೀತಿ. ಅಲ್ಲಿಂದ ಸಾಮಾನ್ ಹೊತ್ಗೊಂಡು ದಿಬ್ಬದಮೇಲೆ ಹೋಗಿ ಅಲ್ಲಿಂದ ಗವಿಯಂತಹ ಕಗ್ಗತ್ತಲಿನ ಕೊಳಕು ನೀರಿನ ಅಸಹ್ಯ-ಗಬ್ಬು-ವಾಸನೆಯ ಒಳರಸ್ತೆಯಲ್ಲಿ ನಡೆದು ಮೆಟ್ಟಲು ಹತ್ತಿ ಸಾಗಬೇಕು. ರಿಕ್ಷಾ ಆದಾರಿನಲ್ಲಿ ಬರಲ್ವಲ್ಲಾ ! ಏನಾಗಿದಾರ್ರಿ ನಮ್ಮ ಬೆಂಗಳೂರಿನ 'ಜಗಳಗಂಟಿ ರಿಕ್ಷಾ ಡ್ರೈವರ್' ಗಳು. ೧೭ ರೂಪಾಯಿ ಮಿನಿಮಮ್ ಮಾಡಿದಾರೆ. ೨೦ ರುಪಾಯಿಗೆ ಹೊಡ್ದಾಡ್ತಿದ್ದಾರೆ. ಬೊಂಬಾಯ್ನಲ್ಲೆ ವಾಸಿ. ಮಿನಿಮಮ್ ೧೧ ರುಪಾಯಿ. ರಸ್ತೆ ಕ್ರಾಸ್ ಮಾಡೋದೊಂದು ಹರಸಾಹಸವೇ. ಸರಿ.
ಹತ್ತಿರದಲ್ಲೇ ಚಿಕ್ಕ ಪಾರ್ಕ್ ಮಾಡಿದಾರೆ. ಆದ್ರೆ ಅಲ್ಲೆಲ್ಲಾ ಭಿಕ್ಷುಕರು ಮಲ್ಗಿರ್ತಾರೆ. ಅಲ್ಲೊಂದು ನ್ಯಾರೊ ಗೇಜ್ ರೈಲ್ವೆ ಇಂಜಿನ್ ನಿಲ್ಸಿದಾರೆ. ಚೆನ್ನಾಗೇನೊ ಇದೆ. ಆದ್ರೆ ಅದನ್ನ ನೋಡ್ಕೊಳ್ಳೋರ್ಯಾರು ಇಲ್ಲದೆ ಧೂಳಲ್ಲಿ ಬಣ್ಣ ಕೆಟ್ಟು ಹೀನ ಸ್ಥಿತಿಯಲ್ಲಿದೆ. ವಸ್ತುಸಂಗ್ರಹಾಲಯದ್ದಿಡೋ ಇಂಜಿನ್ ನ ಇಲ್ಲಿಟ್ರೆ ಹ್ಯಾಗೆ. ಸ್ವಲ್ಪವೂ ಅಸ್ಥೆ ಆಸಕ್ತಿ ಇದ್ರೆ ತಾನೆ.
ಸ್ಟೇಷನ್ ಮುಂದೆ ಫಲಕಗಳೇನೊ ಇವೆ. ಅವೆಲ್ಲಾ ಓದಲೂ ಸಾಧ್ಯವಾಗದ ರೀತಿ ಇವೆ. ಧೂಳು ಕೊಳಕು, ಅವಕ್ಕೆ ಆವರಿಸಿ, ಓದೋದೇನು ಬೇಡ ಅಂತ ಮುಖಕ್ಕೆ ರಾಚಿ ಹೇಳ್ತಾ ಇವೆಯೋನೊ ಅನ್ಸಿದ್ರೆ ಸುಳ್ಳಲ್ಲ ! ಯಾರ ಕಾಲದಲ್ಲಿ ಯಾವ ಮಂತ್ರಿ, ಉದ್ಘಾಟನೆ ಮಾಡಿದ್ದು ಇತ್ಯಾದಿ ತಿಳ್ಕೊಳೊ ಆಸಕ್ತಿ ಯಾರ್ಗಿದೆ ?!
ಸ್ಟೇಷನ್ ಮುಂದಿನ ರಸ್ತೆಯೇ ತೋಟ್ದಪ್ಪನ್ ರಸ್ತೆ. ಅದರ ಮುಂದೇ ನಾವು ರಿಕ್ಷಾದಲ್ಲಿ ಕಾಟನ್ ಪೇಟೆ, ಶಂಕರಮಠ, ಸಜ್ಜನ್ ರಾವ್ ಸರ್ಕಲ್, ಬಸವನಗುಡಿ ಪೋಲೀಸ್ ಶ್ತೇಷನ್, ಮಾಡೆಲ್ ಹೌಸ್ ರಸ್ತೆ, ಟಾಟ ಸಿಲ್ಕ್ ಫೋರಂ, ಯಡಿಯೂರ್ ಕೆರೆ, ಆಮೇಲೆ, ಕುರ್ಝಾಲ್ ಹೌಸ್ ಹತ್ರದ ನಮ್ಮ ಮನೆಗೆ ಹೋಗ್ತಿದ್ವಿ. ಈಗಲೂ ಅಲ್ಲೇ ನಾವಿರೋದು ಆದ್ರೆ ರಸ್ತೆಗಳು ಬೇರೆ. ಮೆಟ್ರೊ ಅವಾಂತರ. ಕಡಿದು ಗುಡ್ಡೆ ಹಾಕಿದಾರೆ !
Rating