ಕಥೆ : 'ವಿ-ಜಯ'

ಕಥೆ : 'ವಿ-ಜಯ'

ಪಶ್ಚಿಮ ದಿಕ್ಕಿಗೆ ಸಮುದ್ರ, ಉಳಿದ ದಿಕ್ಕಿನಲ್ಲಿ ಗುಡ್ಡಗಳು ಹಾಗೂ ದಟ್ಟ ಅರಣ್ಯದಿಂದ ಸುತ್ತುವರಿದಿದ್ದ ಪ್ರದೇಶದ ರಾಜನಾಗಿದ್ದ ‘ವಿಜಯ ರಾಜ’ ನದು ವಿಲಾಸೀ ಜೀವನ. ಹಿರಿಯ ಮಗನೆಂಬ ಕಾರಣಕ್ಕೆ ವಂಶಪಾರಂಪರ್ಯವಾಗಿ ಒದಗಿ ಬಂದ ರಾಜ್ಯಕ್ಕೆ  ಪಟ್ಟಾಭಿಶಿಕ್ತನಾಗಿ ಆಗಲೇ ಹತ್ತು ವರ್ಷಗಳು ಕಳೆದಿದ್ದವು. ಭೌಗೋಳಿಕವಾಗಿ ಗುಡ್ಡ, ಬೆಟ್ಟ, ಸಮುದ್ರಗಳಿಂದ ಸುತ್ತುವರಿದು ಅಲ್ಲದೇ ಉಳಿದ ದೊಡ್ಡ ದೊಡ್ಡ ರಾಜರುಗಳ ಸಾಮ್ರಾಜ್ಯಗಳಿಂದಲೂ ದೂರವೇ ಇದ್ದರಿಂದ, ವಿಜಯರಾಜನಿಗೆ ಹೇಳಿಕೊಳ್ಳುವ ಶತ್ರುಗಳ ತೊಂದರೆಯೂ ಇರಲಿಲ್ಲ. ಹಾಗಾಗಿ ಕಲಿತಿದ್ದ ಅಲ್ಪ ಸ್ವಲ್ಪ ಶಸ್ತ್ರಾಭ್ಯಾಸವೂ ರಾಜನಿಗೆ ಮರೆತಂತಾಗಿತ್ತು. ಹೆಸರು ವಿಜಯನೆಂದು ಇದ್ದರೂ ಬೇರೆ ರಾಜ್ಯವನ್ನು ದಂಡೆತ್ತಿ ಹೋಗಿ ವಿಜಯ ಸಾಧಿಸಿ ರಾಜ್ಯ ವಿಸ್ತರಣೆಯೂ ಕನಸಿನ ಮಾತಾಗಿಯೇ ಇತ್ತು.

ಹೀಗಿದ್ದರೂ ರಾಜ್ಯ ಇದ್ದುದರಲ್ಲಿಯೇ ಸಂಪದ್ಭರಿತವಾಗಿಯೇ ಇತ್ತು. ಈ ಭಾಗವೆಲ್ಲ ಹೆಚ್ಚಿಗೆ ಮಳೆಯಾಗುವ  ಪ್ರದೇಶವಾದ್ದರಿಂದ ಕಾಲ ಕಾಲಕ್ಕೆ ಸರಿಯಾಗಿ ಮಳೆ ಬೆಳೆಯಾಗಿ ಜನರ ಹೊಟ್ಟೆಗೆ ಏನೂ ತೊಂದರೆ ಇರಲಿಲ್ಲ. ಅಲ್ಲದೇ ರಾಜ್ಯದ ಜನರು ಇತ್ತೀಚಿಗೆ ಸಮುದ್ರ ವ್ಯಾಪಾರವನ್ನೂ ಪ್ರಾರಂಭಿಸಿದ್ದರಿಂದ ಆರ್ಥಿಕವಾಗಿಯೂ ಸುಧಾರಿಸಿದ್ದರು. ಅಲ್ಲದೇ ಬಹಳ ದೂರದಲ್ಲಿದ್ದ ದೊಡ್ಡ ದೊಡ್ಡ ಸಾಮ್ರಾಜ್ಯಗಳು  ಬೆಟ್ಟ ಗುಡ್ಡ ದಾಟಿ ಇಷ್ಟು ದೂರ ಬಂದು  ಈ ಸಣ್ಣ ರಾಜ್ಯವನ್ನು ಕಬಳಿಸಲು ಅಷ್ಟೊಂದು ಆಸಕ್ತಿ ಹೊಂದಿರಲಿಲ್ಲ. ಹೀಗಾಗಿ ಬಹಳ ವರ್ಷದಿಂದ ಯುದ್ಧದಂತಹ ವಿನಾಶದ ಭಯವಿಲ್ಲದೇ ಜನರಲ್ಲಿ ಶಾಂತಿ ನೆಮ್ಮದಿ ನೆಲೆಸಿತ್ತು. ಹೀಗೆ ವಿಜಯ ರಾಜನು ಯುದ್ಧ,ಆಕ್ರಮಣಗಳ ಭಯವಿಲ್ಲದೇ ರಾಜ್ಯ ವಿಸ್ತರಣೆಯ ಗೋಜಿಗೂ ಹೋಗದೆ ತನ್ನದೇ ಆದ ಆಪ್ತವಲಯದ ಸಾಹಾಯಕರನ್ನು , ಮಂತ್ರಿಗಳನ್ನು ನೀಮಿಸಿಕೊಂಡು ರಾಣಿ, ದಾಸಿಯರ ಜೊತೆ ವಿಲಾಸೀ ಜೀವನದಲ್ಲಿ ತೊಡಗಿಕೊಂಡಿದ್ದ. ಅಲ್ಲಲ್ಲಿ ಕಳ್ಳತನ, ದರೋಡೆ ಅಸ್ತಿ ವಿವಾದದಂತಹ ಸಮಸ್ಯೆಗಳು ಇರುತ್ತಿದ್ದರೂ ಅವೆಲ್ಲಾ ರಾಜನವರೆಗೂ ಹೋಗದೆ ಮಂತ್ರಿಗಳೇ ತಮಗನಿಸಿದಂತೆ ಪರಿಪರಿಹರಿಸುವ ಅಧಿಕಾರವನ್ನೂ ಹೊಂದಿದ್ದರು.

ವಿಜಯ ರಾಜನ ರಾಜ್ಯವನ್ನು  ದಾಟಿ ಹತ್ತಿರ ಅನ್ನುವಂತೆ ಇರುವ ರಾಜ್ಯ  ಜಯರಾಜನದು. ಈತನ ರಾಜ್ಯ ಕಡು ಬಯಲು ಸೀಮೆಯ ರಾಜ್ಯ. ಮಳೆ  ಬಂದರಷ್ಟೇ ಬೆಳೆಯೆನ್ನುವ ಪರಿಸ್ಥಿತಿ ಇಲ್ಲಿನ ಕೃಷಿಕರದು. ಹಾಗಾಗಿ ಬರಗಾಲವೆನ್ನುವುದು ಇಲ್ಲಿ ಸಾಮಾನ್ಯ ಸ್ಥಿತಿ. ಬೇರೆ ಯಾವುದೇ ಸರಿಯಾದ ಆರ್ಥಿಕ ಮೂಲವಿಲ್ಲದೇ ಜನರ ಜೀವನ ಸುಧಾರಿಸಲು ಬೇರೆ ಯಾವುದಾದರೊಂದು ಮಾರ್ಗ ಕಂಡುಕೊಳ್ಳುವ ಅನಿವಾರ್ಯತೆ ಜಯರಾಜನಿಗೆ ಒದಗಿ ಬಂದಿತ್ತು. ದೊಡ್ಡ ದೊಡ್ಡ ರಾಜ್ಯಗಳನ್ನು ಆಕ್ರಮಿಸುವ ಸಾಮರ್ಥ್ಯ ವಿಲ್ಲದ ಜಯರಾಜನಿಗೆ ಉಳಿದಿದ್ದು ‘ವಿಜಯ’ ರಾಜನ ರಾಜ್ಯ ಮಾತ್ರ. ಅಲ್ಲದೇ ಇತ್ತೀಚಿಗೆ ಸಮುದ್ರ ವ್ಯಾಪಾರವು ಬಹಳ ಲಾಭದಾಯಕವಾದ ವಾಣಿಜ್ಯ ವೃತ್ತಿಯಾಗಿ ಪ್ರಸಿದ್ದಿ ಪಡೆಯುತ್ತಿರುವುದೂ ಜಯ ರಾಜನ ಉತ್ಸಾಹಕ್ಕೆ ಮತ್ತಷ್ಟು ಇಂಬು ಬಂದಿತ್ತು. ಆದರೆ ಜಯ ರಾಜನ ಸೈನ್ಯಕ್ಕೆ ಗುಡ್ಡ ದಟ್ಟ ಅರಣ್ಯ ಗಳಿಂದ ಸುತ್ತುವರಿದಿದ್ದ ವಿಜಯ ರಾಜನನ್ನು ಆಕ್ರಮಿಸುವುದು ಕಷ್ಟದ  ಮಾತಾಗಿತ್ತು . ಇವೆಲ್ಲವನ್ನೂ ಅರ್ಥ ಮಾಡಿಕೊಂಡಿದ್ದ ಜಯರಾಜ ವರ್ಷಗಳಿಂದ ಗುಡ್ಡ ಬೆಟ್ಟಗಳಲ್ಲಿ ಯುದ್ಧ ಮಾಡುವ ತರಬೇತಿ ಕೊಡಿಸುವ ವ್ಯವಸ್ಥೆಯನ್ನ ತನ್ನ  ಸೈನ್ಯಕ್ಕೆ ಮಾಡಿಸಿದ್ದ . ಎಷ್ಟೇ ತರಬೇತಿ ನೀಡಿದ್ದರೂ ವಿಜಯ ರಾಜನನ್ನು ಸುಲಭವಾಗಿ ಗೆಲ್ಲುವ ಆತ್ಮ ವಿಶ್ವಾಸ ಇನ್ನೂ ಜಯರಾಜನಲ್ಲಿ ನೆಲೆಸಿರಲಿಲ್ಲ. ಆದರೆ ಈ ವರ್ಷ ರಾಜ್ಯದಲ್ಲಿ ದಟ್ಟ ಬರಗಾಲ ಆವರಿಸಿತ್ತು. ಜನರು ನೀರು ಆಹಾರಕ್ಕೆ ಪರಿತಪಿಸುತ್ತಿದ್ದರು. ಜನರ ಸಹನೆ ಮೀರಿತ್ತು. ಇಂಥಹ ಜನರ ಅಸಹನೆಯನ್ನು ಅಸ್ತ್ರವನ್ನಾಗಿಸಿ ಇನ್ನಷ್ಟು  ಪ್ರಜೆಗಳನ್ನು ಸೈನ್ಯಕ್ಕೆ ಸೇರಿಸಿ ಹೀಗಾದರೂ ವಿಜಯ ರಾಜನನ್ನು ಗೆಲ್ಲಲೇ ಬೇಕೆಂಬ ಸಂಕಲ್ಪಕ್ಕೆ ಜಯರಾಜ ಬಂದಿದ್ದ.

ದತ್ತಣ್ಣ ವಿಜಯರಾಜನ ರಾಜ್ಯವನ್ನು ಸುತ್ತುವರಿದ ಗುಡ್ಡ ಗಾಡಿನಲ್ಲಿ ಹುಟ್ಟಿ ಬೆಳೆದ ಹುಡುಗ. ಚಿಕ್ಕಂದಿನಲ್ಲಿಯೇ ಗುಡ್ಡ ಬೆಟ್ಟಗಳಲ್ಲಿ ಓಡಾಡಿ ಅಲ್ಲಿನ ಮೂಲೆ ಮೂಲೆಯನ್ನೂ, ಕಾಲು ದಾರಿ, ನದಿ, ಕೊಳ ಹೀಗೆ ಎಲ್ಲದರ ಬಗ್ಗೆಯೂ ಬಲ್ಲವನಾಗಿದ್ದ. ಕಾಡಿನ ಒಂದು ಭಾಗವೇ ಎಂಬಂತೆ ಬೆಳೆದಿದ್ದ ದತ್ತಣ್ಣನಿಗೆ ತಂದೆ ತಾಯಿಯರ ಒತ್ತಾಸೆಯಂತೆ ರಾಜ್ಯದ ಗಡಿ ಕಾಯುವ ಸೈನ್ಯದ ಭಾಗಕ್ಕೆ ಸೇರಿದ್ದ. ದತ್ತಣ್ಣನಿಗೆ ಸೈನ್ಯ ಸೇರುವುದು ಅಷ್ಟೊಂದು ಇಷ್ಟವಿಲ್ಲದಿದ್ದರೂ, ತಂದೆ ತಾಯಿಯರಿಗೆ ತಮ್ಮ ಮಗ ರಾಜ್ಯದ ರಕ್ಷಣೆಗೆ ಸೇರುವುದು ತಮ್ಮ ಸುಭಾಗ್ಯವೆಂದು ತಿಳಿದಿದ್ದರು. ದತ್ತಣ್ಣನಿಗೆ ಆರಂಭದಲ್ಲಿ ಸೈನ್ಯ ಅಷ್ಟಾಗಿ ಹಿಡಿಸದಿದ್ದರೂ ಸಮಯ ಸಾಗಿದಂತೆ ಅಲ್ಲಿನ ಶಿಸ್ತು, ಸಾಹಸಗಳಿಗೆ ಮಾರುಹೋಗ ತೊಡಗಿದ. ಬಹು ಭಾಗ ಈತನ ಸೈನ್ಯದ ಕೆಲಸ  ಗುಡ್ಡ ಬೆಟ್ಟ ಗಳಲ್ಲೇ ಇರುತ್ತಿದ್ದುದರಿಂದ ಅಲ್ಲದೇ ಇಲ್ಲಿನ ಗುಡ್ಡ  ಬೆಟ್ಟಗಳ ಪರಿಚಯದ ಜೊತೆಗೆ ಹುಟ್ಟು ಸಾಹಸಿಯಾಗಿದ್ದ ದತ್ತಣ್ಣನಿಗೆ ಕಾಲ ಕ್ರಮೇಣ ಸಹಜ ವಾಗಿಯೇ ಸೈನ್ಯದಲ್ಲಿ ವಿಶೇಷ ಸ್ಥಾನ ಸಿಕ್ಕಿತು . ಕಾಡು ಮೇಡು ಸುತ್ತದೆ ನಗರದಲ್ಲಿ ಸುಖವಾಗಿದ್ದ ಅಲ್ಲಿನ ಬಹುಪಾಲು ಸೈನಿಕರಿಗೆ ದತ್ತಣ್ಣನೆ ಗುರುವಂತಾಗಿದ್ದ. ಕಾಡಿನಲ್ಲಿ ಎಲ್ಲಿ ಹೋಗಬೇಕು, ಎಲ್ಲಿ ಹೋಗಬಾರದು, ಯಾವ ದಾರಿಯಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕು, ಹೀಗೆ ಎಲ್ಲದ್ದಕ್ಕೂ ದತ್ತಣ್ಣನೆ ಅವರಿಗೆ ಮಾರ್ಗದರ್ಶಕ ನಾಗಿದ್ದ. ಹೀಗಾಗಿ ಈ ಸಣ್ಣ ಗಡಿ  ಕಾಯುವ ಸೈನ್ಯದ ಬಹುಪಾಲು ಸೈನಿಕರಿಗೆ  ದತ್ತಣ್ಣನೆ ಮುಖಂಡನಾಗಿ ಬೆಳೆಯ ತೊಡಗಿದ್ದ. ದತ್ತಣ್ಣನಿಲ್ಲದಿದ್ದರೆ ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚದಂತೆ ಬಹುಪಾಲು ಸೈನಿಕರಿಗೆ ಅನಿಸುವುದರಷ್ಟು ಮಟ್ಟಿಗೆ ಅವರು ದತ್ತಣ್ಣನನ್ನು ಅವಲಂಬಿಸುವಂತಾಗಿದ್ದರು.

ಜಯರಾಜನು ತನ್ನ ಸೈನ್ಯದೊಡನೆ ಆಕ್ರಮಿಸಲು ಸಿದ್ದನಾಗಿ ರಾಜ್ಯದ ಗಡಿಯ ಹತ್ತಿರಕ್ಕೆ ಸಮೀಪಿಸುತ್ತಿದ್ದಾನೆ ಎನ್ನುವ ಸುದ್ದಿ ಕೇಳಿದೊಡನೆಯೇ  ‘ವಿಜಯರಾಜ’ ಹೌಹಾರಿದ . ಯುದ್ದ ಮಾಡುವ ಮಾತಿರಲಿ, ಯುದ್ದ ಹೀಗಿರುತ್ತದೆಯೆಂದು ಬರಿ ಕಥೆಗಳಲ್ಲೇ ಕೇಳಿ ತಿಳಿದಿದ್ದ ವಿಜಯರಾಜನಿಗೆ  ನಿಜವಾದ ಕತ್ತಿ ಹಿಡಿದು ತನ್ನ ಪರಾಕ್ರಮ ತೋರಿಸುವ ಮಾತು ಬಹುದೂರವೇ ಇತ್ತು. ಚಿಕ್ಕಂದಿನಲ್ಲಿ ಒಂದಿಷ್ಟು ಶಸ್ತ್ರಾಭ್ಯಾಸದ ತರಬೇತಿ ಪಡೆದಿದ್ದು ಬಿಟ್ಟರೆ ‘ಕ್ಷತ್ರಿಯನ  ಪರಾಕ್ರಮ’ ಎಂಬ ಮಾತೆಲ್ಲ ತನ್ನ ರಾಣಿ, ದಾಸಿಯರ ಮೇಲಷ್ಟೇ ಇತ್ತು. ತಕ್ಷಣವೇ ರಾಜ ಸಭೆ ಕರೆದು ಮಂತ್ರಿ, ಸೈನ್ಯಾಧಿಕಾರಿ ಯರಲ್ಲಿ  ಯುಧ್ಧವನ್ನು ತಪ್ಪಿಸುವ ದಾರಿಹುಡುಕುವ ಪ್ರಯತ್ನ ನಡೆಯಿತಾದರೂ , ಕೊನೆಯಲ್ಲಿ ಯುದ್ದ ಮಾಡದೇ ಬೇರೆ ದಾರಿ ಹೊಳೆಯಲಿಲ್ಲ.  ಈಗ ವಿಜಯರಾಜನಿಗೆ ಯುದ್ಧ ಮಾಡದೇ ಬೇರೆ ಗತ್ಯಂತರವೇ ಇರಲಿಲ್ಲ.

ವಿಜಯರಾಜನ ಸೈನ್ಯ ತೀರ ಚಿಕ್ಕದಲ್ಲದಿದ್ದರೂ ಸರಿಯಾದ ತರಬೇತಿಯಿಲ್ಲದೇ ಅದು ಇವರ ಎರಡರಷ್ಟಿರುವ ಜಯರಾಜನ ಸೈನ್ಯಕ್ಕೆ ಸರಿಸಮನಾಗಿ ಹೊರಾಡುವ ಮಟ್ಟಿಗೆ ಇದ್ದಂತೆ ಕಾಣಿಸುತ್ತಿರಲಿಲ್ಲ. ಅಲ್ಲಿನ ಬಹುಪಾಲು ಸೈನಿಕರಿಗೆ ಇದು ಮೊದಲನೆಯ ಯುದ್ದವೇ ಆಗಿತ್ತು. ಹೀಗಿದ್ದರೂ ತಮ್ಮನ್ನು ರಕ್ಷಿಸಲು ಸುತ್ತುವರಿದ  ಆ ಗುಡ್ಡ ಬೆಟ್ಟಗಳನ್ನು ನೆನೆದು ಸ್ವಲ್ಪ ಧೈರ್ಯ ವಿಶ್ವಾಸ ಅವರಲ್ಲಿ ಮೂಡಿತ್ತು. ಇವರ ಜೊತೆ ವಿಜಯರಾಜನು ಅಳುಕುತ್ತಲ್ಲೇ ಸೈನ್ಯದ ಜೊತೆ ಸಾಗಿದ್ದ.

ಜಯರಾಜನ ಸೈನ್ಯದಲ್ಲಿ ಕೆಲವು ಸಾಹಸವಂತರೂ ಬಲಶಾಲಿಗಳೂ ಇದ್ದರು. ಹಿಂದೆಂದೂ ಸೇರದ ಸಂಖ್ಯೆಯಲ್ಲಿ ಪ್ರಜೆಗಳು ಜಯರಾಜನ ಸೈನ್ಯವನ್ನು ಸ್ವ ಇಚ್ಚೆಯಿಂದ  ಸೇರಿದ್ದರು.  ಅವರಿಗೆ ಎಲ್ಲರಿಗೂ ಯುದ್ದದ ತರಬೇತಿ ನೀಡಲಾಗಿದ್ದರೂ ಹಲವರಿಗೆ ಇದು ಮೊದಲ ಯುದ್ದವಾದ್ದರಿಂದ ಸಹಜವಾದ ಅಳುಕು ಇದ್ದೇ ಇತ್ತು. ಅಲ್ಲದೇ ಎಲ್ಲರಿಗೂ ಇಂತಹ ಗುಡ್ಡ, ಕಾಡು ಮೇಡುಗಳಲ್ಲಿ ವೈರಿಗಳನ್ನು ಎದುರಿಸುವ  ತಂತ್ರಗಾರಿಕೆಯೂ ಹೊಸದೇ ಆಗಿತ್ತು. ಅಲ್ಲಿನ  ಗುಡ್ಡ ಬೆಟ್ಟಗಳಲ್ಲಿ ಸಾಗುವ ಕೆಲವೊಂದು ಮುಖ್ಯ ರಸ್ತೆಗಳು ಗೊತ್ತಿತ್ತೆ ಹೊರತು ಒಳದಾರಿಗಳು , ಕಾಡಿನಲ್ಲಿಯ ದಿಕ್ಕುಗಳು, ಎಲ್ಲೆಲ್ಲಿ ವೈರಿಗಳು ಅವಿತು ಆಕ್ರಮಣ  ಮಾಡ ಬಹುದಾದ ಸಂಭವ ಇದೆ ಇಂಥಹ ಸೂಕ್ಷ್ಮ ವಿಷಯಗಳ ಬಗ್ಗೆ ಕೂಲಂಕುಷ ವಾಗಿ ತಿಳಿದವರು ಜಯರಾಜನ ಸೈನ್ಯದಲ್ಲಿ ಇಲ್ಲವೇ ಇರಲಿಲ್ಲ. ಆದರೂ ಜಯರಾಜನಿಗೆ ವಿಜಯರಾಜನಿಗಿಂತ ದೊಡ್ಡ ಸಂಖ್ಯೆಯಲ್ಲಿ ಇರುವ ತನ್ನ ಸೈನ್ಯದ ಬಗ್ಗೆ ಆತನಲ್ಲಿ ಈಗ ವಿಶ್ವಾಸ ಬೆಳೆದಿತ್ತು. ಅಲ್ಲದೇ ಯುದ್ದ ಮಾಡಿಯೇ ಗೊತ್ತಿಲ್ಲದ ವಿಜಯರಾಜನ ಬಗ್ಗೆಯೂ, ಆತನ ಸೈನಿಕರೆಲ್ಲ ಸರಿಯಾದ ತರಬೇತಿಯಿಲ್ಲದೇ ಸೈನ್ಯ ಆತನ ಹದ್ದುಬಸ್ತಿನಲ್ಲಿ ಇಲ್ಲ ಎನ್ನುವುದನ್ನೂ ಆತ ಅರಿತಿದ್ದ. ಹೀಗಾಗಿ ಆತನ ವಿಶ್ವಾಸ ಈ ಸಾರಿ ಇಮ್ಮಡಿಸಿತ್ತು.

ಜಯರಾಜ ತನ್ನ ಸೈನ್ಯದೊಡನೆ ಆಕ್ರಮಿಸುತ್ತಿದ್ದಾನೆ ಎಂಬ ಮುನ್ಸೂಚನೆ ದೊರೆಯುತ್ತಿದ್ದಂತೆ, ದತ್ತಣ್ಣನ ಪಡೆ ಆಗಲೇ ಎಲ್ಲೆಲ್ಲಿ ಹೇಗೆ ಕಾಡಿನಲ್ಲಿ ಆಕ್ರಮಣ ಮಾಡಿ ವೈರಿಗಳನ್ನು ಕಂಗೆಡಿಸಬೇಕೆಂದು ನಿರ್ಧರಿಸಿದ್ದರು. ಆಗಲೇ ಅದಕ್ಕೆ  ಅನುಸಾರವಾಗಿ ದತ್ತಣ್ಣ ಕಾಡಿನ ಆಯಕಟ್ಟಿನ ಸ್ಥಳಗಳನ್ನು ಗೊತ್ತುಮಾಡಿ ರಣತಂತ್ರವನ್ನು ರೂಪಿಸಿದ್ದ. ತನ್ನ ಬಳಗವನ್ನು ಸಣ್ಣ ಸಣ್ಣ ಗುಂಪುಗಳನ್ನಾಗಿ ಮಾಡಿ ಅವರು ಕಾಡಿನಲ್ಲಿ ಅಕಸ್ಮಾತಾಗಿ ಎರಗುವುದು, ಶತ್ರು ಸೈನಿಕರು ಉಪಾಯವಾಗಿ ದಾರಿ ತಪ್ಪುವಂತೆ  ಮಾಡುವುದು,  ರಾತ್ರಿಯಲ್ಲಿ ಅವರು ಕಾಡಿನ ಪರಿಚಯವಿಲ್ಲದೇ ದಿಕ್ಕುತಪ್ಪಿದಾಗ ಅವರ ಮೇಲೆರಗಿ  ಅವರನ್ನು ಮಣಿಸುವುದು. ಹೀಗೆ ಬೇರೆ ಬೇರೆ ತಂತ್ರಗಾರಿಕೆಯನ್ನ ದತ್ತಣ್ಣ ನಿರೂಪಿಸಿದ್ದ.  ಇದರ ಜೊತೆಗೆ ಅಲ್ಲಿನ ಗುಡ್ಡ ಗಾಡಿನ ಸಮಗ್ರ ಪರಿಚಯವಿದ್ದ ದತ್ತಣ್ಣನಿಗೆ ಅವನ ಸೈನ್ಯದ ಮುಖ್ಯಸ್ಥನು  ವಿಜಯರಾಜನ ಜೋತೆಗೂಡಿ ಯುಧ್ಧ ಮಾಡಲು ವಿಶೇಷ ಶಿಫಾರಸ್ಸನ್ನು ಸೇನಾಪತಿಗೆ ಕಳುಹಿಸಿದ್ದ.  ಸಹಜವಾಗಿ ಇಲ್ಲಿನ ಕಾಡು ಮೇಡಿನ ಪರಿಚಯದ ಜೊತೆಗೆ ವೀರನೂ, ಸಾಹಸಿಯೂ ಆದ ದತ್ತಣ್ಣ ನಂತವರ ಸಹಾಯ ಸೇನಾಪತಿಗೆ ಬೇಕಾದ್ದರಿಂದ ದತ್ತಣ್ಣನಿಗೆ ಮಹಾರಾಜನ ಜೊತೆಗೂಡಿ ಅಲ್ಲಿನ ಯುದ್ಧತಂತ್ರ ರೂಪಿಸಿವ ಅವಕಾಶವೂ ಒದಗಿ ಬಂತು. ದತ್ತಣ್ಣ ಅದು ತನಗೆ ಸಿಕ್ಕ ಸೌಭಾಗ್ಯವೆಂದೂ, ಮಹಾಗೌರವವೆಂದೂ ಭಾವಿಸಿದ.  ತಾನು ಮೊದಲೇ ರೂಪಿಸಿದ ಯೋಜನೆಯಂತೆ ಕಾಡಿನಲ್ಲಿ ಶತ್ರುಗಳ ದಿಕ್ಕುತಪ್ಪಿಸಿ ಯುಧ್ಧಮಾಡುವಂತೆ ತನ್ನ ಸಹಚರರನ್ನು ನಿಯೋಜಿಸಿ, ತಾನು ವಿಜಯರಾಜನ  ದೊಡ್ಡದಾದ ಸೈನ್ಯದ ಗುಂಪಿನ ಜೊತೆ ಸೇರಿ, ಯುಧ್ಧ ತಂತ್ರ ರೂಪಿಸಿ, ಕಾದಾಡಲು ಹೊರಡಲು ಅಣಿಯಾದ.

ದತ್ತಣ್ಣನ ಸೂಚನೆಯಂತೆ ವಿಜಯರಾಜ ಹಾಗೂ ಆತನ ಸೇನಾಧಿಪತಿ ಜೊತೆಗೂಡಿ  ಎಲ್ಲೆಲ್ಲಿ, ಯಾವ ರೀತಿ ಬೆಟ್ಟ ಗುಡ್ಡದ ಕಡಿದಾದ ರಸ್ತೆಗಳಲ್ಲಿ, ಆಯಕಟ್ಟಿನ ಸ್ಥಳಗಳಲ್ಲಿ  ಜಯರಾಜನ ಸೈನಿಕರು ಚಲಿಸುವಾಗ ಆಕ್ರಮಣ ಮಾಡಬೇಕು.  ಹೇಗೆ ಉಪಾಯವಾಗಿ ಶತ್ರು ಸೈನಿಕರ ದಿಕ್ಕುತಪ್ಪುವಂತೆ ಮಾಡಬೇಕು, ಎಲ್ಲೆಲ್ಲಿ ಅನುಭವವಿರುವ ಸೈನಿಕರನ್ನು ಯಾವ ಯಾವ ರೀತಿ ನಿಯೋಜಿಸಬೇಕು ಎಂಬೆಲ್ಲ ನಿರ್ಧಾರಕ್ಕೆ ಬರಲಾಯಿತು. ಅಲ್ಲದೇ ದತ್ತಣ್ಣನು ಯುಧ್ಧದಲ್ಲಿ  ರಾಜನ ಬೆಂಗಾವಲಿಗೆ ನಿಲ್ಲಬೇಕೆಂದೂ ನಿರ್ಣಯಿಸಲಾಯಿತು.

ಜಯರಾಜನ ಪಡೆ ರಾಜ್ಯದ ಗಾಡಿಯಲ್ಲಿ ಒಳ ನುಗ್ಗುತ್ತಿದ್ದಂತೆ, ದತ್ತಣ್ಣನ ಉಪಾಯದಂತೆ ವಿಜಯರಾಜನ ಪಡೆಯ ಸೈನಿಕರು ಗುಡ್ಡ ಬೆಟ್ಟಗಳ ಆಯಕಟ್ಟಿನ ಜಾಗಗಳಲ್ಲಿ ಅವರ ಮೇಲೆರಗಿ ಅವರನ್ನು ಕಕ್ಕಾಬಿಕ್ಕಿಯನ್ನಾಗಿ ಮಾಡಿತು.  ದಿಕ್ಕುತಪ್ಪಿದವರಂತೂ ಏನು ಮಾಡಬೇಕೆಂದು ತೋಚದೇ ಸುಲಭವಾಗಿ ವಿಜಯರಾಜನ ಸೈನಿಕರಿಗೆ ತುತ್ತಾದರು. ಹೀಗೆ ಅಚಾನಕ್ಕಾಗಿ ಎಲ್ಲಿಂದಲೋ  ಎರಗಿ ಬರುವ ಸೈನಿಕರನ್ನು ನಿಯಂತ್ರಿಸುವುದು ಅಲ್ಲಿನ ಪ್ರದೇಶದ ಅರಿವಿಲ್ಲದ ಜಯರಾಜನ ಕಡೆಯ ಸೈನಿಕರಿಗೆ ಕಷ್ಟದ ಕೆಲಸವಾಗತೊಡಗಿತು. ಹೀಗಿದ್ದರೂ ಜಯರಾಜ ಮಾತ್ರ ದೃತಿಗೆಡಲಿಲ್ಲ. ಅವನ ದೊಡ್ಡ ಪ್ರಮಾಣದಲ್ಲಿದ್ದ  ಸೈನಿಕರು ಮುನ್ನುಗ್ಗುತ್ತಲೇ ಇದ್ದರು. ಆಗಲೇ ಆತನ ಸೈನ್ಯ ಕಾಡಿನ ಅರ್ಧ ಭಾಗದಷ್ಟು ಕ್ರಮಿಸಿ ಆಗಿತ್ತು.  ಇದನ್ನು ಅರಿತ ವಿಜಯರಾಜನ ಸೇನಾಧಿಪತಿ ಹಾಗೂ ದತ್ತಣ್ಣ, ಈಗಲೇ ಇವರನ್ನು ತಡೆಯದಿದ್ದರೆ  ಮುಂದೆ ದೊಡ್ಡ ಪ್ರಮಾಣದ ಅವರ  ಸೈನ್ಯವನ್ನು ಈ ಗುಡ್ಡ ಬೆಟ್ಟವನ್ನು ದಾಟಿದ ಮೇಲೆ ನಿಯಂತ್ರಿಸುವುದು ಅಸಾಧ್ಯ ಎಂದು ಅರಿತು ತಮ್ಮೆಲ್ಲ ಸೈನಿಕರನ್ನು ಒಗ್ಗೂಡಿಸಿ  ಜಯರಾಜನ ಮೇಲೆರಗಲು ಮುಂದಾದರು.

ಕಾಡಿನ ಒಂದಿಷ್ಟು ಸಮತಟ್ಟಾದ ಭಾಗದಲ್ಲಿ ಬೀಡುಬಿಟ್ಟಿದ್ದ ಜಯರಾಜನ  ಸೈನ್ಯದ ಮೇಲೆ ವಿಜಯ ರಾಜನ ಪಡೆ ಒಮ್ಮೆಲೇ ಆಕ್ರಮಣ ಮಾಡಿತು.  ಜಯರಾಜನ ಸೈನ್ಯವನ್ನು ದೂರದಿಂದಲೇ ನೋಡಿ ಬೆಚ್ಚಿಬಿದ್ದಿದ್ದ ವಿಜಯರಾಜ, ಸಂಪೂರ್ಣ ಯುಧ್ದವನ್ನು ಸೇನಾಪತಿಗೆ, ದತ್ತನಿಗೆ ಬಿಟ್ಟು ಅಲ್ಲಲ್ಲಿ ತಪ್ಪಿಸಿಕೊಂಡು ಓಡಾಡುತ್ತಿದ್ದ.  ಇದನ್ನು ಗಮನಿಸಿದ ಜಯರಾಜ, ಇದೇ ಸರಿಯಾದ ಸಂಧರ್ಭವೆಂದು ಎಣಿಸಿ ಬದಿಯಲ್ಲಿ ಎಲ್ಲೋ ಮರೆಯಲ್ಲಿ ನಿಂತು ಯುಧ್ದ ಮಾಡಿದವನಂತೆ ತೋರ್ಪಡಿಸಿಕೊಳ್ಳುತ್ತಿದ್ದ  ವಿಜಯರಾಜನ ಮೇಲೆ ಜಯರಾಜ ಎರಗಿದ. ವಿಜಯರಾಜ ದಿಕ್ಕುತೋಚದಂತಾಗಿ ಇನ್ನೇನು ಜಯರಾಜನಿಗೆ ಬಲಿಯಾಗುತ್ತಾನೆ  ಎನ್ನುವಾಗಲೇ ಎಲ್ಲಿಂದಲೋ ಮಿಂಚಿನ ವೇಗದಲ್ಲಿ ದತ್ತಣ್ಣ ನುಗ್ಗಿ ಜಯರಾಜನಿಗೆ ಎದುರಾದ. ಇಬ್ಬರೂ ಸಮ ಬಲದ ವೀರರು. ಯಾರು ಗೆಲ್ಲಬಹುದು ಎನ್ನುವುದನ್ನು ಊಹಿಸುವುದು ಕಷ್ಟ.  ದತ್ತಣ್ಣನಿಗೆ ಆತನ ಯೌವನದ ಉತ್ಸಾಹದ ಮೇಲುಗೈ ಇದ್ದರೆ, ಎದೆಷ್ಟೋ ಯುದ್ದ ಮಾಡಿದ್ದ ಜಯರಾಜನಿಗೆ ಆತನ ಅನುಭವವೇ ಆಸರೆ.  ಇವರಿಬ್ಬರ ಕಾದಾಟವನ್ನು ನೋಡುವುದನ್ನು ಬಿಟ್ಟರೆ ವಿಜಯರಾಜನಿಗೆ ಬೇರೇನನ್ನೂ  ಮಾಡಬೇಕೆಂದು ತೋಚಲಿಲ್ಲ. ಸಮಬಲದ ಕಾದಾಟದಲ್ಲಿ ಇದ್ದಕ್ಕಿದಂತೆ  ತನ್ನ ವಿಶಿಷ್ಟ  ಬಗೆಯ ಚಾಕಚಕ್ಯತೆಗಳಿಂದ  ದತ್ತಣ್ಣನನ್ನು ಕಂಗೆಡಿಸಿ ಆತ ಆಯತಪ್ಪಿದಾಗ , ಜಯರಾಜ ಕ್ಷಣಾರ್ಧದಲ್ಲಿ  ಅವನ ಮೇಲೆರಗಿ ದತ್ತಣ್ಣನ ಎದೆಗೆ ತನ್ನ ಖಡ್ಗವನ್ನು ಇರಿದ. ಕಂಗೆಡದ ದತ್ತಣ್ಣ, ಜಯರಾಜನಿಗೂ ಬದಿಯಿಂದ ತಿವಿದ. ಆದರೆ ಜಯರಾಜನ ಬಲವಾದ ಇರಿತಕ್ಕೆ ದತ್ತಣ್ಣ ಕುಸಿಯತೊಡಗಿದ, ಆತನ ಕಣ್ಣುಗಳಲ್ಲಿ ಕತ್ತಲೆ ಆವರಿಸತೊಡಗಿತು. ಕೈಯಲ್ಲಿ ಶಕ್ತಿಗುಂದಿ ಹಿಡಿದಿದ್ದ ಖಡ್ಗ ನೆಲಕ್ಕುರುಳಿತು. ಆತನ ದೇಹ ಆಯತಪ್ಪಿ ನೆಲಕ್ಕುರುಳಿತು. ಜಯರಾಜನಿಗೆ ಅಷ್ಟೊಂದು ಬಲವಾದ ಪೆಟ್ಟು ಬೀಳದಿದ್ದರೂ ಪಕ್ಕಕ್ಕೆ ಇರಿದಿದ್ದರಿಂದ ಆತನ ಕೈಯಲ್ಲಿ, ದೇಹದಲ್ಲಿ  ಶಕ್ತಿಗುಂದಿ, ಆತ ನೆಲಕ್ಕೆ ಕುಳಿತು ಸಾವರಿಸಿಕೊಳ್ಳ ತೊಡಗಿದ. ಆದರೆ ಇದ್ದಕ್ಕಿದ್ದಂತೆ, ಇಷ್ಟೊತ್ತು ಹಿಂಬದಿಗೆ ನಿಂತು ಇವರಿಬ್ಬರ ಕಾಳಗ ನೋಡುತ್ತಿದ್ದ ವಿಜಯರಾಜ, ಜಯರಾಜನ ಮೇಲೆರಗಿ ಆತನಿಗೆ ಬಲವಾಗಿ ಇರಿದ. ಜಯರಾಜ ಕ್ಷಣಾರ್ಧದಲ್ಲಿ ನೆಲಕ್ಕುರುಳಿದ.

ಜಯರಾಜನು ವಿಜಯರಾಜನ  ಕೈಯಿಂದ  ಹತನಾದನೆಂಬ  ವಾರ್ತೆ ಹಬ್ಬುತ್ತಿದ್ದಂತೆ, ಜಯರಾಜನ ಸೈನ್ಯವೆಲ್ಲ ದಿಕ್ಕಾಪಾಲಾಗಿ ಓಡಿತು. ವಿಜಯರಾಜನ ಸೈನಿಕರೆಲ್ಲ  ಗೆಲುವಿನ ಹರ್ಷೋದ್ಗಾರ ಮಾಡಿದರು. ಇದ್ದಕ್ಕಿದ್ದಂತೆ ಎಲ್ಲೆಲ್ಲೂ  ವಿಜಯರಾಜನಿಗೆ ಜೈಕಾರ ಮೊಳಗಿದವು. ನಗರದಲ್ಲಂತೂ ವಿಜಯರಾಜನನ್ನು ಪ್ರಜೆಗಳೆಲ್ಲ ತಮ್ಮನ್ನು ರಕ್ಷಿಸಿದ ದೇವರು ಎನ್ನುವ ರೀತಿಯಲ್ಲಿ ಸ್ವಾಗತಿಸಿದರು. ವಿಜಯರಾಜನ ಸಾಹಸ ಶೌರ್ಯದಬಗ್ಗೆ ಗುಣಗಾನಗಳು  ನಡೆದವು. ಆತ ಜಯರಾಜನನ್ನು ಮಣಿಸಿದ ಸಾಹಸದ ಬಗ್ಗೆ, ಯುಧ್ದ ಕೌಶಲ್ಯದ ಬಗ್ಗೆ  ವಿವಿಧ ಕಥೆಗಳು ರಚಿತವಾಯಿತು. ಜೊತೆಗೆ ಸೇನಾಪತಿಯೂ, ಆತನ ಸಾಹಸವೂ ಪ್ರಶಂಸೆಗೆ ಪಾತ್ರವಾಯಿತು.  ಈ ಮಹಾವಿಜಯದ ಬಗ್ಗೆ ಶಾಸನಗಳು ರಚಿತವಾದವು. ಮುಂದೆ ಅದೆಷ್ಟೋ ತಲೆಮಾರಿನ ಇತಿಹಾಸಕಾರರು  ವಿಜಯರಾಜನ ಪರಾಕ್ರಮವನ್ನು ಅಧ್ಯಯನಮಾಡಿ ಕೊಂಡಾಡಿದರು.

ದತ್ತಣ್ಣನ ಆತ್ಮ ಮಾತ್ರ ಕರ್ತವ್ಯವೆಂದೂ, ರಾಜನೇ ಪತ್ಯಕ್ಷ ದೇವರೆಂದೂ  ಬಗೆದು ಹೋರಾಡಿ ಮಡಿದು ಇತಿಹಾಸದಲ್ಲಿ ಮರೆಯಾದ  ಅದೆಷ್ಟೋ ಸಾಮಾನ್ಯ ಸೈನಿಕರ ಜೊತೆ ಸೇರಿತ್ತು !

 

Rating
No votes yet

Comments

Submitted by makara Sun, 05/12/2013 - 22:34

ಸುಂದರ ನೀತಿಭೋದಕ ಕಥೆ; ದೊಡ್ಡವರನ್ನು ಮೆರೆಸುವ ಹುಚ್ಚಾಟದಲ್ಲಿ ಸಣ್ಣವರ ತ್ಯಾಗಗಳು ಮರೆಯಾಗಿ ಬಿಡುತ್ತವೆ.