ಕುದರೆಮುಖ ಪರ್ವತ ಚಾರಣ-1

ಕುದರೆಮುಖ ಪರ್ವತ ಚಾರಣ-1

ಮುಂದುವರಿದ ಭಾಗ...



ಕಾಡಿಗೆ ಸ್ವಲ್ಪ ಒಳಹೊಕ್ಕೊಡನೆ ಗುಡಿಸಲೊಳ ಕತ್ತಲೆ ಕೋಣೆಗೆ ನುಗ್ಗಿದಂತಾಗಿತ್ತು. ಸಂಜೆ ಸೂರ್ಯನ ಬೆಳಕು ಕಿಟಕಿ ಬಾಗಿಲುಗಳ ಸಂಧಿಯಲ್ಲಿ ಇಣುಕಿದಂತೆ ಮರಗಿಡರಳ ರೆಂಬೆ-ಕೊಂಬೆಗಳ ಮೂಲಕ ನೆಲದಲ್ಲಿ ಚೆಲ್ಲಿತ್ತು. ಕೆಲವರು ಕಣ್ತಪ್ಸಿ ಹೋದ್ರು, ಉದರ ಬಾಧೆ ನೀಗಿಸಿಕೊಳ್ಳಲು. ಕೆಲವರಷ್ಟೆ ಸೌದೆಗಾಗಿ ಮುನ್ನುಗಿದ್ವು. ಕಾಡೊಳಗಿನ ನೀರವತೆ ನಂಗಂತೂ ಭಯ ಹುಟ್ಸಿತ್ತು. ‘ಹೆಚ್ಚು ದೂರ ಹೋಗದ್ ಬೇಡ’ ಎಂದು ಒಬ್ರನ್ನೊಬ್ರು ಎಚ್ಚರಿಸಿಕೊಳ್ತ ಸೌದೆ ಒಟ್ಟು ಮಾಡಿದ್ವಿ. ಒಣಗಿದ್ದ ಸೌದೆ ಒದ್ದೆಯಾಗಿ, ಬೇಜಾನ್ ಸಿಕ್ಕಿದವು!!! ಟೆಂಟಿಗೆ ಉದ್ದನೆಯ ಮೂರು ಕಂಬಗಳು ಬೇಕಾಗಿದ್ವು ಅಷ್ಟೆ. ನನ್ನ ಮನೆಯಿಂದ ಕದ್ದೊಯ್ದಿದ್ದ ಕತ್ತಿ(ಮಚ್ಚು)ಯಿಂದ ಕಂಬ ಕಡ್ಯಾಕೆ ಶುರುಮಾಡಿದ್ಮೇಲೇ ಗೊತ್ತಾಗಿದ್ದು ಆ ಕತ್ತಿ ‘ಸತ್ತವ್ರ ಮೂಗ್ ಕೊಯ್ಯೋಕು ಲಾಯಕ್ಕಿಲ್ಲ’ ಅಂತ. ಎರಡು ಕಂಬ ಹೇಗೋ ಪರ್ದಾಡ್ಕಂಡು ಕಡ್ದು ಕೊನೆಗೆ ಮೂರ್ನೇ ಕಂಬ ಕಡೀಬೇಕಿದ್ದ ಕತ್ತಿನೇ ಕಟ್ಟಾಗ್ ಹೋಯ್ತು. ಮುರಿದ ಕತ್ತೀಲೆ ಹೇಗೋ ಕತ್ರಿಸಿ ಹೊರಗ್ ತಂದ್ವಿ.


ಕಲ್ಲು ಜೋಡ್ಸಿದ ಒಲೆಗೆ ಸೌದೆಯಿಟ್ಟು ಬೆಂಕಿ ಹಚ್ಚೋಕೆ ಅಕ್ಮಲ್ ಮತ್ತು ವಿಶ್ವ ಹರಸಾಹಸ ಪಡ್ತಿದ್ರೆ, ನಾನು, ಪ್ರೇಮ್ ಕೇವಲ ಎರಡು ಗುಂಡಿ ತೆಗ್ದು ಕಂಬ ನಿಲ್ಸಿ ಟೆಂಟ್ ಹಾಕೋಕೆ ಹೋರಾಟ ನೆಡ್ಸಿದ್ವಿ. ನೆಲದಲ್ಲಿ ತುಂಬಾ ಕಲ್ಲಿದ್ದಿದ್ರಿಂದ ಹೆಚ್ಚು ಆಳದ ಗುಂಡಿ ತೋಡಾಕಾಗ್ಲಿಲ್ಲ. ಹಗ್ಗ ಜಾಸ್ತಿ ಬಳ್ಸಿ ಸುತ್ತ ಇದ್ದ ಪೊದೆಗಳಿಗೂ ನೆಟ್ಟಿದ್ದ ಕಂಬಗಳಿಗೂ ಸೇರ್ಸಿ ಹೊಯ್ದಾಡದ್ಹಾಗೆ ಕಟ್ಟಿದ್ವಿ. ನಂತರ ಆ ಎರಡೂ ಕಂಬಗಳ ಮೇಲೆ ಅಡ್ಡವೊಂದು ಪೋಲ್ ಇಟ್ಟು ಗಟ್ಟಿಯಾಗಿ ಕಟ್ಟಿ ಟಾರ್ಪಲ್ ಹೊದಿಸಿ ‘ಟೆಂಟ್ ರೆಡಿ, ಎಲ್ಲಾ ಥಿಂಗ್ಸ್ ಒಳ್ಗಿಡಿ’ ಎಂದು ಕೂಗಿಕೊಂಡ್ವಿ. ನಾವು ಇಷ್ಟೆಲ್ಲಾ ಪರ್ದಾಡ್ತಿದ್ರೂ ತಮ್ಸ್ ಮಾತ್ರ ಮೂಟೆಯಂತೆ ಉರುಳಿಕೊಂಡು ಗೊರ್ಕೆ ಹೊಡಿತಿದ್ದ.


ಚೆನ್ನಾಗಿ ಸೀಮೆಎಣ್ಣೆ ಸುರಿದು ಕೊನೆಗು ಒಲೆ ಉರಿಸಿ, ಮೊದ್ಲು ಟೀ ಮಾಡಿ ಕುಡಿದೆವು. ಅನ್ನಕ್ಕೆ ಪಾತ್ರೇಲಿ ನೀರಿಟ್ಟು, ಚಿಕನ್ ಹುರಿಯಲು ಬೇಕಾದ ಐಟಮ್ಸ್ ರೆಡಿ ಮಾಡ್ಕಂಡ್ವಿ. ಕಗ್ಗತ್ತಲೆಯಲ್ಲೇ ಹೇಗೋ ಅನ್ನ, ಹುರಿದ ಚಿಕನ್ ರೆಡಿಯಾಗಿತ್ತು. ರುಚಿಯ ಬಗ್ಗೆ ಒಂದೂ ಕಮೆಂಟಿಲ್ಲದೆ ಎಲ್ರೂ ಬಳ್ಕಂಡು ಊಟ ಮುಗಿಸಿದ್ವಿ, ಉಂಡ ಪಾತ್ರೆಗಳು ತೊಳೆದ ಹಾಗೆ ಕಾಣ್ತಿದ್ದು.


ಊಟ ಮುಗಿಸಿ ಹಾಗೆ ಎಡಗಡೆ ಪಾತಳದತ್ತ ಕಣ್ಣಾಯಿಸಿದೆವು, ಕಣ್ಣೊರೆಸಿಕೊಂಡೆವು, ಏನೂ ಕಾಣ್ಲಿಲ್ಲ. ಅಷ್ಟೊತ್ತು ಕೆಂಪಗೆ ಉರ್ದಿದ್ದ ಬೆಂಕಿ ತೂಕಡಿಸ್ತಿತ್ತು. ಉಸ್ಸಪ್ಪ... ಇನ್ನೇನ್ ಎಲ್ಲಾ ಮುಗೀತಲ್ಲ ನಿದ್ರೆಗೆ ಜಾರುವ ಅನ್ಕಂಡು ಬ್ಯಾಗಲ್ಲಿದ್ದ ಪ್ಲಾಸ್ಟಿಕ್ ಚಾಪೆ ಮತ್ತೆ ಬೆಡ್ಶೀಟ್ ತೆಗ್ಯೊಸ್ಟ್ರಲ್ಲಿ ‘ಎಲ್ಲಾ ಬನ್ರೋ ಪೀಕ್ ತುದಿಗ್ ಹೋಗ್ಬರಣ’ ಅಂದ ಪ್ರೇಮ್. ಟೆಂಟ್ ಹಾಕಿದ ಜಾಗ್ದಿಂದ ನೇರ್ವಾಗಿ ಹತ್ತು ನಿಮಿಷದ ದಾರಿ. ಪರ್ವತದ ತುತ್ತ ತುದಿ!!! ಯಾರಿಗೂ ಮನ್ಸಿರ್ಲಿಲ್ಲ, ಜೊತೆಗೆ ಸುಸ್ತಾಗಿದ್ವಿ. ಅದ್ಕಿಂತ ಮುಖ್ಯವಾಗಿ ಕಣ್ಮುಚ್ಚಿ ಬಿಟ್ರೂ ವ್ಯತ್ಯಾಸನೇ ತಿಳಿಸ್ದೆಯಿದ್ದ ಕತ್ತಲೆ ಎಲ್ರಲ್ಲೂ ಭಯ ಹುಟ್ಸಿತ್ತು. ಎರಡು ಕುರಿಗಳು(ನಾನು ಮತ್ತು ಪ್ರೇಮ್) ಹೊರ್ಟ್ ಕೂಡ್ಲೆ ಮಿಕ್ಕವೂ ಹಿಂಬಾಲಿಸಿದ್ವು. ‘ನಾನ್ ಬರದೇ ಇಲ್ಲ, ಏನಾದ್ರು ಮಾಡ್ಕಳ್ರಲಾ’ ಎಂದಿದ್ದ ತಮ್ಸ್ ಕೂಡ ಸೈಲೆಂಟಾಗಿ ನಮ್ಮನ್ನ ಹಿಂಬಾಲಿಸಿದ್ದ. ಇದ್ದ ಟಾರ್ಚ್ ಜೊತೆಗೆ ಒಂದು ಕೊಳ್ಳಿಯನ್ನೂ ಎತ್ಕಂಡು ಒಬ್ರ ಅಂಗಿ ಮತ್ತೊಬ್ರು ಹಿಡ್ಕಂಡು ಎಡವುತ್ತಾ ತಡವುತ್ತಾ ರೈಲ ಬೋಗಿಗಳಂತೆ ಸಾಗಿ ಪರ್ವತದ ತುತ್ತ ತುದಿ ತಲುಪಿದ್ವಿ. ತಂಪಾದ ಗಾಳಿ ಬಿರುಸಾಗಿ ಬೀಸ್ತಿತ್ತು. ಇಡೀ ಭೂಮಿ ಮೇಲೆ ನಾವಿಷ್ಟೆ ಜನ ಎಂಬ ಅನುಭವ ನಂಗಾಗಿತ್ತು. ತುದಿಯಲ್ಲಿ ನಿಂತಾಗ ದೂರದೂರುಗಳ ಬೀದಿ ಲೈಟುಗಳು ಪಾತಳಕ್ಕ್ಯಾರೊ ಮುತ್ತೆರೆಚಿದಂತೆ ಕಾಣುತ್ತಿದ್ವು. ಇನ್ನು ಕಾಡು ಪ್ರಾಣಿಗಳು ಓಡಾಡುವ ಸಮಯವೆಂದು ಅಲ್ಲಿ ಹೆಚ್ಚೊತ್ತು ಇರದೆ ಮನಸಿಲ್ಲದ ಮನಸ್ಸಿನಿಂದ ಹೊರಟು ಟೆಂಟೊಳಗೆ ಬಂದು ಮುದುರಿಕೊಂಡು ಮಲಗಿ ಹೊರಳುವಷ್ಟ್ರಲ್ಲೇ ವಿಶ್ವ ಗೊರಕೆ...


ಗುಡ್ ಮಾರ್ನಿಂಗ್...
ಬೆಚ್ಚಗೆ ಹೊದ್ಕಂಡು ಮಲಗುವಷ್ಟು ಹೊದಿಕೆಗಳಿಲ್ದೇ ಇದ್ದಿದ್ರಿಂದ ಬೆಳಗಿನ ಕೊರೆವ ಚಳಿ ಯಾರನ್ನೂ ಹೆಚ್ಚೊತ್ತು ಚಾಪೆಯ ಮೇಲಿರಲು ಬಿಡ್ಲಿಲ್ಲ. ಎದ್ದೊಡನೆಯೇ ಒಲೆ ಕೆದಕಿದ್ವಿ, ಪೂರ್ತಿ ಆರಿಹೋಗಿತ್ತು. ಪಾಡುಪಟ್ಟು ಉರಿಸಿ ಮಾಡಿದ ಚಹಾ ತುಂಬಾ ರುಚಿಸಿತ್ತು. ಚಹಾದ ಸವಿಯೊಂದಿಗೆ ಸೂರ್ಯೋದಯದ ಆಕರ್ಷಣೀಯ ದೃಶ್ಯವನ್ನು ಸವಿಯಲು ಕಾದು ಕೂತೆವು, ಪ್ರಯೋಜನವಾಗ್ಲಿಲ್ಲ. ಶಾವಿಗೆ ಉಪ್ಪಿಟ್ಟು ಮಾಡಲು ತಯಾರಿ ನೆಡೆದಿತ್ತು. ಒಳ್ಳೊಳ್ಳೆ ಸೀನರಿಗಳ ಫೋಟೋ ತೆಗೀಬೇಕು ಅಂದ್ಕೊಂಡಿದ್ದ ನಮ್ಮ ಉತ್ಸಾಹ ಮತ್ತು ಆಸೆಗೆ ದಟ್ಟವಾಗಿ ಆವರಿಸಿಕೊಂಡದ್ದ ಮಂಜು ಎಳ್ಳು ನೀರೆರೆದಿದ್ದು ದಿಟ. ಆದ್ರೂ ರಾಶಿ ರಾಶಿ ಮಂಜು ಏಕಾ-ಏಕಿ ನುಗ್ಗಿ ನಮ್ಮನ್ನ ಹಾಯ್ದೋಗುತ್ತಿದ್ದಾಗಿನ ಅನುಭವ ತುಂಬಾ ನವಿರಾಗಿತ್ತು. ನಾವು ಆಕಾಶದಲ್ಲಿ ತೇಲುತ್ತಿದ್ದೆವು. ಸುಮಾರು 8.30ರ ವೇಳೆಗೆ ಮಂಜು ಸ್ವಲ್ಪ ಕಡಿಮೆಯಾದಾಗ ಸೂರ್ಯ ತನ್ನ ಮೈಯ ಹೊರ ಚಾಚಿದ್ದ. ನಮ್ಮನ್ನೆಲ್ಲಾ ಬೆರಗಾಗಿಸಿದ್ದ... ಆ ಸೌಂದರ್ಯಕ್ಕೆ ಸೋತು ಎಲ್ರೂ ಒಟ್ಟಾಗಿ ‘ಬಹುಪರಾಕ್’ ಎಂದು ಸ್ವಾಗತಿಸಿದೆವು.   


ಬಿಸಿ ಬಿಸಿ ಶಾವಿಗೆ ಉಪ್ಪಿಟ್ಟು ತಯಾರಾಗಿತ್ತು. ತಿಂಡಿ ಮುಗಿದೊಡನೆ ಹೊರತೆಗೆದಿದ್ದ ಎಲ್ಲಾ ಸಾಮಾನುಗಳನ್ನು ಟೆಂಟೊಳಗಿಟ್ಟು ಬೀಗ ಹಾಕಿ ಹೊರಟೆವು!!! ಮತ್ತೆ ಪೀಕ್ ತುದಿಗೆ. ಅಲ್ಲೂ ಮಂಜು ತಣ್ಣಗೆ ಬೀಸ್ತಿತ್ತು. ಕತ್ತಲಲ್ಲಿ ಕಾಣದ ಸೌಂದರ್ಯ ಬೆಳ್ಕಲ್ಲಿ ಎಲ್ರ ಮನಸೂರೆಗೊಂಡ್ರೆ, ಸಡನ್ ಸ್ಟೀಪ್ ದಿಗ್ಭ್ರಾಂತರನ್ನಾಗಿಸಿತ್ತು. ಭುವಿಯನ್ನಪ್ಪಿದೆವು. ‘ನಮ್ಮನ್ನು ಹಿಡಿಯುವವರಾರಿಲ್ಲ’ ಎಂದು ಜೋರಾಗಿ ಕೂಗು ಹಾಕಿದ್ವು. ಟೆಂಟ್-ಪೀಕ್ ದಾರಿಯುದ್ದಕ್ಕೂ ನಂಗೆ ಸಿಕ್ಕಿದ್ದ ವಿವಿಧ ಬಗೆಯ(ಹಿಂದೆಲ್ಲೂ ನೋಡಿರ್ಲಿಲ್ಲ) ಹೂ, ಹುಲ್ಲು, ಎಲೆ, ಇತ್ಯಾದಿ ಸೇರ್ಸಿ ಮಾಡಿದ್ದ ಬೊಕೆ ಕೈಲಿ ಹಿಡ್ಕಂಡು ಅಲ್ಲಿದ್ದ ಕಲ್ಲು ಬಂಡೆಗಳ ತಂಪಾದ ನೆರಳಲ್ಲಿ ಒಬ್ಬೊಬ್ರಾಗಿ ಕ್ಯಾಮೆರಾಕ್ಕೆ ಪೋಸ್.


ಹಾಗೆ ಮುಂದೆ ಸ್ವಲ್ಪ ಬಲಕ್ಕೆ ನಡ್ಕಂಡು ಹೊರ್ಟೆವು. ದಾರಿಯಲ್ಲಿ ಕೊಚ್ಚೆ ತುಂಬಿದ್ದ ಐದಾರು ಅಡಿ ಸುತ್ತಳತೆಯ ಹಲವಾರು ಹೊಂಡಗಳಿದ್ದವು. ‘ಕಾಡೆಮ್ಮೆ ಉರ್ಳಾಡಿ ಹೀಗಾಗಿರೊದು’ ಎಂದು ಪ್ರೇಮ್ ಹೇಳಿದಾಗ ಎಲ್ಲರ ಕಾಲಿಗೂ ಬ್ರೇಕ್ ಅಪ್ಲೈ ಆಗಿತ್ತು. ಧೈರ್ಯ ಮಾಡಿ ಸುತ್ತಲೂ ನೊಡ್ತಾ ಮುಂದೆ ಸಾಗಿದೆವು... ರವಿ ನೆತ್ತಿಯೇರಿದ್ದ. ಬಲು ದೂರದಲ್ಲಿ ಕುದುರೆಮುಖ ಐರನ್ ಓರ್ ಫ್ಯಾಕ್ಟ್ರಿಯ ಸಿಲ್ಟ್ ಡಂಪ್ ಮಾಡಲೆಂದೇ ಲಕ್ಯಾ ನದಿಗೆ(ಭದ್ರಾ ನದಿಯ ಉಪನದಿ) ಅಡ್ಡವಾಗಿ ಕಟ್ಟಿರುವ ಲಕ್ಯಾ ಡ್ಯಾಮ್ ಸ್ಯಾಟಲೈಟ್ ಪಿಕ್ಚರ್ ಹಾಗೆ ಕಂಡಿತ್ತು. ಎಲ್ರೂ ಮಾತು ಕಡಿಮೆ ಮಾಡಿದ್ರು, ತುಂಬಾ ಹಸಿವಾಗಿದ್ರಿಂದಲೋ ಏನೋ, ಟೆಂಟಿನತ್ತ ಹೆಜ್ಜೆ...     


ಟೆಂಟ್ ಸ್ಪಾಟ್ ತಲುಪುವಸ್ಟ್ರಲ್ಲಿ ಹಸಿವೇರಿದ್ರಿಂದ ಅಡಿಗೆಯಾಗೋವರ್ಗೆ ತಡ್ಕಳುವ ತಾಳ್ಮೆಯಿರ್ಲಿಲ್ಲ. ನೆರಳಲ್ಲಿ ಕುತ್ಕಂಡು, ಬನ್ನು, ಬಿಸ್ಕತ್, ಚಕ್ಲಿ ಜೊತೆಗೆ ಕೊಂಚ ರಸ್ನ ಹೊಟ್ಟೆಯಾಳಕ್ಕೆ ಇಳಿಸಿ ಕೆಲ ನಿಮಿಷ ರೆಸ್ಟ್.


ಇಲ್ಲಿಗೆ ಸುಮಾರು ಐದು ಫರ್ಲಾಂಗು ದೂರದಲ್ಲಿದ್ದ ಹಳೆಯ ಕಾಲದ ಶಿಥಿಲವಾದ ಬ್ರಿಟೀಷ್ ಬಂಗ್ಲೆಯತ್ತ ಹೊರಟೆವು. ಸುಟ್ಟ ಟೈಲ್ಸ್, ಚಿಕ್ಕ-ಚಿಕ್ಕ ಕಲ್ಲು ಚಪ್ಪಡಿಗಳು ಮತ್ತು ಸಿಮೆಂಟ್? ಬಳಸಿ ಕಟ್ಟಿದ ಬೃಹತ್ತಾಕಾರದದ ಸೂರಿಲ್ಲದ ಕಟ್ಟಡವದು. ಸದಾ ಬಿರುಸಾಗಿ ಬೀಸುವ ಗಾಳಿ, ಬೀಳುವ ಮಳೆಗೆ ಎದೆಯೊಡ್ಡಿ ನಿಂತ ಕೆಲವೇ ತುಂಡು ಗೋಡೆಗಳ ಮೇಲೆ ಮಸುಕಾದ ಪಾಚಿ ಮುಚ್ಚಿದ ಚಿತ್ರಗಳು ನಮ್ಮ ಗಮನ ಸೆಳೆದವು. ಕಟ್ಟಡದೊಳಗೆ ಮರಗಿಡಗಳು ಬೆಳೆದಿದ್ರಿಂದ ವಿಸ್ತೀರ್ಣ ವೀಕ್ಷಣೆಗೆ ಎಲ್ರೂ ಗೋಡೆಯೇರಬೇಕಾಯ್ತು. ಗೋಡೆಯೇರಿದ್ದ ನಮಗೊಂದು ಕೌತುಕ ಕಾದಿತ್ತು. ಎಲ್ಲಿಂದ್ಲೋ ಸರ್ರ-ಸರ್ರ ಎಂಬ ಶಬ್ದ ಕೇಳಿಸಿತು. ಹೆದರಿ ಒಮ್ಮೆ ಬ್ಯಾಲೆನ್ಸ್ ತಪ್ಪಿತು. ಮೆಲ್ಲಗೆ ಮುಂದೆ ಹೋಗಿ ಇಣುಕಿದ ಪ್ರೇಮ್ ‘ಕಾಟಿ(ಕಾಡುಕೋಣ) ಕಣ್ರೋ’ ಅಂದ್ಕೂಡ್ಲೆ ನಡುಗುತ್ತ ಅಕ್ಮಲ್ ಮೆಲುಧ್ವನಿಯಲ್ಲಿ ‘ಸಾಗರ್! ಬನ್ರೋ ಹೋಗ್ಬಿಡಣಾ’ ಅಂದಿದ್ದ. ನಾನೂ ಮೆಲ್ಲಗೆ ಪ್ರೇಮ್ ನಿಂತಿದ್ದೆಡೆಗೆ ಹೋದೆ... ಮುಸ್ಸೆಂದು ಮೇಲೆ ನೋಡಿದ ಕಾಟಿ ಮತ್ತೆ ಹುಲ್ಲು ಮೇಯುವುದನ್ನ ಮುಂದುವರ್ಸಿತ್ತು. ಭಂಡ ಧೈರ್ಯ ಮಾಡಿದ ಇಬ್ರೂ ಶಬ್ಧ ಮಾಡದೆ ಕೆಳಗಿಳಿದು ಹೋಗುವಷ್ಟ್ರಲ್ಲಿ ಅಲ್ಲಿಂದ ಕಾಲ್ಕಿತ್ತಿತ್ತು. ಹಿಂಬಾಲಿಸಲೆತ್ನಿಸಿದೆವು, ಅಲ್ಲೇ ಮುಂದಿದ್ದ ಹಳ್ಳದ ಹತ್ತಿರ ನಿಂತು ಗುರಾಯಿಸಿದವನು ಹಾಗೆಯೇ ಕಾಡೊಳಗೆ ಕಾಣದಾದ. ಮೂವರೂ ಮಾತ್ರ ಗೋಡೆಯ ಮೇಲಿಂದ್ಲೇ ಧೈರ್ಯದಿಂದ ಎಲ್ಲಾ ಲೈವ್ ನೋಡಿ ಕೆಳಗಿಳಿದ್ರು!!!


ಹಳ್ಳದೆಡೆಗೆ ಹೋಗಿ ಸ್ವಲ್ಪ ಹೊತ್ತು ನೀರಿನಲ್ಲಿ ಆಟವಾಡಿ ಅಲ್ಲಿಂದ ಹಿಂದಿರುಗಿದೆವು, ಬೆಳಕು ಮಬ್ಬಾಗಿತ್ತು.


ರಾತ್ರಿ ಹೇಗೋ ಅನ್ನ ಬೇಯಿಸಿದೆವು. ತಂದಿದ್ದ ರೆಡಿ ಪುಳಿಯೊಗರೆಯೊಂದಿಗೆ ಕಲಸಿಕೊಂಡು ಚೆನ್ನಾಗಿ ಮೆದ್ದೆವು. ನಂತರ ಕಾಡೊಳಗೆ ಹೋಗುವ ಪ್ಲಾನ್ ಕೂಡ ಆಯ್ತು. ಎಲ್ರೂ ಬೆಂಬಲಿಸ್ಲಿಲ್ಲ. ನಾನು ಪ್ರೇಮ್ ಸ್ವಲ್ಪ ದೂರ ಕಾಡೊಳಗೆ ಹೋದೆವು. ಕೈಯಲ್ಲಿದ್ದ ಟಾರ್ಚ್ ಮಂಕಾಗಿತ್ತು,  ತುಸು ಭಯವೂ ಆಗ್ತಿತ್ತು. ವಾಪಸ್. ಬರುವಷ್ಟರಲ್ಲಿ ಎಲ್ರೂ ನಿದ್ರೆಗೆ ಜಾರಿದ್ದರು, ಅವರ ಮಧ್ಯೆ ಹೋಗಿ ತೆಕ್ಕೆಗೆ ಸೇರಿಕೊಂಡೆವು. ಶುಭ ರಾತ್ರಿ.


ಬೆಳಗ್ಗೆ ಎದ್ದೊಡನೆ ಪ್ಯಾಕಿಂಗ್ ಶುರು ಮಾಡಿದೆವು. ಅರ್ಜೆಂಟಿಗೆ ಹುಳಿಯನ್ನ ಕಾಫಿ. ನೆಟ್ಟ ಕಂಬಗಳನ್ನು ಕಿತ್ತು ಕಾಡೊಳಗೆ ಹಾಕಿ, ಚೆಲ್ಲಾಡಿದ್ದ ಪ್ಲಾಸ್ಟಿಕ್, ಪೇಪರ್ ಕಸ ಎಲ್ಲ ಹೆಕ್ಕಿ ಸುಟ್ಟು, ಬೆಂಕಿಗೆ ನೀರು ಸುರಿದು ಆರಿಸಿ ಹೊರಡಲಾರದ ಮನಸ್ಸಿಂದ ಹೊರಟೆವು.


ಇಳಿಯುವ ದಾರಿ ಸ್ವಲ್ಪ ಬೇರೆಯದಾಗಿತ್ತು. ಟೆಂಟ್ ಹಾಕಿದ್ದ ಸ್ಥಳದಿಂದ ಕೊಂಚ ಮುಂದೆ ಹೋಗಿ ತುಂಬಾ ಇಳಿಜಾರಾದ, ದಾರಿಯೇ ಇಲ್ಲದ ಜಾಗದಲ್ಲಿ ಇಳಿಯಲಾರಂಭಿಸಿದೆವು. ಇಳಿಯುವುದು ಏರುವುದಕ್ಕಿಂತ ಕಠಿಣ ಎಂದು ಗೊತ್ತಾಗಿದ್ದೇ ಅಂದು! ಕೆಲವು ಸಾಮಾನು ಮತ್ತು ಬ್ಯಾಗುಗಳನ್ನು ಒಟ್ಟಿಗೆ ಚೆನ್ನಾಗಿ ಕಟ್ಟಿ ಉರುಳಿಸಿದ್ದೂ ಉಂಟು! ಕತ್ತರಿಸಿದಂತಿದ್ದ ಪರ್ವತದ ಕೆಳಭಾಗ ತಲುಪಿದವು. ಸುಸ್ತು, ರೆಸ್ಟ್. ನಂತರ ಅಲ್ಲಿಯೂ ಕ್ಯಾಮೆರಾಕ್ಕೆ ವಿವಿಧ ಭಂಗಿಗಳ ದರ್ಶನ. ಹಾಗೆಯೇ ಎಡಕ್ಕೆ ಅರ್ಧ ಗಂಟೆ ಸಾಗಿದೆವು. ಹೊಸ ದಾರಿ ನಾವು ಬಂದಿದ್ದ ದಾರಿಯನ್ನು ಸೇರಿತ್ತು.


ಮುಂದೆ ಎಲ್ಲೂ ಹೆಚ್ಚು ಬ್ರೇಕ್ ತೆಗೆದಕೊಳ್ಳಲಿಲ್ಲ. ಟೈಮ್ ಎರಡರ ನಂತರ ಹೊಟ್ಟೆ ಕವ-ಕವ ಎನ್ನಲಾರಂಭಿಸಿತ್ತು.  ಹೊಟ್ಟೆಗೆ ನೀರು ಮಾತ್ರ. ಸೋಮಾವತಿ ಫಾಲ್ಸ್ ತಲುಪಿದಾಗ ಇನ್ನೇನು ಗೆದ್ದುಬಿಟ್ಟೆವೆಂದುಕೊಂಡ್ವಿ. ಇಲ್ಲ. ಅಲ್ಲಿಂದ ಬಾಳಗಲ್ ತಲುಪುವುದು ದೊಡ್ಡ ಸಾಹಸವೇ ಆಗಿತ್ತು. ಹಣ್ಗಾಯಿ ನೀರ್ಗಾಯಾಗಿದ್ವಿ. ಬಾಳಗಲ್ ತಲುಪಿ, ಅಲ್ಲಿದ್ದ ಗೂಡಂಗಡಿಯ ಎದುರು ನಿಂತು ಕೈ ಸನ್ನೆಯಲ್ಲೇ ತಿನಿಸುಗಳ ಕೊಂಡೆವು. ಬಾಯಿ ಬಿಜಿಯಾಗಿತ್ತು. ಕಳಸ ತಲುಪಿದಾಗ ಗಂಟೆ ಎಂಟಾಗಿತ್ತು. ಹೊಟೆಲೊಂದರಲ್ಲಿ ರಾತ್ರಿ ಭರ್ಜರಿ ಊಟ. ಪ್ರೇಮ್ ಮನೆಯಲ್ಲೇ ಹಾಲ್ಟ್.


ಮುಂಜಾನೆ ಎಂಟ್ ಗಂಟೆಗೆ ಅವರವರ ಊರಿಗೆ ಡಿಸ್ಪರ್ಸ್... 


ಈ ಬರಹಕ್ಕೆ ಸಂಬಂಧಿಸಿದ ಫೊಟೋಗಳು ‘ಸಂಪದ’ದ 'ಇತ್ತೀಚಿನ ಚ್ತಿತ್ರಗಳು’ ಲ್ಲಿ.
http://sampada.net/image/25390
http://sampada.net/image/25391


 

Rating
No votes yet

Comments