ಕೊಳಲನೂದುವ ಚದುರನಿಗೆ

ಕೊಳಲನೂದುವ ಚದುರನಿಗೆ

 ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ

ಮುರಳಿ ನಾದದ ಜೇನಸವಿ ತುಂಬಿ ಸುರಿಸಿ;
ಮರಳಿ ಮೆದುಗಲ್ಲ ಕನ್ನಡಿಯವೋಲೆಸೆಯೆ ತಾ-
ವರೆಮುಖವು ಮನದಲ್ಲಿ ನಿಲಲಿ ಸಡಗರಿಸಿ!
 
 

ಕೆಂಪು ತೊಂಡೆಯ ತುಟಿಯು ಸಂತಸದಲಲುಗಾಡಿ
ತಂಪು ತುಂಬಿಹ ಹರುಷದುಲಿಯೂದೆ ಕೊಳಲು;
ಮಂಪರೇರಿಸಿ ಮತ್ತೆ  ಸೆಳೆಯುತ್ತ ಬಗೆಬಗೆಯ-
-ಲಿಂಪುಗಳ ತೋರುತಲಿ ಮನವ ಪೆರ್ಚಿಸುತ! 


ಸಂಸ್ಕೃತ ಮೂಲ: 

 (ಲೀಲಾಶುಕನ ಕೃಷ್ಣಕರ್ಣಾಮೃತ-೬)
 
ಮುಕುಲಾಯಮಾನ ನಯನಾಂಬುಜಂ ವಿಭೋಃ
ಮುರಲೀ ನಿನಾದ ಮಕರಂದ ನಿರ್ಭರಂ |
ಮುಕುರಾಯಮಾಣಮೃದುಗಂಡಮಂಡಲಂ
ಮುಖಪಂಕಜಂ ಮನಸಿ ಮೇ ವಿಜೃಂಭತಾಂ || 
 
(ಲೀಲಾಶುಕನ ಕೃಷ್ಣಕರ್ಣಾಮೃತ-೩೬)
 
ಅಧೀರ ಬಿಂಬಾಧರ ವಿಭ್ರಮೇಣ 
ಹರ್ಷಾರ್ದ್ರ ವೇಣುಸ್ವರ ಸಂಪದಾ ಚ |
ಅನೇನ ಕೇನಾಪಿ ಮನೋಹರೇಣ
ಹಾ ಹಂತ ಹಾ ಹಂತ ಮನೋ ಧುನೋತಿ ||


-ಹಂಸಾನಂದಿ

(ಅನುವಾದಿಸುವಾದ ಸಲಹೆ ನೀಡಿದ ಗೆಳೆಯ ಎಂ.ಜಿ.ಹರೀಶ್ ಅವರಿಗೆ ವಂದನೆಗಳು)

 

ಕೊ: ನಾಳೆ ಬರುವ ಕೃಷ್ಣಾಷ್ಟಮಿಯ ಸಮಯಕ್ಕೆ ಅತಿ ಸುಂದರವಾದ ಎರಡು ಸಂಸ್ಕೃತ ಶ್ಲೋಕಗಳನ್ನು ಅನುವಾದಿಸಿ ಹಂಚಿಕೊಳ್ಳುವುದು ಬಹಳ ಸಂತಸ ತಂದ ಸಂಗತಿ.  ಕೊಳಲನೂದುವ ಚದುರನಾರೇ ಪೇಳಮ್ಮ ಅನ್ನುವುದು ವ್ಯಾಸರಾಯರ ಒಂದು ಜನಪ್ರಿಯ ರಚನೆ, ಹಾಗಾಗಿ ತಲೆಬರಹವನ್ನು ಹೀಗಿಟ್ಟದ್ದು.

ಕೊ.ಕೊ:  ಎಸೆ  ಎನ್ನುವುದು   ಶೋಭಿಸು ಎನ್ನುವ ಅರ್ಥದ ದೇಶ್ಯ ಪದ, ಹರಿದಾಸರು ತಮ್ಮ ರಚನೆಗಳಲ್ಲಿ ಬಳಸಿದ್ದಾರೆ; ಉದಾಹರಣೆಗೆ,   "ಶಶಿ ಮುಖದ ನಸುನಗೆಯ ಬಾಲೆ, ಎಸೆವ ಕರ್ಣದ ಮುತ್ತಿನ ಓಲೆ!" ಎನ್ನುವ ಅನುಪಲ್ಲವಿ ಇರುವ ಕನಕದಾಸರ ರಚನೆ "ವರವ ಕೊಡು ಎನಗೆ ವಾಗ್ದೇವಿ".

ಕೊ.ಕೊ.ಕೊ: ಪೆರ್ಚಿಸು = ಉಕ್ಕುವಿಕೆ, ಹೊರಸೂಸುವಿಕೆ , ಹಿಗ್ಗುವಿಕೆ  ಹೀಗೆಲ್ಲ ಅರ್ಥ ಬರುವ ಒಂದು ದೇಶ್ಯ ಪದ. "ಹಾ ಹಂತ ಹಾ ಹಂತ ಮನೋ ಧುನೋತಿ" ಎಂಬ ಸಾಲಿಗೆ ಕೃಷ್ಣನ ಸೊಬಗನ್ನು ಕಂಡು ಅಯ್ಯೋ ಅಯ್ಯೋ ಅದೇನು ಸೊಗಸು ಎಂದು ಉದ್ಗರಿಸುವ ಮನಸ್ಸಿಗೆ ಇದೇ ಸರಿಯಾದ ಭಾವವೆಂದು ಈ ಪದವನ್ನು ಬಳಸಿದೆ.

ಚಿತ್ರ: ಬೆಳವಾಡಿಯ ವೀರನಾರಾಯಣ ದೇವಾಲಯದಲ್ಲಿನ ವೇಣುಗೋಪಾಲ ಮೂರ್ತಿ. Picture Courtesy:  -  Dr Ronald Dengler who took the picture, and Kathie Brobeck, for sharing the picture

Rating
No votes yet