ಕ್ರೌರ್ಯ ಮತ್ತು ಬಲಿ

ಕ್ರೌರ್ಯ ಮತ್ತು ಬಲಿ

ಸಾಹಿತ್ಯಕ್ಕೆ ಕೊಡುವ ನೊಬೆಲ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ೮೯ ವರ್ಷದ ಅಲೆಕ್ಸಾಂಡರ್‍ ಸೋಲ್ಸನಿತ್ಸಿನ್ ಅಸುನೀಗಿದ್ದಾನೆ.

ಇನ್ನೊಂದು ಕಾಲದವನೋ ಎನಿಸುವಂತವನು. ಆದರೆ ಎಲ್ಲ ಕಾಲಕ್ಕೂ ಸಲ್ಲುವಂತಹದನ್ನು ಉಳಿಸಿ ಹೋದವನು. ಸ್ಟಾಲಿನ್ನನ ಕ್ರೌರ್ಯವನ್ನು ಬಯಲಿಗೆಳೆದು ಲೋಕಕ್ಕೆ ತಿಳಿಸಿದವನು. ಕಡೆಯವರೆಗೂ ಪ್ರಭುತ್ವದ ಜತೆ ಮುಜುಗರದ ಸಂಬಂಧವನ್ನ ಉಳಿಸಿಕೊಂಡವನು. ಬೋರಿಸ್ ಎಲ್ಸಿನ್ ನೀಡಲು ಬಂದ ರಷ್ಯಾದ ಅತಿ ಉನ್ನತ ಪದವಿ "ಆರ್ಡರ್‍ ಆಪ್ ಸೇಂಟ್ ಆಂಡ್ರೂ"ವನ್ನು ತಿರಸ್ಕರಿಸಿದವನು. ಅವನ "ಒನ್ ಡೇ ಇನ್ ದ ಲೈಫ್ ಆಫ್ ಇವಾನ್ ಡೆನಿಸೋವಿಚ್" ಒಮ್ಮೆ ಓದಿದರೆ ಸಾಕು, ಮತ್ತೆ ಮತ್ತೆ ಕಾಡುವಂತಹದು. ಸದಾ ಜತೆಗೆ ಉಳಿಯುವಂತಹದು. ಅಮೇರಿಕಾದ ರಾಜಕೀಯ ಹಂದರವನ್ನೂ ಒಪ್ಪಲಾರದೆ - ರಷ್ಯಾ ತನ್ನ ಜಾಡನ್ನು ತಾನೇ ಕಂಡುಕೊಳ್ಳಬೇಕೆಂದು ಒತ್ತಿ ಒತ್ತಿ ಹೇಳಿದವನು. ಎಲ್ಸಿನ್ ಮಹಾ ಗಡಿಬಿಡಿಯಲ್ಲಿ ರಷ್ಯಾದ ಆರ್ಥಿಕ ಸ್ಥಿತಿಯನ್ನು ಹಾಳುಗೆಡವಿದ್ದನ್ನು ಹೀಗಳೆದವನು. ತನ್ನ ಅದಮ್ಯ ಚೇತನದಿಂದ ಈ ಜಗತ್ತಿನ ಅತ್ಯಂತ ಕ್ರೂರ ಪ್ರಭುತ್ವಕ್ಕೆ ಸೆಡ್ಡು ಹೊಡೆದು-ಕೊಲ್ಲುತ್ತಾರೆ ಎಂದುಕೊಳ್ಳುತ್ತಲೇ ಬದುಕಿದವನು. ಬರೆದದ್ದು ನಾಶಮಾಡುತ್ತಾರೆ ಎನ್ನುತ್ತಲೇ ಉಳಿಸಿಕೊಂಡವನು.

ಇನ್ನೆರಡು ದಿನಕ್ಕೆ ಮತ್ತೆ "ಹಿರೋಶೀಮಾ ದಿನ". ಎರಡನೇ ಮಹಾಯುದ್ಧ ಕೊನೆಗೊಳಿಸಿದ ಅತ್ಯಂತ ಭೀಕರವಾದ ಅನಗತ್ಯ ಹತ್ಯಾಕಾಂಡ. ಅಮೇರಿಕಾದ ಜನರಿಗೆ ಏನೂ ಹೇಳದೆ ಮಹಾಗುಟ್ಟಿನಲ್ಲಿ ಓಪನ್‌ಹೈಮರ್ ನಿರ್ದೇಶನದಲ್ಲಿ ಒಟ್ಟುಗೂಡಿಸಿದ ಅಟಾಮಿಕ್ ಬಾಂಬದು. ನಾಜೀಗಳನ್ನು ಮಟ್ಟ ಹಾಕಲು ಹಲ್ಲು ಮಸೆಯುತ್ತಾ ಕಟ್ಟಿಕೊಂಡಿದ್ದು. ಕೊಂದದ್ದು ಮಾತ್ರ ಜಪಾನಿನ ಸಾವಿರಾರು ಜನರನ್ನು. ಅಂದಿನ ಅಣುಭೌತಿಕ ವಿಜ್ಞಾನಿಗಳೂ ಆ ಕ್ರೌರ್ಯದಲ್ಲಿ ಶಾಮೀಲಗಾಗಿದ್ದನ್ನು ಈಗ ಯಾರೂ ಅಲ್ಲಗಳೆಯಲಾರರು.

ಯೋಚಿಸಿದಂತೆಲ್ಲಾ ಇವೆಲ್ಲಕ್ಕೆ ಇಂಡಿಯಾದ ನಾಯಕರ ಮಾತುಗಳು ಮರುದನಿಗೊಡುತ್ತದೆ. ಪಾಕಿಸ್ತಾನದ ಮೇಲೆ ಹಲ್ಲುಮಸೆಯುತ್ತಾ ಕಟ್ಟಿಕೊಳ್ಳುವ ನಮ್ಮ ಬಾಂಬು ಯಾರನ್ನು ಆಹುತಿ ಪಡೆಯಬಹುದು ಎಂದು ಎಣಿಸದರೆ ಎದೆ ನಡುಗುತ್ತದೆ. ನಾವೂ ಗುಟ್ಟಾಗಿ ಅಣುಬಾಂಬು ಕಟ್ಟಿದ್ದೇವೆ, ಸಿಡಿಸಿದ್ದೇವೆ. ಅದಕ್ಕೆ ಕಾರಣರಾದ ಇಂಜಿನಿಯರನ್ನು "ವಿಜ್ಞಾನಿ" ಎಂದು ತುಂಬಿ ತುಳುಕುವಂತೆ ಹೊಗಳಿ "ಭಾರತ ರತ್ನ" ಮಾಡಿದ್ದೇವೆ, ಪ್ರೆಸಿಡೆಂಟ್ ಮಾಡಿದ್ದೇವೆ. ಗುಟ್ಟನ್ನೇ ರಾಜಕೀಯ, ವೈಜ್ಞಾನಿಕ ಮಂತ್ರವನ್ನಾಗಿ ಮಾಡಿದ್ದೇವೆ. ಬಹುಶಃ ನಮಗೂ ಒಬ್ಬ ಸೋಲ್ಸನಿತ್ಸನ್ ಬೇಕೇನೋ...

ಈವೆಲ್ಲಾ ತಲೆ ಕೆಡಿಸುತ್ತಿರುವಾಗ ಮತ್ತೆ ನಮ್ಮ ದೇವಾಸ್ಥಾನದ ಕ್ರೌರ್ಯಕ್ಕೆ ನೂರಾರು ಪುಟ್ಟ ಮಕ್ಕಳು, ತಾಯಂದಿರು ಹಾಗು ವಯಸ್ಸಾದವರು ಬಲಿಯಾಗಿದ್ದಾರೆ. ಈ ಕ್ರೌರ್ಯಕ್ಕೆ ಸೆಡ್ಡು ಹೊಡೆಯಬೇಕಾದವರೇ ಮತ್ತೆ ಮತ್ತೆ ಬಲಿಯಾಗುತ್ತಿದ್ದಾರೆ.

ಈ ಬಗೆಯಲ್ಲಿ ನಮ್ಮ ಜನರನ್ನೇ ನಾವು ವಿಧಿವತ್ತಾಗಿ ನಿಯತಕಾಲಿಕವಾಗಿ ಬಲಿತೆಗೆದುಕೊಳ್ಳಲು ಬಾಂಬುಗಳೂ ಬೇಡ, ಆತಂಕವಾದವೂ ಬೇಡ.

Rating
No votes yet

Comments