ಗೊತ್ತಿಲ್ ಗೊತ್ತಿಲ್ ಕನ್ನಡ ಗೊತ್ತಿಲ್

ಗೊತ್ತಿಲ್ ಗೊತ್ತಿಲ್ ಕನ್ನಡ ಗೊತ್ತಿಲ್

 
“ನಾನು” ನನ್ನ ನಿಮ್ಮೆಲ್ಲರ ನಡುವೆ ಮನೆಮಾಡಿರುವ ಮನಸ್ಸಿನ ಮಾಲೀಕ. ಇದನ್ನು ಭಾವನೆಯಾಗಿ,
 
ವ್ಯಕ್ತಿಯಾಗಿ, ಭಾಷೆಯಾಗಿ ಆಲೋಚಿಸುವುದು  ಓದುಗ ಪ್ರಭುವಿಗೆ ಬಿಟ್ಟ ಅಭಿಪ್ರಾಯ.
 
ಇದು ನನ್ನ ನಿಮ್ಮೆಲ್ಲರ ನಡುವೆ ನಡೆದ,ನಡೆಯುತ್ತಿರುವ, ನಡೆಯಬಹುದಾದ ಕಥೆ!
 
ಪದವೀಧರನ ಪಟ್ಟ ಪಡೆದು “ನಾನು” ಬದುಕು ಕಟ್ಟಿಕೊಳ್ಳುವ ಹಂಬಲದಲ್ಲಿ ತನ್ನ ಪುಟ್ಟ ಊರನ್ನು ಬಿಟ್ಟು ರಾಜಧಾನಿಯೆಡೆಗೆ ಕೆಂಪು ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದ. ಅಮ್ಮ “ಕಾವೇರಿ” ಅಪ್ಪ“ಸಹೃದಯ” ಇಬ್ಬರು ಒಳ್ಳೆದಾಗಲೆಂದು ಬೀಳ್ಕೊಟ್ಟರು. ತನ್ನೊಡನೆ ಕೂಡಿ ಆಡಿ ತನ್ನೂರಿನಲ್ಲೇ ನೆಲೆಸಿದ್ದ ಅವನ ಅಜೀವ ಗೆಳೆಯರಾದ ಚಂದಮಾಮ, ತುಷಾರ ,ತರಂಗ,ಹಳೆ ಟಾಕೀಸು, ಸ್ಕೂಲಿನ ಮನೆ, ಗದ್ದೆಬಯಲು, ಸೀಬೇಕಾಯಿ ಜೊತೆಗೆ ಹಲವಾರು ಗೆಳೆಯರು ಮತ್ತೆ ನಮ್ಮೊಡನೆ ನಿನ್ನ ರಾಜಧಾನಿಯ ಅನುಭವಗಳನ್ನು ಹಂಚಿಕೊಳ್ಳಲು ಬೇಗ ಬಾ ಎಂದು ಹರಸಿದರು.
 
“ನಾನು” ರಾಜಧಾನಿಗೆ ಕಾಲಿಡುತ್ತಿದಂತೆ ಒಂದು ವಿಸ್ಮಯ ಲೋಕ ಕೈಬೀಸಿ ಕರೆದ ಅನುಭವ. ಎಲ್ಲೆಲ್ಲೂಕಾರುಗಳು, ದೊಡ್ಡ  ದೊಡ್ಡ  ಕಟ್ಟಡಗಳು  ಹತ್ತು  ಹಲವಾರು  ತಿಂಡಿಯ  ಅಂಗಡಿಗಳು. ತಾನು  ಇರಬೇಕಾದ ಜಾಗದ ಮಾಹಿತಿ  ಖಚಿತಪಡಿಸಿಕೊಂಡು  ಅಲ್ಲಿಗೆ  ತುಸು  ನಿಧಾನವಾಗಿ  “ನಾನು”  ಸೇರಿಕೊಂಡ. ಅವನ ಪೇಯಿಂಗ್ಗೆಸ್ಟ್  ಕೊಠಡಿಯನ್ನು “ಕೇಮ್ ಚೋ ” ಜೊತೆ ಹಂಚಿಕೊಳಬೇಕಾಯಿತು.
 
ಹೊಸ ಭಾಷೆ, ಸ್ನೇಹಿತರು, ಹೊಸ ಬಗೆಯ ಅನುಭವಗಳು “ನಾನು” ವನ್ನು ಆಕರ್ಷಿಸಿದವು.  ದಿನ್ನಕ್ಕೆರಡುಬಾರಿ ಅಮ್ಮನಿಗೆ ಕರೆ ಮಾಡಿ ಆಗು ಹೋಗುಗಳನ್ನು ವಿವರಿಸುತಿದ್ದ. ಕ್ರಮೇಣ  ತನ್ನ  ಉದ್ಯೋಗದಲ್ಲಿ ಉನ್ನತಿ ಹೊಂದಿ ಹೆಸರುಗಳಿಸಿ  ಮತ್ತಷ್ಟು  ಹಣ  ನೀಡುವ  ಬೃಹತ್  ಕಟ್ಟಡವೊಂದರಲ್ಲಿ  “ನಾನು” ಕೆಲಸಕ್ಕೆ ಸೇರಿಕೊಂಡೆ. ಇತ್ತ ಹುಟ್ಟೂರಿನಲ್ಲಿ ಗೆಳೆಯರಿಗೆ  ವಯಸ್ಸಾದರೂ  ಕಡಿಮೆ ಸಂಬಳ,  ನೆಮ್ಮದಿ ಜೀವನ. “ನಾನು”ವನ್ನು  ಸಂಪರ್ಕಿಸಲು  ಪ್ರಯತ್ನಿಸಿದ  ಎಲ್ಲ ಗೆಳೆಯರಿಗೂ  ಸಿಗ್ಗುತ್ತಿದ್ದ  ಒಂದೇ ಉತ್ತರ “ಸ್ವಲ್ಪ ಕೆಲಸ ಇದೆ ಆಮೇಲೆ ಫೋನ್ ಮಾಡ್ತೀನಿ” ಅಮ್ಮ ಕಾವೇರಿ ಅಪ್ಪ ಸಹೃದಯನನ್ನು ನೋಡಲು ವಾರಕ್ಕೊಮ್ಮೆ ಬರುತ್ತಿದ್ದ “ನಾನು” ಈಗ ತಿಂಗಳಿಗೊಮ್ಮೆ ಎರಡು ತಿಂಗಳಿಗೊಮ್ಮೆ ಬರಲಾರಂಭಿಸಿದ.
 
ರಾಜಧಾನಿಯಲ್ಲಿ ಎತ್ತ ನೋಡಿದರು ”HR”,”TN”  “PN”, ”UP”  ಎಂಬ  ಬಿರುದಾಂಕಿತ  ವಾಹನಗಳು.  “ನಾನು” ಬದಲಾಗಿದ್ದ  ಎನ್ನುವುದಕ್ಕಿಂತ  ತನ್ನನ್ನು  ತಾನು “ಎಲ್ಲರೊಳಗೊಂದಾಗು ………..   ”  ಎಂಬ  ನಾಣ್ನುಡಿಯಂತೆ   ಕನ್ನಡಹಾಡುಗಳನ್ನು ಕೇಳುವುದನ್ನು ನಿಲ್ಲಿಸಿದ್ದ. ಚಿತ್ರಾನ್ನ ಮೊಸರನ್ನ ಮುಂಚಿನಂತೆ ರುಚಿಸುತಿರಲ್ಲಿಲ್ಲ. ತನ್ನೊಳಗಿನ ಕ್ರಿಯಾಶೀಲತೆಯನ್ನು ಎಷ್ಟು ಚೆನ್ನಾಗಿ ಅಭಿವೃದ್ದಿಪಡಿಸಿಕೊಂಡು ಶ್ರೀಮಂತನಾಗಿದ್ದೇನೆ ಎಂದು  ಬೀಗುತಿದ್ದ.
 
ವರುಷಗಳು ಉರುಳಿದಂತೆ ಗೃಹಸ್ಥನಾಗಿ ರಾಜಧಾನಿಯಲ್ಲಿ ಬಂಗಲೆಯೊಂದ ಕೊಂಡು ,ಅಪ್ಪ ಅಮ್ಮ  ಕಾಲವಾದಮೇಲೆ ಊರಿನಲ್ಲಿದ್ದ ಮನೆ ಜಮೀನುಗಳನ್ನೂ ಮಾರಿ  ಬಂದ ಹಣದಿಂದ ಮಕ್ಕಳ ಮದುವೆ ಮಾಡಿ ಮುಗಿಸಿದ್ದ. ವಯಸ್ಸಾದ  ಕಾರಣ  “ನಾನು”ವಿಗೆ  ದೊಡ್ಡ ಕಟ್ಟಡದ  ಕೆಲಸ  ಸಿಗುತಿರಲ್ಲಿಲ್ಲ. ಅಜೀವ ಗೆಳೆಯರ ಪೈಕಿ ಕೆಲವರು ಕಾಲವಾಗಿ ಹೋಗಿದ್ದರು.
 
ಹುಟ್ಟೂರಿಗೆ ಹೋಗಬೇಕೆಂಬ ಬಯಕೆಯಿಂದ ಚಿರಯುವಕನಂತೆ ಉಡುಪು ಧರಿಸಿ ಊರಿಗೆ ಬಂದು  ತಲುಪಿದ. ತನ್ನೂರಿನಲ್ಲಿ  ತನಗೊಂದು  ಸೂರಿಲ್ಲ,  ಬಂಧು ಬಳಗವನ್ನು ದೂರವಿಟ್ಟ  ತನ್ನನ್ನು  ಅವರಾರು  ಹತ್ತಿರ ಸೇರಿಸುವುದಿಲ್ಲವೆಂದು ಅರಿವಾಯಿತು.  ತಾನು  ಆಡುತ್ತಿದ್ದ  ಪುಟ್ಟ ರಸ್ತೆಗಳು “ನಾನು”ವನ್ನು “ನಿನ್ನ ನೀನು ಮರೆತರೇನು ಸುಖವಿದೆ, ತನ್ನ ತನವಮರೆತರೇನು ಸೊಗಸಿದೆ” ಎಂದು ಅಣಕಿಸಿದವು. ತರಂಗ,ತುಷಾರ,ಮಯೂರರಿಗೆ ವಯಸ್ಸಾಗಿ ಅವರೆಡೆಗೆ ಯಾರುಕಣ್ಣು  ಹಾಯಿಸುತಿರಲಿಲ್ಲ ಪಧವೀಧರರು,ಬುದ್ಧಿಜೀವಿಗಳು ಅವರನ್ನು ಕಂಡೊಡನೆ ಬೇರೆ ರಸ್ತೆಯಲ್ಲಿ  ಕದ್ದುಹೋಗುತಿದ್ದರು.
 
ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ಸು ಹೋಗುವ ಸಮಯದಲ್ಲಿ “ಭಾವ ಭಾವನೆಗಳ”  ಮನೆಯಂಗಳದಲ್ಲಿ“ಎನ್ನಡ  ಎಕ್ಕಡ” ಕಾಲು ಚಾಚಿ ಕುಳಿತಿದ್ದರು. ಏನಪ್ಪಾ ಇಲ್ಲಿ ನಮ್ಮ ಭಾವ  ಭಾವನೆಗಳು ಇದ್ರಲ್ಲ ಎಲ್ಲಿ ಹೋದರು ಎಂದು ಕೇಳಿದಾಗ  “ಅಯ್ಯೋ  ಅವರು ಸತ್ತು  ಎಷ್ಟು ವರ್ಷ  ಆಯಿತು ಈಗ ಕೇಳ್ತಿದೀರಲ್ಲ, ಅವರ ಕಡೆಯವರು ಮನೆಯನ್ನು ನಮಗೆ  ಮಾರಿದ್ದಾರೆ ನೇನೆ  ಓನರ್ರು  ಏಮ್ ಕಾವಾಲೀ??” ಎಂದು ಕೇಳಿದಾಗ “ನಾನು”ವಿನ ಕಣ್ಣಂಚಲ್ಲಿ ನೀರು.
 
ಇದೆಲ್ಲವ ಕೇಳಿಸಿಕೊಂಡು ಇನ್ನೇನು ಸಹನೆ ಮಾತಾಡಬೇಕೆಂದಾಗ ದೂರದಿಂದ ಕೇಳಿಸಿತ್ತು ”Shut up!”
 
Rating
No votes yet