ಗೌರ ಅಂದುಕೊಂಡ ಬದುಕಲ್ಲ ಅದು..

ಗೌರ ಅಂದುಕೊಂಡ ಬದುಕಲ್ಲ ಅದು..

ನಾಲ್ಕೈದು ದಿನಗಳಾದರೂ ಕೆಲಸಕ್ಕೆ ಬರದೆ ನಾಪತ್ತೆಯಾಗಿದ್ದ ಕೆಲಸದಾಳು ಶಂಕ್ರನನ್ನು ಮನದಲ್ಲೇ ಶಪಿಸುತ್ತಾ, ಬಿಸಿಲಿನ ಜಳಕ್ಕೆ ಬಾಡಿಹೊಗುತ್ತಿದ್ದ ಹೂಗಿಡಗಳಿಗೆ ನೀರನ್ನು ಹಾಕುತ್ತಿದ್ದಳು ಗೌರಕ್ಕ. ಅದೇ ಸಮಯದಲ್ಲಿ ಹಳ್ಳದ ತಗ್ಗಿನ ಕಡೆಯಿಂದ ಯಾರೋ? ಬರುತ್ತಿರುವುದ ಕಂಡು ಯಾರೆಂದು? ಬರುತ್ತಿದ್ದವರ ಹಾದಿಯನ್ನು ಕುತೂಹಲದಿಂದ ನೋಡಿದಳು ಮತ್ತು ಅದು ಶಂಕ್ರನೇ ಎಂದು ಗೊತ್ತಾಗಲು. ಸದ್ಯ ಇವಾಗಲಾದರೂ ಬಂದನಲ್ಲ ಮಾರಾಯ! ಎಂದು ಗೌರಕ್ಕ ಮನಸಿನಲ್ಲೇ ಅಂದುಕೊಂಡಳು. ಬಂದವನನ್ನು ಕುರಿತು ಎಲ್ಲಿ ಹಾಳಾಗಿ ಹೋಗಿದ್ಯೋ ಶಂಕ್ರ? ಎಂದು ಕೇಳಿದಳು ಗೌರಕ್ಕ.

ಅಯ್ಯೋ ಶಿವ! ಊರ್ನಾಗ ನಿಂಗೆ ಒಬ್ನೂ ವಿಷ್ಯನ ಹೇಳಿಲ್ವ? ಎಂದು ಮಾತನ್ನು ಮುಂದುವರೆಸಲು ಹೊರಟ ಶಂಕ್ರನಿಗೆ ಮಾತನಾಡಲು ಎಡೆಗೊಡದೆ, ಲೋ ಶಂಕ್ರ, ನಾನಿರೋದು ತೋಟದ ಮನೆಲಿ,ಅದು ಅಲ್ಲದೆ ಊರೊಳಗೆ ಹೋಗಿ ಹದಿನೈದು ದಿವಸವಾದ್ವು,ನನ್ ಮನೆತಕ ದಿನ ತಪ್ಪದೆ ಬರೋನು ನೀನ್ ಒಬ್ನೇ. ನೋಡಿದ್ರೆ ಒಂದ್ವಾರದಿಂದ ನೀನ್ ಅಡ್ರೆಸ್ಸೆ ಇಲ್ಲ! ಅಂತಾದ್ರಾಗ ನಂಗೆ ಹ್ಯಾಂಗೋ ಗೊತ್ತಾಬೇಕು ವಿಷ್ಯ? ಎಂದಳು ಗೌರಕ್ಕ.

ಏನ್ ಹೇಳೋದು ಅಕೋ? ನನ್ ಮಗ ಗೋಪಿ ಆಟ ಆಡ್ವಾಗ ಮರದ ಮ್ಯಾಲಿಂದ ಜಾರಿಬಿದ್ದು ಕೈನ ಮುರ್ಕೊಂಡವನೆ.ಆ ಬೇಕುಪ್ಪನ ಕರಕೊಂಡು ಕೈ ಕಟ್ಟಿಸೊಕೆ ಸಿಂಗೇನಹಳ್ಳಿ ಬಸಜ್ಜನತಕ ಹೋಗಿದ್ನಕೋ.ಅಲ್ಲಿ ನೋಡಿದ್ರೆ ನಮ್ಮ ಹಾಗೆ ಕೈ ಕಟ್ಟಿಸೊಕೆ ಶ್ಯಾನೆ ಜನ ಬಂದಿದ್ರು. ಅವನ ಕೈ ಕಟ್ಟಿಸ್ವೊತ್ತಿಗೆ ಸಾಯಂಕಾಲ ಆಯಿತು. ರಾತ್ರಿ ಏಳಾದ್ರೂ ಹಾಳಾದವು ಯಾವೊಂದು ಬಸ್ ಬರಬಾರದೆ. ರಾತ್ರಿ ಉಳಿದುಕೊಂಡಗೂ ಆಗುತ್ತೆ ಹಾಗೆ ನನ್ನ ನಾದ್ನಿ, ಅವಳ ಗಂಡನ್ನು ನೋಡಿಕೊಂಡು ಬಂದಗೂ ಆಗುತ್ತೆ ಎಂದು ಅಂದುಕೊಂಡು ಸಿಂಗೇನಹಳ್ಳಿ ಹತ್ತಿರದಲ್ಲಿ ಇದ್ದ ತಾಂಡ್ಯಕ್ಕೆ ನೆಡೆದು ಅವರ ಮನೆ ತಲುಪುವಷ್ಟರಲ್ಲಿ ರಾತ್ರಿ ಹತ್ತಾಗಿತ್ತು. ಅಲ್ಲಿ ನನ್ ನಾದ್ನಿ, ಬಹಳ ದಿನವಾದ ಮ್ಯಾಗೆ ಬಂದಿದ್ದೀರ ಬಾವೋ ಅಲ್ಲದೆ ಗೋಪಿ ಬೇರೆ ಈ ಪರಿಸ್ಥಿತಿಲಿ ಅವೌನೇ. ಒಂದೆರಡು ದಿನ ಉಳ್ಕಳಿ ಹೋಗ್ರೊಂತೆ ಎಂದು ಒತ್ತಾಯ ಮಾಡಿ ಉಳಿಸ್ಕೊಂಡ್ಲು.

ಬಿಡಪ್ಪ ನೀನ್ ರಾಮಾಯಣನ ಕೇಳೋಕ್ಕೆ ಪುರಸೊತ್ತಿಲ್ಲ, ಸರಿ ಈಗ ಹೆಂಗವ್ನೇ ನಿನ್ ಮಗ? ಎಂದು ಖಾರವಾದ ಧ್ವನಿಯಲ್ಲಿ ಕೇಳಿದಳು ಗೌರಕ್ಕ.

ಚನ್ನಾಗಿದ್ದಾನೆ. ಆದರೆ ಬಹಳ ಕೈ ನೋವು ಅಂತಿರ್ತಾನೇ ಅವನ ಕೈ ತುಂಬಾ ಏನು ಕಾಣದ ಹಾಗೆ ಬಿಳಿ ಬಟ್ಟೆನ ಸುತ್ತೌನೆ ಆ ಬಸಜ್ಜ ಎಂದ ಶಂಕ್ರ. ನೆತ್ತಿಗೆರಿ ಬಂದ ಕೋಪನ ತೋರ್ಪಡಿಸಿದೆ. ನಿಂಗೆ, ನಿಮ್ಮ ಹಟ್ಟಿ ಜನರಿಗೆ ಬುದ್ದಿ,ಗಿದ್ದಿ ಏನಾದರೂ ಇದ್ಯಾ? ಊರಿಗೊಬ್ರು ಡಾಕ್ಟ್ರು ಇರೋ ಇಂಥಾ ಕಾಲ್ದಾಗೆ, ಆ ಭದ್ರ ಹಾವಿಂತವ ಕಚ್ಚಿಸಿಕೊಂಡ ತನ್ನ ಅಪ್ಪನ ಆಸ್ಪತ್ರೆಗೆ ಕರಕೊಂಡು ಹೋಗೊದನ್ನು ಬಿಟ್ಟು, ನಾಟಿ ಔಷಧ ಕೊಡ್ಸೋಕ್ಕೆ ಹೋಗಿ ಅಪ್ಪನ ಕಳೆದುಕೊಂಡ. ಆ ಚಂದ್ರಿ, ಪೂಜಾರಪ್ಪನ ಮಾತು ಕೇಳಿಕೊಂಡು ಉಷಾರಿಲ್ಲದ ತನ್ನ ಗಂಡನ ದೇವಸ್ತಾನದಲ್ಲಿ ತಿಂಗಳುಗಟ್ಟಲೆ ಇಟ್ಕೊಂಡು ತಾಳಿ ಕಳೆದುಕೊಂಡಳು. ಈಗ ನೀನು..? ಆ ಮಗುನ ಹೋಗಿ, ಹೋಗಿ ಬಸಜ್ಜನತಕ ಕರಕೊಂಡು ಹೋಗಿದ್ದಿಯಲ್ಲ!

ಗೌರಕ್ಕನ ಮಾತುಗಳಿಂದ ಜ್ಞಾನೋದಯವಾದವನಂತೆ, ಈಗ ಏನು ಮಾಡೋದಕ್ಕ ಗೋಪಿಗೆ? ಎಂದು ತನಗೆ ಏನು ತೋಚದವನಾಗಿ ಮೂಕನಂತೆ ನಿಂತ ಶಂಕ್ರ. ಸರಿ ಹೋಗಿ ಮಿಕ್ಕ ಹೂವಿನ ಗಿಡಗಳಿಗೆ ನೀರನ್ನು ಹಾಕು ಅದಾದಮೇಲೆ ರಸ್ತೆ ಕಡೆಗೆ ತಂತಿ ಬೇಲಿ ಬಿಚ್ಚಿಕೊಂಡಿದೆ ಅದನ್ನ ಸರಿ ಮಾಡಿ ಬಾ, ಇಲ್ಲಾಂದ್ರೆ ದನಕರುಗಳು ನುಗ್ಗಿ ಗಿಡಗಳನ್ನು ತಿಂದು ಹಾಕ್ತಾವೆ. ಅಷ್ಟು ಹೊತ್ತಿಗೆ ಟೀ ಮಾಡಿರ್ತೀನಿ ಕುಡಿದು ಮನೆಗೆ ಹೋಗುವೆಯಂತೆ. ವತ್ತಾರೆ ಎದ್ದು ನೀನ್ ಮಗನ ಕರಕೊಂಡು ಬಾ, ಸಾರೋಗೆರೆನಾಗೆ ಇರೋ ಮೂಳೆಡಾಕ್ಟ್ರ ಹತ್ರಹೋಗೋಣ ಅವರ ಕೈಗುಣ ಬಹಳ ಚನ್ನಾಗಿ ಇದೆಯಂತೆ ಎಂದು ಹೇಳಿ ಮನೆಯೊಳಗಡೆ ನೆಡೆದಳು ಗೌರಕ್ಕ.

ಮಗನ ಧ್ಯಾನದಲ್ಲೇ ಹೂಗಿಡಗಳಿಗೆ ನೀರನ್ನು ಹಾಕಿ, ತಂತಿಬೇಲಿಯನ್ನು ಸರಿ ಮಾಡಿಬಂದು ಗೌರಕ್ಕನ ಮನೆಯ ಜಗುಲಿಯ ಮೇಲೆ ಕುಳಿತ ಶಂಕ್ರ. ಅಷ್ಟರಲ್ಲಿ ಟೀಯನ್ನು ಕುಡಿಯಲು ತಂದುಕೊಟ್ಟಳು ಗೌರಕ್ಕ. ಕೊಟ್ಟ ಟೀಯನ್ನು ಕುಡಿದು ಅಲ್ಲಿಂದ ಹೊರಡುತ್ತಾ "ವತ್ತಾರೆ ಎದ್ದು ಮಗನ ಜೊತೆ ಬರ್ತೀನಿ ಅಕ್ಕ " ಎಂದು ಹೇಳಿ ಹೊರಟ.

ಶಂಕ್ರನನ್ನು ಕಳುಹಿಸಿ ಮನೆಯೊಳಗೇ ಬಂದು ಕುಳಿತಳು. ಎಲ್ಲ ಮರೆತು ಹಗುರವಾಗಿದ್ದ ತನ್ನ ಮನಸು ಇಂದೇಕೋ ಭಾರವಾಗುತ್ತಿರುವಂತೆ ತೋರಿತು ಅವಳಿಗೆ ಊಟ ಸೇರದೆ ಹೊತ್ತಿಗೆ ಮುಂಚೆ ಮಲಗಲು ಹೋದವಳಿಗೆ ನಿದ್ರೆ ಬಾರದೆ, ಭುಗಿಲೆದ್ದ ಮನಸ್ಸಿನಿಂದ ತನ್ನ ಜೀವನದಲ್ಲಿ ಆಗಿಹೋದ ಘಟನೆಗಳು ಒಂದೊಂದಾಗಿ ನೆನಪಿಗೆ ಬರಲಾರಂಭಿಸಿದವು. ತಾನು ಎರಡನೇ ತರಗತಿಯಲ್ಲಿರುವಾಗ, ಅಷ್ಟು ಚಿಕ್ಕವಯಸ್ಸಿನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡದ್ದು, ಅಪ್ಪ ಲೋಕಾರೂಢಿಯಂತೆ ಬೇರೊಂದು ಮದುವೆಯಾದದ್ದು, ಚಿಕ್ಕಮ್ಮ ಮೊದಮೊದಲು ತನ್ನನ್ನು ಅಕ್ಕರೆಯಿಂದ ನೋಡಿಕೊಂಡದ್ದು, ಶಾಲೆಯಲ್ಲಿ ತನ್ನ ಬುದ್ಧಿ ಸಾಮತ್ತೆ ಮತ್ತು ಅಂದವಾದ ಬರವಣಿಗೆಗೆ ಗುರವೃಂದ ಮೆಚ್ಚಿ, ಬೆನ್ನು ತಟ್ಟುತ್ತಿದದ್ದು, ಓದುವ ವಿಷಯದಲ್ಲಿ ತನ್ನನ್ನು ಪ್ರತಿಸ್ಪರ್ಧಿಯೆಂದೇ ಪರಿಗಣಿಸಿದ್ದ ಪಟೇಲರ ಮಗ ನಾಗರಾಜ ಅಷ್ಟೇ ಪ್ರೀತಿಸುತ್ತಿದದ್ದು , ಹತ್ತನೆಯ ತರಗತಿಯ ಪರೀಕ್ಷೆಯಲ್ಲಿ ಹೋಬಳಿಗೆ ಮೊದಲಿಗಳಾಗಿ ತೇರ್ಗಡೆಯಾದದ್ದು, ಮುಂದೆ ಓದಬೇಕೆಂಬ ತನ್ನ ಆಸೆಗೆ ಚಿಕ್ಕಮ್ಮ ಅಡ್ಡಗಾಲು ಹಾಕಿದ್ದು, ಖುದ್ದು ಪಟೇಲರು ತಮ್ಮ ಮಗ ನಾಗರಾಜನಿಗೆ ನಿಮ್ಮ ಮಗಳನ್ನು ಕೊಡುವಿರಾ? ಎಂದು ಕೇಳಿದಾಗ ಅಪ್ಪ ಒಪ್ಪಿದ್ದರೂ, ಚಿಕ್ಕಮ್ಮ ಆಕೆಯ ತಮ್ಮನಿಗೆ ಕೊಟ್ಟು ಮದುವೆ ಮಾಡಲು ಸಂಚು ಹೂಡಿ, ಆತನು ಕುಡುಕನೆಂದು ಗೊತ್ತಿದ್ದರೂ ತನ್ನನ್ನು ಕೊಟ್ಟು ಮದುವೆ ಮಾಡಿಸಿ, ಜವಾಬ್ದಾರಿಯ ಕೈ ತೊಳೆದುಕೊಂಡದ್ದು. ನೆನಪುಗಳು ಹೀಗೆ ಒಂದರ ಹಿಂದೆ ಒಂದರಂತೆ ಗೌರಕ್ಕನ ಕಣ್ಮುಂದೆ ಬರತೊಡಗಿದವು.

ಇದರ ಮಧ್ಯೆ ಪಡಸಾಲೆಯಲ್ಲಿ ಸಾಕುನಾಯಿ ರಾಮ ಅರಚುತ್ತಿರುವುದನ್ನು ಕೇಳಿ. ಏನೆಂದು? ನೋಡಲು ಅಲ್ಲಿಗೆ ಬಂದಳು. ರಾತ್ರಿ ತಾನು ಊಟವನ್ನು ಮಾಡದೆ, ಅದಕ್ಕೂ ಹಾಕದೆ ಮಲಗಲು ಹೋಗಿದ್ದು ಜ್ಞಾಪಕಕ್ಕೆ ಬಂದು ಅಡುಗೆ ಕೋಣೆಗೆ ಹೋಗಿ ಮಧ್ಯಾಹ್ನ ಊಟಮಾಡಿ ಉಳಿದಿದ್ದನ್ನು ತಂದು ಅದರ ತಟ್ಟೆಗೆ ಹಾಕಿದಳು..

************************

ತನಗಾದ ಅನ್ಯಾಯ, ಅನುಭವಿಸುತ್ತಿರುವ ನೋವು ಎಲ್ಲವನ್ನು ಸಹಿಸಿಕೊಂಡು ಕೊಟ್ಟಮನೆಯಲ್ಲಿ ಕುಡುಕ ಗಂಡ, ಅತ್ತೆ ಮಾವ ಅವರೆಲ್ಲರ ಚಾಕರಿ ಮಾಡಿ. ತೋಟ, ಹೊಲಗಳಲ್ಲಿ ಕೆಲಸಗಾರರೊಡನೆ ತಾನು ಹೆಗಲು ಸೇರಿಸಿ ದುಡಿಯುತ್ತಿದ್ದ ಅವಳಿಗೆ ದಿನಗಳು ಕಳೆದುಹೋದದ್ದು ಗೊತ್ತೇ ಆಗುತ್ತಿರಲಿಲ್ಲ. ಬೆಳಗ್ಗೆ ಎದ್ದು ಹೆಂಡದ ಇಲ್ಲವೇ ಇಸ್ಪಿಟ್ ಮನೆ ಸೇರುತ್ತಿದ್ದ ಅವಳ ಗಂಡ, ರಾತ್ರಿಯೇ ಮತ್ತೆ ಮನೆ ಸೇರುತ್ತಿದದ್ದು. ತನ್ನೂರಲ್ಲಿ ಎಲ್ಲರ ಬಾಯಿಂದ ಗೌರ ಎಂದು ಕರೆಸಿಕೊಳ್ಳುತ್ತಿದ್ದವಳು. ಮನೆ ಒಳಗೂ, ಹೊರಗೂ ಬಿಡುವಿಲ್ಲದ ಕೆಲಸ ಮಾಡಿ ದೈಹಿಕವಾಗಿ ಸಾಕಷ್ಟು ಬಳಲಿ, ಮಾನಸಿಕ ನೋವಿನಿಂದ ಸೊರಗಿ ಅವಳು ತನ್ನ ಕೊಟ್ಟ ಊರಲ್ಲಿ ಗೌರಕ್ಕನಾಗಿದ್ದಳು.

ಇಷ್ಟೆಲ್ಲಾ ಕಷ್ಟ ನೋವುಗಳ ನಡುವೆ ಅವಳಿಗೆ ಆಶಾಕಿರಣವಾಗಿ ಕಂಡಿದ್ದು ಅವಳ ಮಗ. ತನ್ನ ಕೆಲಸಗಳು ಎಷ್ಟೇ ಇರಲಿ, ತನ್ನ ನೋವುಗಳು ಏನೇ ಇರಲಿ ಎಲ್ಲವನ್ನು ಸುಧಾರಿಸುತ್ತಾ. ತನ್ನ ಮಗ ವೀರಾಜ್ ನನ್ನು ಬಹಳ ಅಕ್ಕರೆಯಿಂದ ಪಾಲನೆ, ಪೋಷಣೆ ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದಳು. ಎಲ್ಲರ ಮನೆಯ ಮಕ್ಕಳಂತೆ ತನ್ನ ಮಗನನ್ನು ಕಾನ್ವೆಂಟ್ಗೆ ಕಳುಹಿಸಲು ನಿರ್ಧರಿಸಿ. ಅದರಂತೆ ಪ್ರತಿದಿನ ಅವನ ಸ್ನಾನ ಮಾಡಿಸಿ, ಸಮವಸ್ತ್ರ ತೊಡಿಸಿ, ತಿಂಡಿ ತಿನಿಸಿ ಹಾಗೂ ಬಸ್ ನಿಲ್ದಾಣದವರೆಗೂ ಹೋಗಿ ಬಸ್ ಹತ್ತಿಸಿ ಬರುತ್ತಿದ್ದಳು. ಕಳೆದುಹೋದ ನೆಮ್ಮದಿ ಹಾಗು ಬದುಕು ತನ್ನ ಮಗನಿಂದ ಗೌರಕ್ಕನಿಗೆ ಮತ್ತೆ ಸಿಕ್ಕಿತ್ತು.

************************

ರಾಮ ತಟ್ಟೆಯಲ್ಲಿ ಹಾಕಿದ್ದನ್ನು ತಿನ್ನುವರೆಗೂ ಅಲ್ಲಿದ್ದು ನಂತರ ಒಳ ನೆಡೆದು, ಮಂಚಕ್ಕೆ ಒರಗುತ್ತಾ ನೆಲದಮೇಲೆ ಕುಳಿತಳು. ನೆನಪುಗಳು ಮತ್ತೆ ಒಂದೊಂದಾಗಿ ಬರಲಾರಂಭಿಸಿದವು. ಸ್ವಾತಂತ್ರೋತ್ಸವ ದಿನಾಚರಣೆಗೆಂದು ಸುಭಾಶ್ ಚಂದ್ರ ಬೋಸ್ ರನ್ನು ಹೋಲುವ ಬಟ್ಟೆಗಳನ್ನು ಧರಿಸಿ ಹೋಗಿದ್ದ ಮಗ ವೀರಾಜ್, ತಾನು ಅವನ ಜೊತೆ ಕಾರ್ಯಕ್ರಮಕ್ಕೆ ಹೋಗಿದ್ದು. ಕಾರ್ಯಕ್ರಮ ಮುಗಿಸಿಕೊಂಡು, ಊರಿಗೆ ಹೊರಟುನಿಂತಿದ್ದ ಬಸ್ಸನ್ನು ಎರಲೆಂದು ಶಾಲಾ ಮೈದಾನದಿಂದ ಬೇಗನೆ ಬರುವಾಗ ಆಕಸ್ಮಿಕವಾಗಿ ನುಗ್ಗಿ ಬಂದ ಲಾರಿ ವೀರಾಜ್ ನ ಸಾವಿಗೆ ಕಾರಣವಾದದ್ದು. ತನ್ನ ಗಂಡ ಕುಡಿತವೆಂಬ ದುಶ್ಚಟಕ್ಕೆ ಬಲಿಯಾದದ್ದು, ವಿದಿಯಿಲ್ಲದೆ ಕೊಟ್ಟ ಮನೆಯಲ್ಲಿ ಒಬ್ಬಂಟಿಗಳಾಗಿರಲು ತೀರ್ಮಾನಿಸಿದ್ದು.

ಅಕೋ.. ಬಾಗಿಲು ತಗಿಯಕೋ ಎನ್ನುವ ಶಬ್ಧ ಕೇಳುತ್ತಲೇ ಬೆಳಕಾಗಿ ಆಗಿರುವುದು ಗೊತ್ತಾಗಿ, ಎದ್ದವಳೇ ಬಾಗಿಲನ್ನು ತೆರೆದಳು. ಬಾಗಿಲಲ್ಲಿ ಇದ್ದ ಶಂಕ್ರ ಮತ್ತು ಗೋಪಿನ ಒಳ ಕರೆದು, ಕುಳಿತುಕೊಳ್ಳಲು ಹೇಳಿ. ಕೆಲವೇ ನಿಮಿಷಗಳಲ್ಲಿ ಸಾರೋಗೆರೆಗೆ ಹೊರಡಲು ಸಿದ್ದಳಾಗಿ ಬಂದಳು. ಇವರು ಸಾರೋಗೆರೆ ತಲುಪಿ, ಆಸ್ಪತ್ರೆ ಸೇರುವುದರಲ್ಲಿ ಆಗಲೇ ಡಾಕ್ಟರ ಭೇಟಿಗೆಂದು ರೋಗಿಗಳ ಉದ್ದನೆಯ ಸಾಲಿತ್ತು. ಗೋಪಿಯ ಸರದಿ ಬಂದಾಗ ಗೌರಕ್ಕ ಹಾಗೂ ಶಂಕ್ರ ಸಹ ಗೋಪಿ ಜೊತೆಗೂಡಿದರು. ಯಾರ್ರೀ? ಇದು ದನಕ್ಕೆ ಸುತ್ತಿದ ಹಾಗೆ ಈ ಹುಡುಗನ ಕೈಗೆ ಬಟ್ಟೆ ಸುತ್ತಿರೋದು? ಎಂದು ಕೇಳಿದರು ಮೂಳೆ ಕಟ್ಟಿಸುವರ ಹತ್ರ ಕರ್ಕೊಂಡು ಹೋಗಿದ್ದೆ ಸಾರ್ ಎಂದು ಶಂಕ್ರ. ಸುತ್ತಿದ ಆ ಬಟ್ಟೆಯನ್ನು ತೆಗೆದು ಗೋಪಿಯ ಕೈಯನ್ನು ಕೂಲಂಕುಶವಾಗಿ ಪರಿಶೀಲಿಸಿ ಬ್ಯಾಂಡೇಜ್ ಹಾಕಿ, ಅಗತ್ಯವಾದ ಚಿಕಿತ್ಸೆ ಕೊಟ್ಟು. ಹದಿನೈದು ದಿವಸ ಆದ ಮೇಲೆ ಬನ್ನಿ ಎಂದು ಕಳುಹಿಸಿದರು.

ಡಾಕ್ಟರು ಬರೆದು ಕೊಟ್ಟ ಔಷಧಿ, ಮಾತ್ರೆಗಳನ್ನು ಅಂಗಡಿಯಲ್ಲಿ ತೆಗೆದುಕೊಂಡು, ಅಲ್ಲಿಂದ ಊರಿಗೆ ಹೊರಡುವ ಬಸ್ನಲ್ಲಿ ಹತ್ತಿ ಕುಳಿತರು. ಬೆಳಗ್ಗೆ ಮನೆಯಿಂದ ಹೊರಟಾಗಿನಿಂದಲೂ ಗೌರಕ್ಕ ಏನೋ ಯೋಚನೆಯಲ್ಲಿ ಇರುವುದ ಗಮನಿಸಿದ ಶಂಕ್ರ. ಯಾಕಕ್ಕ ಬೇಜಾರನಲ್ಲಿ ಇದ್ದೀಯಾ? ನಿನ್ನ ಕಷ್ಟ ನಂಗೆ ಚನ್ನಾಗಿ ಅರ್ಥ ಆಗ್ತದೆ.ನೀನು ಇಷ್ಟು ದಿನ ಎಲ್ಲ ಮರೆತು ಹೇಗಿದ್ಯೋ, ಇನ್ಮುಂದೆ ಹಾಗೆ ಇದ್ಬಿಡು. ನಾವೆಲ್ಲಾ ನಿಮ್ಮ ಜೊತೆ ಇದ್ದೀವಿ.ಗೌರಕ್ಕನಿಗೆ ಕಣ್ಣುಗಳಲ್ಲಿ ನೀರು ತುಂಬಿಕೊಂಡವು. ಒಬ್ಬಳೇ ಎಷ್ಟು ದಿನ, ಈ ಭಾರವಾದ ಬದುಕನ್ನು ಸಾಗಿಸಲಿ ಎಂದ ಗೌರಕ್ಕನಿಗೆ. ಏನು ಉತ್ತರಕೊಡಬೇಕೆಂದು ಗೊತ್ತಾಗದೆ ಸುಮ್ಮನಾದ ಶಂಕ್ರ. ಅಷ್ಟರಲ್ಲಿ ಬಸ್ ಊರನ್ನು ತಲುಪಿತ್ತು. ಗೌರಕ್ಕನ ತೋಟದ ಮನೆಯತ್ತಿರ ಬಿಟ್ಟು. ಶಂಕ್ರ ಮತ್ತು ಗೋಪಿ ಮನೆಯ ದಾರಿಯನ್ನು ಹಿಡಿದರು.

ಟೀ ಮಾಡಿಕೊಂಡು, ಕುಡಿದು. ಮನೆಯೊಳಗೇ ಇದ್ದರೆ ಅದೇ ಯೋಚನೆಗಳು ಪದೇ ಪದೇ ಕಾಡುತ್ತವೆಂದು ತೋಟದ ಕಡೆ ಬಂದಳು ಗೌರಕ್ಕ. ಸೂರ್ಯನು ಪಡುವಣ ದಿಕ್ಕಿನಲ್ಲಿ ಬಂಗಾರದ ಒಕುಳಿಯನ್ನು ಎರಚಿ ಗುಡ್ಡದ ಕಡೆಯಿಂದ ಮುಳುಗುತ್ತಾ ಇದ್ದನು, ಪ್ರಕೃತಿಯ ವಿಸ್ಮಯ ಎಷ್ಟೊಂದು ಸೊಗಸು? ಎಂದು ಬೆರಗಾಗುತ್ತಾ, ಕೈಯಾರೆ ತಾನು ಬೆಳೆಸಿದ ಹೂಗಿಡಗಳನ್ನು ನೋಡಲು ಬಂದಳು. ಹೂಗಿಡಗಳಲ್ಲಿ ಬಿರಿದು ಮೊಗ್ಗುಗಳು ಇರವುದನ್ನು ಕಂಡು ಸಂತೋಷಪಟ್ಟಳು. ಅಷ್ಟರಲ್ಲಿ ಕೆಲವು ತಾಸುಗಳ ಕೆಳಗೆ ತಾನೇ ಮನೆಗೆ ಹೋಗಿದ್ದ ಶಂಕ್ರ ಪುನ: ಬರುತ್ತಿರುವುದನ್ನು ಕಂಡಳು. ಅವನನ್ನು ಕಾಣುತ್ತಲೇ ಲೋ ಶಂಕ್ರ ಯಾಕೋ ಮತ್ತೆ ಬಂದೇ?. ತೋಟದಲ್ಲಿ ಏನೋ ಕೆಲಸ ಇಲ್ಲ ಕಣೋ, ಒಂದೆರಡು ದಿನ ನೀನು ಬರದೆ ಹೋದರು ಪರವಾಗಿಲ್ಲ. ನಿನ್ನ ಮಗ ಗೋಪಿನ ಚನ್ನಾಗಿ ನೋಡಿಕೋ.

ಅಕೋ, ನಿನ್ ಹತ್ರ ಏನೋ ಮಾತಾಡೋಕ್ಕೆ ಬಂದಿದ್ದೀನಿ ಎಂದ ಶಂಕ್ರ. ಏನೋ ಅದು ವಿಷ್ಯ? ಅವಾಗಲೇ ಹೇಳಿಹೋಗಬಹುದಿತ್ತಲ್ಲ? ಮತ್ತೆ ಬರೋದು ತಪ್ಪುತ್ತಿತ್ತು ಎಂದಳು ಗೌರಕ್ಕ. ಹೆಂಗೆ ಹೇಳಬೇಕು ಅಂತ ಗೊತ್ತಾಗ್ತಿಲ್ಲ, ನಿಂಗೆ ಮೇಲ್ ಜಾತಿ, ಕೆಳಜಾತಿ ನಂಬಿಕೆ ಇಲ್ಲ ಅಂತಾದರೆ. ಗೋಪಿನ ನಿನ್ ಹತ್ರನೇ ಬೆಳಸೋಣ ಅಂತ ಇದ್ದೀವಿ. ಇದ್ರ ಬಗ್ಗೆ ನಾನು, ನಮ್ಮ ಮನೆಯವಳು ಕೂತು ಯೋಚನೆ ಮಾಡಿವಿ. ಮಗನನ್ನು ಕಳೆದುಕೊಂಡ ನೋವು, ಒಬ್ಬಳೇ ನಿನ್ ಇಲ್ಲಿ ಪಡೋ ಕಷ್ಟ ಏನು ಅಂತ ಹತ್ರದಿಂದ ನೋಡಿವಿ ಎಂದು ಹೇಳಿದ ಶಂಕ್ರ. ಶಂಕ್ರನ ಈ ಮಾತುಗಳಲ್ಲಿ ಕರುಣೆಗಿಂತ ವಾಸ್ತವತೆಯ ಅರಿವು ಹೆಚ್ಚು ಇದ್ದಂತೆ ತೋರುತಿತ್ತು.

ಇದರ ಬಗ್ಗೆ ಏನೋ ಹೇಳಲು ಇಚ್ಚಿಸದ ಗೌರಕ್ಕ. ಯಾವುದಕ್ಕೂ ಯೋಚ್ನೆ ಮಾಡಿ ನಾಳೆ ಹೇಳ್ತೀನಿ ಎಂದಷ್ಟೇ ಹೇಳಿ. ವಿದಿಯು ಇನ್ನಾದರೂ ತನಗೆ ನೆಮ್ಮದಿಯ ಬದುಕನ್ನು ನಡೆಸಲು ಬಿಡುವುದೇ? ಎಂದು ಮನಸ್ಸಿನಲ್ಲಿ ಅಂದುಕೊಂಡು ಮನೆಯತ್ತ ನೆಡೆದಳು.

Rating
No votes yet

Comments

Submitted by H A Patil Fri, 12/27/2013 - 20:45

ಸುನಿಲ ಕುಮಾರ ರವರಿಗೆ ವಂದನೆಗಳು
'ಗೌರಿ ಅಂದುಕೊಂಡ ಬದುಕಲ್ಲ ಅದು' ನಿಜ ! ಆದರೆ ಏನು ಮಾಡುವುದು ಹಿರಿಯ ತಲೆಗಳು ತಮ್ಮ ತವರಿನ ವ್ಯಾಮೋಹಕ್ಕೆ ಒಳಗಾಗಿ ಭಾವನಾತ್ಮಕವಾಗಿ ಇಂತಹ ಸಂಬಂಧಗಳನ್ನು ಕುದುರಿಸಿ ಬಿಡುತ್ತಾರೆ. ಹೆಣ್ಣಿನ ಶೋಷಣೆ ಹೆಣ್ಣಿಂದಲೆ, ನಿಜಕ್ಕೂ ಗೌರಿಯ ಸ್ಥಿತಿಗೆ ನನ್ನ ಮರುಕವಿದೆ, ಸರಳ ಸುಂದರ ಮನ ಕಲಕುವ ಕಥಾನಕ ನೀಡಿದ್ದಿರಿ, ಧನ್ಯವಾದಗಳು.

Submitted by sunilkumara.ms Fri, 12/27/2013 - 22:15

ಮೊದಲಿಗೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸಾರ್. ಇಲ್ಲಿ ಬರೆದಿರುವ ಹಾಗೆ ಬಹಳಷ್ಟು ನಿದರ್ಶನಗಳನ್ನು ನೋಡಿದ್ದೇನೆ. ಕೆಲವು ಕಡೆ ಇನ್ನೂ ಅಂತಹ ಪರಿಸ್ಥಿತಿ ಬದಲಾಗಿಲ್ಲ