ಚೆಲ್ವಾಯ್ತು ಚಂದ್ರೋದಯಂ

ಚೆಲ್ವಾಯ್ತು ಚಂದ್ರೋದಯಂ

ಎರಡು ವೃತ್ತಗಳು: (ಪದ್ಯಪಾನದ ಪದ್ಯಸಪ್ತಾಹ 67 ರಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ)- "ಚೆಲ್ವಾಯ್ತು ಚಂದ್ರೋದಯಂ" ಹೀಗೆ ಮುಗಿಯುವ ವೃತ್ತಗಳನ್ನು ಬರೆಯಬೇಕು.

 
|| ಶಾರ್ದೂಲವಿಕ್ರೀಡಿತ ||
 
ಸೀತಾಮಾತೆಯ ಕಾಣಪೋದ ಹನುಮಂ ಕಂಡಾಕೆಯಂ ರಾತ್ರಿಯೊಳ್
ಮಾತೊಂದಾಡದೆ ಮುನ್ನಮೇ ತೆಗೆಯುತುಂ ಪೊನ್ನುಂಗುರಂ ಮುದ್ರೆಯಂ
ತಾ ತಂದಿರ್ಪುದ ತೋರಿ “ರಾಮ ಬರುವನ್” ಎನ್ನುತ್ತ ಸಂತೈಸಿರಲ್
ಹಾ! ತಂಪಾದುದು ತಾಪಗೊಂಡ ಮನಮುಂ! ಚೆಲ್ವಾಯ್ತು ಚಂದ್ರೋದಯಂ!
 
ಹಿನ್ನೆಲೆ: ರಾಮಾಯಣದ ಸುಂದರ ಕಾಂಡದಲ್ಲಿ ಸೀತೆಯನ್ನು ಅಶೋಕ ವನದಲ್ಲಿ ಹನುಮ ಕಂಡು ಅವಳಿಗೆ ಮುದ್ರೆಯುಂಗುರ ವನ್ನು ತೋರಿ, ರಾಮ ಬರುವನೆಂಬ ಮಾತನ್ನು ಹೇಳಿದಾದ ಸೀತೆಯ ಮನಸ್ಸೂ ತಂಪಾಗಿ, ಆಗ ಉದಯಿಸುತ್ತಿದ್ದ ಚಂದ್ರನೂ ಸೊಗಸಾಗಿ ಕಂಡ.  ಆ ಸಮಯಕ್ಕೆ ಚಂದ್ರೋದಯವಾದದ್ದು ನನ್ನ ಕಲ್ಪನೆಯ ಸಂದರ್ಭ!
 
॥ ಮತ್ತೇಭವಿಕ್ರೀಡಿತ ॥
 
ಸತಿ ಚಿನ್ನಾಂಬಿಕೆ ಮಾಘದೊಂದಿರುಳೊಳಾ ಪಂಪಾನದೀ ತೀರದೊಳ್
ಮತಿಯೊಳ್ ಬೇಡುತ ರಾಯನಾವಿಜಯಮಂ ತಾ ಚಿಂತಿಸುತ್ತಿರ್ದಪಳ್
ಸ್ಮೃತಿಯೊಳ್ ವೇಂಕಟನಾಥನಂ ಬಗೆದಿರಲ್ ಬಂದೋರ್ವ ದೂತಂ ಸುಸಂ-
ಗತಿಯಂ ಪೇಳ್ದೊಡನಾಕೆಗಾದುದು ಮುದಂ! ಚೆಲ್ವಾಯ್ತು ಚಂದ್ರೋದಯಂ!
 
ಹಿನ್ನಲೆ: ಹದಿನೈದನೇ ಶತಮಾನದ ಕಥೆ – ಕೃಷ್ಣದೇವರಾಯನು ಯಾವುದೋ ಯುದ್ಧಕ್ಕೆ ಹೋಗಿರುವಾಗ, ಅವನ ಮಡದಿ ಚಿನ್ನಾದೇವಿಯು ಒಂದು ಸಂಜೆ ತುಂಗಭದ್ರೆಯ ದಡದಲ್ಲಿ ಪತಿಗೆ ಗೆಲುವಾಗಲೆಂದು ದೇವರನ್ನು ಬೇಡುತ್ತಿರುವಾಗಲೇ ದೂತನೊಬ್ಬ ಬಂದು ಒಳ್ಳೆಯ ಸುದ್ದಿ (ಪತಿಯ ಗೆಲುವನ್ನೋ, ಊರಿಗೆ ಮರಳುತ್ತಿರುವುದನ್ನೋ) ಹೇಳಲಾಗಿ, ಆಗ ಉದಯಿಸುತ್ತಿದ್ದ ಚಂದ್ರ ಆಕೆಗೆ ಸೊಗಸಾಗಿ ಕಂಡನು! – ನನ್ನ ಕಲ್ಪನೆಯ ಸಂದರ್ಭವಷ್ಟೇ.
 
-ಹಂಸಾನಂದಿ
 
ಕೊ:ಎರಡನೇ ಪದ್ಯವನ್ನು ಬರೆಯುವಾಗ ಸವರಣೆಗಳನ್ನು ಮಾಡಿದ ಗೆಳೆಯ ಜೀವೆಂ ಅವರಿಗೆ ನಾನು ಆಭಾರಿ
Rating
No votes yet