ಜಯವರ್ಧನೆಗೆ ಒಂದು ಪತ್ರ!

ಜಯವರ್ಧನೆಗೆ ಒಂದು ಪತ್ರ!

ಭಾರತದ ಕ್ರಿಕೆಟ್ ತಂಡ ಶ್ರೀಲಂಕದ ಎದುರು ಮಂಡಿ ಊರಿ ಕುಳಿತಿರುವ ಸುದ್ದಿಯನ್ನು ತಿಳಿದ ನಗೆ ಸಾಮ್ರಾಟರು ಭಾರತದ ಕ್ರಿಕೆಟ್ ತಂಡಕ್ಕೆ ಸಾಂತ್ವನವನ್ನೂ, ಲಂಕಾದ ತಂಡಕ್ಕೆ ಅಭಿನಂದನೆಯನ್ನು ತಿಳಿಸುವುದರ ಜೊತೆಗೆ ಲಂಕಾದ ನಾಯಕ ಜಯ‘ವರ್ಧನೆ’ಗೆ ಅಮೂಲ್ಯವಾದ ಸಲಹೆಯನ್ನು ಮಾಡಿ ಕಳುಹಿಸಿದ ಇ-ಮೇಲಿನ ಪ್ರತಿ ಇಲ್ಲಿದೆ:

ಪ್ರಿಯ ಜಯವರ್ಧನೆ,
ಶ್ರೀಲಂಕವೆಂಬ ಪುಟ್ಟ ದ್ವೀಪದಲ್ಲಿ ಅಜಂತ ಮೆಂಡಿಸ್ ಎಂಬ ಮತ್ತೊಬ್ಬ ಮಾಂತ್ರಿಕನ್ನು ಹುಡುಕಿಕೊಂಡು ಬರುವುದರಲ್ಲಿ ಯಶಸ್ವಿಯಾದದ್ದಕ್ಕೆ ಅಭಿನಂದನೆಗಳು. ನಮ್ಮ ದೇಶದಲ್ಲೂ ಅಂಥಾ ಪ್ರತಿಭೆಗಳು ಇಲ್ಲವೆಂದಲ್ಲ. ಆದರೆ ನಮ್ಮ ದೇಶ ದೊಡ್ಡದು ನೋಡು ಅದಕ್ಕೇ ಹುಡುಕುವುದು ಸ್ವಲ್ಪ ಕಷ್ಟ. ಅಂದ ಹಾಗೆ ಮುರುಳಿಗೆ ಒಳ್ಳೆ ಜೂನಿಯರ್ ಸಿಕ್ಕಹಾಗಾಯ್ತು ಬಿಡು.

ಮೊದಲ ಟೆಸ್ಟ್ ಮ್ಯಾಚನ್ನು ನೀರು ಕುಡಿದವರಂತೆ ಗೆದ್ದು ಬಿಟ್ಟಿರಿ. ನಿಮ್ಮ ದೇಶದ ಯಾವುದೋ ಹೈಸ್ಕೂಲು ತಂಡದ ಹಾಗೆ ಕಂಡಿರಬೇಕಲ್ಲವಾ ನಮ್ಮ ತಂಡ? ಆ ಸಚಿನ್ನು, ಗಂಗೂಲಿ, ದ್ರಾವಿಡ್ಡು, ಸೆಹವಾಗು ಮುಂತಾದ ಅತಿರಥ ಮಹಾರಥರೆಲ್ಲಾ ಮುರುಳಿ ಹಾಗೂ ಮೆಂಡಿಸ್‌ರಿಗೆ ಗಲ್ಲಿ ಕ್ರಿಕೆಟರ್‌ಗಳ ಕಂಡಿದ್ದಾರೆ ಅನ್ನಿಸುತ್ತದೆ. ಹಾಗಂತ ತೀರಾ ಸಡಿಲಾಗಬೇಡಿ. ನಮ್ಮ ಜಂಬೋ ಅಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳುವವನಲ್ಲ. ಏನೋ ನಮ್ಮ ಹಿರಿಯ ಆಟಗಾರರಿಗೆ ಕೈತಪ್ಪಿಹೋದ ಏಕದಿನದ ಸ್ಥಾನದ ಕನವರಿಕೆ, ಯುವ ಆಟಗಾರರಿಗೆ ದಕ್ಕಿದ ಜಾಹೀರಾತುಗಳ ನೇವರಿಕೆ- ಈ ಬೆರಕೆಯಲ್ಲೇ ಅವರು ಮೈಮರೆತಿದ್ದಾರೆ ಅಷ್ಟೇ. ಯಾವಾಗ ಬೇಕಾದರೂ ಅವರು ಗರ್ಜಿಸಬಹುದು, ಗೊತ್ತಲ್ಲ ಅವರೆಂಥಾ ಪೇಪರ್ ಹುಲಿಗಳೆಂದು!

ಈ ಸಂದರ್ಭದಲ್ಲಿ ನಿಮ್ಮ ತಂಡದಲ್ಲೊಂದು ಬದಲಾವಣೆಯನ್ನು ಮಾಡಿಕೊಂಡರೆ ಇನ್ನುಳಿದ ಪಂದ್ಯಗಳನ್ನೂ ಸರಾಗವಾಗಿ ಗೆಲ್ಲಬಹುದು ಎಂದು ನನಗನ್ನಿಸುತ್ತದೆ. ಅಜಂತಾ ಮೆಂಡಿಸ್ ಹಾಗೂ ಮುತ್ತಯ್ಯ ಮುರಳೀಧರನ್ ಇಬ್ಬರೇ ಬೌಲರ್‌ಗಳನ್ನು ಇಟ್ಟುಕೊಂಡು ಉಳಿದವರಿಗೆಲ್ಲಾ ವಿಶ್ರಾಂತಿ ಕೊಟ್ಟುಬಿಡು. ಉಳಿದ ಒಂಭತ್ತು ಮಂದಿಯೂ ಬ್ಯಾಟ್ಸ್ ‌ಮನ್‌ಗಳೇ ಆಗಿರಲಿ. ನಮ್ಮ ತಂಡದವರು ಇವರಿಬ್ಬರಿಗೂ ಹೇಗೆ ಆಡಬೇಕು ಎಂದು ಕಲಿಯುವಷ್ಟರಲ್ಲಿ ಶ್ರೀಲಂಕಾ ಪ್ರವಾಸವೇ ಮುಗಿರುತ್ತದೆ. ನೀವು ಸರಣಿಯನ್ನು ಸುಲಭವಾಗಿ ಗೆಲ್ಲಬಹುದು. ಏನಂತೀಯ?

ಇಂತಿ,
ನಿನ್ನ ಹಿತ ಆಕಾಂಕ್ಷಿ
ನಗೆ ಸಾಮ್ರಾಟ್

ಈ ಇ-ಮೇಲು ಜಯವರ್ಧನೆಯ ದೇಶಕ್ಕೆ ಹಾರುವ ಮೊದಲೇ ಸೇತು ಸಮುದ್ರದ ಬಳಿ ಹಾಯುತ್ತಿರುವಾಗ ಲೀಕ್ ಆಗಿ ಬಿಸಿಸಿಐಗೆ ಲಭ್ಯವಾಗಿ ಬಿಟ್ಟಿದೆಯಂತೆ. ಅವರು ನಗೆ ಸಾಮ್ರಾಟರ ಸಲಹೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಭಾರತ ತಂಡದ ಎಲ್ಲಾ ಬೌಲರ್‌ಗಳನ್ನು ಕೂರಿಸಿಬಿಡಲು ತೀರ್ಮಾನಿಸಿದ್ದಾರೆ. ಲಂಕಾದ ಬ್ಯಾಟ್ಸ್ ಮನ್‌ಗಳಿಗೆ ಬೌಲರ್‌ಗಳೇ ಬೇಕಿಲ್ಲ ಒಂದು ಬೌಲಿಂಗ್ ಮಶೀನು ಇಟ್ಟುಬಿಟ್ಟರೆ ಸಾಕು ಎಂದು ಅವರಿಗೆ ಅನ್ನಿಸಿದೆಯಂತೆ!

Rating
No votes yet