ದೇವರ ತಲೆಮೇಲೆ..

ದೇವರ ತಲೆಮೇಲೆ..

ಕರಾವಳಿಯ ತೀರದಲ್ಲೊಂದು ಅಡಿಕೆ ತೋಟ.. ಅದರಲ್ಲೊಂದು ಅಡಿಕೆ ಮರ.. ಆ ಮರಕ್ಕೊಂದು ಹೂವು.. ಈಗ ತಾನೇ ಬಿಟ್ಟಿದ್ದಿರಬೇಕು.. ಹೊಂಬಾಳೆಯ ಕವಚ ತೊಟ್ಟು ಬೆಚ್ಚಗೆ ಮಲಗಿರಬೇಕು.. ತಟ್ಟನೆ ಎಚ್ಚರವಾಯಿತು.. ತೋಟದಲ್ಲಿ ಎರಡು ಜನ ನಿಂತು ಮಾತಾಡುತ್ತಿದ್ದಾರೆ..

’ನೋಡೋ ಸುಬ್ರಾಯ.. ಆ ಮರಕ್ಕಿದ್ಯಲ್ಲಾ.. ಆ ಸಿಂಗಾರ ಕೊಯ್ದು ಅಮ್ಮಾವ್ರಿಗೆ ತಕಂಡ್ ಹೋಗ್ ಕೊಡು..’

’ಆಯ್ತ್ರ.. ಹಾಂಗೇ ಮಾಡ್ತೆ..’

ಸಿಂಗಾರೆಳೆಗೆ ಮನಸ್ಸಲ್ಲೇ ಖುಶಿ.. ತಾನು ದೇವರ ತಲೆ ಏರಲಿದ್ದೇನೆ ಎಂದು..

ಸುಮಾರು ಹೊತ್ತಾಯ್ತು.. ಸುಬ್ರಾಯ ತನ್ನನ್ನು ಇನ್ನೂ ಕೊಯ್ಯಲೇ ಇಲ್ಲವಲ್ಲ.. ಅಂದುಕೊಳ್ಳುತ್ತಿರುವಾಗಲೇ ಅವನು ಇನ್ಯಾವುದೋ ಮರದಲ್ಲಿ ಬಿಟ್ಟ ಸಿಂಗಾರ ಕೊಯ್ದು ಮನೆ ಕಡೆ ಹೊರಟಿದ್ದ..

ನಿರಾಸೆಯಿಂದ ಮತ್ತೆ ಮಲಗಿತು ಅಡಿಕೆ ಹೂವು..

ದಿನಗಳು ಕಳೆದವು.. ಹೂವು ಹೊಂಬಾಳೆಯನ್ನು ಬಿರಿದು ಕಾಯಿಯಾಗುವ ಯೌವನದ ಘಟ್ಟದಲ್ಲಿ ಹೊರಗೆ ಬಂತು.. ಹೊರಗೆ ಸೂರ್ಯ ಕಂಡ.. ತಾನೂ ಸೂರ್ಯನಾಗಬೇಕೆಂದು ಅನಿಸಿತು..

ಎಲ್ಲಾ ಎಳೆಗಳಿಗೂ ಹಾಗೇ ಅನಿಸಿದ್ದರಿಂದ ಎಲ್ಲವೂ ಸೇರಿ ಹಚ್ಚನೆಯ ಕಿರಣಗಳಾಗಿ ನಿಂತುಬಿಟ್ಟವು.
ತುದಿಯಲ್ಲಿದ್ದ ಹೂವಿಗೆ ಅನಿಸಿತು.. ’ಸುಬ್ರಾಯ ಒಳ್ಳೇ ಕೆಲಸ ಮಾಡಿದ’.

 

Rating
No votes yet

Comments