ನಗಿಸುವುದು ಪರಧರ್ಮ ಎಂದ ಕ್ರಿಕೆಟ್ ತಂಡ

ನಗಿಸುವುದು ಪರಧರ್ಮ ಎಂದ ಕ್ರಿಕೆಟ್ ತಂಡ

ಬೊಗಳೂರು, ನ.23- ನಗುವು ಪರಮೌಷಧ ಎಂದು ತಿಳಿದವರು ಹೇಳಿರುವುದರಿಂದ ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇದನ್ನು ಶಿರಸಾವಹಿಸಲು ನಿರ್ಧರಿಸಿದ ಪರಿಣಾಮ ನಿನ್ನೆಯ ಪಂದ್ಯದಲ್ಲಿ ಅತ್ಯಂತ ಗೌರವಾನ್ವಿತ ಸೋಲನ್ನಪ್ಪಿದೆ. (bogaleragale.blogspot.com)

ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ ಅಂತ ಡಿವಿಜಿಯವರೂ ಹೇಳಿರುವುದರಿಂದ ಪ್ರೇರಣೆಗೊಂಡಿರುವ ಭಾರತೀಯ ಕ್ರಿಕೆಟ್ ತಂಡ, ನಿನ್ನೆಯ ಪಂದ್ಯದಲ್ಲಿ ನಗೆಪಾಟಲಿಗೀಡಾಗುವ ಮೂಲಕ ಭಾರತೀಯರು ಗಹಗಹಿಸಿ ನಗುವಂತೆ ಮಾಡಿದ್ದಾರಲ್ಲದೆ, ದಕ್ಷಿಣ ಆಫ್ರಿಕನ್ನರ ಮುಖದಲ್ಲೂ ಮಂದಹಾಸ ಮೂಡಿಸಲು ಕಾರಣರಾಗಿದ್ದಾರೆ.

ತಂಡವು ಕಡಿಮೆ ರನ್ನಿಗೆ ಆಲೌಟಾದರೆ ಎಲ್ಲರೂ ತಮ್ಮನ್ನು ನೋಡಿ ನಗುತ್ತಾರೆ ಎಂದು ಅರಿತುಕೊಂಡೇ ಕಣಕ್ಕಿಳಿದಿತ್ತು. ಇದೂ ಅಲ್ಲದೆ ಇತ್ತೀಚೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿ ಉಭಯ ದೇಶಗಳ ಮಧ್ಯೆ ಸಂಬಂಧ ಬಲಪಡಿಸಲು ಯತ್ನಿಸಿದ್ದರು. ಈ ಕಾರಣಕ್ಕೆ ದ.ಆಫ್ರಿಕಾದ ಮುಖದಲ್ಲಿ ಗೆಲುವು ಮೂಡಿಸಬೇಕಿದ್ದರೆ ನಾವು ಸೋಲಲೇಬೇಕು ಎಂಬ ಸಿದ್ಧಾಂತದೊಂದಿಗೆ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವರ್ಧನೆಯಲ್ಲಿ ನಮ್ಮ ತಂಡವು ಪ್ರಧಾನ ಪಾತ್ರ ವಹಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರನ್ನು ಬೊಗಳೆ ರಗಳೆ ಬ್ಯುರೋಗಾಗಿ ಮಾತನಾಡಿಸಲಾಯಿತು. ಅದಕ್ಕೆ ಹೆಚ್ಚಿನವರಿಂದ ಬಂದ ಉತ್ತರ ಬಹುತೇಕ ಒಂದೇ ರೀತಿಯಾಗಿತ್ತು.

"ನಾವಿನ್ನೂ ಆಟ ಆರಂಭವಾಗಿಲ್ಲ ಎಂದೇ ಯೋಚಿಸಿ ಬ್ಯಾಟು ಹಿಡಿದು ನಿಂತಿದ್ದೆವು. ಅವರಿಗೆ ನಮಗೆ ಹೇಳದೆಯೇ ಚೆಂಡೆಸೆದರು. ಮನೆಯ ದೂರವಾಣಿ ಸಂಖ್ಯೆಯನ್ನು ನೆನಪಿಸಿಕೊಳ್ಳುತ್ತಿದ್ದ ನಮಗೆ ಚೆಂಡು ಬಂದದ್ದು ಗೊತ್ತೇ ಆಗಿಲ್ಲ. ಅಷ್ಟರಲ್ಲಾಗಲೇ ಅಂಪೈರು ಕೈ ಎತ್ತಿಯಾಗಿತ್ತು. ಏನನ್ಯಾಯ? ನೋಡಿದರೆ ಹಸಿರಂಗಿಯವರು ಎಸೆದದ್ದು ನೇರವಾಗಿ ವಿಕೆಟಿಗೇ!" ಎಂದವರು ತತ್ತರಿಸಿದರು.

ಅವರು ಹೇಳಿದ "ದೂರವಾಣಿ" ಸಂಖ್ಯೆ ಎಂಬ ಪದದ ಹಿಂದೆ ಬಿದ್ದಾಗ ತಿಳಿದುಬಂದ ಅಂಶವೆಂದರೆ, ಅವರೆಲ್ಲರೂ ಪರದೇಶದಲ್ಲಿರುವುದರಿಂದ Home sick ಆಗಿದ್ದಾರೆ. ಅವರಿಗೆ ಮನೆಗೆ ಫೋನ್ ಮಾಡಲೆಂದು ಮನೆಯ ದೂರವಾಣಿ ಸಂಖ್ಯೆಯನ್ನು ಜ್ಞಾಪಿಸಿಕೊಳ್ಳುತ್ತಿದ್ದರು. ಎಷ್ಟೇ ಯೋಚನೆ ಮಾಡಿದರೂ ಒಂದು ಅಂಕಿ ಮಾತ್ರವೇ ನೆನಪಾಗುತ್ತಿತ್ತು. ಆ ಅಂಕಿಯ ಮೇಲೆಯೇ ಗಮನ ಕೇಂದ್ರೀಕರಿಸಿದ ಕಾರಣ ಎಲ್ಲರೂ ಅಷ್ಟೇ ಸಂಖ್ಯೆಯ ರನ್ ಗಳಿಸಿದರು.

ಎಲ್ಲಾ ಅಂಕಿಗಳನ್ನು ಒಟ್ಟುಗೂಡಿಸಿದಾಗ ಎಸ್‌ಟಿಡಿ ಕೋಡ್ ಸಹಿತದ ಒಂದು ದೂರವಾಣಿ ಸಂಖ್ಯೆ ಲಭಿಸಿತು. ಇದೊಂದು ಅದ್ಭುತ ಪ್ರಯೋಗವಾಗಿತ್ತು ಎಂದು ನಂಬಲರ್ಹ ಮೂಲಗಳು ತಿಳಿಸಿಲ್ಲ. ಈ ಮಧ್ಯೆ, ಸಚಿನ್, ದ್ರಾವಿಡ್ ಮತ್ತು ಧೋನಿ ಅವರೆಲ್ಲ ಒಂದಷ್ಟು ಅನುಭವ ಹೊಂದಿದ್ದರಿಂದ ಎರಡಂಕಿ ನೆನಪಿಸಿಕೊಳ್ಳಲು ಸಮರ್ಥರಾಗಿದ್ದರು.

ಇಷ್ಟರ ನಡುವೆಯೂ ಅವರೆಲ್ಲರೂ ದಾಖಲೆಗೆ ಯತ್ನಿಸಿದ್ದರು ಎಂಬ ಅಂಶವೂ ಬಯಲಾಗಿದೆ. 82ರನ್ ಇರುವಾಗ ಅದಕ್ಕೆ 3 ರನ್ ಸೇರಿಸಲು 5 ಮಂದಿ ದಾಂಡಿಗರು ತಮ್ಮ ವಿಕೆಟ್‌ಗಳನ್ನು ದಾನ ಮಾಡಿದ್ದರು!

ಮಿತ್ರ ರಾಷ್ಟ್ರಕ್ಕೂ ದಾಖಲೆಗೆ ಅವಕಾಶ ಮಾಡಿಕೊಟ್ಟ ದಾಂಡಿದರು ಶತಕವೀರ ಕಾಲಿಸ್‌ನ 4 ಓವರುಗಳಲ್ಲಿ 3 ರನ್ ಮಾತ್ರವೇ ತಮ್ಮಲ್ಲಿ ಉಳಿಸಿಕೊಂಡು, 3 ವಿಕೆಟ್‌ಗಳನ್ನು ವಿನಿಮಯ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

(ಸೂ: ಪ್ರಯಾಸ ಕಥನದ ಮುಂದುವರಿದ ಭಾಗ ಬೇಯುತ್ತಿರುವ ಕಾರಣದಿಂದಾಗಿ ನಾಳೆ ಪ್ರಕಟವಾಗುವ ನಿರೀಕ್ಷೆ ಇದೆ.)

Rating
No votes yet