ನಮ್ಮಲ್ಲಿ ಈ ಅಸಹನೆ ಏಕೆ ಮನೆಮಾಡಿದೆ?

ನಮ್ಮಲ್ಲಿ ಈ ಅಸಹನೆ ಏಕೆ ಮನೆಮಾಡಿದೆ?

ನಮ್ಮಲ್ಲಿ ಈ ಅಸಹನೆ ಏಕೆ ಮನೆಮಾಡಿದೆ?

 

ಚಿತ್ರನಟಿ ಹೇಮಾಮಾಲಿಯವರನ್ನು ರಾಜ್ಯಸಭೆಗೆ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಕ್ರಮವನ್ನು ವಿರೋಧಿಸಿತ್ತಾ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಗಿರೀಶ್ ಕಾರ್ನಾಡ್ ಅವರು ಆಕೆಯನ್ನು ರಾಜಕೀಯರಂಗದಲ್ಲಿ ಹೆಡ್ಡಿ ಎಂದು ಕರೆದರು. ಅದಕ್ಕೂ ತೀವ್ರ ಟೀಕೆಗಳು ಹೊರಬಂದವು. ಟೀಕೆಗಳಷ್ಟೇ ಬಂದಿದ್ದರೆ ಒಪ್ಪಬಹುದಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆಯೆಂದು ಸ್ವೀಕರಿಸಬಹುದಿತ್ತು. ಆದರೆ ಆದದ್ದೇನು? ಕಾರ್ನಾಡರ ಹೇಳಿಕೆಯನ್ನು ವಿರೋಧಿಸಲು ಹೊರಟವರು, ಅವರು ಹಿರಿಯ ಸಾಹಿತಿ ಎಂಬುದನ್ನೇ ಮರೆತು, ಅವರ ಪೂರ್ವಾಪರವನ್ನೆಲ್ಲಾ ಜಾಲಾಡಿದರು.

ಇನ್ನು ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಯ ಜವಾಬ್ದಾರಿಯನ್ನು ಇನ್ಫೋಸಿಸ್ ಸ್ಥಾಪಕ ಶ್ರೀ ನಾರಾಯಣ ಮೂರ್ತಿಯವರಿಗೆ ವಹಿಸಿಕೊಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಪ್ರಕಟಗೊಂಡ ದಿನದಿಂದ, ಕನ್ನಡ ಸಾರಸ್ವತ ಲೋಕದಲ್ಲಿ ಅದೇಕೋ ಅಲ್ಲೋಲ ಕಲ್ಲೋಲ,   ಕಾರ್ಗಿಲ್ ಗಡಿಯಲ್ಲಿ ಪಾಕಿಸ್ತಾನೀ  ಪಡೆಗಳು ಲಗ್ಗೆ ಇಟ್ಟಾಗ ಉಂಟಾದ ಸಂಚಲನ ನಾಡಿನುದ್ದಗಲಕ್ಕೂ ಕಂಡುಬಂತು.

ಆದರೆ ಆದದ್ದೇನು ಮತ್ತು ಅದಕ್ಕೆ ಕಾರಣಗಳೇನು ಎಂದು ಯೋಚಿಸುವಾಗ, ಮೇಲ್ಮಟ್ಟಕ್ಕೆ ತೋರಿಬರುವುದು ನಮ್ಮ ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿರುವ ಅಸಹನೆ. ಈ ಅಸಹನೆ, ತಮ್ಮ ದೈನಂದಿನ ಖಾಸಗಿ ಜೀವನಕ್ಕೆ ಸಂಬಂಧಪಟ್ಟಿರುವುದಲ್ಲ. ಇದು ಸಮಾಜದಲ್ಲಿ ತಮಗಿರುವ ವೈಯಕ್ತಿಕ ಪ್ರತಿಷ್ಠೆಗಾಗಿ ಹೋರಾಡುತ್ತಿರುವವರ ಅಸಹನೆ. ವೈಚಾರಿಕ ಭಿನ್ನಾಭಿಪ್ರಾಯ ಮಾತ್ರ  ಎನ್ನುವ ಸೋಗಿನಲ್ಲಿ, ಕನ್ನಡನಾಡಿನ ಜನತೆ ತಮ್ಮಲ್ಲಿನ ಒಗ್ಗಟ್ಟಿನ ಕೊರತೆಯನ್ನು ಮೇಲಿಂದ ಮೇಲೆ ಹೊರಗೆಡಹುತ್ತಿದೆ.

ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ನಾವು ನೀಡುವ ಸಮ್ಮತಿ ದಾನವೇ, ಎಲ್ಲಾ ದಾನಗಳಿಗಿಂತಲೂ ದೊಡ್ಡದಾದ ದಾನವೆಂದು ನುಡಿಯುತ್ತಿದ್ದ ನನ್ನ ತಂದೆಯವರ ಮಾತು ನನಗೆ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. ಈ ಸಮ್ಮತಿ ದಾನದ ಕೊರತೆ ಈಗೀಗ ಹೆಚ್ಚು ಹೆಚ್ಚಾಗಿ ಕಂಡು ಬರುತ್ತಿದೆ. ಯಾವುದೇ, ಸಭೆ, ಸಮಾರಂಭ, ಅಭಿವೃದ್ಧಿ ಕಾರ್ಯಕ್ರಮ, ಸಾಹಿತ್ಯ ಸಮ್ಮೇಳನ, ಏನೇ ಒಂದು ಕಾರ್ಯಕ್ರಮ ಆಯೋಜನೆಗೊಂಡಿರಲಿ. ಅಲ್ಲಿ ಸದಭಿಪ್ರಾಯ ವ್ಯಕ್ತಪಡಿಸಿ, ಭಾಗವಹಿಸಿ, ಶುಭಕೋರುವವರ್ ಇರುವಂತೆಯೇ, ತಮ್ಮದು ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಸಾಮಾಜಿಕ ಜವಾಬ್ದಾರಿ ಎನ್ನುವ ಸೋಗಿನಲ್ಲಿ, ವಿರೋಧದ ಕಿಚ್ಚು ಹಚ್ಚುವವರೂ ಕಂಡು ಬರುವುದು ಸಾಮಾನ್ಯವಾಗಿಬಿಟ್ಟಿದೆ. ಈ ಕಿಚ್ಚು ಹಚ್ಚುವವರು, ಕಿಚ್ಚು ಹಚ್ಚಿ ತಮ್ಮ  ಕೆಲಸವಾಯಿತು ಎಂದು ಸುಮ್ಮನಾಗುತ್ತಾರೆ, ಮುಂದಿನ ದಿನಗಳಲ್ಲಿ, ಪರ ವಿರೋಧಿ ಬಣಗಳ ನಡುವೆ ವಾಕ್ಸಮರಗಳು, ವಾದ ವಿವಾದಗಳು ನಡೆಯುತ್ತವೆ. ಆದರೆ,  ಯಾವುದೇ ನಿಷ್ಕರ್ಷೆಗೆ ತಲುಪದೆ ತಣ್ಣಗಾಗಿಬಿಡುತ್ತವೆ. ಮುಂದೆ ಇನ್ನಾವುದೋ ಕಾರ್ಯಕ್ರಮ ಬಂದಾಗ, ಮತ್ತದೇ ಪುನರಾವರ್ತನೆ.

ಈ ನಡುವಿನ ದಿನಗಳಲ್ಲಿ, ಮೂರಾಬಟ್ಟೆಯಾಗುವುದು ಗಣ್ಯರ ಖಾಸಗಿ ಜೀವನ. ಅವರು ಎಂದೋ, ಯಾವುದೋ ಸಂದರ್ಭದಲ್ಲಿ, ಯಾವುದೋ ಅರ್ಥದೊಂದಿಗೆ ಮಾತನಾಡಿದ ಪದಗಳಿಗೆ ಇಂದು ಅರ್ಥ, ಅನರ್ಥ, ಅಪಾರ್ಥ ಎಲ್ಲವನ್ನೂ ನೀಡಲಾಗುತ್ತದೆ. ಗಾಳಿಸುದ್ದಿಗಳಿಗೆಲ್ಲಾ ರೆಕ್ಕೆಪುಕ್ಕ ಕಟ್ಟಿ ಸಂಶಯದಾಗಸದಲ್ಲಿ ಹಾರಲು ಬಿಡಲಾಗುತ್ತದೆ. ಸಾಮಾಜಿಕ ಜವಾಬ್ದಾರಿಯ ಗುತ್ತಿಗೆ ಪಡೆದುಕೊಂಡಿದ್ದೇವೆ ಎಂದು ತಿಳಿದುಕೊಂಡವರು, ಗಣ್ಯ ವ್ಯಕ್ತಿಗಳ ಚಾರಿತ್ರ್ಯಹರಣಕ್ಕೆ ಇಳಿದುಬಿಡುತ್ತಾರೆ. ವಿಷಯಾಂತರವಾಗುತ್ತದೆ. ಮಾತುಗಳು, ವಾದ ವಿವಾದಗಳು ಹಾದಿ ತಪ್ಪುತ್ತವೆ. ಮೂಲ ವಿಷಯ ಅಥವಾ ಮೂಲ ಘಟನೆ ಮರೆತು ಹೋಗಿರುತ್ತದೆ. ಅಲ್ಲಿ ಸಂಬಂಧಪಟ್ಟ ಮೂಲ ವ್ಯಕ್ತಿ ಮೂಕ ಪ್ರೇಕ್ಷಕರಾಗಿ ಉಳಿದುಬಿಡುತ್ತಾರೆ. ಮುಂದೆ ನಡೆಯುವುದು ವಾದ ಪ್ರತಿವಾದ ಮಂಡಿಸುವವರ ನಡುವಿನ ಪ್ರತಿಷ್ಟೆ ಮಾತ್ರ.  ಜನರನ್ನು ಓದುಗರನ್ನು ಎಲ್ಲಿಂದ ಎಲ್ಲಿಗೋ ಒಯ್ದುಬಿಡುವ ವಾದ ವಿವಾದಗಳು ಯಾವುದೇ ರೀತಿಯ ಅಂತಿಮ ತೀರ್ಪನ್ನು ನೀಡುವುದೇ ಇಲ್ಲ. ಏಕೆಂದರೆ ಅಲ್ಲಿ ಯಾವೊಬ್ಬ ತೀರ್ಪುಗಾರನೂ    ಇರುವುದಿಲ್ಲ. ಅಲ್ಲದೆ, ಅಷ್ಟರಲ್ಲಿ, ಮತ್ತೊಂದು ಘಟನೆ, ಮತ್ತೋರ್ವ ವ್ಯಕ್ತಿ ವಿವಾದದ ಸುಳಿಗೆ ಸಿಕ್ಕಿ ಪತ್ರಿಕೆಗಳ ಮುಖಪುಟವನ್ನು ಅಲಂಕರಿಸಿಯಾಗಿರುತ್ತದೆ. ಮತ್ತದೇ ಘಟನೆಗಳ ಪುನರಾವರ್ತನೆ. ಅದೇ ಅಂತ್ಯವಿಲ್ಲದ ವಾದ ವಿವಾದಗಳು.

ಅಭಿವಕ್ತಿ ಸ್ವಾತಂತ್ರ್ಯ ಎನ್ನುವ ಅಸ್ತ್ರದ ಬಳಕೆ ಈಗ ಮಾಮೂಲಾಗಿ ಬಿಟ್ಟಿದೆ. ಆ ಅಸ್ತ್ರವನ್ನು ಬಳಸಲು ತನಗಿರುವ ಅರ್ಹತೆ ಏನು? ತಾನು ಆ ಅಸ್ತ್ರವನ್ನು ಯಾರ ವಿರುದ್ಧವಾಗಿ, ಯಾವುದರ ವಿರುದ್ಧವಾಗಿ ಬಳಸುತ್ತಿರುವೆನೋ, ಆ ವ್ಯಕ್ತಿ ಅಥವಾ ವಿಷಯದ ಬಗ್ಗೆ ತನಗಿರುವ ಜ್ಞಾನ ಎಷ್ಟು, ತಾನು ಬಳಸುವ ಮಾತುಗಳಿಂದ, ಪರರಿಗೆ ಯಾವ ರೀತಿ ಅವಮಾನವಾಗುತ್ತಿದೆ ಎನ್ನುವುದರ ಗೋಜಿಗೇ ಹೋಗದೇ, ತಾನು ಸುಮ್ಮನಿರುವುದೇ ಮಹಾಪರಾಧ ಎನ್ನುವ ಒಂದೇ ಭಾವದೊಂದಿಗೆ, ಯದ್ವಾ ತದ್ವಾ ಹೇಳಿಕೆಗಳನ್ನು ನೀಡುತ್ತಾರೆ. ಬರಹಗಳನ್ನು ಬರೆದು ಪ್ರಕಟಿಸುತ್ತಾರೆ. ಪ್ರಸ್ತುತ ವಿಷಯದ ಪರಿಧಿಯಿಂದ ಹೊರಗೆ ಅಪ್ರಸ್ತುತವಾದ ವಿಷಯಗಳ ಮೇಲೆ  ಕೈಯಾಡಿಸಿ, ಗಣ್ಯ ವ್ಯಕ್ತಿಗಳ ಮಾನ ಜಾಲಾಡುವ ಯತ್ನಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಪರಿಪಾಠ ಒಮ್ಮೊಮ್ಮೆ ನೈತಿಕತೆಯ ಚೌಕಟ್ಟನ್ನೂ ಮೀರಿ ಬೆಳೆದು ಬಿಡುತ್ತದೆ ಎನ್ನುವುದು ಶೋಚನೀಯ ವಿಚಾರ.

ಪತ್ರಿಕೆಗಳು ತಮ್ಮ ವ್ಯಾಪಾರೀ ಧೋರಣೆಗಳಿಂದಾಗಿ ಇಂಥ ಘಟನೆಗಳಿಗೆ ಒತ್ತು ನೀಡುತ್ತಾ ಬಂದಿವೆ. ಲೇಖನಗಳನ್ನು, ವಾದ ವಿವಾದಗಳನ್ನು ಯಾವುದೇ ತಿದ್ದುಪಡಿ ಇಲ್ಲದೇ ಪ್ರಕಟಿಸಿ, “ಇಲ್ಲಿ ಇರುವವು ಲೇಖಕರ ವೈಯಕ್ತಿಕ ಅನಿಸಿಕೆಗಳು, ಅವುಗಳಿಗೆ ಪತ್ರಿಕೆ ಅಥವಾ ಸಂಪಾದಕರು ಜವಾಬ್ದಾರರಲ್ಲ” ಅನ್ನುವ ಟಿಪ್ಪಣಿ ನೀಡಿ ಕೈತೊಳೆದುಕೊಂಡುಬಿಡುತ್ತವೆ.

ವಾಹನ ಚಲಾಯಿಸುವ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿರುವಾತ, ಒಂದು ದಿನ ಅಪಘಾತಮಾಡಿದಾಗ, ಆತನ ಹಿಂದಿನ ಎಲ್ಲಾ ಸಾಧನೆಗಳನ್ನು ನಗಣ್ಯವಾಗಿಸಿ, ಆತನೋರ್ವ ಸಮಾಜವಿರೋಧಿ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತದೆ. ಇದು ಯಾವ ನ್ಯಾಯ? ಅಪಘಾತ ನಡೆಸಿದ ತಪ್ಪಿಗೆ ಶಿಕ್ಷೆಯಾಗಬೇಕು, ಅನ್ನುವುದು ಸರಿ. ಆದರೆ, ಆತನ ಜನ್ಮ ಜಾಲಾಡಿ, ಚಾರಿತ್ರ್ಯಹನನ ಮಾಡುವ ಆವಶ್ಯಕತೆ ಇರುವುದಿಲ್ಲ. ಅತ ಎಂದೋ, ಯಾವುದೋ ಹಳ್ಳಿಯ  ಯಾವುದೋ ರಸ್ತೆಯ ಬದಿಯಲ್ಲಿ ಬಹಿರ್ದೆಶೆಗೆ ಕೂತಿದ್ದ ಅನ್ನುವಂಥ ಕ್ಷುಲ್ಲಕ ವಿಷಯಗಳಿಗೆ ಪ್ರಾಮುಖ್ಯ ನೀಡಿ ಪ್ರಕಟಿಸಿ, ಹೇಳಿಕೆಗಳನ್ನು ನೀಡಿ, ಆ ವ್ಯಕ್ತಿಯನ್ನು ಜೀವಂತ ಶವವಾಗಿಸುವ ಅನಗತ್ಯ ಯತ್ನಗಳು ಏಕೆ ನಡೆಯಬೇಕು ಅನ್ನುವುದೇ ಅರ್ಥವಾಗುವುದಿಲ್ಲ.

ನಮ್ಮಲ್ಲಿ ಈ ಅಸಹನೆ ಏಕಿದೆ? ಯಾವುದೇ ಘಟನೆಗಳಿಗೆ ವಸ್ತುನಿಷ್ಠ ಪ್ರತಿಕ್ರಿಯೆ ನೀಡುವಲ್ಲಿ ನಾವು ವಿಫಲರಾಗುತ್ತಿರುವುದೇಕೆ? ಯಾವು ಯಾವುದೋ ಘಟನೆಗಳಿಗೆ ಗಂಟು ಹಾಕಿ, ತುಲನೆ ಮಾಡಿ, ತಿರಸ್ಕರಿಸಿಬಿಡುವುದೇಕೆ? ಶಾಂತಚಿತ್ತದಿಂದ ಪ್ರತಿಸ್ಪಂದಿಸುವುದು ಮತ್ತು ಪ್ರತಿಕ್ರಿಯಿಸುವುದು ನಮಗೆ ಅಸಾಧ್ಯವಾಗುತ್ತಿರುವುದೇಕೆ?

ಇವಕ್ಕೆಲ್ಲಾ ಕಾರಣ ನಮ್ಮ ಆಹಾರ ಪದ್ಧತಿಯೇ ಇರಬಹುದೇ? ನಮ್ಮ ಜೀವನ ಪದ್ಧತಿಯೇ ಇರಬಹುದೇ? ಸ್ವಪ್ರತಿಷ್ಠೆ, ಅಸಹಾಯಕತೆ ಅಥವಾ ಸಂಕುಚಿತ ಮನೋಭಾವ ಕಾರಣವಾಗಿರಬಹುದೇ? ಅಥವಾ ಅನ್ಯರ ಏಳಿಗೆಯನ್ನು ಕಂಡಾಗ, ಪರೋಕ್ಷವಾಗಿ ಪ್ರಕಟಗೊಳ್ಳುವ ನಮ್ಮೊಳಗಿನ ಹೊಟ್ಟೆಕಿಚ್ಚು ಇದಾಗಿರಬಹುದೇ? ವಾಸ್ತವವನ್ನು ಸ್ವೀಕರಿಸಲು ಅಸಮರ್ಥರಾಗಿರುವುದರ ಸೂಚನ ಇದಾಗಿರಬಹುದೇ?  ಜೀವನದಲ್ಲಿ ಯಾವುದೋ ಮರೀಚಿಕೆಯ ಹಿಂದೆ ಓಡುತ್ತಿರುವಾಗ, ನಮಗೆ ಆಗಾಗ ಅಗುವ ಸೋಲಿನ ಅನುಭವವನ್ನು ನಮ್ಮೊಳಗೆ ಅದುಮಿಡುತ್ತಾ, ಆಂತರಿಕ ಒತ್ತಡವನ್ನು, ಇನ್ನಾವುದೋ ರೀತಿಯಲ್ಲಿ ಹೊರಹಾಕಲು ಕಂಡುಕೊಂಡ ಪರೋಕ್ಷ ಮಾರ್ಗವೇ? ಖಾಸಗಿ ಜೀವನದಲ್ಲಿನ ನೆಮ್ಮದಿಯ ಕೊರತೆ, ಸಾರ್ವಜನಿಕವಾಗಿ ಸದಾ ಸುದ್ದಿಯಲ್ಲಿ ಇರಬೇಕೆನ್ನುವ ಅಪೇಕ್ಷೆಯಾಗಿ ಮಾರ್ಪಟ್ಟಿರಬಹುದೇ?

ಈ ನಿಟ್ಟಿನಲ್ಲಿ ಚಿಂತನೆ ನಡೆಸುವ ಅಗತ್ಯ ಇದೆ. ಎಲ್ಲದಕ್ಕೂ ಒಂದೇ ಅಸ್ತ್ರವನ್ನು ಬಳಸುವ ಬದಲು, ಸಂದರ್ಭೋಚಿತವಾಗಿ ಸ್ಪಂದಿಸುವ ಮತ್ತು ಪ್ರತಿಕ್ರಿಯಿಸುವ ಅಗತ್ಯ ಇದೆ. ಇದೆಯಲ್ಲವೇ?

 

******

“ನಿರಂತರ ಕರ್ನಾಟಕ” ವಾರಪತ್ರಿಕೆಯಲ್ಲಿ (೯ ಮಾ ೨೦೧೧) ಪ್ರಕಟವಾಗಿರುವ ಲೇಖನ

Rating
No votes yet

Comments