ನಮ್ಮೂರಿನ ಚೋಮ, ಸಿದ್ರಾಮಜ್ಜ

ನಮ್ಮೂರಿನ ಚೋಮ, ಸಿದ್ರಾಮಜ್ಜ

ಊರಿನಲ್ಲಿ ಎಲ್ಲಿಯಾದರು ಹಲಗೆಯ (ಒಂದು ರೀತಿಯ ವಾದ್ಯ, ಸಾಹಿತ್ತಿಕ ಭಾಷೆಯಲ್ಲಿ "ದುಡಿ" ಅಂತ ಹೆಸರು, ಕಾರಂತರ ಚೋಮನ ದುಡಿ
ನೆನಪಿಗೆ ಬರಬಹುದೇ?) ಶಬ್ದ ಕಳಿದರೆ ಸಾಕು, ಸಿದ್ರಾಮಜ್ಜನು ಬಾರಿಸುತ್ತಿದ್ದ ಹಲಗೆಯ
ನೆನಪಾಗುತ್ತದೆ. ಸುತ್ತ ಮುತ್ತ ಇದ್ದ ಹಳ್ಳಿಗಳಲ್ಲೆಲ್ಲ ಅವನು ಬಾರಿಸುತ್ತಿದ್ದ ಹಲಗೆಯ
ನಾದ ಸಿಕ್ಕಾಪಟ್ಟೆ famous. ಮದುವೆಯಿರಲಿ, ಜಾತ್ರೆಯಿರಲ್ಲಿ, ಹಬ್ಬ-ಹರಿದಿನಗಳಿರಲಿ,
ಶವಸಂಸ್ಕಾರದ ಕಾರ್ಯವಾಗಿದ್ದರೂ ಸರಿಯೇ, ಸಿದ್ರಾಮಜ್ಜನ ಹಲಗೆಯ ನಾದ
ಅನಿವಾರ್ಯವಾಗಿತ್ತು. ಸಿದ್ರಾಮಜ್ಜ ತೀರಿಹೋಗಿ ಸುಮಾರು ಐದು ವರ್ಷಗಳೇ ಕಳೆದಿರಬೇಕು.
ಅವನು ಒಂದು ರೀತಿಯಲ್ಲಿ ನಮ್ಮೂರಿನ "ಚೋಮ!", ಕಾರಂತರ ಚೋಮ ಅತ್ಯಂತ ಮುಗ್ಧ ಮತ್ತು
ಸ್ವಾಮಿನಿಷ್ಟೆಯುಳ್ಳವನು, ಆದರೆ ನಮ್ಮೂರ ಚೋಮ, ಸಿದ್ರಾಮಜ್ಜ, ಒಂದು ರೀತಿಯಲ್ಲಿ
ಕ್ರಾಂತಿಕಾರಿ, ಕ್ರಾಂತಿಕಾರಿ ಅನ್ನುವುದಕ್ಕಿಂತ ತುಂಬಾ ಸ್ವಾಭಿಮಾನದ ವ್ಯಕ್ತಿ
ಅನ್ನಬಹುದು. ಯಾರು ತನಗೆ ಗೌರವದಿಂದ ಕಾಣುತ್ತಾರೋ, ಅವರನ್ನು ಮಾತ್ರ
ಗೌರವಿಸುತ್ತಿದ್ದನು. ಕೆಲವೊಮ್ಮೆ, "ದಲಿತನಾದರೇನು, ನಾನೂ ಮನುಷ್ಯನಲ್ಲವೇ?" ಎಂದು
ಪ್ರಶ್ನಿಸುವಂಹ ಸ್ವಭಾವದವನು. ಅವನ ಇನ್ನೊಂದು ವಿಶೇಷತೆಯೆಂದರೆ, ದಿನದ ಬಹುಪಾಲು ಭಾಗ
ಸಾರಾಯಿ ಕುಡಿದ ಅಮಲಿನಲ್ಲಿರುವುದು. ಪ್ರತಿ ಸಲ ಊರಿಗೆ ಹೋದಾಗ ಯಾವತ್ತಾದರು ಸಿಕ್ಕರೆ,
ಅವನ ಬಾಯಿಯಿಂದ ಬರುತ್ತಿದ್ದ ಹೆಂಡದ ವಾಸನೆ ನನ್ನನ್ನು ಒಂದು ಮಾರು ದೂರ
ನಿಲ್ಲಿಸುತ್ತಿತ್ತು; ಈಗ ಸ್ವಲ್ಪ adjust ಆಗಿದೆ ಅನ್ಕೋಬಹುದು :-).

ಹೊಟ್ಟೆಗೆ ಹೆಂಡ
ಬೀಳದಿದ್ದರೆ, ಯಾರಪ್ಪ ಬಂದರೂ ಹಲಗೆ ಬಾರಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಊರಿನವರಿಗೆ
ಇದೇನು ರಹಸ್ಯವಾಗಿರಲಿಲ್ಲ. ಏನಾದರು ಕಾರ್ಯಕ್ರಮವಿದ್ದರೆ, ಸಿದ್ರಾಮಜ್ಜನಿಗೆ ಒಂದೆರಡು
ಪಾಕೆಟ್ ಕುಡಿಸಿದರೆ ಸಾಕು, ಅವನ ಹಲಗೆಯ ನಾದವೇ ಬೇರೆ! (ಹಳ್ಳಿಗಳಲ್ಲಿ ಸಾರಯಿಯನ್ನು
ಸಣ್ಣ ಸಣ್ಣ ಪ್ಲಾಸ್ಟಿಕ್ ಚೀಲಗಳಲ್ಲಿ ಮಾರುತ್ತಾರೆ, ಕೆಲವು ಜನರಿಗೆ ಸಿಟಿಗಳಲ್ಲಿ
ಸಿಗುವ ಬ್ರ್ಯಾಂಡಿ-ವಿಸ್ಕಿಗಳ ವಾಸನೆಯೂ ಗೊತ್ತಿರುವುದಿಲ್ಲ, ಅಲ್ಲಿ ಸಿಗುವುದೆಲ್ಲ
ಕಳ್ಳಭಟ್ಟಿ ಹೆಂಡ ಮಾತ್ರ, ಒಂದು ಗುಟುಕು ಕುಡಿದರೆ ಸಾಕು ಬೆಳಗಾಗುವ ತನಕ ಕುಡಿದವನ
ಮಾತು ನಿಲ್ಲುವುದಿಲ್ಲ, ಅಂತಹ ಹೆಂಡ ಅದು!) ಕೆಲವೊಮ್ಮೆ ಹತ್ತಿರದ ಪಟ್ಟಣಕ್ಕೆ ಹೋಗಿ
ಕುಡಿದು ಬಸ್ಸಿನಲ್ಲಿ ವಾಪಸ್ ಬರುವಾಗ ಕಂಡೆಕ್ಟರ್ ಮಹಾಶಯನ ಜೊತೆಗೆ ನಡೆಯುವ
ಸಿದ್ರಾಮಜ್ಜನ ಮಾತುಕತೆ ಕೇಳಲು ಸೋಜಿಗವಾಗಿರುತ್ತಿತ್ತು. ಕೆಲವೊಮ್ಮೆ ಸಿದ್ರಾಮಜ್ಜ
ಇಂಗ್ಲಿಷಿನಲ್ಲಿ ಮಾತಾಡುವುದುಂಟು. "ಕಂಡೆಕ್ಟರ್ ಸಾರ್, ’ಕರೇssssಟ್ ತಿಕೀಟ್ ಕೊಡ್ರಿ,
ಡೈರೇssssssಟ್ ನಮ್ಮೂರಿಗ್ ಬಿಡ್ರಿ (correct ಟಿಕೇಟ್ ಕೊಟ್ಟು direct ನಮ್ಮೂರಿಗೆ
ಬಸ್ ನಿಲ್ಲಿಸಿರಿ)" ಅಂತಿದ್ದ. ಒಂದು ರೀತಿಯಲ್ಲಿ ಸಿಕ್ಕಾಪಟ್ಟೆ entertainment
ಸಿಗುತ್ತಿತ್ತು.

ದೊಡ್ಡ ದೊಡ್ಡ ಜಾತ್ರೆಗಳಲ್ಲಿ, ಸಿದ್ರಾಮಜ್ಜನಿಗೆ ಹಲಗೆ
ಬಾರಿಸುವ ಯರೂ ಸವಾಲು ಹಾಕುತ್ತಿರಲಿಲ್ಲ. ಹಲಗೆ ಬಾರಿಸುವುದರಲ್ಲಿ ಸಿದ್ರಾಮಜ್ಜನದು
ಎತ್ತಿದ ಕೈ, ಯಾರೂ ಮೀರಿಸುವಂತಿರಲಿಲ್ಲ. ಕುಡಿತದ ಚಟವಿದ್ದರೂ ಹಲಗೆಯಲ್ಲಿ ಅವನಿಟ್ಟ
ಭಕ್ತಿ ಅಪಾರವಾದದ್ದು. ಹಲಗೆಯನ್ನು ಯಾವ ರೀತಿ set ಮಾಡಿದರೆ ಯಾವ ನಾದ ಹೊರಹೊಮ್ಮಬಹುದು
ಎಂಬುವ ಸಂಪೂರ್ಣ ಕಲ್ಪನೆ/ವಿದ್ಯ ಅವನಲ್ಲಿ ಅಡಕವಾಗಿತ್ತು. ಸನ್ನಿವೇಶಕ್ಕೆ ತಕ್ಕಂತೆ
ಹೊಸ ಹೊಸ ನಾದಗಳನ್ನು ಬಾರಿಸುತ್ತಿದ್ದ. ಬರೀ ಬಾರಿಸುವುದೇ ಅಲ್ಲ, ಅವನು ಹೊರಹೊಮ್ಮಿಸುವ
ನಾದದಿಂದ ಬಚ್ಚಿಟ್ಟ ವಸ್ತುವನ್ನು ಹುಡುಕಬಹುದಂತೆ! ಇದನ್ನು ಕೇಳಿದಾಗ, ಈ ಆಸಾಮಿ ಯಾಕೊ
ಜಾಸ್ತಿನೇ ರೀಲ್ ಬಿಡ್ತಿದಾನೆ ಅನ್ನಿಸ್ತು. ಆದರೂ ಕೇಳುತ್ತ ಹೋದೆ, ಊರಲ್ಲಿ ಶಿವಯೋಗಿ
ಅಂತ ಇನ್ನೊಬ್ಬ ಹಲಗೆ ಬಾರಿಸುವವನಿದ್ದಾನೆ. ಅವನು ಸಿದ್ರಾಮಜ್ಜನ ನಾದವನ್ನು
ಅರ್ಥಮಾಡಿಕೊಳ್ಳಬಲ್ಲವನಾಗಿದ್ದನು. ಸಿದ್ರಾಮಜ್ಜ ಬಾರಿಸುವ ನಾದದಿಂದ, ಎಡಕ್ಕೆ
ತಿರುಗಬಕೋ, ಬಲಕ್ಕೆ ತಿರುಗಬೇಕೋ, ಮುಂದೆ ಹೋಗಬೇಕೋ ಅಥವ ಹಿಂದಕ್ಕೆ ಬರಬೇಕೋ
ಅನ್ನುವುದನ್ನು decide ಮಾಡುತ್ತಿದ್ದ. ಹೀಗಾಗಿ, ನಾದದ ಸಂಜ್ಞೆಯ ಮುಖಾಂತರ ಬಚ್ಚಿಟ್ಟ
ವಸ್ತುವನ್ನು ಶಿವಯೋಗಿ ಹುಡುಕುತ್ತಿದ್ದ. ನೋಡುವವರಿಗೆ ಇದೊಂದು ಭಾರಿ
ಕುತೂಹಲಕಾರಿಯಾಗಿರುತ್ತಿತ್ತು. ಕೆಲವೊಮ್ಮೆ ಬಚ್ಚಿಟ್ಟ ಸೂಜಿ ಸಹ ಹುಡುಕಿದ್ದು ಉಂಟಂತೆ!
ಉತ್ತರ ಕರ್ನಾಟಕದಲ್ಲಿ ಇಂತಹ ಜಾನಪದ ಕಲೆ ನೋಡಲು ಸಿಗುವುದು ಅತೀ ಅಪರೂಪ. ಸಿದ್ರಾಮಜ್ಜನ
ಕಲೆ ಒಂದು ರೀತಿಯಲ್ಲಿ ಅಪರೂಪವೇ ಅನ್ನಿ. ಸಿದ್ರಾಮಜ್ಜ ನಿಜಕ್ಕೂ Excellenಟು.

ಸಿದ್ರಾಮಜ್ಜನಲ್ಲಿದ್ದ
ಜಾನಪದ ಕಲೆ ಅವನ ಜೊತೆಯಲ್ಲಿ ಸ್ವರ್ಗದ ಪಾಲಾಗಿ ಹೋಯಿತು. ಅವನ ಮಕ್ಕಳಿಗೆ ಅದರಲ್ಲಿ
ಅಷ್ಟೊಂದು ಆಸಕ್ತಿ ಇರಲಿಲ್ಲ, ಸಿದ್ರಾಮಜ್ಜ ಅವರನ್ನು ಒತ್ತಾಯಪೂರ್ವಕವಾಗಿ ಕಲಿಸುವ
ಗೋಜಿಗೆ ಹೋಗುತ್ತಿರಲಿಲ್ಲ. ಅಜ್ಜ ತೀರಿದ ನಂತರ, ಸಂಪ್ರದಾಯಕ್ಕಾಗಿಯಾದರೂ ಮಕ್ಕಳಲ್ಲಿ
ಒಬ್ಬರಾದರೂ ಬಾರಿಸಬೆಕಲ್ಲ? ಹಿರಿಯ ಮಗ ಅಲ್ಪ ಸ್ವಲ್ಪ ಗೊತ್ತಿದ್ದ ಕೆಲವು ನಾದಗಳನ್ನು
ಪರಿಪೂರ್ಣಗೊಳಿಸಿಕೊಂಡು ಬಾರಿಸಲು ಶುರು ಮಾಡಿದ. ಯಾವುದಾದರು ಕಾರ್ಯಕ್ರಮವಿದ್ದರೆ ಊರಿನ
ಕೆಲವು ಜನ ಸಿದ್ರಾಮಜ್ಜನ ಪ್ರೀತಿಗಾಗಿ, ಅವನ ಮಗ ಹೇಗೆ ಬಾರಿಸಿದರೂ ಅವನನ್ನೆ
ಕರೆಯುವುದುಂಟು. ಮೊನ್ನೆ ಊರಿಗೆ ಹೋದಾಗ ಸಿದ್ರಾಮಜ್ಜನ ಮಗನನ್ನು ಭೇಟಿಯಾಗಿದ್ದೆ,
ಚನ್ನಾಗಿಯೇ ಬಾರಿಸುತ್ತಾನೆ. ಒಳ್ಳೆಯ ಸಂಗತಿಯೆಂದರೆ, ಕುಡಿಯುವ ಗೋಜಿಗೆ ಹೋಗುವುದಿಲ್ಲ!
ಸಿದ್ರಾಮಜ್ಜನದು ದೊಡ್ಡ ಸಂಸಾರ, ಅಜ್ಜನ ಹೆಂಡತಿ ತುಂಬಾ ಉದಾರ ಸ್ವಭಾವದವಳು,
ಅವನಲ್ಲಿದ್ದ ಧಿಮಾಕು ಸ್ವಲ್ಪವೂ ಅವಳಲ್ಲಿಲ್ಲವೆನ್ನಿ. ಸಿದ್ರಾಮಜ್ಜನಿಗೆ ಹದಿನಾಲ್ಕು
ಜನ ಮಕ್ಕಳಿದ್ದರು ಅಂತ ಕೇಳಿದ ನೆನಪು (ಎಷ್ಟು ನಿಜವೋ ಗೊತ್ತಿಲ್ಲ) ಆದರೆ ಬದುಕಿ
ಉಳಿದವರು ಕೇವಲ ಆರು ಮಕ್ಕಳು ಮಾತ್ರ. ಸಿದ್ರಾಮಜ್ಜ ತೀರಿ ಹೋಗುವ ಮೊದಲು ಕಿಂಚಿತ್ತೂ
ದುಡ್ಡು ಉಳಿಸಿರಲಿಲ್ಲ, ದುಡಿದ ಹಣವನ್ನು ಸಾರಾಯಿ ಅಂಗಡಿಗೇ ಹಾಕುತ್ತಿದ್ದ. ಹಣ
ಇಲ್ಲದಿದ್ದರೆ, ಹೆಂಡತಿಯನ್ನು, ಮಕ್ಕಳನ್ನು ಪೀಡಿಸುತ್ತಿದ್ದ. ಒಂದು ರೀತಿ ಐಶಾರಮಿ
ಜೀವನ ಅವನದು. ಅವನ ಹೆಂಡತಿ ಮಕ್ಕಳು ಪಾದರಕ್ಷೆಗಳನ್ನು ರಿಪೇರಿ ಮಾಡಿಯೋ, ಅಲ್ಲಿ ಇಲ್ಲಿ
ದಿನಗೂಲಿ ಮಾಡಿಯೋ ಜೀವನ ಸಾಗಿಸುತ್ತಿದ್ದರು. ಪಾದರಕ್ಷೆ ರಿಪೇರಿ ಮಾಡುವುದು
ಸಿದ್ರಾಮಜ್ಜನ ಮನೆತನಕ್ಕೆ ಬಂದ ತಲೆತಲಾಂತರದ ಕೊಡುಗೆ. ಜಾತಿಯಿಂದ ಬಂದ ಉದ್ಯೋಗ. ಅದರ
ಬಗ್ಗೆ ಅವರಿಗೆ ಅಪಾರ ಅಭಿಮಾನ, ಕಾಯಕವೇ ಕೈಲಾಸವೆನ್ನುವ ಪವಿತ್ರ ಭಾವನೆ. ಅವರಿಗೆ
ಗೊತ್ತಿದ್ದ ಜೀವನದ ಅರ್ಥ ಇಷ್ಟೆ, "ಸಿಕ್ಕಾಪಟ್ಟೆ ದುಡಿಯುವುದು, ಬಂದದ್ದರಲ್ಲಿ ಹೊಟ್ಟೆ
ಬಟ್ಟೆಗೆ adjust ಮಾಡಿಕೊಳ್ಳುವುದು, ಯಾರಿಗೂ ಭಾರವಾಗದೇ ಇರುವುದು." ಒಂದು ರೀತಿಯಲ್ಲಿ
tension free ಜೀವನ ಅನ್ನಿ. ಆಸ್ತಿ ಮಾಡುವ ಗೋಜಿಗಂತು ಮೊದಲೇ ಹೊಗುತ್ತಿಲಿಲ್ಲ.
ಹೊಟ್ಟೆ ಬಟ್ಟೆಗೆ ತೊಂದರೆಯಾಗದಿದ್ದರೆ ಸಾಕು ಎನ್ನುವಂತಹ ಪರಿಸ್ಥಿತಿ. ಹಿರಿಯ ಮಗನ
ಹೆಗಲ ಮೇಲೆ ಸಂಸಾರದ ಜವಾಬ್ದಾರಿ ವಹಿಸಿದ್ದರಿಂದ ಅಜ್ಜನ ಹೆಂಡತಿಗೆ ಸ್ವಲ್ಪ ಸಮಾಧಾನ.
ಸಿದ್ರಾಮಜ್ಜ ಇರುವಷ್ಟರಲ್ಲಿ ಎಲ್ಲಾ ಹೆಣ್ಣು ಮಕ್ಕಳ ಮದುವೆ ಮಾಡಿ ಕೈ
ತೊಳೆದುಕೊಂಡಿದ್ದ. ಅದೊಂದು ರೀತಿಯಲ್ಲಿ ಸಾಹಸವೇ ಅನ್ನಬಹುದು. ಹಳ್ಳಿಗಳಲ್ಲಿ ಮಗಳ
ಮದುವೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಎರಡನೇ ಮಗ ಶಾಲೆ ಬಿಟ್ಟು ವರ್ಷಗಳೇ
ಕಳೆದಿತ್ತು, ಅವನೀಗ ಹತ್ತಿರದ ಪಟ್ಟಣದ ಬಸ್ ಸ್ಟ್ಯಾಂಡಿನಲ್ಲಿ ಪಾದರಕ್ಷೆಗಳನ್ನು
ರಿಪೇರಿ ಮಾಡುವ ಕೆಲಸ ಶುರು ಮಾಡಿಕೊಂಡಿದ್ದಾನೆ. ಅಲ್ಪ ಸ್ವಲ್ಪ ಹಣವೂ ಬರುತ್ತಿದೆ,
ಇದರಿಂದ ಮನೆಯ ಖರ್ಚಿಗೆ ಯಾವುದೇ ತೊಂದರೆಯಿಲ್ಲದಂತಾಗಿದೆ. ಅಜ್ಜನ ಸಂಸಾರ ಒಂದು
ರೀತಿಯಲ್ಲಿ ಸುಸೂತ್ರವಾಗಿ ಸಾಗುತ್ತಿದೆ ಅನ್ನಿ. ಅಜ್ಜನ ಸಂಸಾರದ ದೋಣಿ ಬದಲಾವಣೆಯೆಂಬ
ಕನಸಿನ ದೂರ ತೀರ ಯಾವಾಗ ಸೇರುತ್ತದೋ ಮೇಲಿನವನಿಗೆ ಗೊತ್ತು.

ಸಿದ್ರಾಮಜ್ಜ
ಬದುಕಿದ್ದಾಗ ಅವನ ವಾದ್ಯವನ್ನು record ಮಾಡಲಿಕ್ಕಾಗಲಿಲ್ಲ. ಅಜ್ಜನ ಮಗ ಬಾರಿಸುತ್ತಾನೆ
ನೋಡಿ! (http://www.youtube.com/v/6BN2lsqBj8I)ಬಲತುದಿಯಲ್ಲಿರುವವನು (ಯುವಕ) ಸಿದ್ರಾಮಜ್ಜನ ಮಗ.

Rating
No votes yet