ನಮ್ಮ ಸಂಪದೀಯರೆಲ್ಲರಿಗೂ 'ವಿಜಯ ಸಂವತ್ಸರದ ಹಾರ್ದಿಕ ಶುಭಾಶಯಗಳು' !

ನಮ್ಮ ಸಂಪದೀಯರೆಲ್ಲರಿಗೂ 'ವಿಜಯ ಸಂವತ್ಸರದ ಹಾರ್ದಿಕ ಶುಭಾಶಯಗಳು' !

 

'ಯುಗಾದಿ' ಅಂದಮೇಲೆ  ನಮ್ಮ ವರಕವಿ, 'ದತ್ತಾತ್ರೇಯ ರಾಮಚಂದ್ರ ಬೇಂದ್ರೆ'ಯವರ ಹೆಸರು ಬರದೆ ಇರಲು ಸಾಧ್ಯವೇ ಇಲ್ಲ ಎನ್ನುವುದು ನನ್ನ ಮತ್ತು ನನ್ನಂತೆ ಯೋಚಿಸುವ ಗೆಳೆಯರ ಅಭಿಮತ !
 
ಯುಗಯುಗಗಳು ಕಳೆದರೂ 
ಯುಗಾದಿ ಮರಳಿ ಬರುತಿದೆ 
ಹೊಸವರುಷವು ಹೊಸ ಹರುಷವ
ಹೊಸತು ಹೊಸತು ತರುತಿದೆ. 
 
ಅದೆಷ್ಟು ನೈಜತೆ ಇದೆ ಇವರ ಮಾತಿನಲ್ಲಿ ?
 
ಇದುವರೆಗೆ ಅದೆಲ್ಲೋ ಅಡಗಿ ಕಾಲ ಕಳೆಯುತ್ತಿದ್ದ ಕೋಗಿಲೆ ಈಗ ನಮ್ಮ ಮನೆಯ ಹತ್ತಿರದ ಮರದ ಸೊಂಪಾದ ಕೊಂಬೆ-ರೆಂಬೆ ಮರದ ದಟ್ಟವಾದ ಎಲೆಗಳ ಮಧ್ಯೆ ಕುಳಿತು ಇಂಪಾದ ತನ್ನ ಅದ್ಭುತ ಸಂಗೀತ ಹಾಡುತ್ತಿದೆ  ಆ ಗಾನದ ಮುಂದೆ ಹುಲುಮಾನವರ ಹಾಡು ಮಾಸಲು ಎನ್ನುವಷ್ಟು ಮಾಧುರ್ಯ ಹೊಸತನಗಳು ಅದು ಪಡೆದಿದೆ. ಅದು  ಪದೇ  ಪದೇ ಕೂಗಿ ಕರೆಯುವುದು ಅದರ  ಪ್ರಿಯತಮ ಪ್ರಿಯತಮೆಯರನ್ನೋ ಎನ್ನುವುದು ಇನ್ನೂ ನನಗೆ ತಿಳಿಯದು. ಹಾಗೆ ನೋಡಿದರೆ ನನ್ನ ಊರು ಹೊಳಲ್ಕೆರೆಯ ಬಳಿಯ ಮಾವಿನ ಮರದ ಮೇಲೆ ಕುಳಿತು ಹಾಡುವ ಈ ಪುಟಾಣಿ ಪಕ್ಷಿ, ಮುಂಬೈನ ನಮ್ಮ ಮನೆಯ ಹತ್ತಿರದ ಕೆಲವೇ ಅಶೋಕ ಮರಗಳ ಮತ್ತು ಒಂದು ಬೇವಿನ ಮತ್ತು ಅರಳೀ ಮರದ ಮೇಲೆ ಕುಳಿತು 'ಕೂಹೂ ಕುಹೂ'  ಎಂದು ಹಾಡುವ ಸೊಬಗು ನನ್ನನ್ನುಸ್ತಭ್ದನನ್ನಾಗಿ ಮಾಡಿದೆ ಎಂದರೆ ಅತಿಶಯೋಕ್ತಿ ಎಂದು ಹೇಳುವಷ್ಟು  ನಾನು ಆನಂದ ಪಡುತ್ತಿದ್ದೇದ್ದೆನೆ. ನನ್ನ ಬಾಲ್ಯದ ಆಪ್ತ ಗೆಳೆಯ, ಎಚ್ಚೆಸ್ವಿಯವರು ಬೇಂದ್ರೆಯವರನ್ನು 'ಸಹಜ ಕವಿ' ಎಂದು ಕರೆದರು. ಆ 'ಅಂಬಿಕಾ ತನಯರು' ಬಾಯಿ ಬಿಟ್ಟರೆ ಸಾಕು, ಸುಂದರ ಕವನಗಳು ಪುಟಿದೆದ್ದು ಹೊರಗೆ ಬರುತ್ತವೆ. ಇದೇ  ಮಾತು 'ಟಿ. ಪಿ. ಕೈಲಾಸಂ' ರವರಿಗೂ ಸಲ್ಲುತ್ತದೆ. ಕೈಲಾಸಂ ಎಂದೂ ಪೇಪರ್ ಮೇಲೆ ಒಂದಕ್ಷರ ಬರೆದವರಲ್ಲ. ಅವರು ತಮಗೆ ಹೊಳೆದದ್ದನ್ನು ಗೆಳೆಯರ ಜೊತೆ ಅಡ್ದಾಡುವಾಗ  ಹೇಳುತ್ತಾ  ಹೋಗುತ್ತಿದ್ದರು. ಅವೆಲ್ಲವೂ ಒಂದು ಸುಂದರ ನಾಟಕವೋ ಉತ್ತಮ ಲೇಖನವೊ ಅಥವಾ ಒಂದು ಕವನದ ಸಾಲುಗಳೋ ಆಗುವ ಅರ್ಹತೆ ಪಡೆ ಯುತ್ತಿದ್ದವು. ಅವರ ಪಕ್ಕದಲ್ಲಿ ಇದ್ದ ಗೆಳೆಯರು ಆ ಮಾತುಗಳನ್ನು ಸರಕ್ಕನೆ ಬರೆದುಕೊಳ್ಳುತ್ತಿದ್ದರು. ಆಮೇಲೆ ಅವನ್ನು ಪ್ರಕಟಿಸಿದಾಗ ಅದರ ಮಹತ್ವದ ಅರಿವಾಗುತ್ತಿತ್ತು.  ಈ ತರಹ ಕೈಲಾಸಂರವರ ಅದ್ಭುತ ನಾಟಕಗಳೆಲ್ಲ ಹೇಳಿ-ಕೇಳಿ ಬರೆದುಕೊಂಡವು. ಮಹಾಭಾರತ ಉದ್ಗ್ರಂಥವನ್ನು  ವ್ಯಾಸರು ಹೇಳಿದ್ದನು ನಮ್ಮ ಗಣಪತಿ ಬರೆದುಕೊಳ್ಳಲಿಲ್ಲವೇ  ಅದೇ ತರಹ ! (ಇದು ಒಂದು ಹೋಲಿಕೆ ಅಷ್ಟೇ;)
 
ನಾಳೆ ನಾವು ಆಚರಿಸುವ ಯುಗಾದಿ ಹಬ್ಬ ಚಾಂದ್ರಮಾನರೀತ್ಯದ್ದು.  ಮುಂದಿನ ತಿಂಗಳು ಬಹುಶಃ ಸೂರ್ಯಮಾನದ ರೀತಿ ಆಚರಿಸುವ  ಯುಗಾದಿ ಬರುತ್ತದೆ.  ಹೀಗೆ ಆಚರಣೆಗಳು ಸ್ವಲ್ಪ ಬದಲಾದರು ಅದು ಸಾರುವ ಸಂದೇಶ ಒಂದೇ ! ವಸಂತ ಮಾಸ ಬಂದಿದೆ ಮರಗಿಡಗಳು ಅರಳಿ ಚಿಗುರಿ ತಮ್ಮ ಸಂಭ್ರಮವನ್ನು ಹೊರಸೂಸುತ್ತಿವೆ. 'ಓ ಮಾನವ ನೀನೂ ಪ್ರಕೃತಿ ದೇವಿಯ ಈ ಮಹಾನ್  ಸಂಭ್ರಮದಲ್ಲಿ  ಭಾಗಿಯಾಗು ; ಸೃಷ್ಟಿಯ ವಿಸ್ಮಯವನ್ನು ಆಸ್ವಾದಿಸು,' ಎನ್ನುವ ಕಿವಿಮಾತನ್ನು ಕೇಳಿ, ನಾವೂ ಅನುಭವಿಸೋಣ.
 
ಪ್ರಕೃತಿದೇವಿಯ ಅಪಾರ ಕೃಪೆಯಲ್ಲಿ 'ಪರಮ ಸ್ವಾದಿಷ್ಟ ಮಾವು' ಈಗಾಗಲೇ ನಮ್ಮನ್ನು  ಎದುರು ನೋಡುತ್ತಿದೆ ಅವನ್ನು ಸವಿಯೋಣ. ನಮ್ಮ ಕೃತಜ್ಞತೆಯನ್ನು ಅರ್ಪಿಸೋಣ. ಪೂಜೆ, 'ಪಂಚಾಂಗ ಶ್ರವಣ', ಈ ದಿನದ ಪ್ರಮುಖ ಆಚರಣೆಗಳು ಅದರ ಜೊತೆಗೆ 'ಬೇವುಬೇಲ್ಲವನ್ನು ಭುಜಿಸುವುದು' ಮತ್ತೊಂದು ಅತಿ ಪ್ರಮುಖ ವಿಧಿಗಳಲ್ಲೊಂದು ಸಹಿತ !
 
'ಶತಾಯುರ್ ವಜ್ರದೇಹಾಯ
ಸರ್ವ ಸಂಪತ್ಯರಾಯಚ
ಸರ್ವಾರಿಷ್ಟ ವಿನಾಶಾಯ
ನಿಂಬಕಂದಳ ಭಕ್ಷಣಂ'  
 
ಅಂದರೆ 'ನೂರು ವರ್ಷಗಳ ಆಯುಷ್ಯ, ಸಧೃಢ  ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ರಿಗಾಗಿಯೂ, ಸಕಲಾರಿಷ್ಟ ನಿವಾರಣೆಗಾಗಿಯೂ, ಬೇವು-ಬೆಲ್ಲ ಗಳ ಸೇವನೆ ಮಾಡುತ್ತೇನೆ', ಇಂದು ಹೇಳಿ ಸೇವಿಸಬೇಕು.
 
-ಹೊರಂಲವೆಂ,
ಮುಂಬೈ
Rating
No votes yet

Comments

Submitted by partha1059 Wed, 04/10/2013 - 19:27

ಅಂದರೆ 'ನೂರು ವರ್ಷಗಳ ಆಯುಷ್ಯ, ಸಧೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ರಿಗಾಗಿಯೂ, ಸಕಲಾರಿಷ್ಟ ನಿವಾರಣೆಗಾಗಿಯೂ, ಬೇವು-ಬೆಲ್ಲ ಗಳ ಸೇವನೆ ಮಾಡುತ್ತೇನೆ',

Submitted by ಗಣೇಶ Wed, 04/10/2013 - 23:46

In reply to by partha1059

'ಶತಾಯುರ್ ವಜ್ರದೇಹಾಯ
ಸರ್ವ ಸಂಪತ್ಯರಾಯಚ
ಸರ್ವಾರಿಷ್ಟ ವಿನಾಶಾಯ
ನಿಂಬಕಂದಳ ಭಕ್ಷಣಂ' ಪಾರ್ಥಸಾರಥಿಯವರೆ, ವಯಸ್ಸಾದವರ ನರಳಾಟದ ನೀವು ಬರೆದ ಬರಹ ಓದಿ ಬಂದಾಗ, ಇಲ್ಲಿ ವೆಂಕಟೇಶರು ಎಲ್ಲಾ ಅರಿಷ್ಟ ನಿವಾರಣೆಯಾಗಿ ಶತಾಯು ಬಾಳಲು ಏನು ಮಾಡಬೇಕೆಂಬ ದಾರಿ ಹೇಳಿರುವರು. ಇಲ್ಲಿ "ನಿಂಬಂಕಂ ದಳ ಭಕ್ಷಣಂ" ಅಂದರೆ ಬರೀ ಬೇವಿನ ಎಲೆ ತಿಂದರೆ ಶತಾಯು etc.. ಹಬ್ಬದ ದಿನ ಬರೀ ಕಹಿ ಮಾತ್ರ ಬೇಡವೆಂದು ಬೆಲ್ಲ ಸೇರಿಸಿದ್ದು.

Submitted by venkatesh Thu, 04/11/2013 - 09:00

In reply to by ಗಣೇಶ

ಬೇವು, ಹಾಗಲಕಾಯಿ, ಮಾವು, ತುಳಸಿ ಮೊದಲಾದ ಸಸ್ಯವರ್ಗ ಮಾನವರಿಗೆ ಶ್ರೇಯಸ್ಕಾರವಾದದ್ದು. ಆದ್ದರಿಂದ ಅವುಗಳ ಸೇವನೆ ವರ್ಷದ ಎಲ್ಲಾ ಸಮಯದಲ್ಲೂ ಒಳ್ಳಯದೆ. ಧನ್ಯವಾದಗಳು. ಸಕ್ಕರೆಗಿಂತ ಬೆಲ್ಲ ಒಳ್ಳೆಯದು.

Submitted by rasikathe Thu, 04/11/2013 - 23:53

ಜೀವನವೆಲ್ಲ ಬೇವು - ಬೆಲ್ಲ! ಕಷ್ಟ, ಸುಖ, ಸಿಹಿ, ಕಹಿ ಸಮವೆಲ್ಲ!!
ವಿಜಯನಾಮ ಸಂವತ್ಸರದ ಯುಗಾದಿ ಎಲ್ಲರಿಗೂ ವಿಜಯವನ್ನು, ಯಶಸ್ಸನ್ನು ತರಲಿ!!!
ಚೆನ್ನಾಗಿದೆ ನಿಮ್ಮ‌ ಬರಹ‌, ಸಕಾಲಿಕ‌!
ಮೀನಾ