ನಾವು ಆರೋಗ್ಯ, ಆಯುಷ್ಯ, ಸಂಪತ್ತು ಏಕೆ ಬಯಸಬೇಕು?
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಹಿಂದೆ ಇಳಿಸಿಕೊಂಡ ಒಂದು ಪುಸ್ತಕವನ್ನು ಓದುತ್ತಿದ್ದೆ. ಒಂದು ಕಡೆ ಒಂದು ಪಾತ್ರವು ಮುಂದಿನ ಮಂತ್ರವನ್ನು ಹೇಳಿತು .
ಅಗ್ನೇ ನಯ ಸುಪಥಾರಾಯೇ ಅಸ್ಮಾನ್ ವಿಶ್ವಾನಿ ದೇವ
ಯುಯೋದ್ಧಸ್ಮಜ್ಜು ಹುರಾಣಮೇನೋ ಭೂಯಿಷ್ಠಾಂತೇ
ನಮ ಉಕ್ತಿಂ ವಿಧೇಮ
ಅನೇಕಸಲ ಬರಹಗಾರರು ಇಂಗ್ಲಿಷ್ ಸಂಸ್ಕೃತ ಮತ್ತು ಬೇರೆ ಬೇರೆ ಯಾವುದೋ ಭಾಷೆಯಿಂದ ವಾಕ್ಯಗಳನ್ನು ಬರೆದಿರುತ್ತಾರೆ ಆದರೆ ಅರ್ಥವನ್ನು ತಿಳಿಸುವ ವಿಚಾರ ಅವರಿಗೆ ಬಂದಿರುವುದಿಲ್ಲ. ತಮಗೆ ಗೊತ್ತಿರುವ ಇನ್ನೊಂದು ಭಾಷೆ ಓದುಗರಿಗೆ ಗೊತ್ತಿರಲಿಕ್ಕಿಲ್ಲ ಎಂಬುದು ಅವರಿಗೆ ಹೊಳೆಯುವುದಿಲ್ಲವೇನೋ.
ಸದ್ಯ, ಈಗಿನ ಕಾಲದಲ್ಲಿ ನಮಗೆ ಅಂತರ್ಜಾಲವಿದೆ. ಅಲ್ಲಿ ಹುಡುಕು ಸೌಲಭ್ಯ ಬಳಸಿ ಹುಡುಕಿದಾಗ ಒಂದೆಡೆ ಅದರ ಅರ್ಥ ಸಿಕ್ಕಿತು. ( ಮತ್ತೂ ಏನೇನೋ ಸಿಕ್ಕಿತು. ಅದನ್ನೆಲ್ಲ ನೋಡಬೇಕಿದೆ. ವಿಶೇಷ ಇದ್ದರೆ ಖಂಡಿತ ತಿಳಿಸುತ್ತೇನೆ)
ಸದ್ಯದ ಈ ಮಂತ್ರದಲ್ಲಿ ಅಗ್ನಿಯನ್ನು ಪ್ರಾರ್ಥಿಸಲಾಗುತ್ತಿದೆ. ನಮಗೆ ಆಯುಷ್ಯ, ಆರೋಗ್ಯ, ಸಂಪತ್ತು ಕೊಡು ಎಂದು. ಸಹಜವೇ , ನಮಗೆ ಇವು ಬೇಕು. ಆದರೆ ಇವು ಏಕೆ ಬೇಕು? ನಮ್ಮ ಸುಖ, ನೆಮ್ಮದಿಗಾಗಿ ? ಕೇವಲ ನಮ್ಮ ಸುಖ, ನೆಮ್ಮದಿಗಾಗಿ ? ಅಲ್ಲ, ಲೋಕದ ಸೇವೆಗಾಗಿ, ದೇವರ ಸೇವೆಗಾಗಿ.
ಏನು ಅದ್ಭುತ ಕಲ್ಪನೆ, ವಿಚಾರ!
ಹೀಗೆ ನಾವು ಬೇಡಿಕೊಂಡು ಬಯಸಿ ಪಡೆದ ಆರೋಗ್ಯ, ಆಯುಷ್ಯ, ಸಂಪತ್ತುಗಳನ್ನು ಕೇವಲ ನಮ್ಮ ಸ್ವಾರ್ಥಕ್ಕಾಗಿ ಬಳಸದೆ ಲೋಕಕಲ್ಯಾಣಕ್ಕಾಗಿ ಮತ್ತು ನೀವು ಆಸ್ತಿಕರಾಗಿದ್ದರೆ ದೈವದ ಸೇವೆಗಾಗಿ ಬಳಸಬೇಕು ಎಂಬ ಮಹೋನ್ನತ ಗುರಿ ಕಣ್ಣ ಮುಂದಿರುತ್ತದೆ.