ನಿಮ್ಮ ಮಗುವಿಗೆ ಲಸಿಕೆ ಹಾಕಿಸುವ ಮುಂಚೆ ದಯವಿಟ್ಟು ಯೋಚಿಸಿ. -3

ನಿಮ್ಮ ಮಗುವಿಗೆ ಲಸಿಕೆ ಹಾಕಿಸುವ ಮುಂಚೆ ದಯವಿಟ್ಟು ಯೋಚಿಸಿ. -3

ಹಳೆಯ ಲೇಖನಗಳಿಗೆ ಒಳ್ಳೆಯ ಪ್ರತಿಕ್ರಿಯೆಗಳೇ ಬಂದಿವೆ. ನನ್ನ ಹುಚ್ಚು ಸಾಹಸಕ್ಕೆ ನೈತಿಕ ಬೆಂಬಲ ಕೊಟ್ಟು ಬೆನ್ನು ತಟ್ಟುತ್ತಿರುವ ಅಭ್ಯುದಯ ಮತ್ತು ಆಜಾದಿ ಬಚಾವೊ ಆಂದೋಲನದ ಗೆಳೆಯರಿಗೆ ಧನ್ಯವಾದಗಳು. ಮೂರು ವರ್ಷ ತಪಸ್ಸಿನಂತೆ ಸಂಗ್ರಹಿಸಿದ ಮೂರು ಸಾವಿರಕ್ಕೂ ಮಿಕ್ಕಿದ ಪುಟಗಳಷ್ಟಿದ್ದ ದಾಖಲೆಗಳನ್ನು ಮರುಮಾತಿಲ್ಲದೆ ನನಗೆ ಧಾರೆಯೆರೆದ ಹರೀಶಣ್ಣ (ಬಿ.ಪಿ.ಹರಿಚಂದ್ರ, ಇವರ "ಗಣೇಶನ ಪೂಜೆ ಮಾಡಿರಿ ಏಡ್ಸ್‍ನಿಂದ ದೂರವಿರಿ " ಪುಸ್ತಕ ಸಧ್ಯದಲ್ಲೆ ಮಾರುಕಟ್ಟೆಗೆ ಬರಲಿದೆ)ನಿಗೆ ನನ್ನ ಅನಂತ ಕೃತಜ್ಞತೆಗಳು. "ಹೆಚ್ಚು ತೊಂದರೆ ಆದರೆ ಹೇಳಪ್ಪ. ನಮ್ಮ ಮಕ್ಕಳಿಗೂ ಲಸಿಕೆ ಹಾಕಿಸಿಲ್ಲ. ಎಷ್ಟು ಸುಖವಾಗಿ ಬೆಳೆಯುತ್ತಿವೆ ಎಂದು ಕರ್ಕೊಂಬಂದು ತೋರಿಸ್ತೇವೆ" ಎಂದು ಧೈರ್ಯ ಹೆಚ್ಚಿಸಿದ ಹಿರಿಯರಿಗೆ ವಂದನೆಗಳು.

ಪ್ರತಿಕ್ರಿಯೆ ನೀಡುವವರಲ್ಲಿ ಒಂದು ಅರಿಕೆ. "ಲೇಖನಗಳನ್ನು ನಿಲ್ಲಿಸಿ" ,"ಜನರನ್ನು ತಪ್ಪು ದಾರಿಗೆ ಎಳೆಯಬೇಡಿ" ಎಂಬ ’ಉಚಿತ’ ಸಲಹೆಗಳು ದಯವಿಟ್ಟು ಬೇಡ. ಲೇಖನದಲ್ಲಿರುವ ತಪ್ಪನ್ನು ಕನಿಷ್ಟ ಪಕ್ಷ ತಾರ್ಕಿಕವಾಗಿಯಾದರೂ ತೋರಿಸಿ. ಅಂಕಿ ಅಂಶಗಳಿದ್ದರೆ ಒಳ್ಳೆಯದು. ಇದೆಲ್ಲಾ ಸುಳ್ಳು ಎಂದು ಭದ್ರ ತಳಹದಿಯೇ ಇಲ್ಲದೆ ಘೋಷಿಸುವ ಪ್ರತಿಕ್ರಿಯೆಗಳಿಗೆ ನಾನು ಮರ್ಯಾದೆ ಕೊಡಲಾರೆ. ನಾನು ಇಷ್ಟೆಲ್ಲ ಕಷ್ಟಪಟ್ಟು ಸಂಗ್ರಹಿಸಿ ಭದ್ರ ಆಧಾರಗಳೊಂದಿಗೆ ಬರೆಯುತ್ತೇನೆ. ವೈದ್ಯರುಗಳು ಯಾವುದೇ ಆಧಾರವೇ ಇಲ್ಲದೆ ಸುಳ್ಳು ಎಂದು ಘೊಷಿಸಿದಾಕ್ಷಣ ಜನ ಅದನ್ನು ನಂಬಿಬಿಡುತ್ತಾರೆ. ಇದು ನಿಜಕ್ಕೂ ದುರಂತ. ನನ್ನನ್ನೂ ಕಣ್ಣು ಮುಚ್ಚಿಕೊಂಡು ನಂಬಿ ಎಂದು ನಾನು ಹೇಳುತ್ತಿಲ್ಲ. ಆಕರಗಳನ್ನು ಓದಿ ತಿಳಿದುಕೊಂಡು ಓದುಗರೇ ನಿರ್ಧಾರಕ್ಕೆ ಬರಲಿ. ಜೆ.ಕೆ.ಯವರ ಮಾತನ್ನು ಇಲ್ಲಿ ಉದಾಹರಿಸುತ್ತೇನೆ. "Think..think and think, think again and again, think deep and deep, then come to decision. this is your right path to take decisions"

ಇನ್ನು ಮೊದಲನೆಯದಾಗಿ ಡಾ.ಮೀನಾ ಅವರು ಹೇಳಿದ ಕೇಸ್. ಇದರಲ್ಲಿ ಕೊರ್ಟ್, ಆಟಿಸ್ಮ್ ಎಂಬ ಸಿಂಡ್ರೋಮ್ ಲಸಿಕೆಯಿಂದ ಬಂದಿಲ್ಲ ಎಂದು ತೀರ್ಪು ನೀಡಿದೆ. ಇದರಲ್ಲಿ ಮೂವರು ಕೇಸ್ ಹಾಕಿದ್ದರು. ತಮ್ಮ ಮಕ್ಕಳಿಗೆ ಆಟಿಸಮ್ (ಮೆದುಳು ಬೆಳವಣಿಗೆಯ ನ್ಯೂನತೆಯ ಲಕ್ಷಣಗಳು) ಲಸಿಕೆಯ ಅಡ್ಡಪರಿಣಾಮದಿಂದ ಆಗಿದೆ ಎಂದು ಕೇಸ್ ಹಾಕಿದ್ದರು. ಕೇಸ್ ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ ಬಿದ್ದುಹೋಗಿದೆ. ಈ ಮಕ್ಕಳ ವಿಷಯದಲ್ಲಿ ಆಟಿಸಮ್ ಲಸಿಕೆಯಿಂದ ಬಂದದ್ದಲ್ಲ ಎಂದು ತೀರ್ಪಿದೆಯೆ ಹೊರತು ಲಸಿಕೆಯಿಂದ ಆಟಿಸಮ್ ಬರುವುದೇ ಇಲ್ಲ ಎಂದು ಕೋರ್ಟ್ ಹೇಳಿಲ್ಲ. ಒಂದು ಇಲ್ಲಿ ಬೇರೆ ಯಾವುದೇ ಕಾರಣದಿಂದ ಆಟಿಸಮ್ ಬಂದಿರಬಹುದು. ಎರಡು ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಮೂರು ಲ್ಯಾಬ್ ಟೆಸ್ಟ್‍ನ ಫಲಿತಾಂಶಗಳಲ್ಲಿ ಕಾಣದ ಕೈಗಳು ಕೆಲಸ ಮಾಡಿರುವ ಸಾಧ್ಯತೆ ಇದೆ. ಇರಲಿ. ಇಲ್ಲಿ ಇನ್ನೊಂದು ವರದಿಯನ್ನು ನಿಮ್ಮ ಮುಂದಿಡಬಯಸುತ್ತೆನೆ. ೨೦೦೪ ರ ಜರ್ನಲ್ ಆಫ಼್ ಫಿಸಿಶಿಯನ್ಸ್ ಅಂಡ್ ಸರ್ಜನ್ ಅಸ್ಸೊಸಿಯೇಶನ್ ನಲ್ಲಿ ಹೀಗೆ ಪ್ರಕಟವಾಗಿದೆ. ಇದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ಼್ ಮೆಡಿಸಿನ್ ನಲ್ಲೂ ಪುಷ್ಟೀಕರಿಸಲ್ಪಟಿದೆ. "ಎಂ.ಎಂ.ಆರ್ ಲಸಿಕೆಯಿಂದ ಆಟಿಸಮ್ ಬರುವ ಸಾಧ್ಯತೆಗಳು ಸಂಶೋಧನೆಗಳಿಂದ ಧೃಢಪಟ್ಟಿದೆ. ಎಮ್.ಎಮ್.ಆರ್ ಲಸಿಕೆಗಳು ಆಟಿಸಮ್ ನ ಸಾಧ್ಯತೆಯನ್ನು ಶೇ.೮೫೦ ರಷ್ಟು ಹೆಚ್ಚಿಸುತ್ತದೆ." ಅಮೇರಿಕಾದ ಮಕ್ಕಳ ತಜ್ಞರಾದ ಡಾ. ಫ಼ಾಡ್ ಎಝ್ಬಾಕ್ ಮತ್ತು ಡಾ. ಗೊಲ್ಡ್‍ಮನ್ ೧೯೮೦ ಕ್ಕಿಂತ ಮುಂಚೆ ಅಂದರೆ ಎಮ್.ಎಮ್.ಆರ್ ಲಸಿಕೆ ಹಾಕಲು ಶುರುಮಾಡುವುದಕ್ಕಿಂತ ಮುಂಚಿನ ಹಾಗೂ ನಂತರದ ಅಂದರೆ ೨೦೦೨ ರ ವರೆಗಿನ ಆಟಿಸಂ ನ ಅಂಕಿಅಂಶಗಳನ್ನು ಪರಿಶೀಲಿಸಿ ಆಟಿಸಂ ಹೆಚ್ಚಳವಾಗಿರುವುದನ್ನು ಧೃಢಪಡಿಸಿದ್ದಾರೆ. ಹಾಗೆಯೇ ಡಾ.ಸಾಮಿ ಸ್ಯೂಸಾ ನಡೆಸಿದ ಇನ್ನೊಂದು ಅಧ್ಯಯನದಲ್ಲಿ ಲಸಿಕೆ ಹಾಕಿಸಿದ ಮಕ್ಕಳ ಪೈಕಿ ೧೦,೦೦೦ ಕ್ಕೆ ೨೭.೩ ಮಕ್ಕಳಿಗೆ ಆಟಿಸಂ ಕಂಡು ಬಂದಿದ್ದರೆ ಲಸಿಕೆ ಹಾಕಿಸದ ಮಕ್ಕಳಲ್ಲಿ ಇದರ ಅನುಪಾತ ೧೦,೦೦೦ ಕ್ಕೆ ೧.೪೫ ಮಾತ್ರ!

೧೯೧೧ ರಿಂದ ೧೯೩೫ರ ಅವಧಿಯಲ್ಲಿ ಅಮೇರಿಕಾದಲ್ಲಿ ಸಂಕ್ರಾಮಿಕ ರೋಗಗಳ ಕಾರಣ ಅತಿ ಹೆಚ್ಚು ಮಕ್ಕಳು ಸತ್ತದ್ದು ಡಿಪ್ತೀರಿಯಾ, ನಾಯಿಕೆಮ್ಮು, ಸ್ಕಾರ್ಲೆಟ್ ಜ್ವರ ಮತ್ತು ದಢಾರದಿಂದಾಗಿ. ಆದರೆ ೧೯೪೫ರ ವೇಳೆಗೆ ಸಾವಿನ ಸಂಖ್ಯೆ ಶೇ.೯೫ರಷ್ಟು ಕಡಿಮೆಯಾಗಿ ಹೋಗಿತ್ತು! (ಆಕರ: ಡುಬ್ಲಿನ್.ಎಲ್. ಮೆಟ್ರೋಪಾಲಿಟನ್ ಲೈಫ಼್ ಇನ್ಶುರೆನ್ಸ್ ಕಂಪನಿ, ೧೯೪೮, "೧೯೩೫-೪೫ ರಲ್ಲಿ ಆರೋಗ್ಯದ ವೃದ್ಧಿಯ ವರದಿ".) ರೋಗಿಗಳ ಸಂಖ್ಯೆಗಳ ಇಳಿಮುಖವಾಗಲು ಒಳಚರಂಡಿ ಮತ್ತು ಸ್ವಚ್ಛತೆಯಲ್ಲಿ ಸುಧಾರಣೆಗಳನ್ನು ಕಂಡಿದ್ದು ಪ್ರಮುಖ ಕಾರಣಗಳೆಂದು ಹೇಳಲಾಗುತ್ತದೆ. ("ಮರ್ಬಿಡಿಟಿ ಅಂಡ್ ಮಾರ್ಟಾಲಿಟಿ ವೀಕ್ಲಿ’ ಸಾಪ್ತಾಹಿಕ ವರದಿ. ಜು.೧೯೯೯). ಲಸಿಕೆ ಹಾಕಲು ಶುರು ಮಾಡುವ ಮುಂಚೆಯೇ ರೋಗದ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವಾಗಿರುವುದು ಅಂಕಿ ಅಂಶಗಳನ್ನು ಗಮನಿಸಿದರೆ ಗೊತ್ತಾಗುತ್ತದೆ.

ಡಾ.ಸೈಡನ್‍ಹ್ಯಾಮ್ ರವರ ಪ್ರಕಾರ ವೈದ್ಯರು ಹಾಗೂ ದಾದಿಯರ ಕುತಂತ್ರವಿಲ್ಲದಿದ್ದರೆ ಸಿಡುಬು ಅಪಾಯರಹಿತ ಹಾಗೂ ಲಘು ರೋಗವಾಗಿದೆ. ಸಿಡುಬು ದೇಹದಲ್ಲಿನ ವಿಷವನ್ನು ಬೆವರು, ಗುಳ್ಳೆಗಳ ಕೀವು, ಮೂತ್ರದ ಮೂಲಕ ವಿಷವನ್ನು ಹೊರಹಾಕುತ್ತದೆ. ಆದ್ದರಿಂದಲೇ ಸಿಡುಬು ಬಂದವರಿಗೆ ಹೆಚ್ಚಾಗಿ ನೀರಡಿಕೆಯಾಗುವುದು! ಸಿಡುಬಿನಿಂದ ದೂರವಿರುವ ಮಾರ್ಗವೆಂದರೆ ಉತ್ತಮ ಆಹಾರ, ವಿಹಾರ, ಶುಚಿತ್ವ!

ಸಾಮೂಹಿಕ ಲಸಿಕೆ ಹಾಕುವ ಕಾರ್ಯಕ್ರಮಗಳ ಔಚಿತ್ಯದ ಹಿಂದೆ ಒಂದು ತರ್ಕಬದ್ಧವಾದ ಪ್ರಶ್ನೆಯಿದೆ. ವಿಶ್ವದ ಒಂದೊಂದು ಭಾಗದಲ್ಲೂ ಒಂದೊಂದು ರೀತಿಯ ಹವಾಮಾನ, ಆಹಾರ ಪದ್ಧತಿ, ವಾತಾವರಣ ಇರುತ್ತವೆ. ಇವೆಲ್ಲವನ್ನೂ ನಿರ್ಲಕ್ಷಿಸಿ ಎಲ್ಲರಿಗೂ ಒಂದೇ ರೀತಿಯ ಲಸಿಕೆ ಹಾಕುವುದು ಸರಿಯೇ ? ಸಾಮೂಹಿಕ ಲಸಿಕೆ ಹಾಕುವ ಮುಂಚೆ ಆಯಾ ಪ್ರದೇಶದಲ್ಲಿ ಆಯಾ ವಾತಾವರಣಕ್ಕೆ ಪರೀಕ್ಷೆ ಮಾಡಲಾಗಿರುತ್ತದೆಯೇ ? ಜೊತೆಗೆ ಕೆಲವು ಲಕ್ಷಣಗಳಿದ್ದರೆ ಆ ಲಕ್ಷಣಗಳಿಗೆ ಹೊಂದದಂತಹ ಲಸಿಕೆ ಕೊಡಬಾರದು ಎಂಬುದು ಅಮೇರಿಕಾ ಸೆಂಟರ್ ಫ಼ಾರ್ ಡಿಸೀಸ್ ಕಂಟ್ರೋಲ್ ನ ನಿಯಮ. ಸಾಮೂಹಿಕ ಲಸಿಕೆ ಕೊಡುವಾಗ ಈ ನಿಯಮ ಸಹಜವಾಗಿಯೇ ಗಾಳಿಯಲ್ಲಿ ತೂರಿಹೋಗುತ್ತದೆ. ಈ ಕಾರಣದಿಂದಾದರೂ ಕನಿಷ್ಟ ಪಕ್ಷ ಸಾಮೂಹಿಕ ಲಸಿಕೆಯಿಂದಾದರೂ ದೂರವಿರುವುದು ಉತ್ತಮ ಎನ್ನಿಸುತ್ತದೆ.

ವ್ಯಾಕ್ಸಿನ್‍ಗಳ ಹಾಗೂ ಆರೋಗ್ಯಕ್ಕೆ ಹಾನಿಕಾರಕವಾದ ಔಷಧಗಳನ್ನು ಹಂಚುವುದರಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಕೈವಾಡವಿರುವುದು ಹಾಗೂ ಇದಕ್ಕೆ ವೈದ್ಯರುಗಳ (ಎಲ್ಲಾ ವೈದ್ಯರುಗಳದಲ್ಲ), ಸರ್ಕಾರದ ಪ್ರತಿನಿಧಿಗಳ ಸಹಕಾರವಿರುವುದನ್ನು ನಾವು ಶಂಕಿಸಬಹುದು. ಮೊನ್ನೆ ಗೆಳೆಯ ಷಡಕ್ಷರಮೂರ್ತಿಯವರು ಜೆನೆರಿಕ್ ಔಷಧಿಗಳು ಮತ್ತು ಆರ್.ಎಂ.ಜಿ ವೈದ್ಯರುಗಳು ಕೊಡುವ ಔಷಧಿಗಳ ಬಗ್ಗೆ ವಿವರಿಸುತಿದ್ದರು. ಇದರ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದೆನೆ. ಅನೇಕ ದೇಶಗಳಲ್ಲಿ ನಿರ್ಬಂಧಿಸಲಾದ ಔಷಧಿಗಳು ಅಥವಾ ಔಷಧಿ ತಯಾರಿಕೆಯ ರಾಸಾಯನಿಕಗಳು ನಮ್ಮ ದೇಶದಲ್ಲಿ (ಉದಾ: ಇರ್ಲೋಪೆನ್, ಮೈಗ್ರಿಲ್, ಸಿಪ್ಟೊಮೆಟ ಇತ್ಯಾದಿ) ಬಿಕರಿಯಾಗುತ್ತಿವೆ. ಇದರಲ್ಲಿ ಕೆಲವನ್ನು ವೈದ್ಯರುಗಳ ಸಲಹೆ ಇಲ್ಲದೆ ತೆಗೆದುಕೊಳ್ಳಬಹುದು( ಉದಾ: ಮಾಲಾ-ಡಿ. ಇದು ಬೇರೆ ದೇಶದಲ್ಲಿ ಬೇರೆ ಹೆಸರಿನಿಂದ ಮಾರಾಟವಾಗುತ್ತಿತ್ತು!). ದುರಂತವೆಂದರೆ ಬಾಂಗ್ಲಾದೇಶ, ನೇಪಾಳದಂತಹ ರಾಷ್ಟ್ರಗಳೂ ದಿಟ್ಟತನದಿಂದ ನಿರ್ಬಂಧಿಸಿದ ರೆಸ್ಟಿಲ್, ಕಾಮ್‍ಸ್ಲಿಪ್ ನಂತಹ ಗುಳಿಗೆಗಳು ಭಾರತದಲ್ಲಿ ಬಳಕೆಯಲ್ಲಿವೆ! ಏಡ್ಸ್ ಔಷಧಿ, ಗರ್ಭನಿರೋಧಕ, ಕಾಂಡೊಮ್ ಬಿಕರಿಯಲ್ಲೂ ಕೆಲವು ಕುತಂತ್ರಗಳನ್ನು ತಳ್ಳಿ ಹಾಕುವಂತಿಲ್ಲ. ಪ್ರಾಸೆಸ್ ಪೇಟೆಂಟ್ ಬಿಟ್ಟು ಪ್ರಾಡಕ್ಟ್ ಪೇಟೆಂಟ್ ಅನ್ನು ಅಪ್ಪಿಕೊಂಡದ್ದು ಭಾರತ ಮಾಡಿದ ಅತ್ಯಂತ ಘೋರ ತಪ್ಪುಗಳಲ್ಲೊಂದು. ಇದು ನೇರವಾಗಿ ಔಷಧಿಗಳ ಏಕಸಾಮ್ಯವನ್ನು ದೊಡ್ಡ ದೊಡ್ಡ ಕಂಪನಿಗಳ ಕೈಯಲ್ಲಿ ಇಡುತ್ತದೆ. ಇದಲ್ಲದೇ ಬೇರೆ ಬೇರೆ ದೇಶದಲ್ಲಿ ಔಷಧಿಗಳು ಬೇರೆಬೇರೆ ಹೆಸರಿನಲ್ಲಿರುವುದರಿಂದ ಜನರಿರಲಿ ಡಾಕ್ಟರ್ ಗಳೇ ದಾರಿತಪ್ಪುವ ಹಾಗಾಗುತ್ತದೆ. ಆದ್ದರಿಂದ ಕಂಟೆಂಟ್‍ಗಳ ಅಧ್ಯಯನ ಮಾಡಬೇಕಾಗುತ್ತದೆ.

ನನ್ನ ಸ್ನೇಹಿತ ಸಂಪತ್ ಗೆ ಅಪಘಾತವಾಗಿ ಕಾಲು ಕೈಗಳಲ್ಲಿ ಆಳವಾದ ಗಾಯಗಳಾಗಿದ್ದವು. ವೈದ್ಯರು ಆಂಟಿ ಟೆಟಾನಸ್ ಸೂಜಿ ಚುಚ್ಚಿಸಿಕೊಳ್ಳಲು ಸಲಹೆ ಮಾಡಿದರು. ನಾನು ಲಸಿಕೆ ತರಲು ಮುಂದಾದಾಗ ನನ್ನನ್ನು ತಡೆದು ಸಂಪತ್ ಹೇಳಿದರು "ಲೋ ನಿಂಗೆ ತಲೆ ಕೆಟ್ಟಿದೆಯೇನೋ? ಏನೂ ಆಗಲ್ಲ ಹೆದರ್ಕೊಬೇಡ. ಗಾಳೀಲಿ ಬೇರೆ ಬೇರೆ ರೋಗ ತರೋ ನೂರಾರು ರೋಗಾಣುಗಳು ತೇಲಾಡ್ತಿರ್ತವೆ. ಯಾವುದ್ಯಾವುದಕ್ಕೆ ಅಂತ ಸೂಜಿ ಚುಚ್ಚಿಸ್ಕೊತಿಯ? ಮೈ ಎಲ್ಲಾ ತೂತಾಗಿ ಹೋಗುತ್ತೆ ಅಷ್ಟೇ!!". ಸ್ವಲ್ಪವೇ ಸಮಯದಲ್ಲಿ ಸಂಪತ್ ಚೇತರಿಸಿಕೊಂಡರು. ಈಗ ಸುಖವಾಗಿ ಬದುಕುತ್ತಿದ್ದಾರೆ. ಅಂದ ಹಾಗೆ ಸಂಪತ್ ಸ್ನಾತಕೋತ್ತರ ಬಯೋಮೆಡಿಕಲ್ ಇನ್ಸ್ಟ್ರುಮೆಂಟೇಶನ್‍ನಲ್ಲಿ ಬಂಗಾರದ ಪದವಿ ಪಡೆದಿರುವವರು!

ನಿಮ್ಮ ಪ್ರತಿಕ್ರಿಯೆ, ಪ್ರಶ್ನೆಗಳಿಗೆ ಸ್ವಾಗತ. ಪ್ರವಾಸದ ಕಾರಣ ಕೆಲ ದಿನಗಳ ಮಟ್ಟಿಗೆ ನನಗೆ ಪ್ರತಿಕ್ರಿಯೆಗಳಿಗೆ ಉತ್ತರಿಸಲು ಆಗುವುದಿಲ್ಲ. ಅಲ್ಲಿಯವರೆಗೆ ದಯವಿಟ್ಟು ಸಹನೆಯಿರಲಿ. ನಿಮ್ಮ ಅನುಮಾನಗಳಿಗೆ ಉತ್ತರಿಸುವುದೂ ನನ್ನ ಕರ್ತವ್ಯ.

Rating
No votes yet

Comments